ನಗರದಾದ್ಯಂತ ನಾಯಿಕೊಡೆಗಳಂತೆ ಹರಡಿರುವ ಅಕ್ರಮ ಫ್ಲೆಕ್ಸ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರೀಕರು ಒತ್ತಡ ಹೇರಿದ ಬೆನ್ನಲ್ಲೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ವಾರಾಂತ್ಯದೊಳಗೆ ಪೊಲೀಸ್ ದೂರು ನೀಡುವುದಾಗಿ ಭರವಸೆ ನೀಡಿದೆ.
ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಅಪಾಯವನ್ನುಂಟುಮಾಡುವ ದೊಡ್ಡ ಫ್ಲೆಕ್ಸ್ ಬೋರ್ಡ್ಗಳನ್ನು ರಾಜಕೀಯ ಮುಖಂಡರು ಹಾಕಲು ಪ್ರಾರಂಭಿಸಿದ ನಂತರ ಈ ಭರವಸೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ನಾವು ಈ ಹಿಂದೆ ಹಲವಾರು ಬಾರಿ ಫ್ಲೆಕ್ಸ್ಗಳನ್ನು ಅಳವಡಿಸುವ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದೇವೆ. ಅವರಲ್ಲಿ ಕೆಲವರು ನಮ್ಮನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ದಂಡದ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಈ ವಾರ ಬಿಬಿಎಂಪಿ ಪೊಲೀಸರಿಗೆ ದೂರು ನೀಡಲಿದೆ ಎಂದಿದ್ದಾರೆ.
ಹೈಕೋರ್ಟ್ ಆದೇಶದ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಜಾಹೀರಾತು ಫಲಕ ಅಥವಾ ಫ್ಲೆಕ್ಸ್ಗಳನ್ನು ಪ್ರದರ್ಶಿಸುವಂತಿಲ್ಲ. ವಿಪರ್ಯಾಸವೆಂದರೆ ನಾಯಿಕೊಡೆಗಳಂತೆ ತಲೆ ಎತ್ತಿರುವ ಫ್ಲೆಕ್ಸ್ ಗಳು ಚುನಾಯಿತ ಪ್ರತಿನಿಧಿಗಳದ್ದೇ ಆಗಿದೆ. ವಿಜಯನಗರ, ಗೋವಿಂದರಾಜನಗರ ಮುಂತಾದ ಕಡೆ 1,000ಕ್ಕೂ ಅಧಿಕ ಫ್ಲೆಕ್ಸ್ಗಳಿವೆ. ಕೆಲವರು ಫುಟ್ಪಾತ್ಗಳ ಮೇಲೆಯೇ ಬ್ಯಾನರ್ ಕಟ್ಟು ಸಂಚಾರ ಬಂದ್ ಮಾಡಲಾಗಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ ರಸ್ತೆಯಲ್ಲಿ ಅಕ್ರಮ ಫ್ಲೆಕ್ಸ್ಗಳನ್ನು ಹಾಕಿರುವ ಬಗ್ಗೆಯೂ ದೂರುಗಳಿವೆ. ಫ್ಲೆಕ್ಸ್ಗಳನ್ನು ತಾವೇ ತೆಗೆದಿರುವುದು ಬಿಟ್ಟರೆ ಈವರೆಗೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗಮನಿಸಬೇಕಾದ ವಿಷಯ.
ವಾರ್ಡ್ಗಳಿಗೆ ಹಣ
ಸುದ್ದಿಗಾರರೊಂದಿಗೆ ಮಾತನಾಡಿದ ಗಿರಿನಾಥ್, ಬಿಬಿಎಂಪಿ ಹೊಸದಾಗಿ ರಚನೆಯಾಗಿರುವ 45 ವಾರ್ಡ್ಗಳಲ್ಲಿ ಆಡಳಿತಾತ್ಮಕ ಕೆಲಸ ಪ್ರಾರಂಭಿಸಲು ಸಭೆ ನಡೆಸುತ್ತಿದೆ. “ನಾವು ಈಗಾಗಲೇ ವಾರ್ಡ್ಗಳಿಗೆ ಹಂಚಿಕೆಯಾಗಿರುವ ಹಣವನ್ನು ಮರುಹಂಚಿಕೆ ಮಾಡುತ್ತೇವೆ. ಪ್ರತಿ ವಾರ್ಡ್ಗೆ 6 ರಿಂದ 4 ಕೋಟಿ ರೂ. ಮರುಹಂಚಿಕೆ ಮಾಡಲಾಗುವುದು,” ಎಂದು ಹೇಳಿದರು.
2,000 ಚದರ ಅಡಿಗಿಂತ ಕಡಿಮೆಯಿಲ್ಲದ ಹೊಸ ವಾರ್ಡ್ ಕಚೇರಿಯನ್ನು ನಿರ್ಮಿಸುವವರೆಗೆ 800 ಚದರ ಅಡಿ ವಿಸ್ತೀರ್ಣದಲ್ಲಿ ಬಾಡಿಗೆ ಕಟ್ಟಡವನ್ನು ಗುರುತಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಸಿಬ್ಬಂದಿ ಒದಗಿಸುವಂತೆ ಬಿಬಿಎಂಪಿ ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದು,. “ನಮಗೆ ಕನಿಷ್ಠ 45 ಸಹಾಯಕ ಎಂಜಿನಿಯರ್ಗಳು ಮತ್ತು 72 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಅಗತ್ಯವಿದೆ.” ಎಂದು ಕೇಳಿದೆ.