ರಾಜ್ಯ ಬಿಜೆಪಿಯಲ್ಲಿ ಎರಡು ಪಂಗಡಗಳಿವೆ. ಒಂದು ಸರ್ಕಾರ ಮತ್ತೊಂದು ಸಂಘಟನೆ. ಈ ಎರಡಕ್ಕೂ ಒಂದನ್ನು ಕಂಡರೆ ಇನ್ನೊಂದಕ್ಕೆ ಆಗಿ ಬರುವುದಿಲ್ಲ ಎನಿಸುತ್ತದೆ. ಅದು ಸಾಕಷ್ಟು ಬಾರಿ ಸಾಬೀತು ಕೂಡ ಆಗಿದೆ. ಕಳೆದ ವಾರ ಅಷ್ಟೆ ಬಿಜೆಪಿ ಸಭೆಯಲ್ಲಿ ಬಿ.ಎಲ್ ಸಂತೋಷ್ ಕುಮಾರಸ್ವಾಮಿ ಹಾಗು ಜೆಡಿಎಸ್ ಪಕ್ಷದ ಬಗ್ಗೆ ಟೀಕಾಸ್ತ್ರ ಪ್ರಯೋಗ ಮಾಡಿದ್ರು. ಆ ಬಳಿಕ ಬಿ.ಎಲ್ ಸಂತೋಷ್ಗೆ ತಿರುಗೇಟು ಕೊಟ್ಟಿದ್ದ ಕುಮಾರಸ್ವಾಮಿ, ಜೋಳಿಗೆ ಹಾಕೊಂಡು ಓಡಾಡುವ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತನಾಡಿದ್ದಾನೆ. ಕರ್ನಾಟಕಕ್ಕೆ ಆತನ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದರು. ತದನಂತರ ಸ್ಯಾಂಟ್ರೋ ರವಿ ಬಗ್ಗೆ ಮಾಹಿತಿ ಕೊಟ್ಟಿದ್ದ ಕುಮಾರಸ್ವಾಮಿ, ಬಿಜೆಪಿ ನಾಯಕರ ಜೊತೆಗೆ ಇರುವ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದರು. ರಾಜ್ಯಾದ್ಯಂತ ಬಿಜೆಪಿ ಮುಜುಗರ ಅನುಭವಿಸುವಂತೆ ಆಗಿತ್ತು. ಅಷ್ಟೇ ಅಲ್ಲೆ ಗುಜರಾತ್ನಲ್ಲಿ ಪಿಂಪ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಬಂಧನ ಆಗಿತ್ತು. ಅದಕ್ಕೂ ಒಂದು ದಿನ ಮುಂಚೆ ಗುಜರಾತ್ನ ಅಹಮದಾಬಾದ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಗೃಹ ಸಚಿವರು ಗುಜರಾತ್ಗೆ ಹೋಗಿದ್ದಕ್ಕೂ ಪಿಂಪ್ ಸ್ಯಾಂಟ್ರೋ ರವಿ ಗುಜರಾತ್ನಲ್ಲಿ ಸಿಗುವುದಕ್ಕೂ ಲಿಂಕ್ ಆಗಿತ್ತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕುಮಾರಸ್ವಾಮಿ ಬಹಿರಂಗ ಮಾಡಿದ ಆಡಿಯೋ ವೀಡಿಯೋಗಳು ಫೋಟೋಗಳು, ವರ್ಗಾವಣೆಗೆ ಕೊಟ್ಟಿದ್ದ ಶಿಫಾರಸು ಪತ್ರಗಳೇ ಕಾರಣ ಎನ್ನುವುದು ಬಿಜೆಪಿ ನಾಯಕರ ಅಭಿಪ್ರಾಯ ಆಗಿತ್ತು. ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಂಬದ್ಧ ಟೀಕೆ ಬೇಡ ಎನ್ನುವ ಮೌಕಿಕ ಸಂದೇಶವನ್ನು ಬಿಜೆಪಿ ಹೈಕಮಾಂಡ್ ನೀಡಿದೆ ಎನ್ನುವ ವರದಿಗಳು ಪ್ರಸಾರ ಆಗಿದ್ದವು.
ಹೈಕಮಾಂಡ್ ಮಾತಿನ ಬಳಿಕವೂ ಮತ್ತೆ ಕೆಣಕಿದ ನಳೀನ್..!
ಕುಮಾರಸ್ವಾಮಿ ಬಳಿ ಸಾಕಷ್ಟು ನಾಯಕರ ಅಕ್ರಮಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಸೇರಿದಂತೆ ಹತ್ತಾರು ದಾಖಲೆಗಳು ಇವೆ ಎನ್ನಲಾಗ್ತಿದೆ. ಅದರಲ್ಲೂ ರಾಜ್ಯ ಬಿಜೆಪಿ ಕುಮಾರಸ್ವಾಮಿಯನ್ನು ಕೆಣಕಿ ಕೈಸುಟ್ಟುಕೊಳ್ಳುವುದು ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದರು. ಆದರೆ ಬಿಎಲ್ ಸಂತೋಷ್ ಶಿಷ್ಯ ರಾಜ್ಯ ಬಿಜೆಪಿ ಅಧ್ಯಕ್ಷ ಕುಮಾರಸ್ವಾಮಿ ಹಾಗು ಜೆಡಿಎಸ್ ಪಕ್ಷವನ್ನು ಮತ್ತೊಮ್ಮೆ ಕೆಣಕಿದ್ದಾರೆ. ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ರೈತ ಮೂರ್ಚಾ ಸಭೆಯಲ್ಲಿ ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷವಿದೆ. ಅವರು ಸಭೆ ನಡೆಸಿದ್ರೆ ಚಪ್ಪಲಿಗಳು ಕೈಯ್ಯಲ್ಲಿ ಇರುತ್ತವೆ ಎನ್ನುವ ಮೂಲಕ ಕೋಲಾರದಲ್ಲಿ ನಡೆದ ಗಲಾಟೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇನ್ನೊಂದು ಕುಟುಂಬದ ಪಾರ್ಟಿಯಿದೆ. ಅವರು ಸಭೆ ಮಾಡಿದ್ರೆ ಒಬ್ಬರ ಚಪ್ಪಲಿ ಇನ್ನೊಬ್ಬರ ಮೈಮೇಲೆ ಇರುತ್ತೆ ಎಂದು ಟೀಕಿಸಿದ್ದಾರೆ. ಇದಕ್ಕೆ ಪಂಚರತ್ನ ರಥಯಾತ್ರೆ ವೇಳೆಯಲ್ಲೇ ಕುಮಾರಸ್ವಾಮಿ ಗುಡುಗಿದ್ದಾರೆ.
ನಳೀನ್ ಟೀಕೆಗೆ ಕುಮಾರಸ್ವಾಮಿ ಕೊಟ್ಟ ಉತ್ತರ..!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಟೀಕೆಗೆ ಖಾರವಾದ ಪ್ರತಿಕ್ರಿಯೆ ಕೊಟ್ಟಿರುವ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ. ದೇವೇಗೌಡರ ಧೂಳಿನ ಸಮಾನವಿಲ್ಲದ ವ್ಯಕ್ತಿ ಟೀಕೆ ಮಾಡಿದ್ದಾರೆ. ಅಪ್ಪ ಮಕ್ಕಳ ಪಕ್ಷ, ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡ್ತಾರೆ ಎಂದಿದ್ದಕ್ಕೆ ಕಿಡಿಕಾರಿರುವ ಕುಮಾರಸ್ವಾಮಿ, ಇದು ಬಿಜೆಪಿ ಸಂಸ್ಕೃತಿನಾ..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ದೇವೇಗೌಡರು ಏನು ಅಂತ ಮೋದಿಯನ್ನು ಕೇಳಿ ತಿಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇನ್ನು ಶೀಘ್ರದಲ್ಲೇ ಬಿಜೆಪಿ ಟೆಂಟ್ ಖಾಲಿ ಮಾಡಿಕೊಂಡು ಹೋಗುವ ದಿನ ಬಂದಿದೆ. ಉತ್ತರ ಕರ್ನಾಟಕದ ಜೊತೆಗೆ ಚೆಲ್ಲಾಟ ಆಡಿದ್ದೀರಿ. ನಿಮ್ಮ ಯೋಗ್ಯತೆಗೆ ಹಣ ಹೊಡೆದಿದ್ದೀರಿ, ಭ್ರಷ್ಟಾಚಾರ ಮಾಡಿದ್ದೀರಿ. ನಮ್ಮ ಕುಟುಂಬದ ಬಗ್ಗೆ ಚರ್ಚೆ ಮಾಡ್ತೀರಾ..? ನಮ್ಮ ಕುಟುಂಬ ಗೌರವದಿಂದ ಬದುಕುತ್ತಿದ್ದೇವೆ. ನಮಗೆ ಅಧಿಕಾರ ಮುಖ್ಯವಲ್ಲ. ಅಧಿಕಾರಕ್ಕಾಗಿ ಯಾರ ಮನೆಗಾದರೂ ಹೋಗಿ ಕಾಲು ಹಿಡಿತೀರಿ.. ಈಗ ನಮ್ಮ ಬಗ್ಗೆ ಮಾತನಾಡ್ತೀರಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಯತ್ನಾಳ್ ಹಾಗು ಬಾಗಲಕೋಟೆ ಸಚಿವ ನಿರಾಣಿ ಪರಸ್ಪರ ಮಾತಾಡಿದ ಭಾಷೆ ಚಪ್ಪಲಿಗಿಂತಲೂ ಕಡೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಈಗ ಬಿಜೆಪಿಗೆ ಮತ್ತೊಮ್ಮೆ ಮುಜುಗರ ಆಗುವ ಸಮಯ..!
ಕುಮಾರಸ್ವಾಮಿಯನ್ನು ಕಣಕುವುದು ಆ ಬಳಿಕ ಕುಮಾರಸ್ವಾಮಿ ಬಿಜೆಪಿ ನಾಯಕರ ಅಕ್ರಮಗಳ ಬಗ್ಗೆ ಏನಾದರೂ ಒಂದು ವಿಚಾರ ತೆಗೆಯುತ್ತಾರೆ. ಅದು ಬಿಜೆಪಿ ಸರ್ಕಾರದ ಬಗ್ಗೆ ಆಗಿರುತ್ತದೆ. ಅದರಿಂದ ಬಿಜೆಪಿ ಸಂಘಟನಾ ಗುಂಪಿಗೆ ಸಂಭ್ರಮದ ವಿಚಾರ ಎನ್ನುವಂತಾಗಿದೆ. ಸ್ವತಃ ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿ ಬಗ್ಗೆ ಪದೇ ಪದೇ ಟೀಕೆ ಮಾಡದಂತೆ ಸೂಚನೆ ಕೊಟ್ಟ ಬಳಿಕವೂ ನಳೀನ್ ಕುಮಾರ್ ಕಟೀಲ್ ಟೀಕೆ ಮಾಡಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದರೆ ಬಿಜೆಪಿ ಮುಜುಗರ ಎದುರಿಸಲು ಸಜ್ಜಾಗಿದೆ ಎಂದೇ ಅರ್ಥ. ಇದೀಗ ಕುಮಾರಸ್ವಾಮಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಯಾವ ಬಾಣ ಬಿಡ್ತಾರೆ..? ಯಾರಿಗೆ ನಾಟುತ್ತೆ..? ಎನ್ನುವ ಜೊತೆಗೆ ಮತ್ತೊಂದು ಮುಜುಗರಕ್ಕೆ ಭಾರತೀಯ ಜನತಾ ಪಾರ್ಟಿ ಸಿದ್ಧತೆ ಮಾಡಿಕೊಂಡಂತಿದೆ.