ಪಿಎಸ್ಐ ನೇಮಕಾತಿ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಗರಣದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದಾಗ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಎಲ್ಲರೂ ನಮ್ಮ ಮೈಮೇಲೆ ಬಂದರು. ಈ ನೇಮಕಾತಿಯಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ, ಯಾವ ಅವ್ಯವಹಾರವೂ ನಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಅವರು ಬಹಳಾ ವೀರಾವೇಶದಿಂದ ಉತ್ತರ ನೀಡಿದ್ದರು. ಈಗ ಅದೇ ಹಗರಣದಲ್ಲಿ ನೇಮಕಾತಿಯ ಉಸ್ತುವಾರಿ ವಹಿಸಿದ್ದ, ಪೊಲೀಸ್ ಇಲಾಖೆಯ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನವಾಗಿ, ಅಮಾನತ್ತಾಗಿ, 13ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಇದಕ್ಕೆ ಗೃಹ ಸಚಿವರು ಏನೆಂದು ಉತ್ತರಿಸುತ್ತಾರೆ? ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿ ತಮ್ಮ ಇಲಾಖೆ ಮೇಲೆ ಬಂದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ರು, ಈಗ ಎಡಿಜಿಪಿ ಒಬ್ಬರನ್ನು ಬಂಧಿಸಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಲು ಹೊರಟಿದ್ದಾರೆ ಎಂದು ಮಾಜಿ ಸಿಎಂ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ, ಕರ್ನಾಟಕದ ಆರೂವರೆ ಕೋಟಿ ಜನರಿಗೆ ವಿಧಾನಸಭೆ ಮೂಲಕ ಸುಳ್ಳು ಹೇಳಿದವರು ಮಂತ್ರಿಯಾಗಿ ಮುಂದುವರೆಯಲು ಲಾಯಕ್ಕಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ನಾನು ಅನೇಕ ಬಾರಿ ಇವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡುವಂತೆ ಹೇಳಿದ್ದೆ. ಇವರು ಇಂಥಾ ಅನೇಕ ಘಟನೆಗಳಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಉದಾಹರಣೆಗೆ ಶಿವಮೊಗ್ಗದಲ್ಲಿ ನಡೆದ ಗಲಭೆ, ಮೈಸೂರಿನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ, ಹೀಗೆ ಹಲವು ಇವೆ. ಮುಖ್ಯಮಂತ್ರಿಗಳು ಇಂಥಾ ಒಬ್ಬ ಸಚಿವರನ್ನು ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡು ಅವರ ಮೂಲಕ ಬೇಜವಾಬ್ದಾರಿ, ಅಸಂಬದ್ಧ ಹಾಗೂ ಸುಳ್ಳು ಹೇಳಿಕೆಯನ್ನು ಕೊಡಿಸುತ್ತಿದ್ದಾರೆ. ಸರ್ಕಾರದ ಒಟ್ಟು ಉದ್ದೇಶ ಇಡೀ ಪ್ರಕರಣವನ್ನು ಮುಚ್ಚಿಹಾಕುವುದಾಗಿತ್ತು.
ನಾವು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಬಾರಿ ತನಿಖೆಗೆ ಒತ್ತಾಯ ಮಾಡಿದ್ದೇವೆ. ನಾವು ಮಾರ್ಚ್ ತಿಂಗಳಲ್ಲಿ ತನಿಖೆಗೆ ಒತ್ತಾಯ ಮಾಡಿದ್ದರೆ, ಸರ್ಕಾರ ಏಪ್ರಿಲ್ ನಲ್ಲಿ ಸಿಐಡಿ ತನಿಖೆ ಆರಂಭ ಮಾಡಿಸಿತು. ಸಿಐಡಿ ಇಂದ ನ್ಯಾಯ ಸಿಗಲ್ಲ, ಇದರಲ್ಲಿ ಮಂತ್ರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳ ಪಾತ್ರ ಇರುವುದರಿಂದ ಸಿಐಡಿ ಅವರನ್ನೆಲ್ಲ ವಿಚಾರಣೆ ಮಾಡಿ ಬಂಧಿಸುವುದು ಕಷ್ಟದ ಕೆಲಸ ಹಾಗಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಹಲವು ಬಾರಿ ಒತ್ತಾಯ ಮಾಡಿದ್ದೆ. ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು 2022 ಮೇ 26 ರಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೆ.
ಈಗ ಅಶ್ವಥ್ ನಾರಾಯಣ್ ಅವರ ಮೇಲೂ ಆರೋಪ ಇದೆ. ಅವರ ಕಡೆಯ 5 ಜನ ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಅಶ್ವಥ್ ನಾರಾಯಣ್ ಅವರ ಸಂಬಂಧಿಕರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಸಿಐಡಿಯವರು ಅಶ್ವಥ್ ನಾರಾಯಣ ಅವರ ಮೇಲೆ ಕ್ರಮ ತೆಗೆದುಕೊಳ್ತಾರಾ? 300 ಜನರ ಓಎಮ್ಆರ್ ಶೀಟ್ ಗಳನ್ನು ತಿದ್ದಲಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಒಬ್ಬ ಅಭ್ಯರ್ಥಿಗೆ 30 ಲಕ್ಷದಿಂದ 1 ಕೋಟಿ ವರೆಗೂ ವಸೂಲಿ ಮಾಡಿದ್ದಾರೆ. ಈ ಹಣ ಯಾರ್ಯಾರ ಜೇಬಿಗೆ ಹೋಗಿದೆ? ಯಾವ ಮಂತ್ರಿಗೆ ಹೋಗಿದೆ? ಮುಖ್ಯಮಂತ್ರಿಗೆ ಹೋಗಿದೆಯಾ ಇಲ್ಲವಾ? ಇವೆಲ್ಲ ಗೊತ್ತಾಗಬೇಕಲ್ವಾ? ಇವರನ್ನೆಲ್ಲ ರಕ್ಷಣೆ ಮಾಡುತ್ತಿರುವವರು ಈ ರಾಜ್ಯದ ಮುಖ್ಯಮಂತ್ರಿಗಳೆ.
ಮಂಜುನಾಥ್ ಅವರ ಪ್ರಕರಣದಲ್ಲಿ ಡಿಸಿ ಜೈಲಿಗೆ ಹೋಗಿದ್ದಾರಲ್ಲ, ಆ ಪ್ರಕರಣದಲ್ಲಿ ನ್ಯಾಯಾಧೀಶರನ್ನೇ ಹೆದರಿಸುವ ಪ್ರಯತ್ನ ನಡೆದಿದೆ. ಇಲ್ಲಿ ನ್ಯಾಯಾಧೀಶರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಭ್ರಷ್ಟರಿಂದ ಹಣ ಪಡೆದು ಅವರ ರಕ್ಷಣೆಗೆ ನಿಂತಿರುವುದೇ ಈ ಸ್ಥಿತಿಗೆ ಕಾರಣ. ಒಂದು ವೇಳೆ ನ್ಯಾಯಾಧೀಶರು ಹೆದರಿದ್ರೆ ಪ್ರಕರಣದಲ್ಲಿ ನ್ಯಾಯ ಸಿಗುತ್ತಿರಲಿಲ್ಲ. ಎಸಿಬಿ (ಆ್ಯಂಟಿ ಕರಪ್ಷನ್ ಬ್ಯೂರೋ) ಅನ್ನು ಕಲೆಕ್ಷನ್ ಬ್ಯೂರೋ ಎಂದು ಜಡ್ಜ್ ಹೇಳಿದ್ದಾರೆ. ಎಸಿಬಿ ಯನ್ನು ಹುಟ್ಟುಹಾಕಿದ್ದು ನಾವೇ, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲೂ ಎಸಿಬಿ ಇದೆ, ರಾಜಸ್ಥಾನ, ಗುಜರಾತ್ ನಲ್ಲಿ ಇಲ್ಲವಾ? ಅದರೆ ಅದನ್ನು ದುರ್ಬಳಕೆ ಮಾಡಿಕೊಂಡರೆ ಸರ್ಕಾರದ ತಪ್ಪಾಗುತ್ತದೆ. ಅದಕ್ಕೆ ಯಾರು ಆ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ ಅವರು ಹೊಣೆಯಾಗಲ್ಲ. ಭ್ರಷ್ಟಾಚಾರ ನಿರ್ಮೂಲನೆ ಆಗಲಿ ಎಂದೇ ಇಂಥಾ ಸಂಸ್ಥೆಗಳನ್ನು ಹುಟ್ಟುಹಾಕೋದು.
ಪಿಎಸ್ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಾಗೂ ಸಚಿವ ಅಶ್ವಥ್ ನಾರಾಯಣ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಅಶ್ವಥ್ ನಾರಾಯಣ್ ಅವರ ಸಂಬಂಧಿಕರು ಮಾರ್ಕ್ಸ್ ತಿದ್ದುಪಡಿ ಮಾಡಿಕೊಂಡು ಆಯ್ಕೆಯಾಗಿದ್ದಾರೆ ಎಂಬ ಆರೋಪವಿದೆ. ಇವರಿಗೆಲ್ಲ ರಕ್ಷಣೆ ನೀಡುತ್ತಿರುವ ಮುಖ್ಯಮಂತ್ರಿಗಳೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಮತ್ತು ಈ ಹಗರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ.
ಸರ್ಕಾರದ ನಿರ್ದೇಶನ ಇಲ್ಲದೆ ಎಡಿಜಿಪಿ ಅವರು ಓಎಮ್ಆರ್ ಶೀಟ್ ಅನ್ನು ಇಷ್ಟು ರಾಜಾರೋಷವಾಗಿ ತಿದ್ದುಪಡಿ ಮಾಡಲು ಸಾಧ್ಯವೇ? ಕೋಟ್ಯಂತರ ರೂಪಾಯಿ ಲಂಚ ಪಡೆಯಲು ಸಾಧ್ಯವೇ? ನ್ಯಾಯಯುತವಾಗಿ ಪರೀಕ್ಷೆ ಬರೆದು, ಆಯ್ಕೆಯಾದವರು ಇಂದು ಕಣ್ಣೀರು ಹಾಕುತ್ತಿದ್ದಾರೆ. ಈ ಹಿಂದೆ ನಡೆದಿರುವ ಎಫ್ಡಿಎ, ತೋಟಗಾರಿಕೆ, ಪಶು ಸಂಗೋಪನೆ, ಲೋಕೋಪಯೋಗಿ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನೂ ಒಳಗೊಂಡು ತನಿಖೆಯಾಗಬೇಕು. ಗೃಹ ಸಚಿವರನ್ನು ತಕ್ಷಣ ವಜಾ ಮಾಡಬೇಕು ಹಾಗೂ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಈಗ ಹಗರಣ ನಡೆದಿದೆ, ಮುಖ್ಯಮಂತ್ರಿಗಳ ಜವಾಬ್ದಾರಿ ಏನು? ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಹಗರಣ ನಡೆದಿದ್ದರೆ ಆಗ ತನಿಖೆಗೆ ಒತ್ತಾಯ ಮಾಡಬೇಕಿತ್ತು, ಆಗ ಸುಮ್ಮನಿದ್ದು ಈಗ ಎಲ್ಲಾ ಕಾಲದಲ್ಲೂ ಹಗರಣ ನಡೆದಿದೆ ಎಂದು ಹೇಳಿ ತಪ್ಪಿಸಿಕೊಳ್ಳೋಕೆ ಆಗಲ್ಲ. ಸದನದಲ್ಲಿ ಯಾವುದೇ ಹಗರಣ ನಡೆದಿಲ್ಲ, ಅಕ್ರಮ ನಡೆದಿಲ್ಲ ಎಂದು ಹೇಳಿದ್ರು, ಈಗ ನೋಡಿದ್ರೆ ಹಲವರು ಜೈಲಿಗೆ ಹೋಗಿದ್ದಾರೆ. ಇಷ್ಟೆಲ್ಲಾ ಆದಮೇಲೆ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಹೇಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೆ?
ಇ.ಡಿ ಮತ್ತು ಎ.ಸಿ.ಬಿ ಗೂ ಒಂದಕ್ಕೊಂದು ಸಂಬಂಧ ಇಲ್ಲ. ಪಿ.ಎಸ್.ಐ ಹಗರಣದ ಗಮನವನ್ನು ಬೇರೆ ಕಡೆಗೆ ತಿರುಗಿಸಲು ದಾಳಿ ಮಾಡಿದ್ದಾರೆ ಎಂದು ನನಗೆ ಅನಿಸುತ್ತಿದೆ. ಎ.ಸಿ.ಬಿ ನೇರವಾಗಿ ಮುಖ್ಯಮಂತ್ರಿಗಳ ಅಡಿಯಲ್ಲಿ ಬರುತ್ತದೆ.