ಕಾಂಗ್ರೆಸ್ ಬಗ್ಗೆ ಆಗಲಿ ಅಥವಾ ರಾಹುಲ್ ಗಾಂಧಿ ಅವರ ಬಗ್ಗೆ ಆಗಲಿ ನನಗೆ ಸಾಫ್ಟ್ ಕಾರ್ನರ್ ಇಲ್ಲ. ನಾನು ಇದ್ದ ವಿಷಯವನ್ನೇ ಹೇಳಿದ್ದೇನೆ. ಕಾಂಗ್ರೆಸ್ ನಾಯಕರ ರೀತಿ ನಾನು ಬೀದಿಯಲ್ಲಿ ಬ್ಯಾರಿಕೇಡ್ ಹತ್ತಿ ಡಾನ್ಸ್ ಮಾಡುವುದಕ್ಕೆ ಹೋಗಬೇಕೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸ್ವಾಯುತ್ತ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡ್ತಿವೆ ಎಂಬುದನ್ನು ಚರ್ಚೆ ಮಾಡಿದ್ದೇನೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರನ್ನು ಒಲೈಸಿಕೊಳ್ಳಲು ಹೇಳಿಲ್ಲ ಎಂದು ಹೇಳಿದ್ದಾರೆ.
ನಾನು ಈ ಹೇಳಿಕೆ ಕೊಟ್ಟಾಗ ಒಬ್ಬ ಬಿಜೆಪಿ ಸಂಸದರೇ ನನಗೆ ಪೋನ್ ಮಾಡಿ ಶಹಬ್ಬಾಸ್ ಗಿರಿ ಹೇಳಿದರು. ಈ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾತನಾಡಿದ್ದೀರಿ ಎಂದು ಹೇಳಿದರು. ನಮ್ಮ ಕುತ್ತಿಗೆ ಕುಯ್ದಿದ್ದೆ ಕಾಂಗ್ರೆಸ್ ನವರು. ನಾನು ಯಾಕೆ ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಲಿ. ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡವಳಿಕೆ ನೋಡಿದ್ದೇನೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳ ಕುತಂತ್ರದ ಬಗ್ಗೆ ಅರಿವು ಮೂಡಿಸುತ್ತೇವೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಎಂದು ಜನರ ಮುಂದೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಇದು ಬಿಜೆಪಿಯದ್ದೇ ಆಟ:
ಮಹಾರಾಷ್ಟ್ರದಲ್ಲಿ ಸರ್ಕಾರ ತೆಗೆಯಲು ಬಿಜೆಪಿ ಹೊರಟಿದೆ. ನಮಗೆ ಏನು ಗೊತ್ತಿಲ್ಲ ಎಂಬಂತೆ ಬಿಜೆಪಿಯವರು ಇದ್ದಾರೆ. ಆದರೆ ಇಡೀ ದೇಶಕ್ಕೆ ಇದು ಬಿಜೆಪಿಯ ಆಟವೆಂದು ಗೊತ್ತು. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಶಾಸಕರನ್ನು ಕರೆದೊಯ್ದಿದ್ದಾರೆ. ಶಾಸಕರನ್ನ ಹೈಜಾಕ್ ಮಾಡಿಕೊಂಡು ಅಲ್ಲಿಟ್ಟುಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ನಮ್ಮ ಶಾಸಕರನ್ನು ಮುಂಬೈಗೆ ಕರೆದೊಯ್ದಿದ್ದರು. ಇದು ಕರ್ನಾಟಕದಲ್ಲಿ ನನ್ನ ಸರ್ಕಾರವನ್ನು ತೆಗೆದಂತೆ ಅಲ್ಲಿನ ಸರ್ಕಾರವನ್ನು ಕೊಡ ತೆಗೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಶಾಸಕರು ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಬೇಕಾದರೆ ಯಾವ ಆಮಿಷಗಳು ಇರುತ್ತವೆ. ಈ ವಿಷಯ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಕಾರಣಗಳು ಬೇರೆ ಬೇರೆ ಕೊಡುತ್ತಾರೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸುವಂತದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ.
ಯಾರ ಸರ್ಕಾರ ಇರಬಾರದೆಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಒಳಗೊಂಡಂತೆ ಎಲ್ಲಾ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇರಬೇಕು. ಅವರ ಈ ರೀತಿಯ ಕುತಂತ್ರದ ಬೆಳವಣಿಗೆಗಳು ಏನಿದೆ. ಮುಂದಿನ ದಿನಗಳಲ್ಲಿ ಅವರಿಗೆ ಇದೇ ಬೂಮ್ ರಂಗ್ ಆಗಲಿದೆ ಎಂದು ಮಹಾರಾಷ್ಟ್ರ ಬೆಳವಣಿಗೆಗಳ ಬಗ್ಗೆ ಹೆಚ್ಡಿಕೆ ಅವರು ಅಭಿಪ್ರಾಯಪಟ್ಟರು.
ಶಿವಸೇನೆಯ ನಾಯಕ ಏಕನಾಥ್ ಶಿವಸಿಂಧೆ ಏನೇ ಹೇಳಲಿ, ಏಕನಾಥ್ ಶಿಂಧೆ ಶಿವಸೇನೆ ನಮ್ಮದೆಂದು ಕ್ಲೈಮ್ ಮಾಡಬಹುದು. ಸಂಖ್ಯಾಬಲದ ಆಧಾರದ ಮೇಲೆ ಅವರು ಕ್ಲೈಮ್ ಮಾಡಬಹುದು. ಚುನಾವಣೆಗೆ ಹೋದಾಗ ಬೇರೆಯದ್ದೇ ನಡೆಯುತ್ತದೆ. ಶಿವಸೇನೆಯ ಸಂಸ್ಥಾಪಕರು ಮತ್ತು ಯಾರು ಯಾರು ಪಕ್ಷಕ್ಕೆ ದುಡಿದಿದ್ದಾರೆ? ಯಾರು ಪಕ್ಷವನ್ನು ಕಟ್ಟಿದ್ದಾರೆ. ಕಾರ್ಯಕರ್ತರು ಯಾರ ಜೊತೆಗೆ ನಿಲ್ಲುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಇವೆಲ್ಲದರ ಮೇಲೆ ಮುಂದಿನ ಬೆಳವಣಿಗೆ ತೀರ್ಮಾನವಾಗುತ್ತದೆಂಬುದು ಎಂದು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.