ಯುವ ಹೋರಾಟದ ಆರಂಭಿಕ ಹೆಜ್ಜೆಯ ವಾಸ್ತವತೆ ಅನಾವರಣ…
ಬೆಂಗಳೂರು : ದೇಶದಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಗಬೇಕು. ನೀಟ್ ಹಗರಣಕ್ಕೆ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಮಾತ್ರ ಈ ಬಗ್ಗೆ ಉಡಾಫೆ ಉತ್ತರಗಳನ್ನು ನೀಡುತ್ತ ಕಾಲ ಹರಣ ಮಾಡುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಖಂಡಿಸಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿಜಿಪಿ ಕಾಕ್ರೋಚ್ ಜನತಾ ಪಾರ್ಟಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಆದರೆ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವರ್ತಿಸುತ್ತಿದ್ದಾರೆ. ಇದು ಹೋರಾಟಗಾರರ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ತಾಳ್ಮೆಯ ಕಟ್ಟಯೊಡೆದು ಯುವಕರು ದೆಹಲಿಯ ಜಂತರ್ ಮಂತರ್ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಮೂಲಕ ಮೋದಿ ಸರ್ಕಾರದ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ.

ಈಗಾಗಲೇ ಆನ್ಲೈನ್ ವಿಡಂಬನೆಯಾಗಿ ಆರಂಭವಾಗಿದ್ಧ ಕಾಕ್ರೋಚ್ ಜನತಾ ಪಕ್ಷ (CJP) ವೆಬ್ಸೈಟ್ನಿಂದ ಆನ್-ಗ್ರೌಂಡ್ನಲ್ಲಿ ಹೇಗೆಲ್ಲ ರೀತಿಯಲ್ಲಿ ಬಲಿಷ್ಠವಾಗಿದೆ ಎನ್ನುವುದು ಜಗತ್ತಿಗೆ ತಿಳಿಯುತ್ತಿದೆ. ಅಲ್ಲದೆ ಕಾಕ್ರೋಚ್ ಸಂಸ್ಥಾಪಕ ಅಭಿಜೀತ್ ದೀಪ್ಕೆ, ವಿದೇಶದಿಂದ ಬಂದು ಭಾರತದಲ್ಲಿ ಯುವಕರನ್ನು ಸೆಳೆದಿದ್ದು, ಅನ್ಯಾಗಳನ್ನು ಖಂಡಿಸುವ ಮೂಲಕ ಯೂತ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಯಾರು ಅನ್ಯಾಗಳನ್ನು ಪೋಷಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೋ ಆ ಜನರು ಇದನ್ನು ಒಪ್ಪದೇ ಇರಬಹುದು. ಆದರೆ ಅನ್ಯಾಯದ ಜ್ವಾಲೆಯಲ್ಲಿ ನೊಂದು, ಬೆಂದಿರುವ ಅದೆಷ್ಟೋ ಯುವಕ, ಯುವತಿಯರ ಪಾಲಿಗೆ ದೀಪ್ಕೆ ಒಬ್ಬ ಹೋರಾಟಗಾರ ಎಂಬುವುದು ಸುಳ್ಳಲ್ಲ.
ಇದನ್ನೂ ಓದಿ : ಕೆಪಿಟಿಸಿಎಲ್ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ‘ಝೀರೋ ಟ್ರಸ್ಟ್’ ಸೈಬರ್ ಭದ್ರತಾ ವ್ಯವಸ್ಥೆ ಅಳವಡಿಕೆ
ಸೋಮಾರಿ, ನಿರುದ್ಯೋಗಿ, ನಿರಂತರ ಆನ್ಲೈನ್ನಲ್ಲಿ ಕೂಗಾಡುತ್ತಾರೆ ಎಂಬ ಹಣೆಪಟ್ಟಿಯಿಂದ ಕಾಕ್ರೋಚ್ ಜನತಾ ಪಕ್ಷದ ಯುವ ಸಮೂಹ ಜನರ ಗಮನ ಸೆಳೆಯುವ ಕೆಲಸ ಮಾಡಿದೆ. ಯುವ ಮೌನ ಹೋರಾಟವು ಆಕ್ರೋಶದ ಕಿಡಿಯಾಗಿ ದೇಶದ ವಿವಿಧ ರಾಜ್ಯಗಳಿಗೆ ಹಬ್ಬಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಮಂತ್ರಿ ಪ್ರದಾನ್ ಅವರನ್ನು ಮನೆಗೆ ಕಳುಹಿಸಿ ಎಂಬ ಕೂಗು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ.
ಪ್ರಮುಖವಾಗಿ ಆರಂಭದಲ್ಲಿ ಕಳೆದ ಜೂನ್ 6 ರಂದು ಇದೇ ದೆಹಲಿಯಲ್ಲಿ ನಡೆದ ಸಿಜೆಪಿಯ ಮೊದಲ ಪ್ರತಿಭಟನೆಯು ಯುವ ಸಮೂಹದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿ ಎಲ್ಲರನ್ನು ತಮ್ಮತ್ತ ಸೆಳೆಯುವಂತೆ ಮಾಡಿದೆ. ಪ್ರತಿಭಟನೆಗಳಲ್ಲಿ ಪೊಲೀಸರ ಲಾಟಿ ಏಟು ತಿಂದು, ತಳ್ಳಾಟ, ನೂಕಾಟ ಅನುಭವಿಸಿದ್ದ ಅದೆಷ್ಟೋ ಜನರಿಗೆ ಈ ರೀತಿಯ ಹೋರಾಟ ಅಭದ್ರತೆಯ ಚಿಂತೆಯನ್ನು ದೂರ ಮಾಡಿದೆ. ಈ ಹಿಂದಿನ ಸಿಎಎ, ಯುಸಿಸಿ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದವರಿಗೆ ಇದು ಸ್ವಲ್ಪ ಆಶಾಭಾವ ಮೂಡುವಂತೆ ಮಾಡಿದೆ.
ಹೀಗಾಗಿ ಅವರಿಗೆ ನಾವು ಇದರಲ್ಲಿ ಗುರುತಿಸಿಕೊಂಡರೇ ಸುರಕ್ಷಿತರು ಎಂಬ ಭಾವ ಮೂಡುತ್ತಿದೆ. ಕಳೆದ ಜೂನ್ 20 ರಿಂದ ಎರಡನೇ ಹಂತದಲ್ಲಿ ಜಂತರ್ ಮಂತರ್ನಲ್ಲಿ ಆರಂಭವಾಗಿರುವ ಸಿಜೆಪಿ ಸತ್ಯಾಗ್ರಹ ಜಗತ್ತಿನ ಗಮನ ಸೆಳೆದಿದೆ. ವಿಶ್ವದ ಖ್ಯಾತ ಪತ್ರಕರ್ತರು ಭಾರತಕ್ಕೆ ಆಗಮಿಸಿ ಯುವ ಸಮೂಹದ ಚಳುವಳಿಯ ಆಳವಾದ ಅಧ್ಯಯನದ ವರದಿಗಳನ್ನು ಮಾಡಿದ್ದಾರೆ.

ಈ ಹೋರಾಟದಲ್ಲಿ ಬೀಡುಬಿಟ್ಟಿರುವ ಎಲ್ಲರಿಗೂ ಬಿಸಿಲಿನ ತಾಪದಲ್ಲಿ ಆಹಾರ ಮತ್ತು ನೀರನ್ನು ಪೂರೈಸುತ್ತಿದ್ದ ಮೊಹಮ್ಮದ್ ಜುನೈದ್ ಮತ್ತು ಹರ್ಪ್ರೀತ್ ಸಿಂಗ್ ಉಪಸ್ಥಿತಿಯು ಈ ಸತ್ಯಾಗ್ರಹವನ್ನು ಜಾತ್ಯತೀತ ಸ್ಥಳವಾಗುವಂತೆ ಮಾಡಿದೆ. ದೇಶದ ವಿವಿಧೆಡೆ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಶಿಕ್ಷಣ ಸಚಿವರ ಹೊಣೆಗಾರಿಕೆ ಮತ್ತು ರಾಜೀನಾಮೆಯೇ ಸಿಜೆಪಿ ಚಳವಳಿಯ ಮುಖ್ಯ ಬೇಡಿಕೆಯಾಗಿದೆ.
ಇಷ್ಟೆಲ್ಲ ಗಮನ ಸೆಳೆಯುವ ಅಂಶಗಳನ್ನು ಹೊಂದಿರುವ ಈ ಹೋರಾಟವು ಜಾತ್ಯಾತೀತತೆ ಹಾಗೂ ಕೋಮು ಸೌಹಾರ್ದತೆಗೆ ದಾರಿ ಮಾಡಿಕೊಟ್ಟಿದೆ. ಚಳುವಳಿಯ ಸ್ಥಳವಾಗಿರುವ ಜಂತರ್ ಮಂತರ್ನಲ್ಲಿ ಯಾವಾಗಲೂ ರಾಷ್ಟ್ರೀಯವಾದಿ ಘೋಷಣೆಗಳು ಕೇಳಿ ಬರುತ್ತಿದ್ದವು. ಆದರೆ ಈಗ ಘೋಷಣೆಗಳ ಸರಣಿ ಬದಲಾಗಿದೆ ಭಾರತ್ ಮಾತಾ ಕೆ ಜೈ, ಬಳಿಕ ಶಿಕ್ಷಣ ಸಚಿವರ ರಾಜೀನಾಮೆ, ” ಜಿಂದಾಬಾದ್ , ಜೈ ಭೀಮ್ ಮತ್ತು ನಂತರ ಹಿಂದೂ-ಮುಸ್ಲಿಂ ಸಿಖ್ ಇಸೈ-ಅಪಾಸ್ ಮೈ ಭಾಯ್ ಭಾಯ್ (ಹಿಂದೂ ಮುಸ್ಲಿಂ ಸಿಖ್ ಮತ್ತು ಕ್ರಿಶ್ಚಿಯನ್ನರು ಎಲ್ಲರೂ ಸಹೋದರರು) ಎನ್ನುವ ಸಾಮರಸ್ಯ ಸಾರುವ ಘೋಷಣೆಗಳು ಮೊಳಗುತ್ತಿವೆ. ಇವುಗಳೆಲ್ಲ ಇಷ್ಟು ದಿನ ಸಿಜೆಪಿಯನ್ನು ಟೀಕಿಸಿದ್ದವರಿಗೆ ತಿರುಗೇಟಿನಂತಾಗಿದ್ದು, ಯಾವುದೇ ಪೂರ್ವಾಗ್ರಹ ಪೀಡಿತವಿಲ್ಲದೆ ಸಾಮಾಜಿಕ ಕಳಕಳಿಯಿಂದ ನಡೆಯುತ್ತಿರುವ ಈ ಉಪವಾಸ ಸತ್ಯಾಗ್ರಹವು ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಇನ್ನೂ ಮುಖ್ಯವಾಗಿ ಈ ಹೋರಾಟದ ಮತ್ತೊಂದು ಸಂಗತಿಯೆಂದರೆ ದೇಶದ ವಿದ್ಯಾರ್ಥಿ ಸಂಘಟನಗಳ ಪ್ರಮುಖರು ಕೈ ಜೋಡಿಸಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ನೇಹಾ ಬೋರಾ, ದೆಹಲಿ ವಿಶ್ವವಿದ್ಯಾಲಯದ ಅಂಜಲಿ, JNUನ ಡ್ಯಾನಿಶ್ ಹಾಗೂ ಭಾರತೀಯ ವಿದ್ಯಾರ್ಥಿ ಒಕ್ಕೂಟದ (SFI) ನೇಹಾ ಭಾರ್ತಿಯಂತಹ ಮಹಿಳೆಯರ ಭಾಗಿಯಾಗುವಿಕೆಯು ದೇಶಾದ್ಯಂತದ ಯುವತಿಯರಿಗೆ ಸ್ಫೂರ್ತಿದಾಯಕವಾಗಿದೆ.
ಇದನ್ನೂ ಓದಿ : ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ- ಭಾಗ 2
ಸತ್ಯಾಗ್ರಹದ ವೇದಿಕಯಲ್ಲಿ ಕ್ರಾಂತಿಕಾರಿ ಗೀತೆಗಳನ್ನು ಹಾಡುವುದು, ಚರ್ಚಾ ಕೂಟಗಳನ್ನು ನಡೆಸುವುದರ ಜೊತೆಗೆಯೇ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯ ಒತ್ತಾಯದ ಜೊತೆಗೆಯೇ ದೇಶದಲ್ಲಿ ದ್ವೇಷದ ರಾಜಕೀಯಕ್ಕೆ ಎಳ್ಳು ನೀರು ಬಿಡುವ ಗಟ್ಟಿಯಾದ ಆಲೋಚನೆಗಳು ಹೊರಹೊಮ್ಮಲು ಕಾರಣವಾಗಿದೆ. ದಲಿತರು ಮತ್ತು ದಮನಿತರ ಹಕ್ಕುಗಳವರೆಗೆ ಹಲವಾರು ವಿಷಯಗಳ ಮೇಲೆ ಎದ್ದುಕಾಣುವ ರೀತಿಯಲ್ಲಿ ಮಾತನಾಡುತ್ತಾರೆ. ಬುದ್ಧಿಜೀವಿಗಳು ಮತ್ತು ರಾಜಕೀಯ ನಾಯಕರು ಕೂಡ ಇದಕ್ಕೆ ದನಿ ಗೂಡಿಸುತ್ತಿದ್ದಾರೆ.
ಅಷ್ಟಕ್ಕೂ ಕೇಂದ್ರ ಸರ್ಕಾರವನ್ನೇ ಎದುರು ಹಾಕಿಕೊಂಡು ಸಿಜೆಪಿ ನಡೆಸುತ್ತಿರುವ ಹೋರಾಟವು ವಿಪಕ್ಷಗಳಿಗೂ ದಂಗು ಬಡಿಸುವಂತೆ ಮಾಡಿದೆ. ಜಂತರ್ ಮಂತರ್ನಲ್ಲಿನ ಹಲವು ಪ್ರತಿಭಟನೆಗಳು ಬೆರಳೆಣಿಕೆ ದಿನಗಳಲ್ಲೇ ಗೂಡು ಸೇರುತ್ತಿದ್ದವು. ಆದರೆ ಸಿಜೆಪಿಯು ಹೆಣೆದಿರುವ ಕಾರ್ಯತಂತ್ರದ ಪ್ರತಿಫಲವಾಗಿಯೇ ಹೋರಾಟ ನಿರಂತರವಾಗಿದೆ ಎಂಬುವುದನ್ಬು ಒಪ್ಪಲೇಬೇಕು.

ಯಾವುದೇ ಹೆದರಿಕೆಯಿಲ್ಲದೆ ಗಟ್ಟಿತನದಿಂದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವುದು ಉಡಿಯೊಳಗೆ ಕೆಂಡ ಹಾಕಿಕೊಂಡಂತೆ ಎಂಬುವುದನ್ನು ಮನಗಂಡಿರುವ ಮೋದಿ ಸರ್ಕಾರ ಈ ಕಡೆ ತಲೆನೇ ಹಾಕಿಲ್ಲ. ಅಷ್ಟಕ್ಕೂ ದೇಶದ ಯುವ ಶಕ್ತಿಯ ವಿರುದ್ಧ ಕ್ರಮಕ್ಕೆ ಮುಂದಾದರೆ ಅದರ ಪರಿಣಾಮ ಇಡೀ ಸರ್ಕಾರದ ಮೇಲೆ ಬೀರಬಹುದು ಮತ್ತು ರಾಜಕೀಯವಾಗಿ ಬುಡ ಅಲ್ಲಾಡಬಹುದು ಎಂಬ ಸೂಕ್ಷ್ಮ ಯೋಚನೆಯನ್ನೂ ಮಾಡಿದಂತಿದೆ. ಆದ್ದರಿಂದ, ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುವುದು ಲೇಸು ಎಂದು – ಬಲ್ಬ್ಗಳನ್ನು ಆಫ್ ಮಾಡುವುದು, ಸಾರ್ವಜನಿಕ ಶೌಚಾಲಯಗಳಲ್ಲಿ ನೀರನ್ನು ತಡೆ ಹಿಡಿಯುವುದು ಹೀಗೆ ಪೊಲೀಸ್ ಕಣ್ಗಾವಲಿನಲ್ಲಿ ಅವರ ಕಿರುಕುಳದ ಜೊತೆಗೆ ಪ್ರತಿಭಟನೆ ಸಾಗುತ್ತಿರುವುದು ಯುವ ಶಕ್ತಿಯ ಒಗ್ಗಟ್ಟು, ಸಾಮರ್ಥ್ಯದ ಕೈಗನ್ನಡಿಯಾಗಿದೆ.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು, ವಿದ್ಯಾರ್ಥಿಗಳಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ದಲಿತ ಹುಡುಗ ಅಭಿಜೀತ್ ದೀಪ್ಕೆ ತಂಡದ ಕಾರ್ಯ ದೇಶದ ಯುವ ಸಮೂಹದ ಕಣ್ತೆರೆಸುವ ಕೆಲಸ ಮಾಡುತ್ತಿದೆ. ಧರ್ಮದ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಹೇಳುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ತಮ್ಮ ಶಿಕ್ಷಣ ಮಂತ್ರಿಯ ತಲೆದಂಡಕ್ಕೆ ಮುಂದಾಗಬೇಕಿದೆ. ಯಾಕೆಂದರೆ ಇತಿಹಾಸದಲ್ಲಿ ರೈತರು ಹಾಗೂ ವಿದ್ಯಾರ್ಥಿಗಳ ಕಣ್ಣೀರಿಗೆ ಕಾರಣವಾದ ಯಾವ ಸರ್ಕಾರವೂ ಉಳಿದಿಲ್ಲ ಅನ್ನುವುದು ಗಮನಾರ್ಹ.






