ಶಾಲಾ ಮಕ್ಕಳ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ಕಿಡಿ ಕಾರಿದ್ದಾರೆ.
ನಮ್ಮ ಸಮಿತಿ ನಡೆಸಿದೆ ಎನ್ನಲಾಗುವ ಬಗ್ಗೆ ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ, ಬಿಸಿ ನಾಗೇಶ್ ಅವರು ನಾವು ಪಠ್ಯದಿಂದ ಗಾಂಧಿ, ಕುವೆಂಪು, ಅಂಬೇಡ್ಕರ್, ಮದಕರಿ ನಾಯಕ, ರಾಣಿ ಅಬ್ಬಕ್ಕ, ಕೆಂಪೇಗೌಡರು ಮುಂತಾದವ ಪಠ್ಯ ಕೈ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ. ಆದರೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಸಿ ಸುಳ್ಳು ಹೇಳಿದ್ದಾರೆ.
ಕುವೆಂಪು, ಇವರನ್ನೆಲ್ಲಾ ಬಿಟ್ಟು ಪಠ್ಯ ಪುಸ್ತಕ ಮಾಡಲು ಸಾಧ್ಯವೇ..? ಕುಂವೆಪು ಅವರಿಗೆ ಸಂಬಂಧಿಸಿದಂತೆ ಒಂದು ಪಾಠ 10ನೇ ತರಗತಿಯಲ್ಲಿತ್ತು, ಏಳನೇ ತರಗತಿಯಲ್ಲಿತ್ತು. ಗಾಂಧಿಜಿಗೆ ಸಂಬಂಧಿಸಿದ ಪಾಠ ಏಳನೇ ತರಗತಿಯ ಸಮಾಜ ವಿಜ್ಞಾನದ ಭಾಗ 2ರಲ್ಲಿತ್ತು, 10ನೇ ತರಗತಿಯ ಸಮಾಜ ವಿಜ್ಞಾನ ಭಾಗ 2 ರಲ್ಲಿತ್ತು. ಅಂಬೇಡ್ಕರ್ ಅವರ ಬಗ್ಗೆ 8,9,10ನೇ ತರಗತಿಯ ಪಠ್ಯದಲ್ಲಿತ್ತು. ಹೀಗೆ ವೀರ ಮದಕರಿ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡರು, ಅಬ್ಬಕ್ಕ ರಾಣಿ ಬಗ್ಗೆಯೂ 4,5,6,7ನೇ ತರಗತಿಯ ಪಠ್ಯದಲ್ಲಿ ಹಾಕಲಾಗಿತ್ತು. ಮೈಸೂರು ರಾಜರ ಬಗ್ಗೆ ಮಾಹಿತಿ ಕಡಿಮೆ ಇತ್ತು ಅಂತ ಸಚಿವರು ಹೇಳಿದ್ದಾರೆ. ಕಡಿಮೆ ಇದ್ದರೆ ಪರಿಷ್ಕರಣೆ ಮಾಡಿ ಮಾಹಿತಿ ಹೆಚ್ಚಿಸಬಹುದಿತ್ತು ಅಲ್ಲವೇ..? ಅದನ್ನು ಮಾಡಿದರೇ..?
ಟಿಪ್ಪು ಸುಲ್ತಾನ್ ಬಗ್ಗೆ ವೈಭವೀಕರಿಸಲಾಗಿದೆ ಎಂದು ಹೇಳ್ತಿದ್ದಾರೆ. ವಾಸ್ತವದಲ್ಲಿ ಮೈಸೂರು ಒಡೆಯರ ಬಗ್ಗೆ ಸೇರಿಸಲಾಗಿದ್ದ ಭಾಗದಲ್ಲಿ ಬ್ರಿಟೀಷರೊಡನೆ ನಡೆಸಲಾದ ಯುದ್ಧಗಳ ಬಗ್ಗೆ ಹೇಳಲಾಗಿದೆ. ಈ ಯುದ್ಧಗಳ ವಿಚಾರ ಬಂದಾಗ ಟಿಪ್ಪು ಸುಲ್ತಾನ್ ಹಾಗೂ ಹೈದರ್ ಅಲಿ ಬಗ್ಗೆ ಮಾಹಿತಿ ನೀಡಲಾಗಿದೆ. ಅದರ ಹೊರತಾಗಿ ವಿಶೇಷವಾದ ಅಧ್ಯಾಯ ಟಿಪ್ಪು ಸುಲ್ತಾನ್ ಗೆ ಬರೆಯಲಾಗಿಲ್ಲ. ಇವರು ಇಂಥಾ ಕಾರಣ ಕೊಟ್ಟು ಅವರಿಗೆ ಬೇಕಾದ ಪಠ್ಯ ಸೇರಿಸಿ ವಿವಾದ ಹುಟ್ಟು ಹಾಕಿದ್ದಾರೆ. ಹೀಗೆ ಪತ್ರಿಕಾಗೋಷ್ಠಿ ನಡೆಸಿ ಶಿಕ್ಷಣ ಸಚಿವರು ಹೇಳಿದ್ದೆಲ್ಲವೂ ಸುಳ್ಳು. ಸತ್ಯ ಏನು ಅಂತ ನನ್ನ ಬಳಿ ದಾಖಲೆ ಸಮೇತ ಇದೆ ಎಂದು ಕಿಡಿ ಕಾರಿದ್ದಾರೆ.
ಈಗಾಗಲೇ ಪಠ್ಯ ಪುಸ್ತಕಗಳಲ್ಲಿ ಬ್ರಾಹ್ಮಣೀಕರನ ಮಾಡಲಾಗಿದೆ ಎಂದು ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಬೃಹತ್ ಟ್ವಿಟರ್ ಅಭಿಯಾನ ಕೂಡ ನಡೆದಿದ್ದು, ದೇಶದಲ್ಲೇ #RejectRSSTextBook ಹಾಗೂ #RejectBrahminTextBook ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ನಡೆಸಲಾಗಿದ್ದು, ನಂಬರ್ 1 ಟ್ರೆಂಡಿಂಗ್ ನಲ್ಲಿತ್ತು. ಇದಾದ ಬಳಿಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ್ದರು. ಇದೀಗ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪನವರು ಶಿಕ್ಷಣ ಸಚಿವರಿಗೆ ತಿರುಗೇಟು ನೀಡಿದ್ದಾರೆ.