ಸಿಎಂ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ದೆಹಲಿ ಪ್ರವಾಸಕ್ಕೆ ತೆರಳಿದ್ದಾರೆ. ಇದು ಬಿಜೆಪಿ ಸಚಿವಕಾಂಕ್ಷಿಗಳಲ್ಲಿ ಆಂತಕ ಮೂಡಿಸಿದೆ. ಉಳಿದ ನಾಲ್ಕು ಸಚಿವ ಸ್ಥಾನಗಳ ಭರ್ತಿಗಾಗಿ ಹೈಕಮಾಂಡ್ ಬಳಿ ನಾನು ಚರ್ಚಿಸುವುದಿಲ್ಲ ಎಂದು ಬೊಮ್ಮಾಯಿ ಹೇಳಿದರಾದರೂ ತಾವು ಮಂತ್ರಿಗಳಾಗಬೇಕು ಎಂಬ ಬಿಜೆಪಿ ನಾಯಕರಲ್ಲೂ ಒಂದು ಸಣ್ಣ ಆಸೆ ಮತ್ತು ಆತಂಕ ಶುರುವಾಗಿರುವುದು ಮಾತ್ರ ಸ್ಪಷ್ಟ.
ದೆಹಲಿಗೆ ತೆರಳುವ ಮುನ್ನ ಸಿಎಂ ಬಸವರಾಜ್ ಬೊಮ್ಮಾಯಿ ಹೇಗೆ ಎಂದಿದ್ದರು. ನಾನು ದೆಹಲಿಗೆ ಹೋಗುತ್ತಿದ್ದೇನೆ. ರಾಜ್ಯ ಸರ್ಕಾರದ ಕೆಲಸಗಳ ಸಂಬಂಧ ಹಲವು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರನ್ನು ಭೇಟಿ ಮಾಡುವ ಅವಶ್ಯಕತೆ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿ ಮಾಡುವ ಕಾರ್ಯಕ್ರಮ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಉನ್ನತ ಮೂಲಗಳ ಪ್ರಕಾರ ಜೆ.ಪಿ. ನಡ್ಡಾರನ್ನು ಭೇಟಿ ಮಾಡಿ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಈಗ ರಾಜ್ಯದಲ್ಲಿ ಖಾತೆ ಕ್ಯಾತೆ ಬೂದಿ ಮುಚ್ಚಿದ ಕೆಂಡದಂತಿದೆ. ಜೊತೆಗೆ ಕೆಲವು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಈ ಮಧ್ಯೆ ಬಾಕಿ ಉಳಿದಿರುವ ಸ್ಥಾನಗಳನ್ನ ತುಂಬಲು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಸ್ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ದೆಹಲಿ ದಂಡಯಾತ್ರೆ ಮಾಡುತ್ತಲೇ ಇದ್ದಾರೆ. ಇದುವರೆಗೂ ಕನಿಷ್ಠ ನಾಲ್ಕು ಬಾರಿ ದೆಹಲಿಗೆ ಭೇಟಿ ನೀಡಿ ವಾಪಸ್ಸಾಗಿದ್ದಾರೆ. ಸಂಪುಟ ವಿಸ್ತರಣೆ ಸಲುವಾಗಿ ಕಳೆದ ಬಾರಿ ಸಿಎಂ ದೆಹಲಿಗೆ ತೆರಳಿದ್ದರು. ಆದರೆ, ಹಿಂದಿನ ಬಾರಿ ಸಿಎಂ ಹೋಗಿದ್ದ ಉದ್ದೇಶ ಮಾತ್ರ ಈಡೇರಿರಲಿಲ್ಲ. ಹೀಗಾಗಿ ಬೊಮ್ಮಾಯಿ ಮತ್ತೆ ದೆಹಲಿಗೆ ದೌಡಾಯಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಎರಡು ದಿನಗಳ ಕಾಲ ಉಳಿಯಲಿದ್ದಾರೆ. ಈ ಬಾರಿ ಸಂಪುಟ ವಿಸ್ತರಣೆ ವಿಚಾರವನ್ನೇ ಇಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ. ಯಾವುದೇ ಕಾರಣಕ್ಕೂ ಈ ಸಲ ವರಿಷ್ಠರೊಂದಿಗೆ ಸಂಪುಟದಲ್ಲಿ ಬಾಕಿ ಉಳಿದಿರುವ 4 ಸ್ಥಾನಗಳನ್ನ ತುಂಬುವ ಬಗ್ಗೆ ಚರ್ಚಿಸದೆ ವಾಪಸ್ಸಾಗುವುದಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ ಬೊಮ್ಮಾಯಿ.
ಕಳೆದ ಬಾರಿ ಸಿಎಂ ಪ್ರವಾಸದ ವೇಳೆ ನಡ್ಡಾರನ್ನ ಭೇಟಿಯಾಗಿರಲಿಲ್ಲ. ಹೀಗಾಗಿ 8ನೇ ತಾರೀಖಿನಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರ ಭೇಟಿಗೆ ಸಿಎಂ ಸಮಯವನ್ನ ಕೇಳಿದ್ದಾರೆ. ಇನ್ನು, ಸಿಎಂ ಬೊಮ್ಮಾಯಿ ಜೆ.ಪಿ ನಡ್ಡಾರನ್ನು ಭೇಟಿ ಮಾಡಲಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಅಲ್ಲದೇ ಖುಷಿ ಜೊತೆಗೆ ಸ್ಥಾನ ಸಿಗುತ್ತೋ ಇಲ್ವೋ ಎಂಬ ಆತಂಕವೂ ಕಾಡುತ್ತಿದೆ.
ಎರಡು ದಿನ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಬೊಮ್ಮಾಯಿ ಮುಖ್ಯವಾಗಿ ಸಚಿವ ಸಂಪುಟ ವಿಸ್ತರಣೆ, ಪಾಲಿಕೆ ಚುನಾವಣೆ ಗೆಲವು, ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಗಮನದ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ.
ಕೆಲವು ಸಚಿವರನ್ನು ಭೇಟಿ ಮಾಡಲಿರುವ ಸಿಎಂ ಬೊಮ್ಮಾಯಿ ರಾಜ್ಯದ ವಿವಿಧ ಯೋಜನೆಗಳಿಗೆ ಅನುಮತಿ ನೀಡುವ ಬಗ್ಗೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿ ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಒಟ್ಟಾರೆ, ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ತಮ್ಮ ಪಕ್ಷದಲ್ಲೇ ಪ್ರಭಾವಿಗಳನ್ನ ಭೇಟಿಯಾಗಿ ಮಂತ್ರಿಗಿರಿಗಾಗಿ ಪೈಪೋಟಿ ಶುರುವಿಟ್ಟುಕೊಂಡಿದ್ದಾರೆ. ಅದೇನೆ ಇರಲಿ ಸಿಎಂ ಹೋಗಿರೋ ಉದ್ದೇಶ ಈ ಬಾರಿಯಾದ್ರೂ ಫಲಿಸುತ್ತಾ? ಸಚಿವ ಸ್ಥಾನ ಆಕಾಂಕ್ಷಿಗಳ ಕನಸು ನನಸಾಗುತ್ತಾ ನೋಡಬೇಕು.