ಗುರುವಾರ ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಅತ್ಯಂತ ಕೆಟ್ಟ ಉದಾಹರಣೆಯನ್ನು ಸೃಷ್ಟಿಸಿದ್ದಾರೆ. ವಿಪಕ್ಷಗಳ ಮೇಲೆ ಇಡಿ, ಐಟಿ ದಾಳಿ ನಡೆಸಿ ವಿಪಕ್ಷ ನಾಯಕರನ್ನು ಮೌನವಾಗಿಸುವ ತಂತ್ರ ಫಲಿಸದೇ ಇರುವಾಗ ನಾಯಕರ ಮೇಲೆ ನೇರ ದಾಳಿ ನಡೆಸಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕುತಂತ್ರಕ್ಕೆ ಬಿಜೆಪಿ ಈಗ ಕೈ ಹಾಕಿರುವುದು ಸರ್ಕಾರದ ನೈತಿಕ ಅಧಃಪತನಕ್ಕೆ ಬರೆದ ಮುನ್ನುಡಿ.
ಈ ಘಟನೆಯನ್ನು ಕಾಂಗ್ರೆಸ್ ತನ್ನ ಲಾಭಕ್ಕೆ ಬಳಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ, ಈ ಘಟನೆಯ ಹಿಂದೆ ಬಿಜೆಪಿಯ ಹತಾಶೆ ಎದ್ದು ಕಾಣುತ್ತಿದೆ. ಇತ್ತೀಚಿಗೆ ನಡೆದ ಸಿದ್ದರಾಮೋತ್ಸವದಿಂದ ಸಂಪೂರ್ಣ ವಿಚಲಿತರಾಗಿರುವ ಬಿಜೆಪಿ ನಾಯಕರು ತಮ್ಮ ಹತಾಶೆಯನ್ನು ಕಾರ್ಯಕರ್ತರ ಮೂಲಕ ತೋರ್ಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಹಿಂದಿನಿಂದಲೂ ತನ್ನ ಹರಕು ಬಾಯಿಂದಲೇ ಪ್ರಸಿದ್ಧಿ ಪಡೆದ ಸಂಸದ ಪ್ರತಾಪ ಸಿಂಹ, ಕೇಂದ್ರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ತರುವಲ್ಲಿ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಡೆಯುವಲ್ಲಿ, ಕನ್ನಡ ಭಾಷೆಯ ಮೇಲಾಗುತ್ತಿರುವ ಹೇರಿಕೆಯನ್ನು ತಡೆಗಟ್ಟುವಲ್ಲಿ ಸಂಪೂರ್ಣ ನಿಷ್ಕ್ರೀಯರಾಗಿದ್ದರೂ, ಜನರ ನಡುವೆ ದ್ವೇಷ ಬಿತ್ತುವ ಕಾರ್ಯವನ್ನು ನಿರರ್ಗಳವಾಗಿ ಮಾಡುತ್ತಲೇ ಬಂದಿದ್ದಾರೆ. ಈ ದ್ವೇಷದ ಬೀಜ ಇಂದು ಮೊಳಕೆಯೊಡೆದು ಜನರ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಅಷ್ಟಕ್ಕೂ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಿದ್ದು ಯಾವುದೇ ರಾಜಕೀಯ ಸಮಾವೇಶ ನಡೆಸಲಲ್ಲ. ಈಗಾಗಲೇ ಭೂಕುಸಿತ ಮತ್ತು ಅತಿವೃಷ್ಟಿಯಿಂದ ಜರ್ಜರಿತವಾಗಿರುವ ಕೊಡಗಿನಲ್ಲಿ ನಡೆದಿರುವ ಅನಾಹುತಗಳ ಪರಿಶೀಲನೆ ಅವರ ಭೇಟಿಯ ಉದ್ದೇಶ. ಸೂರು ಕಳೆದುಕೊಂಡಿರುವ ಸಾವಿರಾರು ಜನರ ಪರ ಪರಿಹಾರ ಕೇಳಲು ಆಗಮಿಸಿದ ಸಿದ್ದರಾಮಯ್ಯ ಮೇಲೆ ಮೊಟ್ಟೆ ದಾಳಿ ನಡೆಸಿದ್ದು ಜನರ ನೋವಿಗೆ ಮಾಡಿದ ಅಪಮಾನ. ಇದು ಬಿಜೆಪಿಯ ನಿರ್ದಯಿ ಹಾಗೂ ಅಮಾನುಷ ರಾಜಕಾರಣದ ಕುರುಹು. ಬಿಜೆಪಿ ಸರ್ಕಾರಕ್ಕೆ ನೊಂದವರ ಕುರಿತಾಗಿ ಇರುವ ಕಾಳಜಿಯ ಕುರುಹು.
ಮೊಟ್ಟೆ ದಾಳಿಗೆ ಸಿದ್ದು ಕಿಡಿ:
ಈಗಾಗಲೆ ಮೊಟ್ಟೆ ದಾಳಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಮ್ಮ ಕಾರ್ಯಕರ್ತರು ಮೊಟ್ಟೆ ಎಸೆಯಲು ಪ್ರಾರಂಭಿಸಿದರೆ ಸಿಎಂ ಬೊಮ್ಮಾಯಿ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ಇದರೊಂದಿಗೆ ಆಗಸ್ಟ್ 26ರಂದು ಕೊಡಗು ಎಸ್.ಪಿ. ಕಚೇರಿಗೆ ಮುತ್ತಿಗೆ ಹಾಕಲು ಕರೆ ನೀಡಿದ್ದಾರೆ.
“ಬಿಜೆಪಿಯವರು ಇಂದು ನನ್ನ ಕಾರಿನ ಮೇಲೆ ಮೊಟ್ಟೆ ಎಸೆದ್ರು ಎಂದೇ ಇಟ್ಟುಕೊಳ್ಳೋಣ, ನಮಗೆ ಅವರ ಕಾರಿನ ಮೇಲೆ ಮೊಟ್ಟೆ ಎಸೆಯೋಕೆ ಬರಲ್ವಾ? ಅಲ್ಲಿಂದಲೇ ಶುರು ಮಾಡಿಕೊಂಡು ಬಂದಿದ್ದು ನಾನು,” ಎಂದು ಅವರು ಗುಡುಗಿದ್ದಾರೆ.
ಮತ್ತೊಮ್ಮೆ ಬಲಪ್ರದರ್ಶನಕ್ಕೆ ಅವಕಾಶ?:
ಸಿದ್ದರಾಮಯ್ಯ ಕಾರ್ ಮೇಲೆ ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶಿಸಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಬಿಜೆಪಿಯೇ ದಾರಿ ಮಾಡಿ ಕೊಟ್ಟಿದೆ. ಆಗಸ್ಟ್ 26ರಂದು ಎಸ್.ಪಿ. ಕಚೇರಿಗೆ ಮುತ್ತಿಗೆ ಹಾಕುವ ನೆಪದಲ್ಲಿ ಮತ್ತೆ ಬಲಪ್ರದರ್ಶನ ಮಾಡುವ ಅವಕಾಶ ಕಾಂಗ್ರೆಸ್ ಪಾಲಿಗೆ ಒದಗಿ ಬಂದಿದೆ. ಸಿದ್ದರಾಮೋತ್ಸವದ ಬೆನ್ನಲ್ಲೇ ಇಂತದ್ದೊಂದು ಅವಕಾಶವನ್ನು ಸೃಷ್ಟಿಸಿ ಬಿಜೆಪಿ ತನ್ನ ಕಾಲಿಗೆ ತಾನೇ ಕೊಡಲಿ ಏಟು ಹಾಕಿದೆ ಎಂದರೆ ತಪ್ಪಾಗಲಾರದು.
ಒಟ್ಟಿನಲ್ಲಿ, ವಿಪಕ್ಷ ನಾಯಕರಿಗೆ ಮುಜುಗರ ಉಂಟು ಮಾಡಲು ಯತ್ನಿಸಿದ ಬಿಜೆಪಿ ಈಗ ತನ್ನ ಘನತೆಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಬಂದಿದೆ. ಈಗಾಗಲೇ, ಕೈಗೊಂಬೆ ಎಂಬ ಅಪಕೀರ್ತಿಗೆ ಒಳಗಾಗಿರುವ ಸಿಎಂ ಬೊಮ್ಮಾಯಿ ಇಂತಹ ಘಟನೆಗಳನ್ನು ತಡೆಯುವಲ್ಲಿ ನಿಷ್ಕ್ರೀಯರಾಗಿದ್ದು ನಿಚ್ಛಳವಾಗಿ ಸಾಬೀತಾಗಿದೆ. ಇಂತಹ ಘಟನೆಗಳು ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಕಾಂಗ್ರೆಸ್ ಪಾಲಿಗೆ ಬಲ ತುಂಬುವುದೇ ವಿನಃ ಬಿಜೆಪಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಕಿಂಚಿತ್ತೂ ಶೋಭೆ ತರಲಾರವು.