“ಹಿಂದೂ ಸಮಾಜ ಯುದ್ಧದ ಪರಿಸ್ಥಿತಿಯಲ್ಲಿದೆ” ಇದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ನೀಡಿರುವ ಹೇಳಿಕೆ. ಇದು ಬಲಪಂಥೀಯ ಸಂಘಟನೆಯೊಂದರ ಮುಖ್ಯಸ್ಥ ನೀಡುವ ಸಾಮಾನ್ಯ ಹೇಳಿಕೆ ಎಂದು ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ. ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಪ್ರತಿಯೊಂದು ದೌರ್ಜನ್ಯಗಳನ್ನು ಸಮರ್ಥಿಸಿಕೊಳ್ಳುವ, ಮೂಲಭೂತ ಹಿಂದುತ್ವವಾದಿಗಳ ದ್ವೇಷ ಭಾಷಣಗಳನ್ನು ಸಮರ್ಥಿಸಿಕೊಳ್ಳುವ ಅತ್ಯಂತ ದುರದೃಷ್ಟಕರ ಹೇಳಿಕೆ ಎಂದರೆ ತಪ್ಪಾಗಲಾರದು.
ಭಾಗವತ್ ಅವರ ಮಾತುಗಳನ್ನೇ ನೋಡುವುದಿದ್ದರೆ, ಹಿಂದೂ ಸಮಾಜ ಕಳೆದ ಸಾವಿರ ವರ್ಷಗಳಿಂದ ಯುದ್ಧ ಮಾಡುತ್ತಲೇ ಬಂದಿದೆ. ಈ ಯುದ್ಧ ಇಂದಿಗೂ ನಿಂತಿಲ್ಲ. ಮೊದಲು ವಿದೇಶಿಯರ ವಿರುದ್ಧ, ನಂತರ ವಿದೇಶಿ ಪ್ರಭಾವದ ವಿರುದ್ಧ ಅವೆಲ್ಲದ್ದಕ್ಕಿಂತ ಮಿಗಿಲಾಗಿ ದೇಶದಲ್ಲಿರುವ ಶತ್ರುಗಳ ವಿರುದ್ಧ ಹಿಂದೂ ಸಮಾಜ ಯುದ್ದ ಮಾಡುತ್ತಲೇ ಬಂದಿದೆ. ಇಂತಹ ಸುದೀರ್ಘ ಯುದ್ಧಗಳನ್ನು ಮಾಡುತ್ತಲೇ ಬಂದಿರುವವರಿಂದ ನೀವು ವಿನಮ್ರತೆಯನ್ನು ಎದುರು ನೋಡಲು ಸಾಧ್ಯವೇ ಎಂದು ಭಾಗವತ್ ಪ್ರಶ್ನಿಸಿದ್ದಾರೆ.
ದೇಶದ ಮುಸ್ಲೀಮರು ಮತ್ತು ಕ್ರೈಸ್ತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಹಾಗೂ ದ್ವೇಷಭಾಷಣಗಳನ್ನು ಸಮರ್ಥಿಸಿಕೊಂಡವರು ಭಾಗವತ್ ಒಬ್ಬರೇ ಅಲ್ಲ. ಈ ಹಿಂದೆಯೂ, ಈಗಲೂ ಹಲವರು ತಲೆ ಕಡೆಯಿರಿ, ಕಾಲುಕಡಿಯಿರಿ, ಅಸ್ತ್ರಗಳನ್ನು ಮನೆಯಲ್ಲಿಡಿ ಎಂಬಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದಕ್ಕೂ ಮಿಗಿಲಾಗಿ, ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಹೊಂದಬೇಕು ಎಂದು ನೀಡಿರುವ ಹೇಳಿಕೆ ಸಮುದಾಯದ ಸಂಪ್ರದಾಯ ಮತ್ತು ನೈತಿಕತೆಯನ್ನು ಹೆಚ್ಚಿಸುವಂತದ್ದು ಎಂದು ದೆಹಲಿ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಮಜಾಯಿಷಿ ಕೂಡಾ ನೀಡಿದ್ದಾರೆ.
ಮೋಹನ್ ಭಾಗವತ್ ಒಬ್ಬ ʼದೊಡ್ಡʼ ವ್ಯಕ್ತಿ. ಅವರು ನೇರವಾಗಿ ಹಿಂದೂ ಸಮುದಾಯವನ್ನು ಹಿಂಸೆಗೆ ಪ್ರಚೋದಿಸಿಲ್ಲದಿರಬಹುದು. ಆದರೆ, ಪ್ರಸ್ತುತ ಹಿಂದೂ ಸಮುದಾಯದ ʼಯುದ್ದʼದ ಪರಿಸ್ಥಿತಿಯನ್ನು ಅವರು ಆನಂದಿಸುತ್ತಿರುವುದಂತೂ ಸತ್ಯ.
ಮೋಹನ್ ಭಾಗವತ್ ದ್ವೇಷವನ್ನು ಮಾತ್ರ ಇಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಈ ಹಿಂದೆ, ಮುಸ್ಲೀಂ ಮಹಿಳೆಯರ ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹತ್ಯಾಕಾಂಡ, ವ್ಯಾಪಾರ ನಿಷೇಧದಂತಹ ಹಲವು ಹೇಳಿಕೆಗಳನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ಯುದ್ದದಲ್ಲಿ ಎಲ್ಲವೂ ಸಾಮಾನ್ಯ ಅಲ್ಲವೇ? ಅದು ಅತ್ಯಾಚಾರವಾದರೇನು? ಹತ್ಯಾಕಾಂಡವಾದರೇನು?
ಭಾಗವತ್ ಹೇಳಿಕೆ ಪ್ರಕಾರ, ಮುಸ್ಲೀಮರಲ್ಲಿ ಒಳ್ಳೆಯವರೂ ಇದ್ದಾರೆ. ಆದರೆ, ಯುದ್ಧ ಮಾಡುತ್ತಿರುವ ಓರ್ವ ಹಿಂದೂ ಒಳ್ಳೆಯ ಮುಸ್ಲೀಂ ಮತ್ತು ಕೆಟ್ಟ ಮುಸ್ಲಿಂ ಎಂಬ ವ್ಯತ್ಯಾಸವನ್ನು ಗಮನಿಸಬಲ್ಲನೇ? ನಿಜಕ್ಕೂ ಒಳ್ಳೆಯ ಮುಸ್ಲೀಮರು ಎಂದರೆ ಯಾರು? ಅಥವಾ Everything is fair in love and war ಎಂಬ ಆಂಗ್ಲ ಗಾದೆಯನ್ನು ಮುಂದಿಟ್ಟು, ಎಲ್ಲಾ ಮುಸ್ಲೀಮರ ಮೇಲಿನ ದೌರ್ಜನ್ಯವನ್ನು ಮೋಹನ್ ಭಾಗವತ್ ಸಮರ್ಥಿಸಿಕೊಂಡರೇ?
ಗುಜರಾತ್ನ ಗೋದ್ರಾ ಹತ್ಯಾಕಾಂಡದ ಬಳಿಕ ಹೇಳಿಕೆ ನೀಡಿದ ವಿಹೆಚ್ಪಿ ಮುಖಂಡ ಕೆ ಕೆ ಶಾಸ್ತ್ರಿ, ಯುವಕರು ಹಲವು ಬಾರಿ ತಮ್ಮ ಎಲ್ಲೆಯನ್ನು ಮೀರಿ ಅತಿರೇಕದ ವರ್ತನೆ ತೋರಿದ್ದಾರೆ. ಅದು ಸರಿ ಎಂದು ನಾನು ಹೇಳುವುದಿಲ್ಲ. ಆದರೆ, ಅದನ್ ತಪ್ಪೆಂದು ನಾನು ಹೇಳು ಆಗುವುದಿಲ್ಲ. ಏಕೆಂದರೆ ಅವರು ನಮ್ಮ ಯುವಕರು. ನಮ್ಮ ಮನೆಯ ಹುಡುಗರು ಏನಾದರೂ ಮಾಡಿದರೆ ಅದನ್ನು ತಪ್ಪೆಂದು ಹೇಳಲು ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಮೋಹನ್ ಭಾಗವತ್ ಹೇಳಿಕೆ ಸರಿಸುಮಾರು ಇದೇ ಧಾಟಿಯಲ್ಲಿದೆ. ಯುದ್ಧದಲ್ಲಿ ಅತಿರೇಕ ಎನ್ನುವುದು ಸಾಮಾನ್ಯ ಅಲ್ಲವೇ?
ಹಿಂದಿನಿಂದಲೂ ಮುಸ್ಲೀಂ ಹಾಘೂ ಕ್ರೈಸ್ತ ವಿರೋಧಿ ಧೋರಣೆಯಿಂದಲೇ ಬೆಳೆದು ಬಂದಿರುವ ಆರ್ಎಸ್ಎಸ್, ಈಗ ತನ್ನ ಧೋರಣೆಯನ್ನು ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ. ಯುದ್ದದಲ್ಲಿರುವ ಹಿಂದೂ ಸಮಾಜ (ಸಂಘಪರಿವಾರ?) ಯಾವ ರೀತಿಯ ಕುಕೃತ್ಯಗಳನ್ನು ಮಾಡಿದರೂ ಅದಕ್ಕೆ ಬೆಂಬಲವಿದೆ ಎಂಬ ಸಂದೇಶವನ್ನು ಭಾಗವತ್ ರವಾನಿಸಿದ್ದಾರೆ.
ಒಟ್ಟಿನಲ್ಲಿ, ಮುಂಬರುವ ದಿನಗಳಲ್ಲಿ ಈ ಯುದ್ಧವು ದೇಶದ ಮುಸ್ಲೀಮರಿಗೆ ಮತ್ತು ಕ್ರೈಸ್ತರಿಗೆ ಮಾರಕವಾಗಿ ಪರಿಣಮಿಸಲಿದೆ. ಯುದ್ದದ ವೇಳೆ ನಡೆಯುವ ʼಅತಿರೇಕʼದ ಕೃತ್ಯಗಳು ಸರ್ವೇ ಸಾಮಾನ್ಯವಾಗಲಿವೆ ಎಂಬ ಪರೋಕ್ಷವಾದ ಎಚ್ಚರಿಕೆಯನ್ನು ಮೋಹನ್ ಭಾಗವತ್ ರವಾನಿಸಿದ್ದಾರೆ.
ReplyForward |