ರಾಜಕಾಲುವೆ, ಉಪ ಕಾಲುವೆಗಳನ್ನು ಒತ್ತುವರಿ ಮಾಡಿ ಪ್ರವಾಹಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ, ಕೆಲ ರಾಜಕಾರಣಿಗಳನ್ನು ಮೆಚ್ಚಿಸಲು ಬಿಬಿಎಂಪಿ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅದನ್ನು ಹೊರತುಪಡಿಸಿ ಬರೀ ಹೇಳಿಕೆಗಳಿಂದ ಉಪಯೋಗ ಇಲ್ಲ. ಮೊದಲು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರ ವಿರುದ್ದ ಕಠಿಣ ಕಾನೂನು ಕರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಳೆ ಅನಾಹುತ ಬೆಂಗಳೂರು ಒಂದೇ ಕಡೆ ಅಲ್ಲ, ರಾಜ್ಯದ ಎಲ್ಲೆಡೆ ಆಗಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗುವ ಪರಿಸ್ಥಿತಿ ಬಂದಿದೆ. ನಿನ್ನೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಆದರೆ, ಇಂಥ ಸಭೆಗಳಿಂದ ಉಪಯೋಗ ಏನು? ಅನೇಕ ಬಲಿಷ್ಠರು ರಾಜಕಾಲುವೆ, ಉಪಕಾಲುವೆಗಳನ್ನು ಮುಚ್ಚಿ ಅರಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆರೆಗಳನ್ನು ನುಂಗಿ ಹಾಕಿದ್ದಾರೆ. ಈ ರೀತಿ ಜಲಾವೃತ ಆಗಲು ಇಂತಹ ದುರಾಸೆ ಕಾರಣ ಎಂದು ಕಿಡಿಕಾರಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನ ಅನೇಕ ಪ್ರದೇಶಗಳು ನೀರಿನಲ್ಲಿ ತೇಲುತ್ತಿವೆ. ಈಗಲೂ ಸಹ ಸರಕಾರ ಕಠಿಣ ಕ್ರಮಕೈಗೊಳ್ಳದೆ ಮೀನಾ ಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿಟಿ ರೌಂಡ್ಸ್ ಫಲಶೃತಿ ಏನು?:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಟಿ ರೌಂಡ್ಸ್ ಮಾಡಿದರು. ಏನಾದರೂ ಸಂದೇಶ ಕೊಟ್ಟರೇ? ಅದರಿಂದ ಬಂದ ಫಲಶೃತಿ ಏನು? ಯಾವುದಾದರೂ ಪರಿಹಾರ ಕೊಟ್ಟರಾ ಮುಖ್ಯಮಂತ್ರಿಗಳು? ಮುಂದೆ ಅವರು ಬೆಂಗಳೂರು ಜನರಿಗೆ ಏನು ಕೊಡುತ್ತಾರೆ ಎನ್ನುವುದನ್ನು ಕಾದು ನೋಡೋಣ ಎಂದಿದ್ದಾರೆ.
ಮುದ್ದಹನುಮೇಗೌಡ ರಾಜೀನಾಮೆಯಿಂದ ಅಚ್ಚರಿ ಇಲ್ಲ:
ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ ವಿಚಾರ ನನಗೆ ಆಶ್ಚರ್ಯ ತರುವ ಘಟನೆ ಏನಲ್ಲ. ಈಗಾಗಲೇ ಅನೇಕರು ಕಾಂಗ್ರೆಸ್ ತ್ಯಜಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅವರ ರಾಜೀನಾಮೆ ನನಗೆ ಅಚ್ಚರಿ ತರುವ ವಿಷಯವಲ್ಲ. ಮುಂದಿನ ದಿನಗಳಲ್ಲಿ ಬಹಳ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕುತಂತ್ರ ರಾಜಕಾರಣಕ್ಕೆ ಉತ್ತರ ಸಿಗಲಿದೆ:
ಜೆಡಿಎಸ್ ಪಕ್ಷದ ಬಗ್ಗೆ ಅನೇಕರು ಲಘುವಾಗಿ ಮಾತಾಡಿದ್ದರು. ನಮ್ಮ ಪಕ್ಷ ಮುಗಿಸುವ ಕೆಲಸ ಮಾಡಿದ್ದರು. ಮುಂದಿನ ದಿನಗಳಲ್ಲಿ ಉತ್ತರ ಕೊಡುವ ಕೆಲಸ ಮಾಡುತ್ತೇವೆ. ಕುತಂತ್ರ ರಾಜಕಾರಣ ಮಾಡುತ್ತಿದ್ದರು. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.