ಔಷಧ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಕ್ಷೇತ್ರದಲ್ಲಿ ಕತ್ತೆ ಹಾಲನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಭಾರತದ ಮಟ್ಟಿಗೆ ಹಾಲಿನ ಉದ್ಯಮದಲ್ಲಿ ಕತ್ತೆಯ ಹಾಲು ಎನ್ನುವುದು ಬಹುತೇಕ ಅಪರಿಚಿತವೇ. ದನದ ಹಾಲಿನ ಜೊತೆ ಉಪ ಉತ್ಪನ್ನವಾಗಿಯೂ ಕತ್ತೆ ಹಾಲು ಇಲ್ಲಿ ಲಭ್ಯವಿಲ್ಲ. ಆದರೆ ಅಪರೂಪದಲ್ಲಿ ಅಪರೂಪವೆಂಬಂತೆ ಕರ್ನಾಟಕದ ಶ್ರೀನಿವಾಸ ಗೌಡ ಈ ಉದ್ಯಮದಲ್ಲಿ ತೊಡಗಿಕೊಂಡಿದ್ದೂ ಅಲ್ಲದೆ ಯಶಸ್ವಿಯೂ ಆಗಿದ್ದಾರೆ.
BA ಪದವೀಧರರಾಗಿರುವ ಶ್ರೀನಿವಾಸ್ ಗೌಡ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು 2020ರಲ್ಲಿ ತಮ್ಮಕೆಲಸ ತೊರೆದು ದಕ್ಷಿಣ ಕನ್ನಡ ಜಿಲ್ಲೆಯ ಇರಾ ಗ್ರಾಮದಲ್ಲಿ 2.3 ಎಕರೆ ಜಮೀನಿನಲ್ಲಿ ಐಸಿರಿ ಫಾರ್ಮ್ಸ್ ಅನ್ನು ಪ್ರಾರಂಭಿಸಿದರು. ಐಸಿರಿ ಫಾರ್ಮ್ಸ್ ಕೃಷಿ ಮತ್ತು ಪಶುಸಂಗೋಪನೆ, ಪಶುವೈದ್ಯಕೀಯ ಸೇವೆಗಳು, ತರಬೇತಿ ಮತ್ತು ಮೇವು ಅಭಿವೃದ್ಧಿ ಕೇಂದ್ರವಾಗಿದೆ. “ನಾನು ಈ ಹಿಂದೆ 2020 ರವರೆಗೆ ಸಾಫ್ಟ್ವೇರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೆ. ಇದು ಕರ್ನಾಟಕದ ಮೊದಲ ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರವಾಗಿದೆ” ಎಂದು ಶ್ರೀನಿವಾಸ್ ಗೌಡ ಸುದ್ದಿ ಸಂಸ್ಥೆ ANI ಜೊತೆ ಮಾತಾಡುತ್ತಾ ತಿಳಿಸಿದ್ದಾರೆ.
ಗೌಡರು ಮೊದಲು ಮೇಕೆ, ಮೊಲ, ಕಡಕ್ನಾಥ್ ಕೋಳಿ ಸಾಕಣೆ ಆರಂಭಿಸಿದರು. ಈಗ ಕತ್ತೆ ಫಾರಂನಲ್ಲಿ ಸುಮಾರು 20 ಕತ್ತೆಗಳನ್ನು ಸಾಕುತ್ತಿದ್ದಾರೆ. ಎಲ್ಲರ ಮನೆಯಲ್ಲಿ ವಾಷಿಂಗ್ ಮೆಷಿನ್ ಇರುವುದರಿಂದ ಅಗಸರು ಈಗ ಕತ್ತೆ ಸಾಕುತ್ತಿಲ್ಲ, ಆದುದರಿಂದ ಹಲವು ಕತ್ತೆಯ ಪ್ರಭೇದಗಳು ಅಳಿವಿನಂಚಿಗೆ ಸರಿದಿದೆ ಎನ್ನುವ ಅವರು “ಸದ್ಯ ನಮ್ಮ ಬಳಿ 20 ಕತ್ತೆಗಳಿದ್ದು, ಸುಮಾರು ₹42 ಲಕ್ಷ ಹೂಡಿಕೆ ಮಾಡಿದ್ದೇನೆ. ಸಾಕಷ್ಟು ಔಷಧೀಯ ಅನುಕೂಲಗಳನ್ನು ಹೊಂದಿರುವ ಕತ್ತೆ ಹಾಲನ್ನು ಮಾರಾಟ ಮಾಡಲು ಮುಂದಾಗಿದ್ದೇವೆ. ಕತ್ತೆ ಹಾಲು ಎಲ್ಲರಿಗೂ ಸಿಗಬೇಕು ಎಂಬುದು ನಮ್ಮ ಕನಸು” ಎನ್ನುತ್ತಾರೆ.
42 ವರ್ಷದ ಶ್ರೀನಿವಾಸ ಗೌಡರು ಜೂನ್ 8 ರಂದು ಫಾರ್ಮ್ ಅನ್ನು ತೆರೆದಿದ್ದಾರೆ. ಇದು ಕರ್ನಾಟಕದ ಮೊದಲ ಕತ್ತೆ ಹಾಲಿನ ಫಾರ್ಮ್ ಆಗಿದ್ದು ದೇಶದಲ್ಲಿ ಎರಡನೆಯದು ಎನ್ನಲಾಗಿದೆ. ಮೊದಲ ಕತ್ತೆ ಹಾಲಿನ ಫಾರ್ಮ್ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿದೆ. ಕತ್ತೆ ಫಾರಂ ಆರಂಭಿಸುವ ಬಗ್ಗೆ ಮೊದಲು ಹಂಚಿಕೊಂಡಾಗ ಅವರ ಸ್ನೇಹಿತರೇ ಅವರನ್ನು ಗೇಲಿ ಮಾಡಿದ್ದರು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅವರು ಕತ್ತೆ ಫಾರಂ ಪ್ರಾರಂಭಿಸಿ ಈಗ ಜನರಿಗೆ ಕತ್ತೆ ಹಾಲನ್ನು ಪ್ಯಾಕೆಟ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪೂರೈಸಲು ಯೋಜಿಸುತ್ತಿದ್ದಾರೆ. ಒಂದು ಹಾಲಿನ ಪ್ಯಾಕೆಟ್ಗೆ ₹ 150 ವರೆಗೆ ವೆಚ್ಚವಾಗಲಿದೆ ಮತ್ತು ಮಾಲ್ಗಳು, ಅಂಗಡಿಗಳು ಮತ್ತು ಸೂಪರ್ಮಾರ್ಕೆಟ್ಗಳ ಮೂಲಕ ವಿತರಿಸಲಾಗುವುದು ಎಂದು ಅವರು ಹೇಳುತ್ತಾರೆ.
ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಕತ್ತೆಯ ಹಾಲನ್ನು ಬಳಸುವುದರಿಂದ, ಗೌಡರು ಅಂತಹ ಉತ್ಪನ್ನಗಳನ್ನು ತಯಾರಿಸುವ ಬ್ರ್ಯಾಂಡ್ಗಳು ಮತ್ತು ಕಂಪನಿಗಳಿಗೆ ಹಾಲನ್ನು ಮಾರಾಟ ಮಾಡಲು ಯೋಜಿಸಿದ್ದಾರೆ. ಈಗಾಗಲೇ ₹17 ಲಕ್ಷ ಮೌಲ್ಯದ ಆರ್ಡರ್ಗಳು ಬಂದಿವೆ ಎಂದು ಹೇಳುವ ಅವರು ಯಶಸ್ವಿ ಸ್ವ ಉದ್ಯಮಿ ಆಗುವ ಕಡೆ ದೃಢವಾದ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ಮೂಲ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.