ಬೆಂಗಳೂರು : ರಾಜ್ಯದಲ್ಲಿನ ಸಚಿವ ಸಂಪುಟ ವಿಸ್ತರಣೆಯ ವಿಚಾರ ಗಜ ಪ್ರಸವದಂತಾಗಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೊಪ್ಪು ಹಾಕುತ್ತಿಲ್ಲ. ಕಳೆದ ವಾರವೂ ಬರಿಗೈಯಲ್ಲಿ ವಾಪಸ್ಸಾಗಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ ಹಾರಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಈಗಾಗಲೇ ರಾಜ್ಯದಲ್ಲಿ ಸಾಲು ಸಾಲು ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಒಂದೆಡೆ ಭೀಕರ ಬರದ ಸನ್ನಿವೇಶ ನಿರ್ಮಾಣವಾಗಿದ್ದರೆ, ಇನ್ನೊಂದೆಡೆ ತಮಿಳುನಾಡಿಗೆ 15 ದಿನಗಳ ಕಾಲ 3.500 ಕ್ಯೂಸೆಕ್ ನೀರನ್ನು ಹರಿಸುವ ಕಾವೇರಿ ನೀರು ನಿಯಂತ್ರಣಾ ಮಂಡಳಿಯ ಆದೇಶವೂ ರಾಜ್ಯದ ಅನ್ನದಾತರಿಗೆ ಮರಣ ಶಾಸನ ಬರೆಯುತ್ತಿದೆ. ಈ ಎಲ್ಲದರ ನಡುವೆ ಜನರ ಸಂಕಷ್ಟಗಳಿಗೆ ಧ್ವನಿಯಾಗಬೇಕಿದ್ದ ಮಂತ್ರಿಗಳು ಹಾಗೂ ಶಾಸಕರು ದೆಹಲಿಯಲ್ಲಿ ಠಿಕಾಣಿ ಹೂಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೃಹತ್ ಹೋರಾಟಗಳು ನಡೆಯುತ್ತಿವೆ. ಅಲ್ಲದೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡುವ ಚಿಂತನೆಯಲ್ಲಿವೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ರಾಜ್ಯದ ಜನರ ನೋವು ಆಲಿಸುವುದರ ಜೊತೆಗೆ ಹಿತ ಕಾಪಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಆದರೆ ಸಂಪುಟ ವಿಸ್ತರಣೆಯ ಕಸರತ್ತಿಗೆ ಜೋತು ಬಿದ್ದು ಸರ್ಕಾರ, ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಅಲ್ಲದೆ ಹೈಕಮಾಂಡ್ ಮಟ್ಟದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬೆಲೆಯೇ ಇಲ್ಲದಾಯಿತೆ? ಅಥವಾ ಕರ್ನಾಟಕವಂದ್ರೆ ಅಷ್ಟು ಅಸಡ್ಡೆಯಾಯ್ತಾ ಎಂಬ ಪ್ರಶ್ನೆಗಳು ಮೂಡುತ್ತಿವೆ. ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬರ ಆವರಿಸಿದ್ದು, ಜನರ ನೋವುಗಳಿಗೆ ಸ್ಪಂದಿಸುವವರು ಯಾರು? ಇಡೀ ಸರ್ಕಾರವೇ ದೆಹಲಿಯಲ್ಲಿ ಹೋಗಿ ಕುಳಿತಿದೆ. ಇವರಿಗೆ ಜನರ ಬಗ್ಗೆ ಯಾವುದೇ ಚಿಂತೆಯಿಲ್ಲ, ಸಂಪುಟ ವಿಸ್ತರಣೆಯೇ ಅಷ್ಟೊಂದು ಮುಖ್ಯನಾ ಎಂಬ ಪ್ರಶ್ಬೆಗಳನ್ನು ವಿಪಕ್ಷಗಳು ಎತ್ತುತ್ತಿವೆ.
ಇದನ್ನೂ ಓದಿ : ಕಾವೇರಿ ಕಿಚ್ಚು ಮತ್ತೆ ಭುಗಿಲು : ಕರ್ನಾಟಕ ಬಂದ್ ಎಚ್ಚರಿಕೆ!?
ಜೂನ್ 3 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿಕೆ ಶಿವಕುಮಾರ್ ಸರ್ಕಾರ ಟೇಕ್ ಆಫ್ ಆಗುತ್ತಿದ್ದ ಈ ಸಮಯದಲ್ಲಿ ಜನಾಕ್ರೋಶಕ್ಕೆ ತುತ್ತಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಕುಳಿತಿರುವ ರಾಜ್ಯ ನಾಯಕರಿಗೂ ಹೈಕಮಾಂಡ್ ನಡೆಯು ಅಸಮಾಧಾನಕ್ಕೆ ಕಾರಣವಾಗಿದೆ. ಮೂರು ದಿನಗಳಾದರೂ ಯಾವುದೇ ರೀತಿಯ ಸಮರ್ಪಕ ಚರ್ಚೆ ನಡೆಸದೆ ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಳ್ಳುವ ರೀತಿಗೆ ರಾಜ್ಯ ಕೈ ಹಿರಿಯ ನಾಯಕರು ರೋಸಿ ಹೋಗಿದ್ದಾರೆ. ಈ ಸಂಪುಟದ ಸಹವಾಸವೇ ಬೇಡ ಎಂದು ಕೆಲವು ಶಾಸಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಬೆಂಗಳೂರು ವಿಮಾನ ಹತ್ತಿದ್ದಾರೆ.
ಶಾಸಕರು ಹಾಗೂ ಸ್ವತಃ ಮುಖ್ಯಮಂತ್ರಿಯ ತಾಳ್ಮೆ ಪರೀಕ್ಷೆ ನಡೆಸುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಡೀ ಹೈಕಮಾಂಡ್ ಸಮಯ ನೀಡದೆ ಸತಾಯಿಸುತ್ತಿದೆ. ಲೋಕಸಭೆಯ ಕಲಾಪಗಳು ನಡೆಯುತ್ತಿವೆ. ಆದರೂ ಕಾಂಗ್ರೆಸ್ ಅಧಿಕಾರದಲ್ಲಿರುವ ಬೆರಳೆಣಿಕೆಯಷ್ಟು ರಾಜ್ಜಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹೀಗಿದ್ದಾಗಲೂ 20 ಜನರ ಹೆಸರನ್ನು ಅಂತಿಮಗೊಳಿಸುವಲ್ಲಿ ಯಾಕೆ ನಿರ್ಲಕ್ಷ್ಯ ಧೋರಣೆ ಎನ್ನುವುದು ಕಾಂಗ್ರೆಸ್ ಪಾಳಯದಲ್ಲಿನ ಬೇಸರದ ಮಾತುಗಳಾಗಿವೆ.

ಸಚಿವರ ಪ್ರಮಾಣ ವಚನಕ್ಕೆ ಸಿದ್ಧತೆಗಳನ್ನು ಮಾಡಿಕೊಂಡು ಬಳಿಕ ರದ್ದು ಪಡಿಸುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ತಿಬ್ಬಾದೇವಿ ಟೆಂಟ್ ಹೌಸ್ ಕೂಡ ಸರ್ಕಾರದ ಹೇಳಿದಂತೆ ಟೆಂಟ್ ಹಾಕಿ ಇಳಿಸುವ ಕೆಲಸ ಮಾಡಿದೆ. ಇಷ್ಟೇ ಅಲ್ಲದೆ ಭದ್ರತೆಗಾಗಿ ಪೊಲೀಸರು ಕಾರ್ಯನಿರ್ವಹಿಸುವ ಸ್ಥಳಗಳನ್ನು ಗುರುತಿಸಿ ಇಲಾಖೆ ಆದೇಶ ಹೊರಡಿಸಿದೆ. ಆದರೆ ನೂತನ ಸಚಿವರ ಪ್ರಮಾಣ ವಚನ ಯಾವಾಗ ಎಂಬುವುದು ಇದುವರೆಗೂ ಸ್ಪಷ್ಟವಾಗಿ ತಿಳಿಯದಿರುವುದು ಎಲ್ಲದಕ್ಕೂ ಗೊಂದಲ ಮೂಡುವಂತೆ ಮಾಡಿದೆ.
ಅಲ್ಲದೆ ಕಾಂಗ್ರೆಸ್ ನಾಯಕರ ದೆಹಲಿ ಟೂರ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಇದು ಸಮಯ ಕಳೆಯಲು ಮತ್ತು ಲಾಯಲ್ಟಿ ಪಾಯಿಂಟ್ಗಳನ್ನು ಗಳಿಸಲು ಉತ್ತಮ ದಾರಿಯಾಗಿದೆ ಶುಭವಾಗಲಿ ಎಂದು ವ್ಯಂಗ್ಯವಾಡಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡುತ್ತಿದ್ದ ಭಾಷಣ ನೋಡುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದ ಸಿಎಂ ಡಿಕೆ ಶಿವಕುಮಾರ್ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿರುವ ಸಂತೋಷ್ ರಾಜ್ಯ ನಾಯಕರ ಸ್ಥಿತಿಯ್ನನು ಟೀಕಿಸಿದ್ದಾರೆ.
ಹೈಕಮಾಂಡ್ ಸಂಸ್ಕೃತಿಗೆ ಜೋತು ಬಿದ್ದಿರುವ ರಾಷ್ಟ್ರೀಯ ಪಕ್ಷಗಳು ಪ್ರತಿಯೊಂದಕ್ಕೂ ದೆಹಲಿಯ ನಾಯಕರ ಬಾಗಿಲು ತಟ್ಟುವ ಸ್ಥಿತಿ ಮುಂದುವರೆದಿದೆ. ಇದರಿಂದ ಈ ಪಕ್ಷಗಳನ್ನು ಬೆಂಬಲಿಸಿರುವ ಜನ ಸಾಮಾನ್ಯರ ಕಷ್ಟ,ನಷ್ಟ ನೋವು – ನಲಿವುಗಳನ್ನು ಕೇಳೋರೆ ಇಲ್ಲದಂತಾಗಿದೆ. ಸದ್ಯ ರಾಜ್ಯದಲ್ಲೂ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಜನರು ಕಾಂಗ್ರೆಸ್ ನಾಯಕರ ವರ್ತನೆಗೆ ಹಿಡಿಶಾಪ ಹಾಕುತ್ತಿದ್ದಾರೆ.






