ನನ್ನ ಹಾಗೂ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಡಿಕೆಶಿಗೆ ಸಿದ್ಧರಾಮೋತ್ಸವಕ್ಕೆ ವಿರೋಧವಿದೆ ಎಂದು ಹಲವರು ಹೇಳುತ್ತಿದ್ದರು. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾದ ಹೇಳಿಕೆಗಳು . ನಾನು ಮತ್ತು ಡಿಕೆ ಶಿವಕುಮಾರ್ ಜೊತೆಯಾಗೇ ಇದ್ದೇವೆ. ಅವರು ನಾವು ಒಟ್ಟಾಗಿಯೇ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳುವ ಮೂಲಕ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ 75ನೇ ಹುಟ್ಟುಹಬ್ಬಕ್ಕೆ ಡಿಕೆಶಿ ವಿರೋಧ ಇದೆ ಎಂದು ವದಂತಿ ಹಬ್ಬಿಸಲಾಗುತ್ತಿದೆ. ಆದ್ರೆ, ನಾವಿಬ್ಬರೂ ಒಂದಾಗಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿ. ಎಸ್. ಯಡಿಯೂರಪ್ಪ ಹಾಗೂ ಈಗಿನ ಬೊಮ್ಮಾಯಿ ಸರ್ಕಾರವು ಶೇ. 40% ಕಮೀಷನ್ ಸರ್ಕಾರ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, 40% ಕಮೀಷನ್ಗೆ ಬಲಿಯಾದರು ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಯಲ್ಲೇ ದ್ವೇಷ ರಾಜಕಾರಣವು ಜನ ಶಕ್ತಿ ಎದುರು ನಿಲ್ಲೋದಿಲ್ಲ ಎಂದು ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಮಂಗಳೂರಿನಲ್ಲಿ ಪ್ರವೀಣ್, ಮಸೂದ್, ಫಾಸಿಲ್ ಕೊಲೆ ಆದಾಗ ಕೇವಲ ಪ್ರವೀಣ್ ಮನೆಗೆ ಹೋದ ಸಿಎಂ ಅವರಿಗೆ ಮಾತ್ರ ಪರಿಹಾರ ನೀಡಿದರು. ಮಸೂದ್ ಹಾಗೂ ಫಾಸಿಲ್ ಮನೆಗೆ ಏಕೆ ಹೋಗಲಿಲ್ಲ? ಅವರಿಗೆ ಏಕೆ ಪರಿಹಾರ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸವಾಲೆಸೆದರು. ಅಲ್ಪ ಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.