ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ಮತ್ತೆ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಒಂದೆಡೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ವಹಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದರು. ಮತ್ತೊಂದೆಡೆ ರಾಜ್ಯ ಪ್ರವಾಸ ಕೈಗೊಂಡಿದ್ದ ಉಸ್ತುವಾರಿ ಅರುಣ್ ಸಿಂಗ್ ಕೂಡ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದಾರೆ. ಈ ವಿಚಾರದ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ಅಧಿಕಾರಕ್ಕೇರಿದ ಸಿಎಂ ಬಸವರಾಜ್ ಬೆನ್ನಿಗೆ ಕೇಂದ್ರ ಬಿಜೆಪಿ ನಾಯಕರು ನಿಂತಿದ್ದಾರೆ. ಇದು ರಾಜ್ಯ ಬಿಜೆಪಿ ಹಿರಿಯ ನಾಯಕರ ತಳಮಳಕ್ಕೆ ಕಾರಣ. ಇತ್ತೀಚೆಗೆ ಅಮಿತ್ ಶಾ ಮುಂದಿನ ವಿಧಾನಸಭಾ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಬಿಜೆಪಿ ಎದುರಿಸಲಿದೆ. ಇವರು ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದಿದ್ದರು. ಇದು ಭವಿಷ್ಯದಲ್ಲಿ ಸಿಎಂ ಆಗಬೇಕು ಎಂದು ಕಾಯುತ್ತಿದ್ದ ಎಲ್ಲಾ ಬಿಜೆಪಿ ನಾಯಕರಿಗೂ ಅಚ್ಚರಿ ಮೂಡಿಸಿದೆ. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಸಚಿವರಾದ ಕೆ.ಎಸ್ ಈಶ್ವರಪ್ಪ, ಮುರುಗೇಶ್ ನಿರಾಣಿ, ಆರ್. ಅಶೋಕ್ ಸೇರಿದಂತೆ ಹಲವು ನಾಯಕರಿಗೆ ಭವಿಷ್ಯದ ಚಿಂತೆ ಶುರುವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯಿಂದ ಸುಧಾರಿಸುವ ಕೊಳ್ಳುವ ಮುನ್ನವೇ ರಾಜ್ಯ ಬಿಜೆಪಿ ನಾಯಕರಿಗೆ ಮತ್ತೊಂದು ಆತಂಕ ಎದುರಾಗಿದೆ. ಇತ್ತೀಚೆಗೆ ರಾಜ್ಯ ಪ್ರವಾಸ ಕೈಗೊಂಡಿದ್ದ ಅರುಣ್ ಸಿಂಗ್ ಹೈಕಮಾಂಡ್ಗೆ ನೀಡಿದ ವರದಿಯಲ್ಲಿ ಬೊಮ್ಮಾಯಿಗೆ ಫುಲ್ ಮಾರ್ಕ್ಸ್ ನೀಡಿದ್ದಾರಂತೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಸಲ್ಲಿಸಿರುವ ಮೂರು ಪುಟಗಳ ವರದಿಯಲ್ಲಿ ಬೊಮ್ಮಾಯಿ ಸರ್ಕಾರದ ಬಗ್ಗೆ ಅರುಣ್ ಸಿಂಗ್ ಹಲವು ಸಕಾರಾತ್ಮಕ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಬೊಮ್ಮಾಯಿ ಯಾವುದೇ ಗೊಂದಲವಿಲ್ಲದೇ ಆಡಳಿತ ನಡೆಸುತ್ತಿದ್ದಾರೆ. ಸುಖಾಸುಮ್ಮನೆ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡೋದಿಲ್ಲ ಎಂದು ಅರುಣ್ ಸಿಂಗ್ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆ ಬೊಮ್ಮಾಯಿ ಸರ್ಕಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆಯೂ ಅರುಣ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಡಳಿತಾತ್ಮಕವಾಗಿಯೂ ರಾಜ್ಯ ಸರ್ಕಾರ ಚುರುಕುಗೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸಚಿವ ಅಮಿತ್ ಶಾ, ಉಸ್ತುವಾರಿ ಅರುಣ್ ಸಿಂಗ್ ಹೀಗೆ ಸಾಲು ಸಾಲು ಹೈಕಮಾಂಡ್ ನಾಯಕರು ಸಿಎಂ ಬೊಮ್ಮಾಯಿಗೆ ಬಹುಪರಾಕ್ ಹೇಳ್ತಿರೋದು ಬಿಜೆಪಿ ಹಿರಿಯ ನಾಯಕರು ನಿದ್ದೆಗೆಡುವಂತೆ ಮಾಡಿದೆ. ಅದರಲ್ಲೂ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲೇ ಎಂಬ ಶಾ ಹೇಳಿಕೆ ಕಮಲ ಪಾಳಯದ ಘಟಾನುಘಟಿ ನಾಯಕರ ಆಂತಕ ಸೃಷ್ಟಿಸಿದೆ. ಈ ಬಗ್ಗೆ ಮಾಜಿ ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚೆಯೂ ನಡೆಸಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ.
ಬಸವರಾಜ್ ಬೊಮ್ಮಾಯಿ ಜಗದೀಶ್ ಶೆಟ್ಟರ್ಗಿಂತ ಕಿರಿಯರು. ಬೊಮ್ಮಾಯಿ ಸಂಪುಟದಿಂದ ಬಿ.ಎಸ್ ಯಡಿಯೂರಪ್ಪ ಹಿಂದೆ ಸರಿದಿದ್ದರು. ಹೀಗಾಗಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಶೆಟ್ಟರ್ಗೆ ಮನಸ್ಸಿಲ್ಲ. ನಾಳೆ ಗೆದ್ದು ಮತ್ತೆ ಕಿರಿಯನ ಎದುರು ಸಚಿವ ಆಗಬೇಕಾಗುತ್ತದೆ ಎಂಬುದು ಶೆಟ್ಟರ್ ಯೋಚನೆ.
ಇತ್ತ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಬಿ.ಎಸ್ ಯಡಿಯೂರಪ್ಪ ಭಾವಿಸಿದ್ದರು. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಪುತ್ರ ವಿಜಯೇಂದ್ರನನ್ನು ಕಣಕ್ಕಿಳಿಸಲು ಬಿಎಸ್ವೈ ಪ್ರಯತ್ನಿಸುತ್ತಿದ್ದರು. ಆದರೆ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಪುತ್ರನಿಗಾಗಿ ಬಿಎಸ್ವೈ ಬೊಮ್ಮಾಯಿ ಬಳಿಯೇ ಟಿಕೆಟ್ ಕೇಳಬೇಕಾದ ಪರಿಸ್ಥಿತಿ ಎದುರಾಗಬಹುದು.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು 20 ತಿಂಗಳು ಬಾಕಿಯಿರುವಂತೆಯೇ ಬಿಜೆಪಿ ಹೈಕಮಾಂಡ್ ಸಿದ್ಧತೆ ಆರಂಭಿಸಿದಂತಿದೆ. ಹೈಕಮಾಂಡ್ ನಾಯಕರು ಈಗಿನಿಂದಲೇ ಬೊಮ್ಮಾಯಿ ಬೆನ್ನು ತಟ್ಟುತ್ತಿದ್ದು ಕೇಸರಿ ಕೋಟೆಗೆ ಬೊಮ್ಮಾಯಿಯೇ ಚಕ್ರಾಧಿಪತಿಯಾಗಿ ಮುಂದುವರಿಯಲಿದ್ದಾರೆ ಅನ್ನೋ ಸಂದೇಶ ನೀಡುತ್ತಿದ್ದಾರೆ.