ಪಂಜಾಬ್ ಬೆನ್ನಲ್ಲೀಗ ರಾಜಸ್ಥಾನ ಕಾಂಗ್ರೆಸ್ನಲ್ಲಿಯೂ ಬಂಡಾಯ ಭುಗಿಲೆದ್ದಿದೆ. ಹೀಗಾಗಿ ನ್ಯಾಷನಲ್ ಕಾಂಗ್ರೆಸ್ ಹೈಕಮಾಂಡ್ ಈಗ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಣ ಭಿನ್ನಾಭಿಪ್ರಾಯನ್ನು ಬಗೆಹರಿಸಲು ಮುಂದಾಗಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೈಪುರಕ್ಕೆ ಭೇಟಿ ನೀಡಿ ಸಿಎಂ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ರಾಜಸ್ಥಾನ ಕಾಂಗ್ರೆಸ್ ಪುನರ್ ರಚನೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಕೆಲವು ಕಾಂಗ್ರೆಸ್ ನಾಯಕರ ಧೀರ್ಘ ಕಾಲದ ಬೇಡಿಕೆಯಾಗಿದ್ದರಿಂದ ಆದ್ಯತೆ ಮೇರೆಗೆ ಪೈಲಟ್ ಈ ಸಂಬಂಧ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಈ ಬೆನ್ನಲ್ಲೀಗ ಹೀಗೊಂದು ನಿರ್ಧಾರ ಹೈಕಮಾಂಡ್ ತೆಗೆದುಕೊಂಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸಕ್ಕೆ ಭೇಟಿ ನೀಡಿ ಸಂಪುಟ ಪುನರ್ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ. ರಾಜಸ್ಥಾನದ ರಾಜ್ಯಸಭೆ ಸದಸ್ಯರಾಗಿರುವ ವೇಣುಗೋಪಾಲ್ ಮೂಲಕವೇ ಹೈಕಮಾಂಡ್ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದೆ.
ಪಂಜಾಬ್ ನಂತರ ರಾಜಸ್ಥಾನದತ್ತ ಗಮನಹರಿಸಿರುವ ಹೈಕಮಾಂಡ್ ಸಚಿನ್ ಪೈಲಟ್ ಗುಂಪಿನ ಧೀರ್ಘ ಕಾಲದ ಬೇಡಿಕೆಯಾದ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದೆ. ಈ ಸಂಬಂಧ ಹಲವು ಬಾರಿ ಬಂಡಾಯ ಎದ್ದಿರುವ ಸಚಿನ್ ಪೈಲಟ್ ನೇತೃತ್ವದ 18 ಶಾಸಕರನ್ನು ಸಮಧಾನಪಡಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಂದಿನ ವಾರ ಕಾಂಗ್ರೆಸ್ ಆಡಳಿತದ ರಾಜಸ್ಥಾನ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಈ ವೇಳೆ ಸಚಿನ್ ಪೈಲಟ್ ಗುಂಪಿನ ಸದಸ್ಯರಿಗೆ ರಾಜ್ಯ ಕ್ಯಾಬಿನೆಟ್, ಪಕ್ಷ ಹಾಗೂ ರಾಜ್ಯ ಮಂಡಳಿಯಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆಯೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪೈಲಟ್ ಹೇಳಿದ್ದರು. ಈ ಬೆನ್ನಲ್ಲೇ ಹೀಗೊಂದು ಪ್ರಮುಕ ಬೆಳವಣಿಗೆ ನಡೆದಿದೆ.
ಇದರ ನಡುವೆಯೇ ಸಂಪುಟ ಪುನರ್ರಚನೆ ಬಗ್ಗೆ ರಾಜಸ್ಥಾನದ ಕಾಂಗ್ರೆಸ್ ನಾಯಕರಲ್ಲಿ ಯಾವುದೇ ರೀತಿಯ ಭಿನ್ನಭಿಪ್ರಾಯಗಳಿಲ್ಲ. ಈ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಕೂಡ ಹೇಳಿದ್ದಾರೆ.
ಕಾಂಗ್ರೆಸ್ನ ಸಚಿವರು, ಶಾಸಕರು ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಹೀಗೆ ಹೇಳಿಕೆ ನೀಡಿದ್ದಾರೆ ಮಾಕನ್. ಇದು ಸಂಪುಟ ಪುನರ್ರಚನೆ ಮಾಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಸಂಪುಟ ಪುನರ್ರಚನೆ ಬಗ್ಗೆ ನಾಯಕರಲ್ಲಿ ಯಾವುದೇ ಭಿನ್ನಭಿಪ್ರಾಯಗಳಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡಿಗೆ ಬಿಟ್ಟಿದ್ದೇವೆ. ಸಂಪುಟ ಪುನರ್ರಚನೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ. ಇದೇ 28ಕ್ಕೆ ಸಂಪುಟ ಪುನರ್ರಚನೆ ಆಗಬಹುದು ಎಂದು ಮಾಕನ್ ತಿಳಿಸಿದ್ದಾರೆ.