ಧರ್ಮ ರಾಜಕಾರಣದ ಕೆಟ್ಟ ಪರಿಣಾಮಗಳು ಕರ್ನಾಟಕ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟಿಲ್ಲ. ನಿರ್ದಿಷ್ಟ ಸಮುದಾಯದ ಧಾರ್ಮಿಕ ಚಹರೆಗಳನ್ನು ಸಮಾಜದ ಮುಖ್ಯವಾಹಿನಿಯಿಂದ ಅಳಿಸುವ ವ್ಯವಸ್ಥಿತ ಷಡ್ಯಂತ್ರಕ್ಕೆ ಸ್ವತಃ ಸರ್ಕಾರವೇ ಇಳಿದು ಬಿಟ್ಟು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿದೆ. ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗಳ ಬಗ್ಗೆ ಅಸಹಿಷ್ಣುತೆ ತೋರುತ್ತಲೇ, ಬಹುಸಂಖ್ಯಾತ ಆಚರಣೆಗಳನ್ನು ಪ್ರೋತ್ಸಾಹಿಸುತ್ತಾ ಓಲೈಕೆ ರಾಜಕಾರಣದಲ್ಲಿ ಸರ್ಕಾರ ತೊಡಗಿದ್ದರೆ, ಸಾತ್ವಿಕರಾಗಿರಬೇಕಿದ್ದ ಕಾವಿಧಾರಿಗಳಲ್ಲಿ ಕೆಲವರು ಒಂದಕ್ಕೆ ಒಂಭತ್ತು ಬೇಕು ಎನ್ನುತ್ತಾ ಹಮ್ಮುರಬಿ ಕಾಲದ ನ್ಯಾಯಗಳ ಪರಿಭಾಷೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ, ಭಾರತದ ವೈವಿಧ್ಯ ಪರಂಪರೆಯನ್ನು ಎತ್ತಿ ಹಿಡಿಯುವಂತಹ, ಮನಸ್ಸಿಗೆ ತಂಪೆರೆಯುವಂತಹ ಸುದ್ದಿಯೊಂದು ಕೇರಳದಿಂದ ವರದಿಯಾಗಿದೆ.
ಷರಿಯಾ ಎಂದರೆ ಮೂಗು ಮುರಿಯುವ, ಅನುಮಾನದಿಂದ ನೋಡುವ ಕಣ್ಣುಗಳಿರುವ ಸಮಾಜದಲ್ಲಿ, ಕೇರಳದ ಷರಿಯಾ ಕಾಲೇಜು ಒಂದರಲ್ಲಿ ಭಗವದ್ಗೀತೆ, ಉಪನಿಷತ್, ಅದ್ವೈತಗಳ ಬಗ್ಗೆ ಬೋಧನೆ ಮಾಡಲಾಗುತ್ತಿದೆ. ಆ ಮೂಲಕ ಭಾರತದ ಹಿಂದೂ/ವೈದಿಕ ತತ್ವಶಾಸ್ತ್ರದ ಬಗ್ಗೆ ಮುಸ್ಲಿಂ ವಿದ್ಯಾರ್ಥಿಗಳು ಕಲಿಯುವಂತೆ ಪ್ರೇರೇಪಿಸಲಾಗುತ್ತಿದೆ.
ಭಾರತೀಯ ತತ್ವಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳನ್ನು ತ್ರಿಶೂರ್ ಮೂಲದ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ಸಂಸ್ಥೆಯಲ್ಲಿ ಕಲಿಸಲಾಗುತ್ತಿದೆ. ಜನರು ತಮ್ಮ ನಂಬಿಕೆಗಿಂತ ಭಿನ್ನವಾಗಿರುವ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಜಗತ್ತಿನಲ್ಲಿ, ಅಂತಹ ದೃಷ್ಟಿಕೋನಗಳ ಬಗ್ಗೆ ಕಲಿಯುವುದು ಹೇಗೆ ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುತ್ತದೆ ಎಂಬುದನ್ನು ASAS ಸಂಸ್ಥೆಯು ತೋರಿಸುತ್ತದೆ. ಮಲಿಕ್ ಬಿನ್ ದಿನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ನಡೆಸುತ್ತಿರುವ ASAS, ಸುನ್ನಿ ಸಂಘಟನೆಯಾದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲೇಮಾ ಇದರ ನಿರ್ವಹಣೆ ಮಾಡುತ್ತಿದೆ.
ಸ್ವತಃ ಸಂಸ್ಕೃತ ವಿದ್ವಾಂಸರೂ ಆಗಿರುವ ಸಮಸ್ತ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಓನಂಪಿಲ್ಲಿ ಮುಹಮ್ಮದ್ ಫೈಝಿ ಅವರು ASAS ನ ಹಿಂದಿನ ರೂವಾರಿ. ಅವರ ಆಲೋಚನೆ ಹಾಗೂ ದೂರದೃಷ್ಟಿಯ ಫಲವಾಗಿ ಹಿಂದೂ ಪಠ್ಯಕ್ರಮಗಳು ಷರಿಯಾ ಕಾಲೇಜಿನಲ್ಲಿ ಬೋಧಸಲಾಗುತ್ತಿದೆ.
“ನಾವು ಇಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಶ್ರೀಮಂತ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ” ಎಂದು ಕಾಲಡಿಯ ಶ್ರೀ ಶಂಕರ ಕಾಲೇಜಿನಿಂದ ಅದ್ವೈತ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಫೈಝಿ ಹೇಳುತ್ತಾರೆ. ಸಿಧ್ಧರೂಪದಿಂದ ಆರಂಭವಾಗಿ ಸಂಸ್ಕೃತವನ್ನು ವ್ಯವಸ್ಥಿತ ರೀತಿಯಲ್ಲಿ ಕಲಿಸಲಾಗುತ್ತದೆ. ಅದನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿರುವವರನ್ನು ಉನ್ನತ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸಂಸ್ಕೃತ ವಿದ್ವಾಂಸರಾದ ಕೆ ಪಿ ನಾರಾಯಣ ಪಿಶಾರಡಿಯವರ ಶಿಷ್ಯರಾದ ಯತೀಂದ್ರನ್ ಅವರು ನಮ್ಮ ಅಧ್ಯಾಪಕರಲ್ಲಿ ಒಬ್ಬರು. ನಾನು ಭಗವದ್ಗೀತೆಯನ್ನು ಕಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಕೃತದ ಬಗ್ಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುತ್ತಿರುವ ASAS ಅದನ್ನು ಹೇಗೆ ಮಾತನಾಡಬೇಕೆಂದು, ಉಚ್ಛರಣೆ ಹೇಗಿರಬೇಕೆಂದು ವಿದ್ಯಾರ್ಥಿಗಳನ್ನು ಕಲಿಸುತ್ತದೆ. “ಪ್ರವಾದಿ ಮುಹಮ್ಮದ್ ಅವರು ಓರ್ವ ಯುವಕನಿಗೆ ಸಿರಿಯನ್ ಭಾಷೆಯನ್ನು ಕಲಿಯಲು ಹೇಳಿದ್ದರು. ನಾವು ಇತರ ವ್ಯವಸ್ಥೆಗಳನ್ನು ಎಷ್ಟು ಹೆಚ್ಚು ಪರಿಶೀಲಿಸುತ್ತೇವೆ, ಆಗ ನಮ್ಮ ಅರಿವಿನ ಗಡಿಗಳು ಹೆಚ್ಚು ವಿಸ್ತಾರಗೊಳ್ಳುತ್ತವೆ, ”ಎಂದು ಫೈಝಿ ತಮ್ಮ ವಿದ್ವತ್ತಿನ ತಿಳುವಳಿಕೆಯನ್ನು ಹಂಚುತ್ತಾರೆ.
ಇಸ್ಲಾಮಿಕ್ ವಿಷಯಗಳನ್ನು ಅಧ್ಯಯನ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಪರಿಭಾಷೆ ಮಾತ್ರ ತಿಳಿದಿದೆ. ಇದು ಸಮಾಜದ ಇತರ ವಿಭಾಗಗಳೊಂದಿಗೆ ಅವರ ಸಂವಹನದಲ್ಲಿ ಮಿತಿಗಳನ್ನು ಸೃಷ್ಟಿಸುತ್ತದೆ, ಇದು ಅವರಿಗೊಂದು ಅಡಚನೆ ಎಂದು ನಂಬುತ್ತಾರೆ ಫೈಝಿ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಎಎಸ್ಎಎಸ್ಗೆ ದಾಖಲಿಸಲಾಗುತ್ತದೆ. ಎಂಟು ವರ್ಷಗಳ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ, ಅವರು ‘ಮಾಲಿಕಿ’ ಎಂಬ ಧಾರ್ಮಿಕ ಪದವಿಯ ಜೊತೆಗೆ ವಿಶ್ವವಿದ್ಯಾನಿಲಯ ಪದವಿಯನ್ನು ಪಡೆಯುತ್ತಾರೆ. ಕ್ಯಾಲಿಕಟ್ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಅಡಿಯಲ್ಲಿ ಡಿಗ್ರಿ ಪದವಿಯನ್ನು ನೀಡಲಾಗುತ್ತದೆ. ಒಟ್ಟಾರೆ, ಮದರಸ ಹಾಗೂ ಇಸ್ಲಾಮಿಕ್ ವಿಧ್ಯಾಭ್ಯಾಸ ಸಂಸ್ಥೆಗಳ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ನಡುವೆ ಷರಿಯಾ ಕಾಲೇಜೊಂದರಿಂದ ಇಂತಹ ಸುದ್ದಿಯೊಂದು ಕೇಳಿ ಬಂದಿರುವುದು ನಿಜಕ್ಕೂ ಪರಿಣಾಮಕಾರಿ.