ಸ್ವಾತಂತ್ರ್ಯೋತ್ಸವದ ವೇಳೆ ಟಿಪ್ಪು ಸುಲ್ತಾನ್ ಹಾಗೂ ವೀರ್ ಸಾವರ್ಕರ್ ಬ್ಯಾನರ್ ಹರಿದ ವಿಚಾರವಾಗಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಘಟನೆಯ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ನೆಹರೂ ನಗರದಲ್ಲಿ ಮತ್ತೊಂದು ಚೂರಿ ಇರಿತ ಪ್ರಕರಣ ದಾಖಲಾಗಿದ್ದು ಹಿಂದು ಯುವಕನಿಗೆ ಮುಸ್ಲಿಂ ಸಮುದಾಯದ ಯುವಕ ಚಾಕುವಿನಿಂದ ಇರಿದಿದ್ದು ಜಿಲ್ಲೆಯಲ್ಲಿ ಕೋಮು ಸಂಘರ್ಷ ಏರ್ಪಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಯಾವುದಾದರು ನಿಷೇಧಿತ ಸಂಘಟನೆಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಭದ್ರಾವತಿಯಲ್ಲಿ ನಡೆದ ಘಟನೆ ವೈಯಕ್ತಿಕ ದ್ವೇಷ ಎಂದು ತಿಳಿಸಿದ್ದಾರೆ.
ಸುನೀಲ್(28) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಚಾಕುವಿನಿಂದ ಇರಿದ ವ್ಯಕ್ತಿಯನ್ನು ಮುಬಾರಕ್(26) ಎಂದು ಗುರುತಿಸಲಾಗಿದೆ. ಕಾರ್ಯಕ್ರಮವನ್ನ ಮುಗಿಸಿಕೊಂಡು ಮನೆಗೆ ಹಿಂತಿರುಗುವ ವೇಳೆ ಘಟನೆ ಸಂಭವಿಸಿದ್ದು ಸುನೀಲ್ ತಲೆ ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿವೆ. ಆರೋಪಿ ಮುಬಾರಕ್ನನ್ನು ಪೊಲೀಸರು ಬಂಧಿಸಿದ್ದು ತನಿಖೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಆಗಸ್ಟ್ 15ರಂದು ಗಾಯಾಳು ಸುನೀಲ್ ಆರೋಪಿ ಮುಬಾರಕ್ ನಡೆಸುತ್ತಿದ್ದ ಜೂಜು ಆಟದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದ. ಮುಬಾರಕ್ ಜೂಜಾಟದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಇದಕ್ಕೆ ಕುಪಿತಗೊಂಡ ಮುಬಾರಕ್ ಸುನೀಲ್ಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಗೂ ಶಿವಮೊಗ್ಗ ಗಲಭೆಗು ಯಾವುದೇ ಸಂಬಂದವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.