ದೇಶದಲ್ಲಿ ಕರೋನಾ ಎರಡನೇ ಅಲೆಗೆ ಚುನಾವಣಾ ಆಯೋಗವೇ ಕಾರಣವೆಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಿಸಿದೆ. ಕರೋನಾದ ಎರಡನೇ ಅಲೆಯಿಂದಾಗಿ ಉಂಟಾದ ಸಾವು-ನೋವುಗಳ ಜವಾಬ್ದಾರಿಯನ್ನು ಚುನಾವಣಾ ಆಯೋಗದ ಮೇಲೆಯೇ ಕೋರ್ಟ್ ಹೊರಿಸಿದೆ.
ಇಷ್ಟು ಸಾವುಗಳಿಗೆ ಕಾರಣವಾದ ಚುನಾವಣಾ ಆಯೋಗದ ಮೇಲೆ ಜನರ ಸಾಮೂಹಿಕ ಕೊಲೆ ಮಾಡಿದ ಪ್ರಕರಣ ದಾಖಲಿಸಬಹುದು. ಚುನಾವಣಾ ಆಯೋಗ ಒಂದು ಅತ್ಯಂತ ಬೇಜವಾಬ್ದಾರಿಯುತ ಸಂಸ್ಥೆ, ಅದರ ಅಧಿಕಾರಿಗಳನ್ನು ಕೊಲೆ ಪ್ರಕರಣದಡಿಯಲ್ಲಿ ಬಂಧಿಸಬಹುದು ಎಂದು ಕೋರ್ಟ್ ಹೇಳಿದೆ.
ರಾಜಕೀಯ ಪಕ್ಷಗಳಿಗೆ ಬೃಹತ್ ರ್ಯಾಲಿಗಳಿಗೆ, ಚುನಾವಣಾ ಪ್ರಚಾರಕ್ಕೆ ಅವಕಾಶ ಕೊಟ್ಟಿರುವುದೇ ಕರೋನಾ ಹರಡುವಿಕೆಗೆ ಕಾರಣವೆಂದು ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ, ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ನ್ಯಾಯಪೀಠವು, ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧಗಳನ್ನು ಗಾಳಿಗೆ ತೂರುತ್ತಿರುವಾಗ ಚುನಾವಣಾ ಆಯೋಗ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದಿದೆ ಹೈಕೋರ್ಟ್. ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ವಿಫಲವಾಗಿರುವುದಕ್ಕೆ ವಿಚಾರಣೆಗೊಳಪಡಿಸಬೇಕು ಎಂದಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನ ಅಂದರೆ ಮೇ 2ರಂದು ಯಾವ ರೀತಿಯಲ್ಲಿ ಕೊವಿಡ್ ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂಬುದರ ಬಗ್ಗೆ ನೀಲನಕ್ಷೆ ಸಲ್ಲಿಸುವಂತೆ ತಮಿಳುನಾಡಿನ ಮುಖ್ಯ ಚುನಾವಣಾ ಅಧಿಕಾರಿಗೆ ಹೈಕೋರ್ಟ್ ಆದೇಶಿಸಿದೆ. ಒಂದು ವೇಳೆ ನೀಲಿ ನಕ್ಷೆ ಸಲ್ಲಿಸಲು ಚುನಾವಣಾ ಆಯೋಗ ವಿಫಲವಾದರೆ ತಮಿಳುನಾಡಿನಲ್ಲಿ ಮತಎಣಿಕೆ ಪ್ರಕ್ರಿಯೆಯನ್ನೇ ನಿಲ್ಲಿಸುತ್ತೇವೆ ಎಂದು ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಜನರ ಆರೋಗ್ಯ ಬಹಳ ಮುಖ್ಯ ಎಂದು ಸಾಂವಿಧಾನಿಕ ಸಂಸ್ಥೆಗಳನ್ನು ಎಚ್ಚರಿಸಬೇಕಾಗಿದೆ ಎಂಬುದು ಬೇಸರದ ಸಂಗತಿ. ನಾಗರಿಕನು ಬದುಕುಳಿದರೆ ಮಾತ್ರ ಅವನಿಗೆ ಪ್ರಜಾಪ್ರಭುತ್ವವು ಖಾತರಿಪಡಿಸುವ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಾವು ಪ್ರತಿನಿಧಿಸುವ ಕರೂರ್ ಕ್ಷೇತ್ರದಲ್ಲಿ ಮತಎಣಿಕೆ ವೇಳೆ ಕರೊನಾ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಕೋರಿ ತಮಿಳುನಾಡು ಸಾರಿಗೆ ಸಚಿವ ಎಂಆರ್ ವಿಜಯಭಾಸ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ..