ಬಸವನಗುಡಿಯಲ್ಲಿ ಪಾರಂಪರಿಕ ಪಾರ್ಕ್ ನಿರ್ಮಾಣವನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಘೋಷಿಸಿ, ಅನುದಾನ ಒದಗಿಸಲಾಗುವುದೆಂದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕೆಂಪಾಪುರ ಕೆರೆಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಒದಗಿಸಿ ಅಭಿವೃದ್ಧಿ ಗೊಳಿಸಲಾಗುವುದು. ಬೆಂಗಳೂರಿನಲ್ಲಿ ಗ್ರಾಮೀಣ ಸೃಷ್ಟಿಯಾಗಿದೆ. ನಾವೆಲ್ಲರೂ ಒಂದು ಎನ್ನುವ ಭಾವದಿಂದ ಇಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಬಸವನಗುಡಿ ಕಡಲೆಕಾಯಿ ಪರಿಷೆ ಸಂಭ್ರಮ, ಸಡಗರ ತಂದಿದೆ. ದೊಡ್ಡ ಇತಿಹಾಸ, ಪರಂಪರೆ ಹೊಂದಿರುವ ಕ್ಷೇತ್ರದಲ್ಲಿ ದೈವ ಭಕ್ತರು ಇಷ್ಟೊಂದು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ. ಕೆಂಪೇಗೌಡರಿಂದ ಆದಿಯಾಗಿ ಪರಿಶ್ರಮ ಪಟ್ಟ ಎಲ್ಲರಿಗೂ ಗೌರವ ಸಮರ್ಪಿಸಿದರು. ನಾವು ಇತಿಹಾಸದ ಭಾಗವಾಗಬೇಕು ಅಥವಾ ಇತಿಹಾಸ ಸೃಷ್ಟಿಸಬೇಕು. ಕೆಂಪೇಗೌಡರು ಇತಿಹಾಸವನ್ನು ನಿರ್ಮಿಸಿದವರು. ಹೊಸ ಪರಂಪರೆಯನ್ನು ಪ್ರಾರಂಭಿಸಿದರು. ಇಡೀ ನಾಡಿನಲ್ಲಿ ಸಮೃದ್ಧಿ, ವ್ಯಾಪಾರ ಒಕ್ಕಲುತನ, ರೈತರಿಗೆ ಮಾರುಕಟ್ಟೆ ಸಂಬಂಧ ಮತ್ತು ಎಲ್ಲಾ ವೃತ್ತಿಗಳಿಗೆ ಪೇಟೆ, ಸಮಾನತೆಯ ಭಾವವನ್ನು ತುಂಬುವಂಥ ಕೆಲಸವನ್ನು ಕೆಂಪೇಗೌಡರು ಮಾಡಿಕೊಟ್ಟಿದ್ದಾರೆ ಎಂದು ಸ್ಮರಿಸಿದ್ದಾರೆ.
ಕಡಲೇಕಾಯಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಈ ಕ್ಷೇತ್ರದಲ್ಲಿ ಬಸವ ಫಸಲು ನಾಶ ಮಾಡುತ್ತಿತ್ತು. ಪ್ರತಿ ವರ್ಷ ಮೊದಲ ಫಸಲು ಅರ್ಪಿಸುವುದಾಗಿ ಪ್ರಾರ್ಥಿಸಿದಾಗ ಬಸವಣ್ಣ ಒಪ್ಪಿದ ಕಥೆ ಇದರ ಹಿಂದಿದೆ. ಬಸವನ ಆಶೀರ್ವಾದ ಪಡೆದ ಈ ಕ್ಷೇತ್ರ ಬಸವನಗುಡಿಯಾಗಿದೆ ಎಂದು ಹೇಳಿದ್ದಾರೆ.
ಚಿಕ್ಕಂದಿನಿಂದ ಗೋವುಗಳು ನನಗೆ ಬಹಳ ಪ್ರೀತಿ. ಬಹಳಷ್ಟು ಪ್ರೀತಿ ನೀಡುತ್ತವೆ. ಗೋವುಗಳೊಂದಿಗೆ ಸಮಯ ಕಳೆದರೆ ಆನಂದ ದೊರೆಯುತ್ತದೆ. ಬೃಹತ್ ಆಕಾರದ ಬಸವಣ್ಣ ನಾಡಿನ ಅಭಿವೃದ್ಧಿಯ ಸಂಕೇತ. ಕನ್ನಡನಾಡಿನ ಸಾಂಸ್ಕೃತಿಕ, ಕಾಯಕ ಸಂಸ್ಕೃತಿಯ ಸಂಕೇತ. ಕಡಲೆಕಾಯಿಯನ್ನು ಬಹಳ ಇಷ್ಟಪಡುವುದಾಗಿ ತಿಳಿಸಿದರು. ಹಸೀ ಕಡಲೆಕಾಯಿ, ಸುಟ್ಟು ತಿಂದರೆ ಕೂಡ ರುಚಿ ಹೆಚ್ಚು ಎಂದು ಹೇಳಿದ್ದಾರೆ.
ಕಡಲೆಕಾಯಿ ಮಹಿಮೆ ಇದು. ಕಡಲೇ ಕಾಯಿ ನಮ್ಮೊಳಗಿರುವ ಪೂರ್ವಜರನ್ನು ಹೊರತರುತ್ತದೆ. ಬೆಂಗಳೂರಿನ ಸುತ್ತಮುತ್ತಲಿನ ಎಲ್ಲ ಪ್ರಮುಖ ಗ್ರಾಮ, ತಾಲ್ಲೂಕು, ಜಿಲ್ಲಾ ಕೇಂದ್ರಗಳಿಂದ ಇಲ್ಲಿ ತಂದು ವ್ಯಾಪಾರ ಮಾಡುವುದು ಅತ್ಯಂತ ಉತ್ತಮ ಪರಂಪರೆ. ಇದರ ಅಭಿವೃದ್ಧಿ ಬಗ್ಗೆ ಶಾಸಕ ರವಿಸುಬ್ರಹ್ಮಣ್ಯ ಹಲವು ವಿಚಾರಗಳನ್ನು ಗಮನಕ್ಕೆ ತಂದಿದ್ದು, ಸಾಂಸ್ಕೃತಿಕ ದೇವಾಲಯಗಳನ್ನು ಪ್ರಸಿದ್ಧಿಗೊಳಿಸುವ ಅವರ ಚಿಂತನೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ಬೆಂಗಳೂರಿನ ಇತಿಹಾಸ, ಪರಂಪರೆ ಹೇಳುವ ಈ ಕುರುಹುಗಳನ್ನು ನಾವು ಹುಡುಕಿ ಅಭಿವೃದ್ಧಿಗೊಳಿಸಲು ಅಡಾಫ್ಟ್ ದಿ ಮಾನ್ಯುಮೆಂಟ್ ಕಾರ್ಯಕ್ರಮ ರೂಪಿಸಿದ್ದು, ಇಚ್ಛೆಯಿದ್ದವರು ಒಂದೊಂದು ಸ್ಮಾರಕವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.