ಇಂದು ಕರ್ನಾಟಕದಲ್ಲಿ ಗುಂಡ್ಲುಪೇಟೆಯಿಂದ ಪಾದಯಾತ್ರೆ ಆರಂಭವಾಗುತ್ತಿದೆ. ರಾಜ್ಯದ ಸುಮಾರು 8 ಜಿಲ್ಲೆಗಳಲ್ಲಿ ಸುಮಾರು 510 ಕಿ.ಮೀ ಈ ಪಾದಯಾತ್ರೆ ಸಾಗಲಿದೆ. ಇಡೀ ದೇಶದಲ್ಲಿ 3570 ಕಿ.ಮೀ ಪಾದಯಾತ್ರೆ ನಡೆಯಲಿದೆ. ಬಹುಶಃ ಸ್ವಾತಂತ್ರ್ಯ ನಂತರ ಒಂದೇ ಬಾರಿ ಇಷ್ಟೊಂದು ದೂರ ಪಾದಯಾತ್ರೆಯನ್ನು ಬೇರೆ ಯಾವ ಪಕ್ಷಗಳ ಯಾವ ನಾಯಕರು ಮಾಡಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಧರ್ಮ, ಕೋಮುವಾದಿ, ದ್ವೇಶದ ರಾಜಕಾರಣ ಆರಂಭವಾಗಿದೆ. ಇಂದು ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ ಅಲ್ಲ. ಬಿಜೆಪಿ ಅವರು ಒಬ್ಬ ನಾಯಕ, ಒಂದು ಸಿದ್ಧಾಂತ ಹಾಗೂ ಒಂದು ಚಿಹ್ನೆಯಲ್ಲಿ ನಂಬಿಕೆ ಇಟ್ಟುಕೊಂಡವರು ಎಂದು ಕಿಡಿಕಾರಿದ್ದಾರೆ.
ಅಂಬೇಡ್ಕರರು ಸಂವಿಧಾನ ರಚನೆ ಮಾಡಿದ ದಿನದಿಂದ ಇಂದಿನವರೆಗೆ ಅದನ್ನು ವಿರೋಧ ಮಾಡುತ್ತಾ ಬಂದಿದ್ದಾರೆ. ಬಿಜೆಪಿಯ ಅನೇಕ ಜನ ಮಂತ್ರಿಗಳು, ಸಂಸದರು, ಶಾಸಕರು ಈ ಸಂವಿಧಾನ ಬೇಡ ಬೇರೆ ಸಂವಿಧಾನವನ್ನು ನಾವು ತರುತ್ತೇವೆ ಎಂದು ಹೇಳಿದ್ದಾರೆ. ಇದು ಬಿಜೆಪಿಯ ವರಿಷ್ಠರಿಗೆ ಗೊತ್ತಿಲ್ಲದೆ ಆಡಿದ ಮಾತುಗಳಲ್ಲ. ಅಂದರೆ ಇಡೀ ಬಿಜೆಪಿಗೆ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನವನ್ನು ಪುನರ್ ಬರವಣಿಗೆ ಮಾಡುವ ಪ್ರಯತ್ನ ಮಾಡಿದ್ದರು, ಆದರೆ ಆಗಿನ ರಾಷ್ಟ್ರಪತಿಗಳಾದ ನಾರಾಯಣ್ ಅವರು ಇಲ್ಲದೆ ಹೋಗಿದ್ದರೆ ಬದಲಾವಣೆ ಮಾಡುತ್ತಿದ್ದರೇನೋ ಗೊತ್ತಿಲ್ಲ. ಈ ದೇಶದಲ್ಲಿ ಶಾಂತಿ ಸಾಮರಸ್ಯ ಇರಬಾರದು, ಧರ್ಮ, ಜಾತಿಗಳ ಆಧಾರದ ಮೇಲೆ ಜನರನ್ನು ವಿಭಾಗ ಮಾಡಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಬೇಕು ಎಂಬುದು ಬಿಜೆಪಿ ಉದ್ದೇಶ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಇಂಥಾ ಘಟನೆಗಳು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವುದು ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಮ್ಮೆಲ್ಲರ ಜವಾಬ್ದಾರಿ. ಇದೇ ಕಾರಣಕ್ಕಾಗಿ ಬರೀ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಬರಹಗಾರರು, ಚಿಂತಕರು, ಸಂಘಟನೆಗಳು, ರೈತ ಸಂಘಗಳು, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ಸಿಪಿಐ, ಸಿಪಿಐಎಂ ಪಕ್ಷಗಳು ಹೀಗೆ ಅನೇಕ ಸಂಘ ಸಂಸ್ಥೆಗಳು ನಮ್ಮೊಂದಿಗೆ ಪಾದಯಾತ್ರೆಯಲ್ಲಿ ಜೊತೆಗೂಡಿ ದೇಶ ಉಳಿಸಲು ಟೊಂಕ ಕಟ್ಟಿ ನಿಂತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದ್ದಾರೆ.
ಇಂದು ದೇಶದಲ್ಲಿ ನಿರುದ್ಯೋಗ, ಮಹಿಳೆಯರು, ಮಕ್ಕಳು ರೈತರ ಸಮಸ್ಯೆಗಳು ಇವೆ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇಲ್ಲಿನ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಜನಜನಿತವಾಗಿದೆ. ಈ ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ ಉಳಿಯಬೇಕಾದರೆ, ಕೋಮುವಾದಿ, ದೇಶ ಒಡೆಯುವ ಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇಂಥಾ ಒಂದು ಹೋರಾಟಕ್ಕೆ ರಾಹುಲ್ ಗಾಂಧಿ ಅವರು ನಾಯಕತ್ವವನ್ನು ತೆಗೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ದೇಶದ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಯಾತ್ರೆ ಕರ್ನಾಟಕದಲ್ಲಿ ಯಶಸ್ವಿಯಾಗಬೇಕು. ನಮ್ಮ ಈ ಯಾತ್ರೆ ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಕರ್ನಾಟಕದಲ್ಲಿ ಪೋಸ್ಟರ್ ಗಳಿಗೆ ಮಸಿ ಬಳಿಯುವ, ಹರಿದು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ನೀವು ಇದೇ ರೀತಿ ಮುಂದುವರೆದೆ ಬಿಜೆಪಿಯ ಯಾವುದೇ ನಾಯಕರು ಹೊರಗಡೆ ತಿರುಗಾಡಬಾರದು, ಅಂಥಾ ಪರಿಸ್ಥಿತಿಯನ್ನು ನಾವು ನಿರ್ಮಾಣ ಮಾಡಲು ಶಕ್ತರಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಇಂಥಾ ಘಟನೆಗಳು ನಡೆಯದಂತೆ ತಡೆಯಿರಿ ಎಂದು ಪೊಲೀಸರಿಗೆ ನಾನು ಹೇಳಿದ್ದೇನೆ, ಆದರೂ ಇವು ನಿಂತಿಲ್ಲ. ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆದು ಸರ್ಕಾರ ಬದಲಾಗಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ, ಬಿಜೆಪಿಯವರು ಹೇಳಿದಂತೆ ಕುಣಿಯುತ್ತಾ, ಕಾನೂನಿನ ರಕ್ಷಣೆಯನ್ನು ಮಾಡದ ಪೊಲೀಸರಿಗೆ ಆಗ ನಾವು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬುದನ್ನು ಹೇಳಲು ಬಯಸುತ್ತೇನೆ.
ಇಂದಿನಿಂದ ರಾಹುಲ್ ಗಾಂಧಿ ಅವರು ಪಾದಯಾತ್ರೆಯನ್ನು ಗುಂಡ್ಲುಪೇಟೆಯಿಂದ ಆರಂಭ ಮಾಡುತ್ತಿದ್ದಾರೆ. ಅವರಿಗೆ ನನ್ನ ಶುಭ ಹಾರೈಕೆಗಳು. ರಾಜ್ಯದಲ್ಲಿ ಪಾದಯಾತ್ರೆ ಮುಗಿಯುವ ವರೆಗೆ ರಾಹುಲ್ ಗಾಂಧಿ ಅವರಿಗೆ ತಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದ್ದಾರೆ.