ಎಸಿಬಿ ರದ್ದುಗೊಳಿಸಿ ಹೈ ಕೋರ್ಟ್ ನೀಡಿದ ಆದೇಶದ ಹಿನ್ನಲೆಯಲ್ಲಿ ಕಾನೂನು ತಜ್ಞರು ಹಾಗೂ ಅಡ್ವೋಕೇಟ್ ಜನರಲ್ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ನಾವು ಪ್ರಣಾಳಿಕೆಯಲ್ಲಿ ಹೇಳಿದ್ದಕ್ಕೆ ಬದ್ಧರಾಗಿದ್ದೇವೆ. ಹೈಕೋರ್ಟ್ ಆದೇಶವನ್ನು ಪೂರ್ಣವಾಗಿ ಅಧ್ಯಯನ ಮಾಡಬೇಕಿದೆ. ಆದೇಶ ಹಿನ್ನಲೆಯಲ್ಲಿ ಯಾವ ರೀತಿಯಲ್ಲಿ ಮುಂದುವರಿಯಬೇಕು ಎಂದು ಕಾನೂನು ಸಚಿವರು ಹಾಗೂ ಅಡ್ವೋಕೇಟ್ ಜನರಲ್ ವರದಿ ಕೊಟ್ಟ ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.
‘ಮೇಲ್ಮನವಿ ಹೋಗಲು ನಿರ್ಧಾರ ಮಾಡಿಲ್ಲ. ಹೈ ಕೋರ್ಟ್ ಆದೇಶದ ಬಗ್ಗೆ ಚರ್ಚೆ ಮಾಡಬೇಕು. ನಾವು ನಮ್ಮ ಪ್ರಣಾಳಿಕೆಗೆ ಬದ್ಧರಾಗಿದ್ದೇವೆ. ಹೈಕೋರ್ಟ್ ಆದೇಶವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡಲಾಗುವುದು’ ಎಂದು ಹೇಳಿದ್ಧಾರೆ.