ಗುಜರಾತಿನ ಜೈನ್/ವೈಷ್ಣವ್/ಮಾರವಾಡಿ/ಬನಿಯಾಗಳು ವ್ಯವಹಾರ ನಿಪುಣರು. ಅವರಿಗೆ ದೇಶದ ಹಿತಕ್ಕಿಂತ ತಮ್ಮ ವ್ಯವಹಾರ ಮುಖ್ಯ ಎನ್ನುವುದು ಅನೇಕ ವೇಳೆ ರುಜುವಾತಾಗಿದೆ. ಸ್ವಾತಂತ್ರ ಭಾರತದ ಬಹುತೇಕ ಆರ್ಥಿಕ ಹಗರಣಗಳ ರೂವಾರಿಗಳು ಇವರೆ ಎನ್ನುವುದು ಕೂಡ ಅಷ್ಟೆ ಸತ್ಯ. ೭-೮ ನೇ ಶತಮಾನದಿಂದ ದೂರದ ಅರಬ್/ಅಫಘಾನಿನೊಂದಿಗೆ ವ್ಯವಹಾರ ಸಂಪರ್ಕ ಹೊಂದಿದ್ದವರು ಇದೇ ಗುಜರಾತಿ ಬನಿಯಾಗಳು. ಇವರ ಮಾಹಿತಿಯನ್ವಯವೆ ಮೊಹಮದ್ ಬಿನ್ ಖಾಸೀಮ್ ಮುಂತಾದ ಮುಸ್ಲಿಮ್ ದಾಳಿಕೋರರು ಈ ದೇಶದ ಸಂಪತ್ತನ್ನು ಲೂಟಿ ಮಾಡಿಕೊಂಡು ಹೊರಟು ಹೋದರು. ಆ ಲೂಟಿಗಳಲ್ಲಿ ಪುರೋಹಿತಶಾಹಿಗಳ ಪಾತ್ರವೂ ಸಾಕಷ್ಟಿತ್ತು ಎನ್ನಲು ಅಡ್ಡಿಯಿಲ್ಲ. ೧೯೯೦ ರ ದಶಕದಲ್ಲಿ ಹರ್ಷದ್ ಶಾಂತಿಲಾಲ್ ಮೆಹತ ಎನ್ನುವ ಗುಜರಾತಿ ಮಾರ್ವಾಡಿಯೊಬ್ಬ ಎಸಗಿದ ಷೇರ್ ಹಗರಣ ನಾವೆಲ್ಲ ಬಲ್ಲೆವು. ಆದರೆ ಈಗ ಮತ್ತೊಬ್ಬ ಗುಜರಾತಿ ಉದ್ಯಮಿ ಗೌತಮ್ ಶಾಂತಿಲಾಲ್ ಅದಾನಿಯದ್ದು ಸಾಂಘಿಕ ಲೂಟಿ ಮತ್ತು ಸರಕಾರದ ನೆರವಿನಿಂದ ಮಾಡಿದ ದೋಚುವಿಕೆ ಎನ್ನುತ್ತಾರೆ ಅನೇಕ ಆರ್ಥಿಕ ತಜ್ಞರು.
ಮೋದಿ ಆಪ್ತ ಮತ್ತು ಮತ್ತೊಬ್ಬ ಗುಜರಾತಿ ಉದ್ಯಮಿ ಮುಖೇಶ್ ಅಂಬಾನಿಯನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ನಾಲ್ಕು ತಿಂಗಳ ಹಿಂದೆ ದೇಶದ ನಂಬರ್ ಒನ್ ಶ್ರಿಮಂತ ಮತ್ತು ಜಗತ್ತಿನ ೨ನೇ ಶ್ರೀಮಂತನಾಗಿ ಹೊರಹೊಮ್ಮಿದ ಅದಾನಿ ೨೦೦೨ ರಿಂದಲೆ ಗುಜರಾತಿನಲ್ಲಿ ಮೋದಿ ಆಡಳಿತದ ನೆರವಿನಿಂದ ತನ್ನ ವ್ಯವಹಾರಕ್ಕೆ ಒಂದು ಭದ್ರವಾದ ಬುನಾದಿಯನ್ನು ಹಾಕಿಕೊಂಡಿದ್ದ. ಈ ವರ್ಷದ ಜನವರಿ ೨೪ರಂದು ಹಿಂಡೆನ್ಬರ್ಗ್ ರಿಸರ್ಚ್ ವರದಿಗಳು ಬಹಿರಂಗಗೊಂಡ ನಂತರ ಅದಾನಿ ಸಮೂಹದ ಷೇರುಗಳ ಮೌಲ್ಯ ನಿರತರವಾಗಿ ಕುಸಿದು ಲಕ್ಷ ಕೋಟಿಗಳಲ್ಲಿ ಅದಾನಿ ಕಂಪನಿ ನಷ್ಟಕ್ಕೊಳಗಾಯಿತು. ಈಗ ಅದಾನಿ ಜಗತ್ತಿನ ೨೦ ಶ್ರೀಮಂತರ ಪಟ್ಟಿಯಿಂದ ಹೊರಗೆಸೆಯಲ್ಪಟ್ಟಿದ್ದಾನೆ. ಕೇವಲ ಮೂರೇ ವರ್ಷದಲ್ಲಿ ಸುಮಾರು ೧೭ ಪಟ್ಟು ತನ್ನ ಸಂಪತ್ತನ್ನು ಹೆಚ್ಚಸಿಕೊಂಡಿದ್ದ ಅದಾನಿಯ ಆರ್ಥಿಕ ಸಾಮ್ರಾಜ್ಯವನ್ನು ಹಿಂಡೆನ್ಬರ್ಗ್ ವರದಿ ಹುಡಿಗೊಳಿಸಿಬಿಟ್ಟಿದೆ. ಇದಕ್ಕೆ ಉತ್ತರದಾಯಿ ಆಗಬೇಕಾದ ಪ್ರಧಾನಿ ಮೋದಿˌ ಸಂಸತ್ತಿನಲ್ಲಿ ವಿರೋಧ ಪಕ್ಷದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟು ನೆಹರು ಕುಟುಂಬ ಗಾಂಧಿ ಅಡ್ಡಹೆಸರೇಕೆ ಇಟ್ಟುಕೊಂಡಿದೆ ಎನ್ನುವಂತ ತಮ್ಮ ಮಾಮೂಲು ಉಡಾಫೆಯ ಮಾತನ್ನಾಡಿದ್ದಾರೆ. ಇದು ಮೋದಿಯವರು ತಮ್ಮ ಆಪ್ತ ಉದ್ಯಮಿಯ ಅಧಪತನದಿಂದ ಹತಾಷೆಗೊಳಗಾಗಿದ್ದರ ದ್ಯೋತಕ ಎನ್ನಲಾಗುತ್ತಿದೆ.
ಭಾರತದ ಬ್ಯಾಂಕುಗಳಿಗೆ ತನ್ನ ಕಂಪನಿಯ ಷೇರುಗಳ ತಿರುಚಿದ ಮೌಲ್ಯವನ್ನು ತೋರಿಸಿ ಅಪಾರ ಪ್ರಮಾಣದ ಸಾಲ ಪಡೆದ ಅದಾನಿ ಆ ಹಣವನ್ನು ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿದ್ದಾರೆ ಎನ್ನುವ ಆರೋಪ ಆತನ ಮೇಲಿದೆ. ಇದರಿಂದ ಭಾರತದ ಬ್ಯಾಂಕುಗಳು ಮತ್ತು ಜೀವವಿಮಾ ಕಂಪನಿಗಳು ಮುಚ್ಚಲಿವೆ ಎನ್ನುವ ಊಹಾಪೋಹಗಳು ಹರಿದಾಡುತ್ತಿದ್ದು ಜನರು ಭಯಗ್ರಸ್ಥರಾಗಿರುವ ಈ ಸಂದರ್ಭದಲ್ಲಿ ಇದಕ್ಕೆ ಸಮಜಾಯಿಷಿ ನೀಡುವ ಜವಾಬ್ದಾರಿ ಮೋದಿಯವರ ಹೆಗಲ ಮೇಲಿದೆ. ಅದಾನಿಯೊಂದಿಗೆ ತಮಗಿರುವ ಅನೈತಿಕ ರಾಜಕೀಯ ಸಂಬಂಧವನ್ನು ಮರೆಮಾಚಲು ಮೋದಿ ವಿರೋಧ ಪಕ್ಷಗಳ ಪ್ರಶ್ನೆಗಳಿಂದ ನುಣುಚಿಕೊಂಡು ಅಸಂಬದ್ಧವಾಗಿ ಸಂಸತ್ತಿನಲ್ಲಿ ಬಡಬಡಿಸುತ್ತಿರುವುದು ಅವರ ನೈತಿಕ ದಿವಾಳಿತನವನ್ನು ತೋರುತ್ತದೆ. ಅಷ್ಟಕ್ಕೂ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗಳಲ್ಲಿ ಯಾವ ತಪ್ಪಿಗೆ ಎನ್ನುವದನ್ನು ಮೋದಿಯವರು ದೇಶದ ಜನತೆಗೆ ಹೇಳುವ ಕನಿಷ್ಟ ನೈತಿಕತೆ ಪ್ರದರ್ಶಿಸಬೇಕಿತ್ತು.
ಬಿಜೆಪಿ ಮತ್ತು ಅದರ ಅನಧಿಕೃತ ಐಟಿ ಸೆಲ್ ಗಳಿಂದ “ಪಪ್ಪು” ಎಂದು ಬಿಂಬಿಸಲ್ಪಟ್ಟ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳು ಮತ್ತು ಆಕ್ಷೇಪಗಳು ಈ ಕೆಳಗಿನಂತಿವೆ:
▪ ಅದಾನಿಗೆ ಸಹಾಯವಾಗುವಂತೆ ಮೋದಿ ಸರಕಾರ ಅನೇಕ ನಿಯಮಗಳಿಗೆ ತಿದ್ದುಪಡಿ ಮಾಡಿದೆ.
▪ ವಿಮಾನ ನಿಲ್ದಾಣಗಳ ನಿರ್ವಹಣೆಯ ಅನುಭವವಿಲ್ಲದ ಅದಾನಿ ಸಮೂಹಕ್ಕೆ ೬ ನಿಲ್ದಾಣಗಳ ನಿರ್ವಹಣೆ ನೀಡಲು ಕಾನೂನಿಗೆ ತಿದ್ದುಪಡಿ ತಂದಿದೆ.
▪ ಕಳೆದ ಎಂಟು ವರ್ಷಗಳಲ್ಲಿ ಅದಾನಿ ಸಂಪತ್ತು ೮ ಶತಕೋಟಿ ಡಾಲರಿಂದ ೧೪೦ ಶತಕೋಟಿ ಡಾಲರ್ ಗೆ ಏರಿ ಆತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ೬೦೦ನೇ ಸ್ಥಾನದಲ್ಲಿದ್ದವ ಒಮ್ಮೆಲೆ ೨ನೇ ಶ್ರೀಮಂತನಾಗಿದ್ದು ಹೇಗೆ?
▪ ಯಾವುದೇ ಅನುಭವವಿಲ್ಲದ ಅದಾನಿ ಸಮೂಹಕ್ಕೆ ಇಸ್ರೇಲ್ ಜೊತೆಗಿನ ಒಪ್ಪಂದದಂತೆ ದ್ರೋಣ ತಯ್ಯಾರಿಸುವ ಗುತ್ತಿಗೆ ನೀಡಲಾಗಿದ್ದು ಇದು ಸರಕಾರಿ ಸ್ವಾಮ್ಯದ ಎಚ್ ಎ ಎಲ್ ಕಂಪನಿಗೆ ಮಾಡಿದ ವಂಚನೆಯಲ್ಲವೆ?
▪ ಅದಾನಿಗೆ ವಿಂಡ್ ಪವರ್ ಯೋಜನೆಯ ಗುತ್ತಿಗೆ ನೀಡಲು ಅಂದಿನ ಶ್ರೀಲಂಕಾ ಅಧ್ಯಕ್ಷರಾಗಿದ್ದ ರಾಜಪಕ್ಸ ಅವರ ಮೇಲೆ ಮೋದಿ ಒತ್ತಡ ಹೇರಿದ್ದರು ಎಂದು ಲಂಕಾ ಸಂಸದೀಯ ಮಂಡಳಿ ಹೇಳಿದೆ.
▪ ಈ ಮೊದಲು ಅದಾನಿಯವರ ವಿಮಾನದಲ್ಲಿ ಮೋದಿ ಪ್ರಯಾಣಿಸುತ್ತಿದ್ದರು. ಈಗ ಮೋದಿಯವರ ವಿಮಾನದಲ್ಲಿ ಅದಾನಿಯವರು ಪ್ರಯಾಣಿಸುತ್ತಿದ್ದಾರೆ. ಕಳೆದ ೨೦ ವರ್ಷಗಳಲ್ಲಿ ಅದಾನಿ ಬಿಜೆಪಿಯ ಎಲೆಕ್ಟ್ರೋಲ್ ಬಾಂಡ್ ಗಳಿಗೆ ಎಷ್ಟು ಚಂದಾ ನೀಡಿದ್ದಾರೆ?
▪ ಅಗ್ನಿವೀರ ಯೋಜನೆ ಸೇನೆಯ ಚಿಂತನೆಯಲ್ಲದೆ ಅದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋಬಲ್ ಅವರದ್ದು. ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ನಿವೃತ್ತ ಸೇನಾ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಈ ಎಲ್ಲ ಪ್ರಶ್ನೆಗಳನ್ನು ಸವಾಲಾಗಿ ಸ್ವಿಕರಿಸಿ ಪ್ರಧಾನಿಯವರು ಇವುಗಳಲ್ಲಿ ರಾಜಕೀಯವಿದ್ದರೆ ರಾಹುಲ್ ಗಾಂಧಿಯವರ ಅಪಕ್ವತೆಯ ಕುರಿತು ಜನರಿಗೆ ಮನದಟ್ಟು ಮಾಡಬಹುದಿತ್ತು. ಆದರೆ ರಾಹುಲ್ ಎತ್ತಿದ ಪ್ರಶ್ನೆಗಳಿಂದ ಜರ್ಜರಿತರಾದಂತೆ ಕಂಡ ಮೋದಿ ಅಸಂಬದ್ಧವಾಗಿ ಸಂಸತ್ತಿನಲ್ಲಿ ವರ್ತಿಸಿದ್ದೇಕೆ ಎನ್ನುವ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡಿದ್ದಂತೂ ಸತ್ಯ.
ಕಳೆದ ಮೂರು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ಮೋದಿ ಹೇರಿದ್ದ ಅವೈಜ್ಞಾನಿಕ ಲಾಕ್ಡೌನ್ ನಿಂದ ಭಾರತದ ಬಹುತೇಕ ಉದ್ಯಮಗಳು ನಷ್ಟ ಅನುಭವಿಸಿರುವಾಗ ೨೦೨೦ ಜನೆವರಿಯಲ್ಲಿ ಗೌತಮ್ ಅದಾನಿ ಹೊಂದಿದ್ದ ಸಂಪತ್ತಿನ ಮೌಲ್ಯ ಕೇವಲ ೭೧ ಸಾವಿರ ಕೋಟಿ ಆಗಿತ್ತು. ಆದರೆ ಅದೇ ಸಂದರ್ಭದಲ್ಲಿ ಅದಾನಿ ಆಸ್ತಿ ಮಾತ್ರ ಏರುತ್ತಲೆ ಸಾಗಿ ೨೦೨೨ರ ಸೆಪ್ಟಂಬರ್ ವೇಳೆಗೆ ಅದು ೧೧.೭೩ ಲಕ್ಷ ಕೋಟಿ ದಾಟಿ ಆತ ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ವಿಶ್ವದ ೨ನೇ ಶ್ರೀಮಂತನಾಗಿ ಸ್ಥಾನ ಪಡೆದ. ಕೇವಲ ಮೂರೇ ವರ್ಷಗಳಲ್ಲಿ ಆತನ ಆಸ್ತಿಯ ಮೌಲ್ಯ ೧೭ ಪಟ್ಟು ಏರಿಕೆ ಕಂಡಿದ್ದು ಅಂಬಾನಿಯೂ ಸೇರಿದಂತೆ ಅನೇಕರ ಹುಬ್ಬೇರಿಸಿದ್ದು ಸುಳ್ಳಲ್ಲ. ಮೊದಲಿನಿಂದ ಮೋದಿ ಆಡಳಿತ ಕಾರ್ಪೋರೇಟ್ ಉದ್ಯಮಿಗಳ ಪರವಾದ ನೀತಿಗಳನ್ನು ಜಾರಿಗೊಳಿಸಿದೆ. ಅದು ಅದಾನಿಯವರಿಗೆ ಮೊದಲೆ ತಿಳಿಯುತ್ತಿದ್ದರ ಪರಿಣಾಮವೇನೊˌ ಅದಾನಿ ಸಮೂಹ ಹೂಡಿಕೆ ಮಾಡಿದ ಎಲ್ಲಾ ಕ್ಷೇತ್ರದಲ್ಲಿ ಭಾರೀ ಲಾಭ ಮಾಡುತ್ತಿತ್ತು. ತನಗೆ ಅನುಭವವೆ ಇಲ್ಲದ ಬಂದರು, ವಿಮಾನ ನಿಲ್ದಾಣ, ಕಲ್ಲಿದ್ದಲು ಗಣಿಗಾರಿಕೆ ಮುಂತಾದ ಅನೇಕ ಕ್ಷೇತ್ರಗಳ ನಿರ್ವಹಣೆಯ ಹರಾಜುಗಳನ್ನು ಸುಲಭವಾಗಿ ಗೆದ್ದ ಅದಾನಿˌ ಎಲ್ಲಾ ಕಡೆಯಲ್ಲಿ ಲಾಭ ಕಂಡರು ಎಂಬ ಆರೋಪಗಳಿವೆ.
ಗೌತಮ್ ಅದಾನಿಯ ಅಣ್ಣ ವಿನೋದ್ ಶಾಂತಿಲಾಲ್ ಅದಾನಿ ವಿದೇಶಗಳಲ್ಲಿ ಅಸ್ತಿತ್ವವೆ ಇಲ್ಲದ ಕಾಗದದ ಮೇಲೆ ಅನೇಕ ಕಂಪನಿಗಳು ಸ್ಥಾಪಿಸಿದ್ದಾರೆ ಎನ್ನುವ ಆರೋಪಗಳೂ ಕೂಡ ಸಾಕಷ್ಟಿವೆ. ಮೋದಿ ಆಡಳಿತಕ್ಕೆ ಬೆಂಬಲವಾಗಬಲ್ಲ ಅನೇಕ ಟಿವಿ ವಾಹಿನಿಗಳನ್ನು ಅದಾನಿ ಖರಿದಿಸಿದ್ದಾನೆ. ಇತ್ತೀಚಿಗೆ ಮೋದಿ ಸರಕಾರದ ಅವ್ಯವಹಾರಗಳನ್ನು ಬಯಲಿಗೆಳೆಯುತ್ತಿದ್ದ ಎನ್ಡಿಟಿವಿಯನ್ನು ಸಹ ಅದಾನಿ ಖರೀದಿಸಿದ್ದ. ಅದಾನಿ ಸಾಕಷ್ಟು ಕಡೆ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ಮಾಡಿರುವ ಆರೋಪಗಳನ್ನು ಹಾಗು ವಿಚಾರಣೆಗಳನ್ನು ಎದುರಿಸುತ್ತಿದ್ದಾನೆ. ಅವುಗಳಲ್ಲಿ: ತಮ್ಮ ಷೇರುಗಳ ಬೆಲೆ ಕೃತಕವಾಗಿ ಏರಿಸಿಕೊಂಡು ಬ್ಯಾಂಕುಗಳಿಗೆ ವಂಚಿಸಿ ಹೆಚ್ಚು ಸಾಲ ಪಡೆದದ್ದು ˌ ಸಾಗರೋತ್ತರ ವ್ಯವಹಾರಗಳಲ್ಲಿ ತೆರಿಗೆ ವಂಚಿಸಿದ್ದು ˌ ಲೆಕ್ಕಪತ್ರಗಳ ತಿರುಚುವಿಕೆ ಮುಂತಾದವುಗಳು. ಹೀಗಾಗಿ ಅದಾನಿ ಸಮೂಹದ ಆರ್ಥಿಕ ತಳಪಾಯವೇ ಕೃತಕವಾಗಿದ್ದು ಅದು ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುತ್ತವೆ ಹಿಂಡೆನ್ಬರ್ಗ್ ವರದಿಗಳು. ಹಿಂಡೆನ್ಬರ್ಗ್ ಮಾಡಿರುವ ಆರೋಪಗಳಿಗೆ ಸೂಕ್ತ ಉತ್ತರ ನೀಡದ ಅದಾನಿ ರಾಷ್ಟ್ರೀಯತೆಯ ಮರೆಯಲ್ಲಿ ರಕ್ಷಣೆ ಪಡೆಯಲು ಹವಣಿಸಿದ್ದನ್ನು ನಾವು ನೋಡಿದ್ದೇವೆ. ವಿರೋಧ ಪಕ್ಷಗಳ ದಶಕಗಳ ಹಿಂದಿನ ಮತ್ತು ರುಜುವಾತಾಗದ ಅನೇಕ ಹಗರಣಗಳ ಬಗ್ಗೆ ಆಗಾಗ ಕುಹಕವಾಡುವ ಪ್ರಧಾನಿ ಮೋದಿ ಅದಾನಿಯ ಈ ಭ್ರಹ್ಮಾಂಡ ಕರ್ಮಕಾಂಡದ ಬಗ್ಗೆ ಜಾಣ ಮೌನ ತಾಳಿದ್ದು ಆಶ್ಚರ್ಯದ ಸಂಗತಿಯತೂ ಖಂಡಿತ ಅಲ್ಲ.

ಮೋದಿ-ಅದಾನಿಯವರು ಒಳ ಒಪ್ಪಂದವನ್ನು ಪುಷ್ಟೀಕರಿಸುವ ಒಂದಷ್ಟು ಸಂಗತಿಗಳು ಈ ಕೆಳಗೆ ನಾನು ನೀಡಿದ್ದೇನೆ:
ಅದಾನಿ ಮತ್ತು ಮೋದಿಯವರ ನಡುವಿನ ಬಾಂಧವ್ಯವನ್ನು ಎರಡು ಹಂತಗಳಲ್ಲಿ ವಿಂಗಡಿಸಬಹುದು.
೧. ೨೦೦೨ ರಿಂದ ೨೦೧೪ ರ ನಡುವಿನ ಮೋದಿಯವರ ಗುಜರಾತ್ ರಾಜ್ಯಭಾರ.
೨. ೨೦೧೪- ೨೦೨೨ ರ ಮೋದಿಯವರ ಪ್ರಧಾನಿಯ ರಾಜ್ಯಭಾರ.
೧. ೨೦೦೮-೧೨ ರ ನಡುವೆ ಕರ್ನಾಟಕದ ಬೇಲಿಕೇರಿ ಬಂದರಿನಲ್ಲಿ ಬಳ್ಳಾರಿಯ ಗಣಿಗಳಿಂದ ಲೂಟಿ ಮಾಡಲಾಗಿದ್ದ ಅಕ್ರಮ ಅದಿರು ರಾತ್ರೋರಾತ್ರಿ ನಾಪತ್ತೆಯಾಗಿದ್ದ ಪ್ರಕರಣ. ಅಂದು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆಯವರ ತನಿಖಾ ವರದಿಯಲ್ಲಿ ನಾಲ್ಕು ಪಾಲುದಾರರಲ್ಲಿ ಅದಾನಿ ಕೂಡ ಒಬ್ಬನಾಗಿದ್ದ ಎನ್ನುವುದು ಗಮನಾರ್ಹ.
೨. ಅದಾನಿಯ ವ್ಯವಹಾರಗಳಿಗೆ ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಅತ್ಯಂತ ಅಗ್ಗದ ದರದಲ್ಲಿ ಸರಕಾರಿ ಭೂಮಿಯನ್ನು ಮಂಜೂರು ಮಾಡಿದ್ದರು. ಆಗ ಗುಜರಾತ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಮೋದಿಯವರಿಗೆ ಅದಾನಿ ಬಿಟ್ಟರೆ ಬೇರೆ ಯಾರೂ ಕಾಣುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿತ್ತು. ಮೋದಿ ಆಗ ಅದಾನಿಗೆ ಗುಜರಾತ್ ಕರಾವಳಿಯ ಅಂಚಿನಲ್ಲಿರುವ ಸಾವಿರಾರು ಎಕರೆ ಬೆಲೆಬಾಳುವ ಭೂಮಿಯನ್ನು ಕೇವಲ ಎಕರೆಗೆ ಒಂದು ರೂಪಾಯಿಯಂತೆ ಬಾಗಿನ ರೂಪದಲ್ಲಿ ಅರ್ಪಿಸಿದ್ದರು.
೩. ಮೋದಿ ಆಡಳಿತದಲ್ಲಿ ಭಾರತ ಮಾದಕ ದ್ರವ್ಯಗಳ ತವರು ಮನೆಯಾಗಿದ್ದು ಸುಳ್ಳಲ್ಲ. ದೇಶದˌ ಅದರಲ್ಲೂ ಗುಜರಾತಿನ ಮುಖ್ಯ ಬಂದರುಗಳ ನಿರ್ವಹಣೆಯ ಜವಾಬ್ದಾರಿ ಅದಾನಿಗೆ ಒಪ್ಪಿಸಿದ ಮೇಲೆ ಆ ಬಂದರುಗಳ ಮೂಲಕ ಅನೇಕ ಅಕ್ರಮ ದಂಧೆಗಳು ದಾಖಲಾಗಿವೆ. ಸತತವಾಗಿ ನಾಲ್ಕಾರು ಬಾರಿ ಇಪ್ಪತ್ತು ಸಾವಿರ ಕೋಟಿಗಿಂತ ಹೆಚ್ಚಿಗೆ ಬೆಲೆಬಾಳುವ ಮಾದಕ ವಸ್ತುಗಳು ಆ ಬಂದರಿನಲ್ಲಿ ಜಪ್ತಿಯಾಗಿವೆ.
೪. ಗುಜರಾತ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ವಿದ್ಯುತ್ ತಯಾರಿಕೆ ಮತ್ತು ಸರಬರಾಜು ವ್ಯವಹಾರಗಳನ್ನು ಅದಾನಿ ಕಂಪನಿಗಳಿಗೆ ನೀಡಲಾಗಿದೆ.
೫. ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ವಾರಗಳಲ್ಲಿ ಬಿಜೆಪಿ ಮತ್ತು ಸಂಘ ಅತ್ಯುಗ್ರವಾಗಿ ದ್ವೇಷಿಸುವ ಶತೃ ರಾಷ್ಟ್ರ ಪಾಕೀಸ್ತಾನಕ್ಕೆ ಮೋದಿಯವರ ದಿಡೀರ್ ಭೇಟಿ ಅದಾನಿಗಾಗಿಯೊ ಅಥವಾ ಅಜೀತ್ ದುಬಾಲ್ ಅವರ ಮಗನ ಉದ್ಯಮದ ಬಡ್ತಿಗಾಗಿಯೊ ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದವು.
೬. ಬಾಂಗ್ಲಾದೇಶ, ಆಸ್ಟ್ರೇಲಿಯಾ, ಅಮೆರಿಕಾ, ಫ್ರಾನ್ಸ್, ಜರ್ಮನಿ, ಬ್ರಿಟನ್, ರಷ್ಯಾ, ಚೀನಾ ಇತ್ತೀಚೆಗೆ ಇಸ್ರೇಲ್ ಹೀಗೆˌ ಮೋದಿಯವರ ಪ್ರತಿ ವಿದೇಶಿ ಭೇಟಿಯಲ್ಲೂ ಅದಾನಿ ಉದ್ಯಮಗಳ ಸಾವಿರಾರು ಕೋಟಿಗಳ ಒಪ್ಪಂದಗಳಾಗಿವೆ.
೭. ಮೋದಿ ಆಡಳಿತದ ಮೊದಲ ಅವಧಿಯಲ್ಲಿ ದಿಢೀರ್ ಎಂದು ಕುಸಿದ ತೊಗರಿ ಬೆಲೆ ಮತ್ತು ಅಷ್ಟೇ ದಿಢೀರ್ ಎಂದು ಏರಿದ ತೊಗರಿ ಬೇಳೆಯ ಬೆಲೆ. ಇದೊಂದು ವ್ಯವಸ್ಥಿತ ಹಗರಣವಾಗಿದ್ದು ಇದರಲ್ಲಿ ಉದ್ಯಮಿಗಳು ಹತ್ತಾರು ಸಾವಿರ ಕೋಟಿ ದೋಚಿದರು ಎನ್ನುವ ಆರೋಪವಿದೆ.
೮. ಹಿಮಾಚಲ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಶಾಖೋತ್ಪನ್ನ ವಿದ್ಯುತ್ ತಯಾರಿಕೆˌ ಸರಬರಾಜುˌ ಮತ್ತು ಸಾವಿರಾರು ಕಿಲೋ ಮೀಟರ್ ಉದ್ದದ ವಿದ್ಯುತ್ ಲೈನ್ ಹಾಕುವಿಕೆಯ ದಂಧೆಗಳಲ್ಲಿ ಅದಾನಿ ಸಮೂಹ ಅನೇಕ ನಿಯಮಾವಳಿಗಳನ್ನು ಗಾಳಿಗೆ ತೂರಿದ ಆರೋಪಗಳನ್ನು ಎದುರಿಸುತ್ತಿದೆ.
೯. ಕೃಷಿ ಕಾಯಿದೆಗೆ ತಿದ್ದುಪಡಿ ತರುವ ಆರೇಳು ತಿಂಗಳು ಮುಂಚಿತವಾಗಿಯೆ ಅದಾನಿಯಿಂದ ಹತ್ತಾರು ಅಗ್ರಿ ಕಂಪನಿಗಳ ಸ್ಥಾಪನೆ ಮತ್ತು ಅನೇಕ ಉಗ್ರಾಣಗಳ ನಿರ್ಮಾಣವಾಗಿದೆ. ದೇಶದ ಆಹಾರ ಧಾನ್ಯಗಳ ಮಾರುಕಟ್ಟೆಯ ಮೇಲೆ ಕಣ್ಣಿಟ್ಟ ಕಾರ್ಪೋರೇಟ್ ಉದ್ಯಮಿಗಳ ಸಲುವಾಗಿಯೆ ಕೃಷಿ ಮಸೂದೆ ತರಲಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿದ್ದವು. ಕೃಷಿ ಮಸೂದೆ ವಿರೋಧಿಸಿದ ರೈತರ ಕುರಿತು ಮೋದಿ ಮಾಧ್ಯಮಗಳು ವ್ಯಾಪಕ ಅಪಪ್ರಚಾರ ಮಾಡಿದ್ದವು. ಅದೆಲ್ಲವನ್ನು ಎದುರಿಸಿ ರೈತರು ಮಣಿಯದಾದ ಕಾರಣ ಸ್ವತಃ ಮೋದಿ ರೈತರ ಕ್ಷಮೆಯಾಚಿಸಿ ಮಸೂದೆಗಳನ್ನು ವಾಪಸ್ಸು ಪಡೆದದ್ದು ಈಗ ಇತಿಹಾಸ. ಇದರಲ್ಲಿ ಗುರು ನಾನಾಕ್ ಅನುಯಾಯಿಗಳಿಗೆ ಮಣಿದು ಕ್ಷಮಮೆಯಾಚಿಸಿದವರು ಗೋಳ್ವಾಲ್ಕರ್ ಅನುಯಾಯಿಗಳು.
೧೦. ಸರಕಾರದ ದೊಡ್ದ ಸಾರ್ವಜನಿಕ ಉದ್ಯಮವಾಗಿರುವ ಆಹಾರ ನಿಗಮದೊಂದಿಗೆ ಅದಾನಿಯ ಒಪ್ಪಂದ ಅನೇಕ ಗುಮಾನಿಗಳನ್ನು ಹುಟ್ಟುಹಾಕಿದೆ.
೧೧. ಬಂದರು ಹಾಗು ವಿಮಾನ ನಿಲ್ದಾಣಗಳ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ ಅದಾನಿಗಾಗಿಯೆ ಹಲವು ನಿಯಮಗಳನ್ನು ಸಡಿಲಿಸಿ ದೇಶದ ಮಹತ್ವಪೂರ್ಣ ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ನಿರ್ವಹಣೆಯ ಜವಾಬ್ದಾರಿ ಅದಾನಿ ಹೆಗಲಿಗೆರಿಸಲಾಗಿದೆ.
೧೨. ಅದಾನಿ ಸಮೂಹಕ್ಕೆ ಅಪಾರ ಪ್ರಮಾಣದ ಅರಣ್ಯ ಭೂಮಿ ನೀಡಲಾಗಿದೆ.
೧೩. ದೇಶದ ಅತ್ಯಂತ ದೊಡ್ದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೃಷಿ ಸಾಲ ನೀಡಿಕೆಯ ಜವಾಬ್ದಾರಿಯನ್ನು ಅದಾನಿಗೆ ಒಪ್ಪಿಸಲಾಗಿದೆ.
೧೪. SBI ಒಳಗೊಂಡಂತೆ ಇನ್ನೂ ಅನೇಕ ಬ್ಯಾಂಕ್ಗಳಿಂದ ಅದಾನಿ ಕಂಪನಿಗಳಿಗೆ ಎರಡು ಲಕ್ಷ ಕೋಟಿ ಸಾಲ ನೀಡಿದ್ದು ಎಲ್.ಐ. ಸಿ ಕೂಡ ಅದಾನಿ ಉದ್ಯಮಗಳಲ್ಲಿ ಹೂಡಿಕೆ ಮಾಡಿದೆ.
೧೫. ಅದಾನಿಯ ಅಕ್ರಮಗಳ ಕುರಿತು ತನಿಖೆ ಮಾಡಿ ವರದಿ ಪ್ರಕಟಿಸಿದ ಮಾಧ್ಯಮ ಮುಖ್ಯಸ್ಥರು ಮತ್ತು ವರದಿಗಾರರನ್ನು ವಜಾಗೊಳಿಸಿದ ಘಟನೆಗಳ ಹಿಂದೆ ಕೆಲಸ ಮಾಡಿರುವ ಶಕ್ತಿಗಳು ಯಾರೆಂಬ ಕುತೂಹಲ ಜನರಲ್ಲಿ ಇದ್ದೆಯಿದೆ.
೧೬. ಮೋದಿ ಆಡಳಿತದ ಅವ್ಯವಹಾರ ಪ್ರಶ್ನಿಸುತ್ತಿದ್ದ ಎನ್ಡಿಟಿವಿ ಸೇರಿ ಸ್ವತಃ ಹಲವು ಮಾಧ್ಯಮ, ಪತ್ರಿಕೆಗಳು ಮತ್ತು ವಾಹಿನಿಗಳು ಅದಾನಿಯ ವಶಕ್ಕೆ ಬಂದಿವೆ.
ಹೀಗೆˌ ಅನೇಕ ಸರಣಿ ಬೆಳವಣಿಗಗಳು ಮತ್ತು ಇಂದು ಅದಾನಿ ಸಮೂಹದ ಆರ್ಥಿಕ ವಂಚಕತನವನ್ನು ಬಯಲು ಮಾಡಿದ ಹಿಂಡೆನ್ಬರ್ಗ್ ವರದಿ ಮತ್ತು ಆನಂತರದ ಬೆಳವಣಿಗೆಯಲ್ಲಿ ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದು ಹಾಗು ಅದಕ್ಕೂ ದೇಶಕ್ಕೂ ಸಂಬಂಧವೆ ಇಲ್ಲವೆನ್ನುವಂತೆ ವಿರೋಧ ಪಕ್ಷಗಳನ್ನು ಉಡಾಫೆಯಿಂದ ಹಂಗಿಸುತ್ತ ಕಾಲಕಳೆಯುತ್ತಿರುವ ದೇಶಭಕ್ತ ಮೋದಿˌ ಇವೆಲ್ಲವಕ್ಕೂ ಅವಿನಾಭಾವ ಸಂಬಂಧ ಇದೆ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಲು ಅದಕ್ಕೆ ಸಂಬಂಧಿಸಿದವರ ವರ್ತನೆಯೆ ಕಾರಣವಾಗಿದ್ದಂತೂ ಸತ್ಯ.