ಮನುಷ್ಯ ಮೂಲತಃ ಮಾಂಸಾಹಾರಿ. ನಾಗರಿಕತೆಗೆ ಮೊದಲು ಅಕಸ್ಮಾತ್ ಭೂಮಿಯ ಉಷ್ಣಾಂಶದಲ್ಲಾದ ಏರುಪೇರಿನಿಂದ ಹುಟ್ಟಿದ ಹುಲ್ಲುಗಾವಲುಗಳಿಂದ ಚಕಿತಗೊಂಡ ಆದಿ ಮಾನವ ಕೃಷಿಯನ್ನು ಅವಿಷ್ಕರಿಸಿ ಒಂದು ಸ್ಥಳದಲ್ಲಿ ನೆಲೆನಿಂತು ಉಭಯ ಆಹಾರಿಯಾದ. ಭಾರತದಲ್ಲಿ ಗೌತಮ ಬುದ್ಧನ ಅಹಿಂಸಾ ಧರ್ಮಕ್ಕೆ ಬೆದರಿ ವೇದವನೋದುತ್ತಿದ್ದ ಉಗ್ರ ಗೋಮಾಂಸ ಭಕ್ಷಕ ವಲಸಿಗ ಆರ್ಯರು ಸಂಸ್ಯಾಹಾರಿಗಳಾದರು. ಅಷ್ಟಕ್ಕೆ ಸುಮ್ಮನಾಗದ ಆರ್ಯರು ತಮ್ಮ ಆಹಾರವೇ ಶ್ರೇಷ್ಟ ಎನ್ನುವ ಮಾನಸಿಕ ರೋಗಕ್ಕೆ ತುತ್ತಾದರು. ತಾವು ಮಾತ್ರ ಮಾನಸಿಕ ರೋಗಕ್ಕೆ ತುತ್ತಾಗದೆ ಇಡೀ ಭಾರತೀಯ ಜೀವನ ವ್ಯವಸ್ಥೆಯನ್ನು ರೋಗಗ್ರಸ್ಥಗೊಳಿಸಿದರು. ಅಹಿಂಸೆಯ ಪರಿಪಾಲನೆ ಅಂದರೆ ಕೇವಲ ಮಾಂಸಾಹಾರ ತ್ಯಜಿಸುದಷ್ಟೇ ಅಲ್ಲ. ಪರಧರ್ಮದ್ವೇಷ ಹಾಗು ಅರಿಶಡ್ವರ್ಗಗಳು ಮಾಂಸಾಹಾರಕ್ಕಿಂತ ಮಾರಕ ಎನ್ನುವುದನ್ನು ಮನುಷ್ಯ ಪ್ರಜ್ಞಾಪೂರ್ವಕವಾಗಿ ಮರೆತ. ಈ ಸೃಷ್ಟಿಯಲ್ಲಿ ಹುಟ್ಟಿದ ಪ್ರತಿಯೊಂದು ವಸ್ತುವು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಮನುಷ್ಯನನ್ನು ಹೊರತು ಪಡಿಸಿ ಇಲ್ಲಿನ ಯಾವುದೇ ವಸ್ತು ನಿಸ್ಪ್ರಯೋಜಕವಲ್ಲ. ಅದರಂತೆ ಇತ್ತೀಚಿಗೆ ಚರ್ಚೆಯಲ್ಲಿರುವ ಕೋಳಿ ಮೊಟ್ಟೆಯೂ ಕೂಡ.
ಶಾಲಾ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಯಲು ಮಧ್ಯಾನದ ಉಪಹಾರದಲ್ಲಿ ಕೋಳಿ ಮೊಟ್ಟೆ ವಿತರಿಸುವ ಕುರಿತು ಸರಕಾರದ ನಿರ್ಧಾರದ ವಿರುದ್ಧ ಒಂದು ಅತ್ಯಂತ ಸಣ್ಣ ಗುಂಪು ಅಪಸ್ವರ ತೆಗೆದಿದೆ. ಆ ಗುಂಪಿನ ಸದಸ್ಯರಲ್ಲಿ ಕೆಲವರು ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಕೆಲವರು ಸಂಘಟನೆಯ ನಾಯಕತ್ವದ ಮಹತ್ವಾಕಾಂಕ್ಷೆ ಹೊಂದಿದ್ದು ಇವರು ಬಲಪಂಥೀಯ ರಾಜಕೀಯ ಪಕ್ಷ ಮತ್ತು ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು. ಇವರಲ್ಲಿ ಒಬ್ಬರು ಕೇಂದ್ರದ ನಾಗರಿಕ ತಿದ್ದುಪಡಿ ಕಾನೂನು ಸಮರ್ಥಿಸಿ ಪ್ರತಿಭಟನೆ ಮಾಡಿದ್ದರೆ ಇನ್ನೊಬ್ಬರು ಅದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಿದೆ. ಇದು ಈ ಸಂಘಟನೆಯ ಒಳರಾಜಕೀಯ ಮತ್ತು ಗುಂಪುಗಾರಿಕೆಯ ಪ್ರತಿಫಲ ಮತ್ತು ಇದೇ ಕಾರಣ ಇಂತದ್ದೊಂದು ಜನವಿರೋಧಿ ಅಪಸ್ವರಕ್ಕೆ ಕಾರಣವಾಯ್ತು ಎನ್ನಬಹುದು. ಹೀಗೆ ಮೊಟ್ಟೆ ವಿತರಣೆಯ ವಿರುದ್ಧ ಯಾವುದೇ ವೈಜ್ಞಾನಿಕ ಕಾರಣಗಳು ನೀಡದೆ ಈ ಗುಂಪು ಕೇವಲ ಬೆರಳೆಣಿಕೆಯಷ್ಟು ಜರನ ಧಾರ್ಮಿಕ ನಂಬಿಕೆಗೆ ಜೋತುಬಿದ್ದದ್ದು ದುರಂತ.
ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖಾರ ಇತ್ತೀಚಿನ ಬ್ರಾಹ್ಮಣ್ಯದ ವಿರುದ್ಧದ ಸಕಾಲಿಕ ಹಾಗು ವಸ್ತುನಿಷ್ಟ ಟೀಕೆಯಿಂದ ಕಂಗಾಲಾದ ಮಡಿವಂತರು ಅವರ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆಗೆ ಮುಂದಾದರು. ಇದರಿಂದ ಜಾಗೃತರಾದ ಬಹುಜನರು ಸಂಹಲೇಖಾ ಬೆಂಬಲಕ್ಕೆ ನಿಲ್ಲುವುದಷ್ಟೇ ಅಲ್ಲದೆ ಮಡಿವಂತರ ಬೆವರಿಳಿಸಿದರು. ಸಂಹಲೇಖಾ ಬೆಂಬಲಿಗರು ಕೊಟ್ಟ ಏಟಿನಿಂದ ಮಡಿವಂತರು ಗಾಯಗೊಂಡಿದ್ದರು. ಬಹುಜನರ ಒಗ್ಗಟ್ಟು ಮತ್ತು ಪ್ರತಿರೋಧಕ್ಕೆ ಬೆಚ್ಚಿದ ಮಡಿವಂತರು ಒಂದು ರಾಜಕೀಯ ಒಳಸಂಚನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾದರು. ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದರೂ ಮಡಿವಂತರು ತಮಗೆ ಬೇಕಾದ ವ್ಯಕ್ತಿಯೊಬ್ಬನನ್ನು ಗದ್ದುಗೆ ಮೇಲೆ ಪ್ರತಿಷ್ಟಾಸಲು ಆಗದೆ ಮೈ ಪರಚಿಕೊಳ್ಳುತ್ತಿದ್ದರು. ಬೊಮ್ಮಾಯಿಯವರ ಮೇಲೆ ಮಡಿವಂತರು ಒತ್ತಡ ಹೇರುವ ಮೂಲಕ ಮೊಟ್ಟೆ ವಿತರಣೆಯ ಘೋಷಣೆಯನ್ನು ಸದ್ದಿಲ್ಲದೆ ಹೊರಡಿಸಿ ಕೈಯೂರಿ ಅವಲಕ್ಕಿ ಬುಕ್ಕುತ್ತ ವಿರಮಿಸಿದರು.
ಮಡಿವಂತರು ತಮ್ಮೊಂದಿಗೆ ಗಳಸ್ಯ ಕಂಠಸ್ಯ ಸಂಬಂಧ ಹೊಂದಿರುವ ಬಸವಣ್ಣನವರ ಹೆಸರಿನಲ್ಲಿನ ಸಂಸ್ಥೆಯ ಕೆಲವು ಮೂಲಭೂತವಾದಿಗಳ ಮೂಲಕ ಸರಕಾರದ ಮೊಟ್ಟೆ ವಿತರಣೆಯ ನಿರ್ಧಾರವನ್ನು ವಿರೋಧಿಸಲು ಗುಪ್ತ ಪ್ರಚೋದನೆ ನೀಡಿದರು. ಮಡಿವಂತರ ಈ ಹುನ್ನಾರದ ಹಿಂದೆ ದೂರಗಾಮಿ ಉದ್ದೇಶಗಳು ಅಡಗಿದ್ದವು. ಲಿಂಗಾಯತ ಬೊಮ್ಮಾಯಿ ವಿರುದ್ಧ ಲಿಂಗಾಯತ ಮಡಿವಂತರನ್ನು ಎತ್ತಿಕಟ್ಟುವುದು ಒಂದು ಉದ್ದೇಶವಾದರೆ ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯನ್ನು ಸದಾ ಬೆಂಬಲಿಸುವ ಮಾಂಸಾಹಾರಿ ಬಹುಜನರನ್ನು ಲಿಂಗಾಯತರ ವಿರುದ್ಧ ಎತ್ತಿಕಟ್ಟುವುದು ಎರಡನೇ ಉದ್ದೇಶವಾಗಿತ್ತು. ಆದರೆ ನಿರಿಕ್ಷಿಸಿದಂತೆ ಬಹುತೇಕ ಲಿಂಗಾಯತ ಸಂಘಟನೆಗಳು ಮೊಟ್ಟೆ ವಿತರಣೆಯ ವಿರುದ್ಧ ನಿಲ್ಲದೆ ಪರವಾಗಿ ನಿಂತಿದ್ದು ಮಡಿವಂತರಿಗೆ ನಿರಾಶೆಗೊಳಿಸಿತು. ಹಂಸಲೇಖಾರನ್ನು ಮಾಂಸಲೇಖಾ ಎಂದು ಜರಿದು ಗುಮ್ಮಿಸಿಕೊಂಡು ಕಳಕೊಂಡಿದ್ದ ಮಾನ ಮೊಟ್ಟೆಯೊಳಗೆ ಹುಡುಕುವ ವಿಫಲ ಯತ್ನ ಮಡಿವಂತರು ಮಾಡಿದರು.
ಸರಕಾರದ ಯಾವುದೇ ಯೋಜನೆಯು ತಜ್ಞರ ಅಭಿಪ್ರಾಯದ ಮೇಲೆ ರೂಪಿಸಲಾಗುತ್ತದೆ. ಯಾರು ಏನನ್ನು ತಿನ್ನಬೇಕು ಎನ್ನುವ ಸ್ವಾತಂತ್ರ ಎಲ್ಲರಿಗೂ ಇದೆ. ಅಗತ್ಯವಿರುವವರು ಮೊಟ್ಟೆ ತಿನ್ನಲಿ ಇಲ್ಲದವರು ಬಿಡಲಿ. ಆದರೆˌ ಮೊಟ್ಟೆ ಶಾಲಾ ಮಕ್ಕಳ ಆಹಾರದಲ್ಲಿ ಏಕಿರಬೇಕು ಎನ್ನುವುದನ್ನು ನಾವು ಸ್ವಲ್ಪ ಅವಲೋಕಿಸೋಣ. ಹಾಲಿನಂತೆ ಮೊಟ್ಟೆಯೂ ಕೂಡ ಒಂದು ಪ್ರಾಣಿಜನ್ಯ ಪೌಷ್ಟಿಕ ಆಹಾರ. ಮೊಟ್ಟೆಯು ಮೆದುಳಿಗೆ ಅತ್ಯಂತ ಉಪಯುಕ್ತಕಾರಿ ಆಹಾರ ಎನ್ನುತ್ತದೆ ವಿಜ್ಞಾನ. ಹಿಪೊಕ್ಯಾಂಪಸ್ ಇದೊಂದು ಸಂಕೀರ್ಣವಾದ ಮೆದುಳಿನ ರಚನೆಯಾಗಿದ್ದು ಅದು ತಾತ್ಕಾಲಿಕ ಲೋಬ್ನಲ್ಲಿ ಆಳವಾಗಿ ಹುದುಗಿರುತ್ತದೆ. ಇದು ಮಕ್ಕಳ ಕಲಿಕಾ ಶಕ್ತಿ ಮತ್ತು ಜ್ಞಾಪಕಶಕ್ತಿ ವೃದ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿಪೊಕ್ಯಾಂಪಸ್ ಭೌತಿಕವಾಗಿ ಪ್ಲಾಸ್ಟಿಕನಂತೆ ಅತ್ಯಂತ ದುರ್ಬಲ ಅಂಗಾಂಶವಾಗಿದ್ದು ಅದು ವಿವಿಧ ಜೈವಿಕ ಪ್ರಚೋದಕಗಳಿಂದ ಹಾನಿಗೊಳಗಾಗುತ್ತದೆ. ಇದು ವಿವಿಧ ನರವೈಜ್ಞಾನಿಕ ಮತ್ತು ಮನೋವೈದ್ಯಕೀಯ ಅಸ್ವಸ್ಥತೆಗಳಗಿಂದ ಕೂಡ ಹಾನಿಗೊಳಗಾಗುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ.
ಮೊಟ್ಟೆಯ ಸೇವನೆಯಿಂದ ಮೆದುಳಿನ ಕಾರ್ಯಕ್ಷಮತೆ ವೃದ್ಧಿಸುತ್ತದೆ ಎನ್ನುತ್ತವೆ ವೈಜ್ಞಾನಿಕ ಸಂಶೋಧನೆಗಳು. ಮೊಟ್ಟೆ ಮಕ್ಕಳಿಗೆ ಅಗತ್ಯವಿರುವ ಆರೋಗ್ಯಕರ ಪೋಷಕಾಂಶಗಳನ್ನು ಯಥೇಚ್ಯವಾಗಿ ಸರಬರಾಜು ಮಾಡುತ್ತವೆ. ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಮೊಟ್ಟೆಯೊಳಗಿನ ಹಳದಿ ಭಾಗವು ಕೋಲಿನ್ನ ಉತ್ತಮ ಮೂಲವಾಗಿದೆ. ಇದು ಮೆದುಳಿನ ಉರಿಯೂತವನ್ನು ಶಮನ ಮಾಡಲು ಮತ್ತು ಅದರ ಕಾರ್ಯಕ್ಷಮನೆಯನ್ನು ಉತ್ತೇಜಿಸಲು ಸಹಕರಿಸುತ್ತದೆ. ಕೋಲಿನ್ ಮಕ್ಕಳ ಜ್ಞಾಪಕಶಕ್ತಿ ಮತ್ತು ಮೆದುಳಿನ ಕೋಶಗಳ ನಡುವಿನ ಸಂವಹನವನ್ನು ಕಾಪಾಡಿಕೊಳ್ಳುತ್ತದೆ. ವೈಜ್ಞಾನಿಕ ಅಧ್ಯಯನವೊಂದರ ಪ್ರಕಾರ ಹಾಲು ಕುಡಿಯುವ ಚಿಕ್ಕ ಮಗುವಿಗೆ ಆರು ತಿಂಗಳ ವರೆಗೆ ಪ್ರತಿ ನಿತ್ಯ ಒಂದು ಮೊಟ್ಟೆ ತಿನ್ನಿಸಿದರೆ ಅದು ಮಗುವಿನ ಮೆದುಳಿನ ಪರಿಪೂರ್ಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮೊಟ್ಟೆಯಲ್ಲಿನ ಕೋಲಿನ್ ಮತ್ತು ಡಿ ಎಚ್ ಎ ಅಥವಾ ಓಮೇಗಾ -3 ಫ್ಯಾಟಿ ಆಮ್ಲ ಇವು ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಗುಣಾತ್ಮಕ ಪಾತ್ರವಹಿಸುತ್ತವೆ.
ಮನುಷ್ಯನ ಮೆದುಳಿನಲ್ಲಿರುವ ಹಿಪೊಕ್ಯಾಂಪಸ್ ಕಾರ್ಯವನ್ನು ಸುಧಾರಿಸಲು ಸೂಕ್ತ ವ್ಯಾಯಾಮ ಅಗತ್ಯ. ಈ ವ್ಯಾಯಾಮವು ಹೊಸ ಹಿಪೊಕ್ಯಾಂಪಿ ನ್ಯೂರಾನ್ಗಳ ಉತ್ಪಾದನೆಗೆ ನೆರವಾಗುತ್ತದೆ. ಮನುಷ್ಯ ತನ್ನ ಹಳೆ ಕಾಲದ ಧಾರ್ಮಿಕ ನಂಬಿಕೆಗಳಿಗೆ ಕಟ್ಟು ಬೀಳದೆ ಆಗಾಗ ತನ್ನ ಆಹಾರಕ್ರಮವನ್ನು ಬದಲಾಯಿಸಿಕೊಳ್ಳುವುದು ಅಗತ್ಯ. ಜ್ಞಾಪಕ ಶಕ್ತಿಯನ್ನು ಸುಧಾರಿಸುವಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿಪೊಕ್ಯಾಂಪಸ್ ಲಿಂಬಿಕ್ ವ್ಯವಸ್ಥೆಯ ಭಾಗವಾಗಿದ್ದು ಅನೇಕ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ವಿಶೇಷ ಪಾಪ್ರ ವಹಿಸುತ್ತದೆ. ಮಕ್ಕಳೆಂದರೆ ಸುಂದರ ಭಾವನೆಗಳ ಆಗರ. ಆ ಭಾವನೆಗಳಿಗೆ ದಕ್ಕೆಯಾಗದಂತೆ ಸೂಕ್ತವಾಗಿ ಅವನ್ನು ನಿಯಂತ್ರಿಸುವ ಕೆಲಸ ಹಿಪೊಕ್ಯಾಂಪಷ್ ಮಾಡುತ್ತದೆ. ಮೊಟ್ಟೆ ಮಕ್ಕಳ ಮೆದುಳಿನ ಬೆಳವಣಿಗೆಗೆ ಅಗತ್ಯವಿರುವ ಕೋಲಿನ್ನ ಅದ್ಭುತ ಮೂಲವಾಗಿದೆ. ಇದು ಸೂಕ್ಷ್ಮ ಪೋಷಕಾಂಶವಾಗಿದ್ದು ಮಗುವಿನ ಕಲಿಕಾ ಸಾಮರ್ಥ್ಯ ಹಾಗು ಜ್ಞಾಪಕಶಕ್ತಿ ವೃದ್ಧಿಯಲ್ಲಿ ಪ್ರಮುಖ ಪಾತ್ರ ಹೊಂದಿರುವ ನರಪ್ರೇಕ್ಷಕವನ್ನು (ನ್ಯೂರೋಟ್ರಾನ್ಸಮೀಟರ್) ತಯಾರಿಸಲು ಸಹಕಾರಿಯಾಗುತ್ತದೆ.
ಸಂಪೂರ್ಣ ಮೊಟ್ಟೆ ತಿನ್ನಬಹುದು. ಬಿಳಿ ಮತ್ತು ಹಳದಿ ಭಾಗ ಎರಡೂ ಮೆದುಳಿನ ಬೆಳವಣಿಗೆಗೆ ಸೂಕ್ತವಾಗಿದ್ದು ಅದರಲ್ಲೂ ಹಳದಿ ಭಾಗವು ಕೋಲಿನ್ ಅಂಶ ಹೊಂದಿದ್ದು ಅದು ಜ್ಞಾಪಕಶಕ್ತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಆಲ್ಝೈಮರ್ ಕಾಯಿಲೆಯ (ಮರೆಗುಳಿತನ) ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಹಳದಿ ಭಾಗದಲ್ಲಿರುವ ಕೋಲಿನ್ ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಮತ್ತು ಅದರ ಜೀವಕೋಶ ಪ್ರಸರಣದ ಜೊತೆಗೆ ಆ ಜೀವಕೋಶಗಳು ಸಾಯದಂತೆ ತಡೆದು ಮೆದುಳಿನ ಉರಿಯನ್ನು ಶಮನ ಮಾಡಿ ಮಗುವಿಗೆ ಸ್ಪೂರ್ತಿ ನೀಡುತ್ತಾ ಮೆದುಳಿನ ಕಾರ್ಯವೈಖರಿಯನ್ನು ಚುರುಕುಗೊಳಿಸುತ್ತೆ. ಜೊತೆಗೆ ಧೀರ್ಘಕಾಲಿನ ನೆನಪುಗಳನ್ನು ಶೇಖರಿಸಲು ಉತ್ತೇಜಿಸುತ್ತದೆ. ಶಾಲೆಯಲ್ಲಿ ಮೊಟ್ಟೆ ವಿತರಿಸುವ ಯೋಜನೆಯಿಂದ ಕುಕ್ಕುಟೋದ್ಯಮವೂ ಕೂಡ ಪರೋಕ್ಷವಾಗಿ ಚಿಗುರೊಡೆಯುತ್ತದೆ.
ಹೀಗಾಗಿ ಶಾಲಾ ಮಕ್ಕಳಿಗೆ ಮಧ್ಯಾನದ ಉಪಹಾರದಲ್ಲಿ ಮೊಟ್ಟೆ ವಿತರಣೆ ಕೇವಲ ಅಪೌಷ್ಟಿಕತೆ ನಿವಾರಣಾ ಉದ್ದೇಶ ಅಷ್ಟೇ ಅಲ್ಲದೆ ಅದರಲ್ಲಿ ಕಲಿಕಾ ವಿಧಾನವನ್ನು ಪ್ರೇರೇಪಿಸುವ ಅಂಶವು ಅಡಗಿದೆ. ವೈಜ್ಞಾನಿಕ ಅಂಶಗಳಿಲ್ಲದ ಯಾವುದೇ ಅಧ್ಯಾತ್ಮಿಕ ಅಥವಾ ಆತ್ಮಜ್ಞಾನಗಳು ಇಂದಿನ ಅಧುನಿಕ ಬದುಕಿಗೆ ಪ್ರಸ್ತುತವಾಗಲಾರವು. ಯಾವುದೊ ಕಾಲದಲ್ಲಿ ಪ್ರಸ್ತುತವಾಗಿದ್ದ ಅನೇಕ ಧಾರ್ಮಿಕ ನಂಬಿಕೆಗಳನ್ನು ಈಗ ಕೈಬಿಡಬೇಕಿದೆ. ಸಾಗರೋಲಂಘನ ಮಾಡಬಾರದೆಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಬಲಪಂಥೀಯ ಪುರೋಹಿತಶಾಹಿಗಳೇ ಭಾರತದಲ್ಲಿ ಎಲ್ಲಕ್ಕೂ ಮೊದಲು ವಿದೇಶಿ ಶಿಕ್ಷಣ ಅರಸಿ ಹೋದರುˌ ಈಗಲೂ ಉದ್ಯೋಗ ಅರಸಿ ದಿನಾ ವಿದೇಶಕ್ಕೆ ಹೋಗುತ್ತಿದ್ದಾರೆ. ದೇವರುˌ ಧರ್ಮಗಳ ಹೆಸನನಲ್ಲಿ ನಮ್ಮ ಕೈಗೆ ರಾಮಾಯಣˌ ಮಹಾಭಾರತˌ ಭಗವದ್ಗೀತೆಯಂತ ಕಾಲ್ಪನಿಕ ಮಹಾಕಾವ್ಯಗಳನ್ನು ಓದಲು ಇತ್ತು ತಾವು ಸಂವಿಧಾನವನ್ನು ದ್ವೇಷಿಸುತ್ತಲೇ ಅದನ್ನು ಓದಿ ಸಂವಿಧಾನಿಕ ಹುದ್ದೆಗಳು ಅತಿಕ್ರಮಿಸಿ ಕುಂತಿದ್ದಾರೆ. ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದಿರುವ ಬಹುಜನರು ಮಡಿವಂತರ ಈ ಕುಟಿಲತೆ ಅರ್ಥ ಮಾಡಿಕೊಳ್ಳಬೇಕಿದೆ.
ಹಿಂದೆ ಕಾಂಗ್ರೆಸ್ ಪಕ್ಷ ನಾಲ್ಕು ಜನ ಲಿಂಗಾಯತ ನಾಯಕರನ್ನು ಹಾಗು ಜನತಾ ಪರಿವಾರ ಇಬ್ಬರು ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದೆ. ಬಿಜೆಪಿ ಈಗಾಗಲೇ ಮೂರು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದೆ. ಮುಂದೆ ಇನ್ನೂ ಅನೇಕರಿಗೆ ಮುಖ್ಯಮಂತ್ರಿ ಮಾಡಲೂಬಹುದು. ಅದಾಗ್ಯೂ ಬಡ ಲಿಂಗಾಯತರು ಬಡವರಾಗಿಯೆ ಉಳಿದಿದ್ದಾರೆ. ಅಂದರೆ ಸಮುದಾಯವೊಂದರ ನಾಯಕನಿಗೆ ಅಧಿಕಾರ ಸಿಕ್ಕರೆ ಆತನ ಕುಟುಂಬ ಮತ್ತು ಒಂದಷ್ಟು ಚಮಚಾಗಳು ಮಾತ್ರ ಸ್ಥಿತಿವಂತರಾಗುತ್ತಾರೆ. ಲಿಂಗಾಯತ ವ್ಯಕ್ತಿಗೆ ಅಧಿಕಾರ ಸಿಕ್ಕರೆ ಇಡೀ ಲಿಂಗಾಯತ ಸಮುದಾಯ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಇಡೀ ಲಿಂಗಾಯತ ಸಮುದಾಯಕ್ಕೆ ಅನುಕೂಲವಾಗುವ ಅಲ್ಪಸಂಖ್ಯಾತ ಸೌಲಭ್ಯ ಮತ್ತು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸಮುದಾಯದ ಎಲ್ಲ ಉಪವರ್ಗಗಳ ಸೇರ್ಪಡೆ ಲಿಂಗಾಯತ ಸಂಘ ಸಂಸ್ಥೆಗಳು ಮತ್ತು ಮಠಗಳ ಮೊದಲ ಆದ್ಯತೆಯಾಗಬೇಕಿದೆ. ಹಾಗಾದಾಗ ಮಾತ್ರ ಸಮುದಾಯಕ್ಕೆ ನೈಜ ಲಾಭ ದೊರಕಬಲ್ಲುದು.
ಸರಕಾರದ ಮೊಟ್ಟೆ ವಿತರಣೆ ಯೋಜನೆ ವಿರೋಧಿಸುತ್ತಿರುವ ಸಂಘಟನೆಗಳು ಮತ್ತು ಮಠಾಧೀಶರಿಗೆ ಲಿಂಗಾಯತರು ಮಾಂಸಾಹಾರ ಸೇವಿಸಬಾರದು ಎನ್ನುವ ನೈಜ ಕಳಕಳಿ ಇದ್ದಲ್ಲಿ ಅವರು ಲಿಂಗಾಯತ ಯುವಕರಲ್ಲಿ ಮಾಂಸಾಹಾರ ವ್ಯರ್ಜಿಸುವ ಕುರಿತು ಇದುವರೆಗೆ ಎಷ್ಟು ಜಾಗೃತಾ ಕಾರ್ಯಾಗಾರಗಳು ಹಮ್ಮಿಕೊಂಡಿದ್ದಾರೆ? ಎಷ್ಟು ಜನ ಮಂಸಾಹಾರಿ ಲಿಂಗಾಯತ ಯುವಕರನ್ನು ಶುದ್ಧ ಸಸ್ಯಾಹಾರಿಗಳಾಗಿ ಪರಿವರ್ತಿಸಿದ್ದಾರೆ? ಇವರು ಈ ದಿಶೆಯಲ್ಲಿ ಏನನ್ನೂ ಮಾಡದಿರುವುದಕ್ಕೆ ಇಂದು ಶೇಕಡಾ 70 ಕ್ಕಿಂತ ಹೆಚ್ಚಿನ ಲಿಂಗಾಯತರು ಮನೆಯ ಹೊರಗೆ ಕದ್ದು ಮುಚ್ಚಿ ಮಾಂಸಾಹಾರ ಸೇವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಹೋರಾಟದ ಮುಂಚೂಣಿಯಲ್ಲಿರುವವರಲ್ಲೇ ಎಷ್ಟೊ ಜನ ಕದ್ದು ಮುಚ್ಚಿ ಮಾಂಸಾಹಾರ ಸೇವಿಸುವವರಿದ್ದಾರೆ. ಕೆಲಸಕ್ಕೆ ಬಾರದ ಇಂತ ರಾಜಕೀಯ ಪ್ರೇರಿತ ಹೋರಾಟಗಳ ಬದಲಿಗೆ ಈ ಆಂದೋಲನ ಜೀವಿಗಳು ಬಸವಾದಿ ಶಿವಶರಣರು ವಿರೋಧಿಸಿದ ಮೌಢ್ಯ, ಸಾಮಾಜಿಕ ವಿಕೃತಿಗಳು, ಹಾಗು ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ.
ಮೊದಲು ಲಿಂಗಾಯತ ಸಂಘಟನೆಗಳು ಮತ್ತು ಮಠಾಧೀಶರು ಲಿಂಗಾಯತರ ನೈಜ ಶತೃಗಳು ಯಾರು ಎಂದು ಅರಿಯಬೇಕಿದೆ. ಬಸವಾದಿ ಶಿವಶರಣರ ಚಳುವಳಿಯನ್ನು ರಕ್ತಪಾತದಲ್ಲಿ ಕೊನೆಗೊಳಿಸಿದ್ದರಿಂದ ಹಿಡಿದು ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ವಿರೋಧಿಸುವ ವರೆಗೆˌ ಮತ್ತು ನಮ್ಮ ಯುವಕರಿಗೆ ಹಿಂದೂ ಮುಸ್ಲಿಮ್ ಹೆಸರಿನಲ್ಲಿ ಧಾರ್ಮಿಕ ವಿಷವುಣ್ಣಿಸಿ ಉದಾತ್ ಲಿಂಗಾಯತ ಧರ್ಮ ತತ್ವಗಳಿಂದ ವಿಮುಖಗೊಳಿಸಿರುವ ಬಲಪಂತಿಯ ಪುರೋಹಿತಶಾಹಿಗಳೇ ನಮ್ಮ ನೈಜ ವೈರಿಗಳೆಂದು ಅರಿತು ಅವರ ವಿರುದ್ಧ ದೊಡ್ಡ ಸಂಘರ್ಷ ರೂಪಿಸುವ ಜವಾಬ್ಧಾರಿ ಲಿಂಗಾಯತ ಸಂಘಟನೆಗಳು ಮತ್ತು ಮಠಗಳು ಹೊರಬೇಕಿದೆ. ಲಿಂಗಾಯತರನ್ನು ತಿರುಪತಿˌ ಮಂತ್ರಾಲಯˌ ಸಿರಡಿˌ ಹೊರನಾಡುˌ ಧರ್ಮಸ್ಥಳಗಳಂತ ವೈದಿಕರ ಧಾರ್ಮಿಕ ವ್ಯಾಪಾರಿ ಕೇಂದ್ರಗಳ ವ್ಯಾಮೋಹದಿಂದ ವಿಮುಖಗೊಳಿಸುವ ಜವಾಬ್ದಾರಿ ಈ ಮಠಾಧೀಶರು ಮತ್ತು ಸಂಘಟನೆಗಳು ಹೊರುವುದು ಬಿಟ್ಟು ವೈದಿಕರ ರಾಜಕೀಯ ಗಾಳಕ್ಕೆ ಸಿಲುಕಿ ನಮ್ಮ ಸಮುದಾಯ ಹಾಳಾಗುತ್ತಿದ್ದರೂ ಸಮುದಾಯದ ಪುಢಾರಿಗಳ ರಾಜಕೀಯ ಭವಿಷ್ಯ ರೂಪಿಸಲು ಇಡೀ ಬಡ ಸಮುದಾಯದ ಹಿತಾಸಕ್ತಿ ಬಲಿಕೊಡುತ್ತಿರುವುದು ದುರಂತದ ಸಂಗತಿಯಾಗಿದೆ.
~ ಡಾ. ಜೆ ಎಸ್ ಪಾಟೀಲ.