ಸಾವಿರಾರು ಕೋಟಿ ರುಪಾಯಿ ವಂಚನೆ ಮಾಡಿ ವಿದೇಶಗಳಿಗೆ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮಾಡಿದ ಆರ್ಥಿಕ ವಂಚನೆಯಿಂದಾಗಿ ನಷ್ಟ ಅನುಭವಿಸಿದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ , 8,441 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ವರ್ಗಾಯಿಸಿದೆ. ಈ ವರ್ಗಾವಣೆಯೊಂದಿಗೆ, ಇದುವರೆಗೆ ಜಾರಿ ನಿರ್ದೇಶನಾಲಯ ಬ್ಯಾಂಕುಗಳಿಗೆ ಹಸ್ತಾಂತರಿಸಲಾದ ಆಸ್ತಿಯ ಮೌಲ್ಯ ಒಟ್ಟು 9,371.17 ಕೋಟಿ ರೂ.ಗಳಿಗೆ ತಲುಪಿದೆ.
ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ, ಒಟ್ಟಾರೆ 22,586 ಕೋಟಿ ವಂಚಿಸಿದ್ದಾರೆ. ಅದರಲ್ಲಿ 80.45% ( 18,170 ಕೋಟಿ) ವಶಪಡಿಸಿಕೊಂಡಿರುವುದಾಗಿ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಮೂವರು ಆರೋಪಿಗಳು ವಾಸಿಸುತ್ತಿರುವ ದೇಶಗಳಿಗೆ ಹಸ್ತಾಂತರದ ಕೋರಿಕೆಗಳನ್ನು ಕಳುಹಿಸಲಾಗಿದೆ ಎಂದು ಇಡಿ ತಿಳಿಸಿದೆ. ಮಲ್ಯ ಮತ್ತು ಮೋದಿ ಲಂಡನ್ನಲ್ಲಿ (ಯುಕೆ) ವಾಸಿಸುತ್ತಿದ್ದರೆ, ಚೋಕ್ಸಿ ಭಾರತದಿಂದ ಓಡಿಹೋದ ನಂತರ ಆಂಟಿಗುವಾ ಮತ್ತು ಬಾರ್ಬುಡಾವನ್ನು ವಾಸಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಈ ಮೂವರು ವಂಚಕರಿಂದ 18,170.02 ಕೋಟಿ ರೂಗಳ (ಬ್ಯಾಂಕುಗಳ ಒಟ್ಟು ನಷ್ಟದ 80.45%) ಆಸ್ತಿಯನ್ನು ಪಿಎಂಎಲ್ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಈ ಪೈಕಿ, ಒಂದು ಭಾಗ (9,371.17 ಕೋಟಿ ರೂ)ದ ಆಸ್ತಿಯನ್ನು ಸರ್ಕಾರಿ ಬ್ಯಾಂಕುಗಳು ಮತ್ತು ಸರ್ಕಾರಕ್ಕೆ ಇಡಿ ವರ್ಗಾಯಿಸಿದೆ.
ಮುಂಬೈನ ವಿಶೇಷ ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್ಎ) ಯ ಆದೇಶದ ಪ್ರಕಾರ ಸಂಸ್ಥೆಯು ಸುಮಾರು 6,600 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಎಸ್ಬಿಐ ನೇತೃತ್ವದ ಒಕ್ಕೂಟ ಬ್ಯಾಂಕುಗಳಿಗೆವರ್ಗಾಯಿಸಿದೆ. ಷೇರುಗಳ ಮಾರಾಟದಿಂದ 800 ಕೋಟಿ ರೂ.ಗಳ ಹೆಚ್ಚುವರಿ ಹಣವು ಜೂನ್ 25 ರೊಳಗೆ ದೊರೆಯಬಹುದು ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಲ್ಯ ಮತ್ತು ಮೋದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಭಾರತದ ಪಿಎಂಎಲ್ಎ (PML) ನ್ಯಾಯಾಲಯ ಘೋಷಿಸಿದೆ.
ಮಲ್ಯ ಅವರ ಕಿಂಗ್ಫಿಶರ್ ಏರ್ಲೈನ್ಸ್ ಮೇಲೆ ಬ್ಯಾಂಕುಗಳ ಒಕ್ಕೂಟಕ್ಕೆ ₹9,000 ಕೋಟಿಗೂ ಅಧಿಕ ವಂಚಿಸಿದ ಆರೋಪವಿದ್ದರೆ, ಮೋದಿ ಮತ್ತು ಚೋಕ್ಸಿ ಇಬ್ಬರೂ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗೆ ₹14,500 ಕೋಟಿ ಮೌಲ್ಯ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಮೋದಿಯನ್ನು 2019 ರ ಮಾರ್ಚ್ 19 ರಂದು ಬಂಧಿಸಿ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿ ಇರಿಸಲಾಗಿದೆ. ಜೈಲಿನಿಂದ, ವೀಡಿಯೊ ಮೂಲಕ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಒಮ್ಮೆ ಭಾರತಕ್ಕೆ ಹಸ್ತಾಂತರಿಸಲ್ಪಟ್ಟರೆ, ಮೋದಿಯನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗುವುದು, ಅದಕ್ಕೆಂದೆ. ಅವರಿಗೆ ವಿಶೇಷ ಕೋಣೆ ಬ್ಯಾರಕ್ 12 ಅನ್ನು ಸಿದ್ಧಪಡಿಸಿಡಲಾಗಿದೆ. ಈ ಬ್ಯಾರಕ್ನಲ್ಲಿ ಈ ಹಿಂದೆ ವಿಜಯ್ ಮಲ್ಯಾಗೆ ಸಿದ್ಧಪಡಿಸಿದ್ದರೆ, ಮೋದಿಗೆ ಮೂರು ಚದರ ಮೀಟರ್ ವೈಯಕ್ತಿಕ ಸ್ಥಳ ಸಿಗುವ ಸಾಧ್ಯತೆ ಇದೆ, ಅಲ್ಲಿ ಹತ್ತಿ ಹಾಸಿಗೆ, ದಿಂಬು, ಬೆಡ್ಶೀಟ್ ಮತ್ತು ಕಂಬಳಿ ನೀಡಲಾಗುವುದು ಎಂದು ವರದಿಗಳು ತಿಳಿಸಿವೆ.
ಹಸ್ತಾಂತರ ಪ್ರಕ್ರಿಯೆ ಕುರಿತು ಯುಕೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ವಿಜಯ್ ಮಲ್ಯ ಅವರಿಗೆ ಅನುಮತಿ ನಿರಾಕರಿಸಲಾಗಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವುದು ಬಹುತೇಕ ಅಂತಿಮವಾಗಿದೆ. ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಕೂಡ ಅಂತಿಮವಾಗಿದೆ. ಆದರೆ, ಮೆಹುಲ್ ಚೋಕ್ಸಿ ಮಾತ್ರ ಹಸ್ತಾಂತರ ಪ್ರಕ್ರಿಯೆ ಕುರಿತು ಇನ್ನೂ ಕಾನೂನು ಹೋರಾಟ ನಡೆಯುತ್ತಿದೆ.