ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ಭಾರೀ ಪ್ರಮಾಣದಲ್ಲಿ ಏರುತ್ತಿರುವ ಕಾರಣ ಮುಂದಿನ 15-20 ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಿದರೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ʼರಾತ್ರಿ ಕರ್ಫ್ಯೂ ಬಗ್ಗೆ ಬಿಜೆಪಿ ಹಾಗೂ ಸರಕಾರದ ನಡುವೆ ಗೊಂದಲ ಇದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಶಾಲಾ ಕಾಲೇಜು, ವಸತಿ ನಿಲಯಗಳನ್ನು ಕೆಲ ಕಾಲ ಬಂದ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಮಕ್ಕಳು, ವಿದ್ಯಾರ್ಥಿಗಳು ಸಮಸ್ಯೆಗೆ ತುತ್ತಾಗಬೇಕಾಗುತ್ತದೆ ಎಂದರು.
ಈ ಕರ್ಫ್ಯೂ ಬಗ್ಗೆ ಬಿಜೆಪಿ ಮುಖಂಡರಲ್ಲೇ ಕೆಲವು ಗೊಂದಲಗಳಿವೆ. ಆಡಳಿತ ಪಕ್ಷದ ಕೆಲ ಪ್ರಮುಖರು ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವ್ಯಾಪಾರಿಗಳು, ಹೋಟೆಲ್ ವ್ಯಾಪಾರಿಗಳು, ಇನ್ನಿತರೆ ಸಂಘಟನೆಗಳು ಸಹ ಇದಕ್ಕೆ ವಿರೋಧ ಇದ್ದಾರೆ. ಆದರೂ ಬಿಜೆಪಿ ಮುಖಂಡರ ಗೊಂದಲಮಯ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ವಿವರಿಸಿದರು.
ಜನ ಸಾಮಾನ್ಯರ ಜೀವನಕ್ಕೆ ತೊಂದರೆ ಆಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ತೊಂದರೆ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಅವರ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು. ಹಿಂದೆ ನೀಡಿದ್ದಕ್ಕಿಂತ ಉತ್ತಮ ಪ್ಯಾಕೆಜ್ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಾದಯಾತ್ರೆ ಕುಟುಕಿದ ಹೆಚ್ ಡಿಕೆ
ಪಾದಯಾತ್ರೆ ಹೆಸರಿನಲ್ಲಿ ಒಂದು ಜಾತ್ರೆ ನಡೆಯಿತು. ಅದಾದ ಬಳಿಕ ಎಲ್ಲರಿಗೂ ಅದೇ ರೂಢಿ ಆಯ್ತು. ಅವರು ಮಾತ್ರ ಮಾಡಬಹುದು ನಮಗೆ ಯಾಕೆ ನಿರ್ಭಂಧ ಅಂತ ಜನ ಸಾಮಾನ್ಯರು ಮಾತಾಡುವಂತೆ ಆಯಿತು. ಈ ಮೂಲಕ ರಾಮನಗರ ಸೇರಿ ರಾಜ್ಯದ ಎಲ್ಲೆಡೆ ಸೋಂಕು ಜಾಸ್ತಿ ಆಯಿತು ಎಂದಿದ್ದಾರೆ.