ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಎರಡು ಅನ್ಯಕೋಮಗಳ ಗುಂಪಿನ ನಡುವೆ ಬುಧವಾರ ಮಾರಮಾರಿ ನಡೆದಿದೆ. ಗಲಾಟೆಯಲ್ಲಿ ಇಬ್ಬರಿಗೆ ಚೂರಿ ಇರಿತವಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಮುನ್ನೇಚ್ಚರಿಕೆ ಕ್ರಮವಾಗಿ ಕೆರೂರು ಪಟ್ಟಣದಲ್ಲಿಯ ಎಲ್ಲಾ ಶಾಲಾ ಕಾಲೇಜುಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿವರೆಗೂ ಕೆರೂರ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಸ್ ನಿಲ್ದಾಣದ ಬಳಿ ಎರಡು ಯುವಕರ ಗುಂಪುಗಳ ಮಧ್ಯೆ ನಡೆದ ಗಲಾಟೆ ಗುಂಪು ಘರ್ಷಣೆಗೆ ಕಾರಣವಾಗಿದೆ. ಗುಂಪು ಘರ್ಷಣೆಯಲ್ಲಿ ಗಾಯಗೊಂಡವರನ್ನು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರಣ್ ಮತ್ತು ಆತನ ಸಹೋದರ ಹಾಗೂ ಯಮನೂರು ಎಂದು ಗುರುತಿಸಲಾಗಿದೆ ಎಂದು ANI ವರದಿ ಮಾಡಿದೆ.
ಈ ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಗುಂಪು ಘರ್ಷಣೆ ಶುರುವಾಗಿದೆ. ದುಷ್ಕರ್ಮಿಗಳು ಅಂಗಡಿ, ತರಕಾರಿ ಮಾರುವ ಗಾಡಿ, ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ನಂತರ ಕೆರೂರನ ಮಾರುಕಟ್ಟೆ, ಬಸ್ ನಿಲ್ದಾಣ ಪ್ರದೇಶದಲ್ಲಿ ಹಲವಾರು ಬೈಕ್ ಜಖಂಗೊಳಿಸಲಾಗಿದೆ ಎಂದು ANI ವರದಿ ಮಾಡಿದೆ.
ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಎಸ್ ಪಿ ಜಯಪ್ರಕಾಶ್ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ವೈಯಕ್ತಿಕ ಸಮಸ್ಯೆಗಳಿಂದ ಕೆರೂರು ಘಟನೆ ನಡೆದಿದೆ. ಪೊಲೀಸರು ಈಗಾಗಲೇ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಮತ್ತು ಕೆಲವು ಬಂಧನಗಳನ್ನು ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಂತಿ ಕಾಪಾಡಲು ನಾವು ಎರಡೂ ಸಮುದಾಯಗಳಿಗೆ ಸೂಚನೆ ನೀಡಿದ್ದೇವೆ. ನಮ್ಮ ಹಿರಿಯ ಅಧಿಕಾರಿಗಳು, ಡಿಸಿ ಸ್ಥಳದಲ್ಲಿದ್ದಾರೆ ಎಂದ ಹೇಳಿದ್ದಾರೆ.