COVID-19 ಅನ್ನು ನಿವಾರಿಸುತ್ತದೆ ಎಂಬ ನಂಬಿಕೆಯಲ್ಲಿ ಹಸುವಿನ ಸಗಣಿ ಬಳಸುವ ಅಭ್ಯಾಸದ ವಿರುದ್ಧ ಭಾರತ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇದು ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಆದರೆ ಇತರ ರೋಗಗಳನ್ನು ಹರಡುವ ಅಪಾಯ ಖಂಡಿತಾ ಇದೆ ಹೇಳಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಭಾರತದಲ್ಲಿ ಇದುವರೆಗೆ 22.66 ಮಿಲಿಯನ್ ಪ್ರಕರಣಗಳು ಮತ್ತು 246,116 ಸಾವುಗಳು ವರದಿಯಾಗಿವೆ. ತಜ್ಞರ ಪ್ರಕಾರ ನಿಜವಾದ ಸಂಖ್ಯೆಗಳು ಐದರಿಂದ 10 ಪಟ್ಟು ಹೆಚ್ಚಿರಬಹುದು ಮತ್ತು ದೇಶಾದ್ಯಂತದ ನಾಗರಿಕರು ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಅಥವಾ ಔಷಧಿಗಳನ್ನು ದೊರಕಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆಕ್ಸಿಜನ್ ಇಲ್ಲದೆಯೇ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹಿಂದೂ ಧರ್ಮದಲ್ಲಿ ಹಸು ಪವಿತ್ರ ಅನ್ನಿಸಿಕೊಂಡಿದೆ. ಶತಮಾನಗಳಿಂದಲೂ ಹಿಂದುಗಳು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಮತ್ತು ಪ್ರಾರ್ಥನಾ ವಿಧಿಗಳಿಗಾಗಿ ಹಸುವಿನ ಸೆಗಣಿಗಳನ್ನು ಬಳಸುತ್ತಿದ್ದಾರೆ. ಇದು ಚಿಕಿತ್ಸಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ ಎಂದು ನಂಬುತ್ತಾರೆ.
ಗುಜರಾತ್ನಲ್ಲಿ ಕೆಲವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಥವಾ ಕರೋನವೈರಸ್ನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಭರವಸೆಯಿಂದ ವಾರಕ್ಕೊಮ್ಮೆ ಗೋ ಶಾಲೆಗೆ ಹೋಗಿ ತಮ್ಮ ದೇಹಕ್ಕೆ ಸೆಗಣಿ ಮತ್ತು ಗೋ ಮೂತ್ರವನ್ನು ಲೇಪಿಸುವುದು ಕಂಡುಬಂದಿದೆ.
ತಮ್ಮ ದೇಹದ ಮೇಲಿನ ಸಗಣಿ ಮತ್ತು ಮೂತ್ರದ ಮಿಶ್ರಣವು ಒಣಗಲು ಕಾಯುತ್ತಿರುವಾಗ, ಅವರು ಆಶ್ರಮದಲ್ಲಿರುವ ಹಸುಗಳನ್ನು ತಬ್ಬಿಕೊಳ್ಳುತ್ತಾರೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಯೋಗಾಭ್ಯಾಸ ಮಾಡುತ್ತಾರೆ. ನಂತರ ಸೆಗಣಿ ಮತ್ತು ಗೋಮೂತ್ರವನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ.
“ವೈದ್ಯರು ಸಹ ಇಲ್ಲಿಗೆ ಬರುವುದನ್ನು ನಾವು ನೋಡಿದ್ದೇವೆ. ಈ ಚಿಕಿತ್ಸೆಯು ಅವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಹಾಗೂ ಅವರು ಯಾವುದೇ ಭಯವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂಬುದು ಅವರ ನಂಬಿಕೆ” ಎಂದು ಔಷಧೀಯ ಕಂಪನಿಯ ಸಹಾಯಕ ವ್ಯವಸ್ಥಾಪಕ ಗೌತಮ್ ಮನಿಲಾಲ್ ಬೋರಿಸಾ ಹೇಳುತ್ತಾರೆ. ಈ ಅಭ್ಯಾಸವು ಕಳೆದ ವರ್ಷ ಕೋವಿಡ್-19 ನಿಂದ ಚೇತರಿಸಿಕೊಳ್ಳಲು ನನಗೆ ಸಹಾಯ ಮಾಡಿತ್ತು ಎಂದೂ ಬೊರಿಸಾ ಹೇಳುತ್ತಾರೆ.
ಭಾರತ ಮತ್ತು ವಿಶ್ವದಾದ್ಯಂತದ ವೈದ್ಯರು ಮತ್ತು ವಿಜ್ಞಾನಿಗಳು COVID-19 ಗಾಗಿ ಪರ್ಯಾಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದರ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡಿದ್ದು, ಅದು ಸುಳ್ಳು ಭರವಸೆಗೆ ಕಾರಣವಾಗಬಹುದು ಮತ್ತು ಆರೋಗ್ಯ ಸಮಸ್ಯೆಗಳನ್ನು ಸಂಕೀರ್ಣಗೊಳಿಸಬಹುದು ಎಂದು ಹೇಳಿದ್ದಾರೆ.
“COVID-19 ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗೋ ಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ, ಇದು. ಸಂಪೂರ್ಣವಾಗಿ ನಂಬಿಕೆಯನ್ನು ಆಧರಿಸಿದೆ” ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದ್ದಾರೆ.
“ಈ ಉತ್ಪನ್ನಗಳನ್ನು ಸೇವಿಸುವುದರಿಂದ ಆರೋಗ್ಯದ ಅಪಾಯಗಳಿವೆ ಅಲ್ಲದೆ ಇತರ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು” ಎಂದೂ ಅವರು ಹೇಳುತ್ತಾರೆ.
ಅದೂ ಅಲ್ಲದೆ ಹೀಗೆ ಗೋ ಮೂತ್ರ ಸೇವಿಸಲು ಒಟ್ಟುಗೂಡುವ ಈ ಗುಂಪು ವೈರಸ್ ಹರಡಲು ಕಾರಣವಾಗಬಹುದು ಎಂಬ ಆತಂಕಗಳಿವೆ. ಏಕೆಂದರೆ ಈ ಜನರು ಗುಂಪುಗಳಲ್ಲಿ ಸೇರುವುದರಿಂದ ಸುಲಭವಾಗಿ ವೈರಸ್ನ ವಾಹಕರಾಗುವ ಅಪಾಯವಿದೆ.