ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎತ್ತಿ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ವರದಿಗಳು ಬರುತ್ತಿವೆ. ವೈದ್ಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಕೇಂದ್ರ ಬಿಜೆಪಿ ಸರ್ಕಾರದಿಂದ ಅವರೊಂದಿಗೆ ನೇರ ಮಾತುಕತೆ ನಡೆದಿರುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಇದು ಭಾರತದಲ್ಲಿ ಮೊದಲ ಘಟನೆ ಅಲ್ಲ. ಇತಿಹಾಸವನ್ನು ಸ್ವಲ್ಪ ಹಿಂದಕ್ಕೆ ತಿರುಗಿಸಿ ನೋಡಿ.

ಜಿ.ಡಿ. ಅಗರ್ವಾಲ್ ಎಂಬ ಹೆಸರನ್ನು ಕೇಳಿದ್ದೀರಾ? ಅವರು ಸಾಮಾನ್ಯ ವ್ಯಕ್ತಿಯಲ್ಲ. ಐಐಟಿ ಕಾನ್ಪುರದ ಪ್ರಾಧ್ಯಾಪಕರು. ಭಾರತದ ಪ್ರಮುಖ ಪರಿಸರ ತಜ್ಞರಲ್ಲಿ ಒಬ್ಬರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮೊದಲ ಸದಸ್ಯ-ಕಾರ್ಯದರ್ಶಿ. ಜೀವನದ ಕೊನೆಯ ಹಂತದಲ್ಲಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮಿ ಜ್ಞಾನ ಸ್ವರೂಪ್ ಸಾನಂದ ಎಂಬ ಹೆಸರಿನಲ್ಲಿ ಗಂಗೆಯನ್ನು ಉಳಿಸುವ ಹೋರಾಟಕ್ಕೆ ಇಳಿದರು.

ಅವರ ಬೇಡಿಕೆ ಏನು? “ಗಂಗೆಯನ್ನು ಉಳಿಸಿ.” ಅಷ್ಟೇ. ಗಂಗೆಯ ಸಹಜ ಹರಿವು ಉಳಿಯಬೇಕು. ನದಿಯ ಮೇಲೆ ನಿಯಂತ್ರಣವಿಲ್ಲದ ಯೋಜನೆಗಳನ್ನು ಮರುಪರಿಶೀಲಿಸಬೇಕು. ಗಂಗೆಗೆ ಕಾನೂನಿನ ಮೂಲಕ ಶಾಶ್ವತ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಒಂದೆರಡು ದಿನ ಉಪವಾಸ ಮಾಡಲಿಲ್ಲ. ಒಂದೇ ಬಾರಿ ಕೂಡ ಮಾಡಲಿಲ್ಲ. 2008ರಲ್ಲಿ ಮಾಡಿದರು. 2009ರಲ್ಲಿ ಮತ್ತೆ ಮಾಡಿದರು. 2010ರಲ್ಲಿ ಮತ್ತೆ. 2013ರಲ್ಲಿ ಮತ್ತೆ. ಆದರೆ ಕೇಂದ್ರ ಸರ್ಕಾರಗಳು ಭರವಸೆ ಕೊಟ್ಟವು. ಕೆಲವು ನಿರ್ಧಾರಗಳನ್ನೂ ತೆಗೆದುಕೊಂಡವು. ಆದರೆ ತಮ್ಮ ಮೂಲ ಬೇಡಿಕೆಗಳು ಈಡೇರಲಿಲ್ಲ ಎಂದು ಅವರಿಗೆ ಅನಿಸಿತು. ಹೀಗಾಗಿ ಮತ್ತೆ ಮತ್ತೆ ಉಪವಾಸಕ್ಕೆ ಕೂತರು. ಕೊನೆಗೆ 2018ರಲ್ಲಿ 86 ವರ್ಷದ ವಯಸ್ಸಿನಲ್ಲಿ ಮತ್ತೆ ಅಮರಣಾಂತ ಉಪವಾಸ ಆರಂಭಿಸಿದರು.

ಒಂದು ವಾರ, ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು, 111 ದಿನಗಳು. 111 ದಿನಗಳ ಕಾಲ ತಮ್ಮ ದೇಹವನ್ನೇ ಪಣಕ್ಕಿಟ್ಟು ಹೋರಾಡಿದರು. ಆ ಹೋರಾಟ ಆಸ್ಪತ್ರೆಯಲ್ಲಿ ಅಂತ್ಯವಾಯಿತು. ಜಿ.ಡಿ. ಅಗರ್ವಾಲ್ ಬದುಕಲಿಲ್ಲ. ಒಬ್ಬ ವಿಜ್ಞಾನಿ ಸತ್ತರು. ಒಬ್ಬ ಪರಿಸರ ಹೋರಾಟಗಾರ ಸತ್ತರು. ಆದರೆ ಅದರಿಂದ ದೇಶದ ಆಡಳಿತ ವ್ಯವಸ್ಥೆ ನಡುಗಿತ್ತಾ? ದೇಶವೇ ನಿಂತು ಚರ್ಚೆ ಮಾಡಿತ್ತಾ? ಖಂಡಿತಾ ಇಲ್ಲ.

ಇಂದು ಸೋನಂ ವಾಂಗ್ಚುಕ್ ಅವರ ಉಪವಾಸವನ್ನು ನೋಡಿದಾಗ ಜಿ.ಡಿ. ಅಗರ್ವಾಲ್ ಅವರ ನೆನಪು ಬರುವುದು ಅದಕ್ಕೆ. ಇದು ವ್ಯಕ್ತಿಗಳ ಬಗ್ಗೆ ಅಲ್ಲ.. ಉಪವಾಸ ಸತ್ಯಾಗ್ರಹದ ಬಗ್ಗೆ. ಒಂದು ಕಾಲದಲ್ಲಿ ಗಾಂಧೀಜಿ ಉಪವಾಸ ಮಾಡಿದರೆ ಸಾಮ್ರಾಜ್ಯವೇ ಆತಂಕಕ್ಕೊಳಗಾಗುತ್ತಿತ್ತು. ಇಂದು ಯಾರಾದರೂ ಉಪವಾಸ ಮಾಡಿದರೆ, ಸುದ್ದಿ ಎರಡು ದಿನ.

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟ್ಗಳು. ಆಮೇಲೆ ಮೌನ. ಬಹುಶಃ ಇದೇ ಹೊಸ ಭಾರತದ ವಾಸ್ತವ. ಇದು ಗಾಂಧಿಯ ಭಾರತ ಅಲ್ಲ. ಇದು ನವಭಾರತ. ಇಲ್ಲಿ ಉಪವಾಸ ಮಾಡಿದರೆ ಸರ್ಕಾರ ಕೇಳಲೇಬೇಕು ಎಂಬ ಖಾತರಿ ಇಲ್ಲ. ನಿಮ್ಮ ಧ್ವನಿ ಎಷ್ಟು ದೊಡ್ಡದೋ ಅದಕ್ಕಿಂತ, ಅದನ್ನು ಕೇಳಲು ವ್ಯವಸ್ಥೆ ಸಿದ್ಧವಾಗಿದೆಯೇ ಎಂಬುದೇ ಇಂದು ದೊಡ್ಡ ಪ್ರಶ್ನೆ. ಹೋರಾಟಗಾರರು ಉಪವಾಸ ಮಾಡಿದಾಗ ಕೇಳೋಕೆ ಇದು ಗಾಂಧಿ ಕಾಲದ ಭಾರತವಲ್ಲ..ನವಭಾರತ






