ಬಿಬಿಎಂಪಿ ಬೆಂಗಳೂರಿನಲ್ಲಿ ಹೊಸ ನಾಲ್ಕು ಫ್ಲೈ ಓವರ್ ಗಳನ್ನು ನಿರ್ಮಿಸಲು ಹೊರಟಿತ್ತು. ಇದೇ ಸಮಯಕ್ಕೆ ನಮ್ಮ ಮೆಟ್ರೋ ಕೂಡ ಮೂರನೇ ಹಂತದ ಕಾಮಗಾರಿಗೆ ಇಳಿದಿತ್ತು. ಆದರೀಗ ನಮ್ಮ ಮೆಟ್ರೋದ ಪಿಲ್ಲರ್ ಹಾದು ಹೋಗಲಿರುವ ಜಾಗದಲ್ಲೇ ಪಾಲಿಕೆ ಫ್ಲೈ ಓವರ್ ಆಗುತ್ತಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಇದು ಬಿಬಿಎಂಪಿ ಹಾಗೂ ನಮ್ಮ ಮೆಟ್ರೋದ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ.
ನಗರದ ಅಭಿವೃದ್ಧಿ ಹೆಸರಿನಲ್ಲಿ BBMP & BMRCL ನಡುವೆ ಶೀತಲ ಸಮರ
ಸಿಎಂ ಬೊಮ್ಮಾಯಿ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಹೊಸ ನಾಲ್ಕು ಫ್ಲೈ ಓವರ್ ನಿರ್ಮಿಸಲು ಬಿಬಿಎಂಪಿಗೆ ಬರೋಬ್ಬರಿ 404 ಕೋಟಿ ರೂಪಾಯಿ ಅನುದಾನ ಕೊಟ್ಟಿದೆ. ಆದರೆ ಕೈಯಲ್ಲಿ ಕಾಸಿದ್ರೂ ಕಾಮಾಗರಿ ಮಾತ್ರ ಪಾಲಿಕೆ ಶುರು ಮಾಡಿಲ್ಲ. ಅತ್ತ ಎರಡನೇ ಹಂತದ ಕಾಮಗಾರಿ ಮುಗಿದು ಅತ್ತ ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಕೈ ಹಾಕಿರುವ BMRCLಗೆ ಈಗ ಬಿಬಿಎಂಪಿಯಿಂದ ತಲೆನೋವು ಶುರುವಾಗಿದೆ. ಹೌದು, ಫ್ಲೈ ಓವರ್ ನಿರ್ಮಿಸುವ ವಿಚಾರವಾಗಿ ಬಿಬಿಎಂಪಿ ಹಾಗೂ ನಮ್ಮ ಮೆಟ್ರೋ ನಡುವಿನ ಶೀತಲ ಸಮರ ಮುಂದುವರೆದಿದೆ. ನಾಲ್ಕು ಹೊಸ ಫ್ಲೈ ಓವರ್ ನಿರ್ಮಿಸಲು ಹೊರಟಿದ್ದ ಪಾಲಿಕೆಗೆ BMRCL ಕಾಮಾಗರಿಯಿಂದ ಅಡ್ಡಿ ಉಂಟಾಗಿದೆ. ಹೀಗಾಗಿ ನೀ ಕೊಡೆ ನಾ ಬಿಡೆ ಎಂಬಂತಾಗಿದೆ ನಮ್ಮ ಮೆಟ್ರೋದ ಪರಿಸ್ಥಿತಿ.
ಫ್ಲೈ ಓವರ್ ನಿರ್ಮಾಣ ವಿಚಾರವಾಗಿ ಮೂಡದ ಒಮ್ಮತದ ಅಭಿಪ್ರಾಯ
ಬಿಬಿಎಂಪಿ ನಿರ್ಮಿಸಲು ಹೊರಟಿದ್ದ ಎರಡು ಫ್ಲೈ ಓವರ್ ಜಾಗದಲ್ಲೇ ಮೆಟ್ರೋ ಪಿಲ್ಲರ್ ಕೂಡ ಹಾದು ಹೋಗಲಿದೆ. ನಮ್ಮ ಮೆಟ್ರೋದ ಮೂರನೇ ಫೇಸ್ ಲೈನ್ ನ ಪಿಲ್ಲರ್ ಔಟರ್ ರಿಂಗ್ ರಸ್ತೆಯ ಭಾಗದಲ್ಲೇ ಇರಲಿದೆ. ಇದೇ ಔಟರ್ ರಿಂಗ್ ರಸ್ತೆಯ ಕಾಮಾಕ್ಯ ಜಂಕ್ಷನ್ ನಲ್ಲಿ ಹಾಗೂ ಸಾರಕ್ಕಿ ಜಂಕ್ಷನ್ ನಲ್ಲಿ ಬಿಬಿಎಂಪಿ ಈಗ ಮೇಲ್ಸೇತುವೆ ನಿರ್ಮಿಸಲು ಹೊರಟಿದೆ. ಹೀಗಾಗಿ ಸಮನ್ವಯ ಸಾಧಿಸಿ ಡಬಲ್ ಡಕ್ಕರ್ ಮೇಲ್ಸೇತುವೆಗೂ ಚಿಂತಿಸಿದ್ದ ನಮ್ಮ ಮೆಟ್ರೋಗೆ ಬಿಬಿಎಂಪಿಯಿಂದ ಸರಿಯಾದ ಸಾಥ್ ಸಿಗ್ತಿಲ್ಲ. ಈ ಬಗ್ಗೆ ಹಲವು ಭಾರಿ ಸಭೆಯನ್ನು ಮಾಡಿದರೂ ಪಾಲಿಕೆಯಿಂದ ನಮ್ಮ ಮೆಟ್ರೋ ಪ್ರಸ್ತಾಪಕ್ಕೆ ಸಮನ್ವಯ ಸಭೆಯಲ್ಲಿ ಒಮ್ಮತ ಸಿಕ್ಕಿರಲಿಲ್ಲ. ಹೀಗಾಗಿ ನಮ್ಮ ಮೆಟ್ರೋ ಬಿಬಿಎಂಪಿಗೆ ಸೆಡ್ಡು ಹೊಡೆದು ಕಂದಾಯ ಇಲಾಖೆಯ ಕದ ತಟ್ಟಿದೆ.
ನಮ್ಮ ಮೆಟ್ರೋ ಪಿಲ್ಲರ್ ನಿರ್ಮಾಣ ಇನ್ನೂ ಮೂರ್ನಾಲ್ಕು ವರ್ಷಗಳು ಬೇಕು. ಅದರೊಳಗೆ ಫ್ಲೈ ಓವರ್ ನಿರ್ಮಾಣ ಮಾಡುತ್ತೇವೆ ಅಂತ ಪಾಲಿಕೆ ಹೇಳುತ್ತಿದೆ. ಆದರೆ ನಮ್ಮ ಮೆಟ್ರೋದ ರೂಪುರೇಷದ ಪ್ರಕಾರ ಮೇಲ್ಸೇತುವೆ ನಿರ್ಮಿಸಿಲ್ಲಾ ಎಂದಾದರೆ BMRCLಗೆ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ತೊಡಕಾಗಲಿದೆ. ಹೀಗಾಗಿ ಬಗ್ಗದ ಬಿಬಿಎಂಪಿ ವಿರುದ್ಧ ಒಳಗೊಳಗಿಂದಲೇ BMRCL ಕೊತಕೊತ ಕುದಿಯುತ್ತಿದೆ. ಹೀಗಾಗಿ ಕಂದಾಯ ಇಲಾಖೆಗೆ ಪತ್ರ ಬರೆದು ಮಧ್ಯ ಪ್ರವೇಶಿಸುವಂತೆ ಕೇಳಿರುವ ನಮ್ಮ ಮೆಟ್ರೋ ಕೇಳಿಕೊಂಡಿದೆ. ಈ ಬಗ್ಗೆ ಮಾತನಾಡಿದ ನಮ್ಮ ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ನಾವು ಕಂದಾಯ ಇಲಾಖೆಯ ಎಸಿಎಸ್ ಗೆ ಪತ್ರ ಬರೆದು ಅನುಮತಿ ಕೇಳಿದ್ದೇವೆ. ನಮ್ಮ ಜೊತೆ ಸಭೆ ಮಾಡುತ್ತೇವೆ ಎಂದು ಕಂದಾಯ ಇಲಾಖೆಯಿಂದ ಉತ್ತರ ಬಂದಿದೆ ಎಂದು ಹೇಳಿದ್ದಾರೆ.
ಹಲವು ಸಭೆಗಳು ನಡೆಸಿಯೂ ಬಗ್ಗದ ಬಿಬಿಎಂಪಿ ವಿರುದ್ಧ BMRCL ಒಳಗೊಳಗಿಂದಲೇ ಕುದಿಯುತ್ತಿದೆ. ಸದ್ಯ ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ನಾಲ್ಕು ಸೇತುವೆ ನಿರ್ಮಾಣಕ್ಕೆ 404 ಕೋಟಿಗೆ ಅನುದಾನ ಹಾಗೂ ಕೇಂದ್ರ ಸರ್ಕಾರದಿಂದ ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಮೊದಲ ಹಂತದ ಮೂರು ಸಾವಿರ ಕೋಟಿ ಒಪ್ಪಿಗೆಯಾಗಿದೆ. ರಾಜ್ಯ ಹಾಗೂ ಕೇಂದ್ರದಿಂದ ಹಣ ಸಿಕ್ಕರೂ ಬಿಬಿಎಂಪಿ ಹಾಗೂ ನಮ್ಮ ಮೆಟ್ರೋ ಕಿತ್ತಾಟದಿಂದ ಕಾಮಾಗರಿ ವಿಳಂಬ ಆಗುತ್ತಿದೆ. ಉಭಯ ಇಲಾಖೆಗಳೂ ಕೂಡ ಈ ಕೋಳಿಜಗಳ ಬಿಟ್ಟು ಒಮ್ಮತದ ನಿರ್ಧಾರಕ್ಕೆ ಬಂದು ಆದಷ್ಟು ಬೇಗ ಜನರಿಗೆ ಸಹಕಾರ ಆಗುವಂತೆ ಅಭಿವೃದ್ಧಿ ಕೆಲಸ ಮಾಡಬೇಕಿದೆ.