ಹಿಂದಿ ಹೇರಿಕೆ ವಿರುದ್ಧ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲೇ ಮೊಟ್ಟಮೊದಲ ಬಾರಿಗೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ.ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರೆ ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳ ಮುಂದೆ ಪ್ರತಿಭಟನೆ, ಹಿಂದಿ ಫಲಕಗಳಿಗೆ ಮಸಿ ಬಳಿಯುವುದು ಮತ್ತು ಧರಣಿ ಮೂಲಕ ದನಿ ಎತ್ತಿವೆ.
ಸೆಪ್ಟೆಂಬರ್ 14ರಂದು ರಾಷ್ಟ್ರವ್ಯಾಪಿ ‘ಹಿಂದಿ ದಿವಸ್ ಆಚರಣೆ’ಯ ಮೂಲಕ ಹಿಂದಿಯನ್ನು ದೇಶದ ಜನರ ಮೇಲೆ ಹೇರಲಾಗುತ್ತಿದೆ. ಹಿಂದಿಯನ್ನು ರಾಷ್ಟ್ರಭಾಷೆ, ಅಧಿಕೃತ ಭಾಷೆ, ದೇಶಭಾಷೆ ಎಂಬ ಸುಳ್ಳುಗಳ ಮೂಲಕ ಹಿಂದಿಯೇತರ ಭಾಷೆಗಳ ಮೇಲೆ ಸವಾರಿ ಮಾಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಹಿಂದಿ ಕೂಡ ದೇಶದ 22 ವಿವಿಧ ಅಧಿಕೃತ ಭಾಷೆಗಳಂತೆಯೇ ಒಂದು ಭಾಷೆ ಅಷ್ಟೇ. ರಾಷ್ಟ್ರಭಾಷೆ ಮತ್ತು ದೇಶಭಾಷೆ ಎಂಬ ಕಲ್ಪನೆಗಳು ಶುದ್ಧ ಸುಳ್ಳು.
ಸಂವಿಧಾನದಲ್ಲಾಗಲೀ, ನಮ್ಮ ಕಾನೂನಿನಲ್ಲಾಗಲೀ ಅಂತಹ ಯಾವುದೇ ಪ್ರಸ್ತಾಪವೂ ಇಲ್ಲ. ಹಾಗಿದ್ದರೂ ಹಿಂದಿ ಭಾಷೆಯ ಮೂಲಕ ದೇಶದ ಇತರೆ ಭಾಷೆಗಳನ್ನು ನಾಶ ಮಾಡಿ, ‘ಏಕ ಭಾಷೆ, ಏಕ ರಾಷ್ಟ್ರ, ಏಕ ಧರ್ಮ, ಏಕ ಸಂಸ್ಕೃತಿ’ ಮುಂತಾದ ತನ್ನ ಹಿಂದುತ್ವ, ಹಿಂದೂರಾಷ್ಟ್ರ ಅಜೆಂಡಾವನ್ನು ದೇಶದ ವೈವಿಧ್ಯಮಯ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಹೇರಲು ಭಾರತೀಯ ಜನತಾ ಪಕ್ಷ ಹಿಂದಿ ದಿವಸ್ ಎಂಬುದನ್ನು ನೆಪ ಮಾಡಿಕೊಂಡಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ , ರಾಜ್ಯದ ಉದ್ದಗಲಕ್ಕೆ ಬೀದಿಬೀದಿಗಳಲ್ಲಿ ಹಿಂದಿ ದಿವಸ್ ಆಚರಣೆಯ ದಿನವೇ “ಹಿಂದಿ ಹೇರಿಕೆ ನಿಲ್ಲಿಸಿ” ಎಂಬ ದನಿ ಮೊಳಗಿದೆ. ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ #stophindiimposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಹ್ಯಾಷ್ ಟ್ಯಾಗ್ ಬಳಸಿ ಹಿಂದಿ ದಿವಸ್ ವಿರುದ್ಧ ದೊಡ್ಡಮಟ್ಟದ ಆನ್ ಲೈನ್ ಆಂದೋಲನ ನಡೆಯಿತು.
ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಆಕ್ರೋಶದ ಈ ದನಿ ಎಷ್ಟು ಜೋರಾಗಿತ್ತು ಎಂದರೆ, ಕಳೆದ ವರ್ಷದ ಹಿಂದಿ ದಿವಸ್ ದಿನ “ಒಂದು ರಾಷ್ಟ್ರ, ಒಂದು ಭಾಷೆ” ಎಂಬ ಘೋಷಣೆಯೊಂದಿಗೆ, “ದೇಶದ ಏಕತೆ, ಸಮಗ್ರತೆ ಮತ್ತು ಸಂಸ್ಕೃತಿ ರಕ್ಷಣೆಗಾಗಿ ದೇಶದ ನಾಗರಿಕರೆಲ್ಲರೂ ಹಿಂದಿ ಕಲಿಯಬೇಕು” ಎಂಬ ಫರ್ಮಾನು ಹೊರಡಿಸಿದ್ದ ಬಿಜೆಪಿಯ ಹೈಕಮಾಂಡ್, ಗೃಹ ಸಚಿವ ಅಮಿತ್ ಶಾ ಈ ಬಾರಿ ‘ಹಿಂದಿ ದಿವಸ್ ಭಾಷಣ’ದ ವೈಖರಿಯೇ ಬದಲಾಗಿದೆ. “ಹಿಂದಿ ಇತರೆ ಭಾಷೆಗಳಿಗೆ ಪ್ರತಿಸ್ಪರ್ಧಿಯಲ್ಲ; ಇತರೆ ಭಾಷೆಗಳೊಂದಿಗೆ ಹೊಂದಾಣಿಕೆಯಲ್ಲಿ ಹೋದರೆ ಮಾತ್ರ ಬೆಳೆಯುವ, ವಿಕಾಸವಾಗುವ ಭಾಷೆ. ಅದು ದೇಶದ ಇತರೆ ಭಾಷೆಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡು ಬೆಳೆಯಲಿ. ಭಾಷೆಯ ವಿಷಯದಲ್ಲಿ ಕೂಡ ನಾವು ಆತ್ಮನಿರ್ಭರರಾಗಬೇಕು. ನಮ್ಮ ಮನೆಮಾತು, ಮಾತೃಭಾಷೆಯನ್ನು ಮರೆತರೆ, ಬದುಕಿನಲ್ಲಿ ಯಶಸ್ವಿಯಾಗುವುದು ಕಷ್ಟ. ಹಾಗಾಗಿ ಮಕ್ಕಳಿಗೆ ಮೊದಲು ಮಾತೃಭಾಷೆಯನ್ನು ಕಲಿಸೋಣ” ಎಂದು ಶಾ ಅವರ ಭಾಷೆ ಬದಲಾಗಿದೆ!
ಪ್ರಮುಖವಾಗಿ ಆಳುವ ಪಕ್ಷ ಬಿಜೆಪಿಯ ‘ಏಕ ರಾಷ್ಟ್ರ, ಏಕ ಧರ್ಮ’ದ ಅಜೆಂಡಾದ ವಿಸ್ತರಿತ ಭಾಗವಾಗಿ ‘ಏಕ ಸಂಸ್ಕೃತಿ, ಏಕ ಭಾಷೆ’ ಮತ್ತಿತರ ಪರಿಕಲ್ಪನೆಗಳು ಚಾಲ್ತಿಗೆ ಬಂದಿವೆ. ಆ ಮೂಲಕ ಭಾಷಾ ವೈವಿಧ್ಯ, ಸಾಂಸ್ಕೃತಿಕ ವೈವಿಧ್ಯ, ಧಾರ್ಮಿಕ ವೈವಿಧ್ಯವನ್ನೆಲ್ಲಾ ನಾಶ ಮಾಡಿ, ಭಾರತವನ್ನು ‘ಏಕ‘ ವ್ಯವಸ್ಥೆಗೆ ಒಗ್ಗಿಸುವುದು ಮತ್ತು ಅಂತಿಮವಾಗಿ ಅದರಿಂದಾಗಿ ಶಾಶ್ವತ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಉದ್ದೇಶ. ಅಂತಹ ಮಹಾನ್ ಉದ್ದೇಶದ ಕಾರ್ಯಸಾಧನೆಗಾಗಿಯೇ ಇತರೆ ಯಾವುದೇ ಪಕ್ಷ ಅಧಿಕಾರದಲ್ಲಿರುವಾಗ ಸಿಗದಿದ್ದ ಪ್ರಾಶಸ್ತ್ಯ ಇಂದು ಬಿಜೆಪಿಯ ಅಧಿಕಾರದಲ್ಲಿ ಹಿಂದಿಗೆ ಸಿಗುತ್ತಿದೆ. ಉತ್ತರ ಭಾರತೀಯ ಸಂಸ್ಕೃತಿಯನ್ನೇ, ಆರ್ಯ ಸಂಸ್ಕೃತಿಯನ್ನೇ ದೇಶದ ಎಲ್ಲರ ಮೇಲೆ ಹೇರುವ ಯತ್ನ ಕೂಡ ಇದರ ಹಿಂದಿದೆ ಎಂಬ ಮಾತುಗಳು ಕಳೆದ ಕೆಲವು ವರ್ಷಗಳಿಂದ ಜೋರಾಗಿ ಕೇಳಿಬರತೊಡಗಿದ್ದವು. ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಬಿಹಾರ, ಗುಜರಾತ್ ಮತ್ತಿತರ ಕಡೆ ಕೂಡ ಹಿಂದಿಯ ವಿರುದ್ಧ ಪ್ರತಿರೋಧ ಕಾಣತೊಡಗಿದೆ. ಆ ಹಿನ್ನೆಲೆಯಲ್ಲೇ ಬಿಜೆಪಿ ಹೈಕಮಾಂಡ್ ಭಾಷೆ ಈ ಬಾರಿ ರೂಢಿಯ ದಬ್ಬಾಳಿಕೆಯ ವರಸೆಗಿಂತ ತುಸು ಭಿನ್ನವಾಗಿದೆ.
ಅದರಲ್ಲೂ ಈ ಬಾರಿ ಕರ್ನಾಟಕದಲ್ಲಿ ಕರವೇ ಸೇರಿದಂತೆ ವಿವಿಧ ಸಂಘಟನೆಗಳು ಎತ್ತಿದ ದನಿಯ ಬಿಸಿ ದೆಹಲಿಗೆ ತಟ್ಟಿದೆ. ಹಾಗೆ ನೋಡಿದರೆ, ಹಿಂದಿ ವಿರುದ್ಧದ ರಾಜ್ಯದ ಈ ದನಿ ಕೇವಲ ಭಾಷೆಯ ಹೇರಿಕೆಯ ವಿರುದ್ಧದ ದನಿ ಮಾತ್ರವಲ್ಲ. ಬಿಜೆಪಿ ತನ್ನ ಸರ್ಕಾರದ ಬಲದ ಮೇಲೆ ಹೇರುತ್ತಿರುವ ಹಿಂದಿಗೂ, ಉತ್ತರ ಭಾರತದಲ್ಲಿ ಹಿಂದಿ ಮಾತನಾಡುವ ಜನಸಾಮಾನ್ಯರ ನುಡಿಯಾದ ಹಿಂದಿಗೂ ಬಹಳಷ್ಟು ವ್ಯತ್ಯಾಸವಿದೆ. ಸರ್ಕಾರ ಹಿಂದಿ ದಿವಸ್, ರಾಷ್ಟ್ರಭಾಷೆ ಆಚರಣೆಯಂತಹ ಕಾರ್ಯಕ್ರಮಗಳು, ಬ್ಯಾಂಕ್, ರೈಲ್ವೆ, ದೂರವಾಣಿ ಇಲಾಖೆ, ಕಾರ್ಮಿಕ ಇಲಾಖೆ ಮುಂತಾದ ಕೇಂದ್ರ ಸರ್ಕಾರದ ಇಲಾಖೆಗಳ ಮೂಲಕ ಹೇರುತ್ತಿರುವ ಭಾಷಾ ನೀತಿಗಳ ಮೂಲಕ ಕನ್ನಡವೂ ಸೇರಿದಂತೆ ಭಾರತದ ಇತರೆ ಪ್ರಾದೇಶಿಕ ಭಾಷೆಗಳನ್ನು ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಹಾಗೆ ಹೇರುತ್ತಿರುವ ಹಿಂದಿಗೆ ಜನರ ನುಡಿಯ ಗುಣಕ್ಕಿಂತ, ಧರ್ಮಾಂಧತೆ, ಮತೀಯವಾದ, ಬಹುತ್ವದ ದ್ವೇಷ, ವೈವಿಧ್ಯತೆಯ ವಿರುದ್ಧದ ದರ್ಪದ ವರಸೆಗಳು ಬೆರೆತಿವೆ. ಹಿಂದುತ್ವವನ್ನು ಹಿಂದಿತ್ವದೊಂದಿಗೆ ಸಮೀಕರಿಸಿ, ವೈವಿಧ್ಯಮನ ಭಾಷೆ, ಸಂಸ್ಕೃತಿ, ಧರ್ಮ, ಆಚರಣೆಗಳ ಮೇಲೆ ಹೇರಲಾಗುತ್ತಿದೆ.
ಖ್ಯಾತ ಪತ್ರಕರ್ತ ಮತ್ತು ಸ್ವತಃ ಹಿಂದಿ ಭಾಷಿಗರಾದ ರವೀಶ್ ಕುಮಾರ್ ತಮ್ಮ ಟ್ವೀಟ್ ಮೂಲಕ ಇದನ್ನೇ ಹೇಳಿದ್ದಾರೆ. “ಏಕ ದೇಶ-ಏಕಭಾಷೆಯ ಹೆಸರಿನಲ್ಲಿ ಪ್ರಭುತ್ವ ಹೇರಬಯಸುವ ಹಿಂದಿ, ದ್ವೇಷ, ಭಯ ಮತ್ತು ಕ್ರೌರ್ಯದ ಹಿಂದಿಯೇ ಹೊರತು, ಅದು ಜನಸಾಮಾನ್ಯರು ಮಾತನಾಡುವ ಹಿಂದಿಯಲ್ಲ” ಎಂದಿದ್ದಾರೆ. ವಾಸ್ತವವಾಗಿ ಮತೀಯ ಮತ್ತು ಸಾಮಾಜಿಕ ಸೌಹಾರ್ದತೆ ಹಾಗೂ ಸಹಜೀವನದಲ್ಲಿ ನಂಬಿಕೆ ಇಟ್ಟಿರುವ ಯಾರೂ ಕೂಡ ಸರ್ಕಾರ ಹೇರುತ್ತಿರುವ ಇಂತಹ ದಬ್ಬಾಳಿಕೆಯ, ದರ್ಪದ ಹಿಂದಿಯನ್ನು ಒಪ್ಪುವುದಿಲ್ಲ. ಆ ಕಾರಣಕ್ಕೆ ಹಿಂದಿ ಹೇರಿಕೆಯ ವಿರುದ್ಧದ ತಮ್ಮ ಹೋರಾಟ, ಒಂದು ಭಾಷೆಯಾಗಿ ಹಿಂದಿಯ ವಿರುದ್ಧ ಅಲ್ಲ; ಹಿಂದಿಯನ್ನು ಒಂದು ಅಧಿಕಾರದ, ದಬ್ಬಾಳಿಕೆಯ, ರಾಜಕೀಯ ಅಜೆಂಡಾದ ಅಸ್ತ್ರವಾಗಿ ಬಳಸಿ ನಮ್ಮ ಮೇಲೆ ಹೇರುತ್ತಿರುವುದರ ವಿರುದ್ಧ ಮತ್ತು ಆ ಮೂಲಕ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಜೊತೆ, ಭಾರತೀಯ ಜೀವನಮೌಲ್ಯವಾದ ಸಹಜೀವನ ಮತ್ತು ಸೌಹಾರ್ದತೆ, ಸಹಿಷ್ಣುತೆಗಳನ್ನೂ ನಾಶ ಮಾಡುವ ಹುನ್ನಾರದ ವಿರುದ್ಧ ಎಂದು ಕನ್ನಡ ಹೋರಾಟಗಾರರೂ ಸ್ಪಷ್ಟಪಡಿಸಿದ್ದಾರೆ.
ಅಂದರೆ, ಹಿಂದಿಯನ್ನು ಭಾರತದ ಇತರೆ ಭಾಷೆಗಳಂತೆ ಒಂದು ಭಾಷೆಯಾಗಿ ನೋಡದೆ, ಪರಸ್ಪರ ಗೌರವ ಮತ್ತು ಸಹಮತದೊಂದಿಗೆ ಭಾಷೆಗಳ ವಿಕಾಸಕ್ಕೆ ಅನುವುಮಾಡಿಕೊಡದೆ, ಭಾರತೀಯ ಜನತಾ ಪಕ್ಷ ತನ್ನ ರಾಜಕೀಯ ಅಜೆಂಡಾದ ಭಾಗವಾಗಿ ಹಿಂದಿಯನ್ನು ಬಳಸುತ್ತಿರುವುದೇ ಸಮಸ್ಯೆಯ ಮೂಲ. ಹಾಗಾಗಿ, ಹಿಂದಿಯ ವಿರುದ್ಧದ ಈ ಪ್ರತಿರೋಧ ಮತ್ತು ಪ್ರತಿಭಟನೆ, ಕೇವಲ ಭಾಷೆಯ ವಿರುದ್ಧದ ಆಕ್ರೋಶವಲ್ಲ; ಬದಲಾಗಿ ದೇಶದ ವೈವಿಧ್ಯತೆಯನ್ನೇ ನಾಶ ಮಾಡಿ, ಹಿಂದುತ್ವದ ಮೇಲೆ ರಾಜಕೀಯ ಲಾಭ ಪಡೆಯುವ, ಸರ್ವಾಧಿಕಾರಿ ಆಡಳಿತ ಹೇರುವ ಬಿಜೆಪಿಯ ಹುನ್ನಾರಗಳ ವಿರುದ್ಧದ ಜನಾಕ್ರೋಶ ಎಂಬುದು ಗಮನಾರ್ಹ.
ಬಹುಶಃ ಇಂತಹ ವಾಸ್ತವತೆ ಬಿಜೆಪಿಯ ನಾಯಕರಿಗೆ ಅರಿವಾಗದೇ ಹೋದರೆ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಹಿಂದಿಯೇತರ ದ್ರಾವಿಡ ಭಾಷಾ ವಲಯದಿಂದ ಮಾತ್ರವಲ್ಲದೆ, ಸ್ವತಃ ಹಿಂದಿ ನೆಲ ಎನ್ನಲಾಗುತ್ತಿರುವ ಉತ್ತರಭಾರತದಲ್ಲೂ ದೊಡ್ಡ ಮಟ್ಟ ದ ವಿರೋಧ ಭುಗಿಲೇಳಲಿದೆ. ಅಂತಿಮವಾಗಿ ಅದು ಒಂದು ಭಾಷೆಯಾಗಿ ಹಿಂದಿಯ ಹೆಗ್ಗಳಿಕೆಗೇ ಕಳಂಕ ತರಲಿದೆ.