ಆಗಸ್ಟ್ 31 ರಂದು ನಡೆಯಲಿರುವ ಗಣೇಶ ಹಬ್ಬಕ್ಕೆ ದಕ್ಷಿಣ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ಬಳಕೆಗೆ ಅನುಮತಿ ನೀಡುವ ಪ್ರಸ್ತಾವನೆಗಳ ಕುರಿತು ಶನಿವಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಸಚಿವರು, ಅಧಿಕಾರಿಗಳು ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ನ್ಯಾಯಾಲಯದ ತೀರ್ಪಿನ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಶನಿವಾರ ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಸಭೆ ಕರೆಯಲಾಗಿದೆ. ಸಮಾಜದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಎಲ್ಲರ ಭಾವನೆಗಳನ್ನು ಕಾಪಾಡಲು ಸರ್ಕಾರ ಬದ್ದ ಎಂದು ಬೊಮ್ಮಾಯಿ ಹೇಳಿದರು. ಆಗಸ್ಟ್ 26ರ ಹೈಕೋರ್ಟ್ ಆದೇಶವನ್ನು ಅಕ್ಷರಶಃ ಪಾಲಿಸುವುದಾಗಿ ಕರ್ನಾಟಕ ಸಿಎಂ ಹೇಳಿದ್ದಾರೆ.
ಈದ್ಗಾ ಮೈದಾನವು ರಾಜ್ಯ ಕಂದಾಯ ಇಲಾಖೆಯ ಆಸ್ತಿಯೇ ಹೊರತು ವಕ್ಫ್ ಬೋರ್ಡ್ ಅಲ್ಲ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ನಾಗರೀಕರ ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಈ ವರ್ಷ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಲು ಅನುಮತಿ ಕೋರಿದ್ಧಾರೆ.
ಗಣೇಶೋತ್ಸವಕ್ಕೆ ಅನುಮತಿಯನ್ನು ನೀಡುವ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಹೈಕೋರ್ಟ್ ಆಗಸ್ಟ್ 25 ರಂದು ಮಹತ್ವದ ಆದೇಶವನ್ನು ನೀಡಿತ್ತು. ಗಣೇಶೋತ್ಸವಕ್ಕೆ ಅನುಮತಿಯನ್ನು ನಿರಾಕರಿಸಿತ್ತು. ಆಟದ ಮೈದಾನವಾಗಿಯೇ ಉಳಿಯಬೇಕು. ಮುಸ್ಲಿಮರು ವರ್ಷದಲ್ಲಿ ಎರಡು ಸಲ ಪ್ರಾರ್ಥನೆ ಸಲ್ಲಿಸಬಹುದು ಎಂದು ತಿಳಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಿತ್ತು. ಇಂದೇ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುವುದಾಗಿ ಸಲ್ಲಿಸಿದ್ದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ನಡೆಸಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಅನುಮತಿ ಕೋರಿದ ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಬಹುದು. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಅನುಮತಿ ನೀಡಬಹುದು ಎಂದು ಹೇಳಿದೆ. ಆಗಸ್ಟ್ 31 ರಿಂದ ನಿರ್ದಿಷ್ಟ ಅವಧಿಗೆ ಮಾತ್ರ ಹೈಕೋರ್ಟ್ ಅನುಮತಿ ನೀಡಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸುವ ಕುರಿತು ಆ.29ರಂದು ನಡೆಯಲಿರುವ ಸರ್ವಪಕ್ಷ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.