ಶಾಲಾ ಶಿಕ್ಷಣದ ಮೂಲಕವೂ ಬಿಜೆಪಿ ಹಿಂದುತ್ವದ ನಂಜನ್ನು ಏರಿಸಲು ಹೋಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಇದೀಗ ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುನ್ನೆಲೆಗೆ ಬಂದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರ ಭಾಷಣವನ್ನು 10 ನೇ ತರಗತಿ ಪಠ್ಯಪುಸ್ತಕಗಳಲ್ಲಿ ಸೇರಿಸುವುದಾಗಿ ವರದಿಯಾಗಿದೆ. ಅಲ್ಲದೆ, ಈ ಕ್ರಮವನ್ನು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮರ್ಥಿಸಿಕೊಂಡಿದ್ದಾರೆ.
ಪಠ್ಯಪುಸ್ತಕದಲ್ಲಿ ಹೆಡಗೇವಾರ್ ಅಥವಾ ಸಂಘದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವರು ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರಾದರೂ, ಹೆಡಗೇವಾರ್ ಅವರ ಭಾಷಣವನ್ನು ಮಾತ್ರ ಸೇರಿಸಲಾಗಿದ್ದು, ಜನರಿಗೆ ಅದರಲ್ಲೂ ಯುವಕರಿಗೆ ಸ್ಫೂರ್ತಿ ಸಿಗುವಂತಾಗಲಿ ಎಂದು ಮತ್ತೆ ಹಿಂದೂರಾಷ್ಟ್ರವಾದಿಯ ಅಜೆಂಡಾವನ್ನು ಮಕ್ಕಳ ತಲೆಗೆ ತುಂಬಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ, ಆಕ್ಷೇಪ ಎತ್ತುತ್ತಿರುವವರು ಪಠ್ಯಪುಸ್ತಕವನ್ನು ಅಧ್ಯಯನ ಮಾಡಿಲ್ಲ ಎಂದು ಆರೋಪಿಸಿದ ಅವರು, “ಕೆಲವರು ಎಲ್ಲವನ್ನೂ ವಿರೋಧಿಸಲು ಬಯಸುತ್ತಾರೆ ಮತ್ತು ಅವರು ಏನು ಹೇಳುತ್ತಾರೋ ಅದು ಮಾತ್ರ ಸತ್ಯ ಎಂದು ಅವರು ಭಾವಿಸುತ್ತಾರೆ. ಆ ಭಾಷಣದಲ್ಲಿ, ಹೆಡ್ಗೆವಾರ್ ಅವರು ಸಿದ್ಧಾಂತ, ಮೌಲ್ಯಗಳು ಮತ್ತು ತತ್ವಗಳನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಸಮಾಜ ಮತ್ತು ರಾಷ್ಟ್ರದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಏನು ತಪ್ಪಿದೆ?” ಎಂದು ಮರು ಪ್ರಶ್ನಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಪಠ್ಯಕ್ರಮದಲ್ಲಿ ಡಾ. ಹೆಡಗೇವಾರ್ ಅವರ ಭಾಷಣವನ್ನು ಕೇಂದ್ರೀಕರಿಸಿದ ಪಠ್ಯವನ್ನು ಸೇರಿಸಲು ಶಿಫಾರಸು ಮಾಡಿದೆ.
ಸಮಿತಿಯು ಮಾರ್ಚ್ನಲ್ಲಿ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಲಂಕೇಶ್ ಅವರ ಮೃಗ ಮತ್ತು ಸುಂದರಿ, ಜಿ. ರಾಮಕೃಷ್ಣ ಅವರ ಭಗತ್ ಸಿಂ̧ಗ್, ಸಾರಾ ಅಬೂಬಕರ್ ಅವರ ಯು̧ದ್ಧ, ಎ ಎನ್ ಮೂರ್ತಿ ರಾವ್ ಅವರ ವ್ಯಾಘ್ರ ಕ̧ಥೆ, ಶಿವ ಕೋಟ್ಯಾಚಾರ್ಯ ಅವರ ಸುಕುಮಾರ ಸ್ವಾಮಿ ಕಥೆ ಮೊದಲಾದವುಗಳನ್ನು ಕೈಬಿಡಲು ಶೀಫಾರಸ್ಸು ಮಾಡಿದ್ದು, ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ನಿಜವಾದ ಆದರ್ಶ ಪುರುಷ ಯಾರಾಗಬೇಕು? , ಶಿವಾನಂದ ಕಳವೆ ಅವರ ಸ್ವದೇಶಿ ಸೂತ್ರದ ಸರಳ ಹಬ್ಬ, ಎಂ ಗೋವಿಂದ ಪೈ ಅವರ ನಾನು ಪ್ರಾಸ ಬಿಟ್ಟ ಕಥೆ, ಬನ್ನಂಜೆ ಗೋವಿಂದಚಾರ್ಯರ ಸುಖನಾಶನ ಉಪದೇಶ, ಶತಾವಧಾನಿ ಆರ್ ಗಣೇಶ್ ಅವರ ಶ್ರೇಷ್ಠ ಭಾರತೀಯ ಚಿಂತನೆಗಳು ಮೊದಲಾದ ವಿಷಯಗಳನ್ನು ಪಠ್ಯಪುಸ್ತಕಕ್ಕೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ. ಸೇರಿಸಲ್ಪಟ್ಟ ಲೇಖಕರು ಬಲಪಂಥೀಯರು ಮತ್ತು ಬಲಪಂಥೀಯ ಒಲವನ್ನು ತೋರಿಸುತ್ತಾ ಬಂದವರು ಎನ್ನುವುದು ಗಮನಾರ್ಹ.
ಆರ್ಎಸ್ಎಸ್ ಸಂಸ್ಥಾಪಕನ ಭಾಷಣವನ್ನು ಎಸ್ಎಸ್ಎಲ್ಸಿ ಮಕ್ಕಳಿಗೆ ಬೋಧಿಸಲು ಆಯ್ಕೆ ಮಾಡುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಅಂತಹ ಕೆಲವು ವಿರೋಧಗಳು ಇಲ್ಲಿವೆ.