‘ಹರ್ ಘರ್ ತಿರಂಗಾ’ ಅಭಿಯಾನವು ಯಶಸ್ವಿಯಾಗಿದೆ. ಮನೆ ಮನೆಗಳಲ್ಲಿ ತಿರಂಗ ಹಾರಾಡುತ್ತಿವೆ. ಒಕ್ಕೂಟ ಸರ್ಕಾರವೂ ಪ್ರತಿ ಮನೆಗಳಲ್ಲಿ ತ್ರಿವರ್ಣಗಳನ್ನು ಹಾರಿಸಲು ಅಥವಾ ಪ್ರದರ್ಶಿಸಲು ಜನರಿಗೆ ಕರೆ ಕೊಟ್ಟಿತ್ತು. ಆದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಇಷ್ಟು ವಿಜೃಂಭಣೆಯಿಂದ ಆಚರಿಸಿದ ಮೇಲೆ ಧ್ವಜಗಳನ್ನು ಗೌರವಯುತವಾಗಿ ಹೇಗೆ ವಿಲೇವಾರಿ ಮಾಡುವುದು? ನಮ್ಮ ರಾಷ್ಟ್ರ ಧ್ವಜಕ್ಕೆ ಅದರದೇ ಆದ ಗೌರವವಿದೆ, ಘನತೆಯಿದೆ. ಅದನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ವಿಲೇವಾರಿ ಮಾಡಲಾಗುವುದಿಲ್ಲ. ಹಾಗಾಗಿ ಈ ಪ್ರಶ್ನೆ ದೇಶದ ಬಹುತೇಕ ನಾಗರಿಕರ ಪ್ರಶ್ನೆಯೂ ಆಗಿದೆ.
ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Residents Welfare Association (RWAs)ಗಳಂತಹ ಖಾಸಗಿ ಸಂಘಟನೆಗಳಲ್ಲದೆ ಸ್ವತಃ ಕಾರ್ಪೊರೇಷನೇ ಆಚರಣೆಯ ನಂತರ ಧ್ವಜಗಳನ್ನು ಗೌರವಪೂರ್ವಕವಾಗಿ ವಿಲೇವಾರಿ ಮಾಡುವ ಹೊಣೆ ಹೊತ್ತುಕೊಂಡಿದೆ. ಈಗಾಗಲೆ ಇದು ಸಾಮಾಜಿಕ ಮಾಧ್ಯಮಗಳಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಜಾಗೃತಿ ಶಿಬಿರ ಏರ್ಪಡಿಸಿದೆ. ಅಲ್ಲದೆ ಧ್ವಜಗಳ ಸಂಗ್ರಹಕ್ಕಾಗಿ ಪ್ರಚಾರಗಳನ್ನು ಆರಂಭಿಸಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ಸಹ ಧ್ವಜಗಳ ವಿಲೇವಾರಿ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ತಮ್ಮ ಸ್ವಚ್ಚತಾ ಕಾರ್ಮಿಕರಿಗೆ ಮಣ್ಣಾದ ಧ್ವಜಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ವಿಶೇಷ ಸೂಚನೆಗಳನ್ನು ನೀಡಿದೆ.
“ಎಂಸಿಡಿ ರಾಷ್ಟ್ರೀಯ ಧ್ವಜಕ್ಕೆ ಬಹಳಷ್ಟು ಪ್ರಾಮುಖ್ಯತೆ ಮತ್ತು ಘನತೆಯನ್ನು ನೀಡುತ್ತದೆ. ಇದಕ್ಕೆ ಅನುಗುಣವಾಗಿ, ಅದರ ಸ್ವಚ್ಚತಾ ಕಾರ್ಮಿಕರಿಗೆ ಮಣ್ಣಾದ ಧ್ವಜಗಳನ್ನು ಸಂಗ್ರಹಿಸಲು ವಿಶೇಷ ಸೂಚನೆಗಳನ್ನು ನೀಡಿದೆ ” ಎಂದು ಎಂಸಿಡಿಯ ನಿರ್ದೇಶಕರಾಗಿರುವ ಅಮಿತ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ” ಆ ಬಳಿಕ ಈ ಧ್ವಜಗಳು ಫ್ಲ್ಯಾಗ್ ಕೋಡ್ ಪ್ರಕಾರ ಎಲ್ಲಾ ಘನತೆ, ಗೌರವಗಳೊಂದಿಗೆ ವಿಲೇವಾರಿಯಾಗಲಿದೆ” ಎಂದೂ ಅವರು ತಿಳಿಸಿದ್ದಾರೆ.
2,500 Residents Welfare Associationಗಳ ಒಕ್ಕೂಟವಾದ United Residents Joint Action (URJA)ನ ಮುಖ್ಯಸ್ಥರಾದ ಅರುಲ್ ಗೋಯಲ್, ಈ ಸ್ವಾತಂತ್ರ್ಯ ದಿನದಂದು ಲಕ್ಷಗಟ್ಟಲೆ ಧ್ವಜಗಳು ಬಳಕೆಯಾಗಬಹುದು ಮತ್ತು ಅವುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಹೇಳುತ್ತಾರೆ. “ನಾವು ಧ್ವಜಗಳು ಧೂಳಲ್ಲಿ ಅಥವಾ ರಸ್ತೆಗಳಲ್ಲಿ ಬಿದ್ದಿರುವುದನ್ನು ನೋಡಲು ಬಯಸುವುದಿಲ್ಲ. ಅದಕ್ಕೆ ಅರ್ಹವಾದ ಗೌರವವನ್ನು ನೀಡಬೇಕು. ಧ್ವಜಗಳು ಸರಿಯಾದ ಕ್ರಮದಲ್ಲಿ ವಿಲೇವಾರಿಯಾಗಿದೆ ಎಂಬುವುದನ್ನು ಖಚಿತಪಡಿಸಿಕೊಳ್ಳುವುದೇ ಅಧಿಕಾರಿಗಳಿಗೆ ಮತ್ತು ನಮಗೆ ಸವಾಲಾಗಿದೆ” ಎಂದು ಅವರು ಹೇಳಿದ್ದಾರೆ. ಉರ್ಜಾವು ತಮ್ಮ ತಮ್ಮ ಪ್ರದೇಶಗಳಿಂದ ಧ್ವಜಗಳನ್ನು ಸಂಗ್ರಹಿಸಲು ಮತ್ತು ಗೊತ್ತುಪಡಿಸಿದ ಸ್ಥಳದಲ್ಲಿ ಅವುಗಳನ್ನು ಸುರಕ್ಷಿತವಾಗಿಡಲು ನೋಟೀಸ್ ಕಳುಹಿಸಿದೆ ಎಂದಿರುವ ಅವರು”ಆ ನಂತರ ಉರ್ಜಾ ಧ್ವಜಗಳು ಯಾವುದೇ ಅಗೌರವಕ್ಕೆ ಆಸ್ಪದೆ ನೀಡದೆ ವಿಲೇವಾರಿ ಮಾಡುತ್ತದೆ” ಎಂದಿದ್ದಾರೆ.
RWAsನ ಪೂರ್ವ ದೆಹಲಿಯ ಅಧ್ಯಕ್ಷರಾಗಿರುವ ಬಿ ಎಸ್ ವೊಹ್ರಾ ಸಹ ಫ್ಲ್ಯಾಗ್ ವಿಲೇವಾರಿ ಬಗ್ಗೆ ಇದೇ ಕಾಳಜಿಯನ್ನು ಹಂಚಿಕೊಂಡಿದ್ದಾರೆ. “ಧ್ವಜಕ್ಕೆ ಉಂಟಾಗಬಹುದಾದ ಯಾವುದೇ ಅಗೌರವವನ್ನು ತಪ್ಪಿಸಲು, ನಾವು ಸಾಮಾಜಿಕ ಮಾಧ್ಯಮ ಪ್ರಚಾರವನ್ನು ನಡೆಸುತ್ತಿದ್ದೇವೆ ಮತ್ತು ನಿಯಮಗಳ ಬಗ್ಗೆ ಜನರಿಗೆ ತಿಳಿಸುತ್ತೇವೆ. ಆಚರಣೆಯ ನಂತರ, ನಾವು ಸ್ಥಳಗಳನ್ನು ಭೇಟಿ ಮಾಡುತ್ತೇವೆ ಮತ್ತು ಯಾವುದೇ ಧ್ವಜಗಳು ರಸ್ತೆಗಳಲ್ಲಿ ಬಿದ್ದಿಲ್ಲವೆಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದೂ ಅವರು ಹೇಳಿದ್ದಾರೆ.