ಫಿನಾಲೆ ವಾರದತ್ತ ಸಾಗುತ್ತಿರುವ ಬಿಗ್ ಬಾಸ್ ಕನ್ನಡ(Bigg Boss Kannada) ಸೀಜನ್ 12 ರಿಯಾಲಿಟಿ ಶೋನಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಒಂದೆಡೆ ಹೊಸ ವರ್ಷಾಚರಣೆಗೆ ಸ್ಪರ್ಧಿಗಳು ಭರ್ಜರಿಯಾಗಿ ರೆಡಿಯಾಗುತ್ತಿದ್ದರೆ, ಮತ್ತೊಂದೆಡೆ ಧ್ರುವಂತ್ ಹಾಗೂ ಗಿಲ್ಲಿ ನಟ ನಡುವೆ ದೊಡ್ಡ ಜಗಳ ನಡೆದಿದೆ.

ಸಿಕ್ರೇಟ್ ರೂಮ್ಗೆ ಹೋಗಿ ಬಂದ ದಿನದಿಂದಲೂ ಗಿಲ್ಲಿ ಜೊತೆ ಸ್ಪರ್ಧೆಗಿಳಿದಿರುವ ಧ್ರುವಂತ್ ಮಾತು ಮಾತಿಗೂ ವಾಪಸ್ ಕೌಂಟರ್ ಕೊಡುತ್ತಿದ್ದಾರೆ. ಈ ವಾರದ ಆರಂಭದಿಂದಲಂತೂ ಗಿಲ್ಲಿ ಹಾಗೂ ಧ್ರುವಂತ್ ಹಾವು-ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದೇ ಜಗಳ ಮುಂದುವರಿದಿದ್ದು, ಹೊಸ ವರ್ಷಾಚರಣೆಗಾಗಿ ಹಾಡು ರಚನೆ ವೇಳೆ ಮತ್ತೊಂದು ಜಗಳ ನಡೆದಿದೆ.

ಹೊಸ ವರ್ಷದ ಸಂಭ್ರಮಕ್ಕೆ ವಿಶೇಷತೆ ನೀಡುವಂತೆ ಬಿಗ್ಬಾಸ್, ಮನೆಯ ಸದಸ್ಯರಿಗೆ ಮನೋರಂಜನಾತ್ಮಕ ಟಾಸ್ಕ್ ನೀಡಿದ್ದಾರೆ. ಇದರಂತೆ ಮನೆ ಸದಸ್ಯರ ವ್ಯಕ್ತಿತ್ವ, ನಡೆನುಡಿ, ಗುಣಲಕ್ಷಣಗಳನ್ನು ಆಧರಿಸಿ ಹಾಡು ಕಟ್ಟಿ ಹಾಡುವಂತೆ ಬಿಗ್ಬಾಸ್ ಸೂಚಿಸಿದ್ದಾರೆ. ಹೀಗಾಗಿ ರಘು ಜೊತೆ ಚರ್ಚಿಸಿ ಗಿಲ್ಲಿ ನಟ ಸಾಹಿತ್ಯ ಬರೆದಿದ್ದಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಧ್ರುವಂತ್, ಹಾಡಿನಲ್ಲಿ ತಮ್ಮ ಹೆಸರು ಸೇರಿಸದಂತೆ ಹೇಳುತ್ತಾರೆ. ಇದೇ ವಿಚಾರಕ್ಕೆ ಕೋಪಗೊಂಡ ಗಿಲ್ಲಿ ನಟ, ಸೇರಿಸುವೆ ಮತ್ತು ಮನೆಯಲ್ಲಿರುವ ಎಲ್ಲಾ ಸದಸ್ಯರ ಹೆಸರುಗಳನ್ನು ಸೇರಿಸುತ್ತೇವೆ ಎಂದು ಹೇಳುತ್ತಾರೆ. ನಿನ್ನ ಹಾಡಿನಲ್ಲಿ ನನ್ನ ಹೆಸರು ಬಂದ್ರೆ ಕಾಗದ ಹರಿದು ಹಾಕುವೆ ಅಂತ ಕೋಪ ವ್ಯಕ್ತಪಡಿಸುತ್ತಾರೆ. ಇದರಿಂದ ಕೋಪಗೊಂಡ ಗಿಲ್ಲಿ ನಟ, ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.












