ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಬಳಿ ಇರುವ ಕನ್ಯಾಡಿ ಗ್ರಾಮದ ಕೃಷ್ಣ ಎಂಬ ಹೆಸರಿನ ಭಜರಂಗದಳ ಮುಖಂಡನೋರ್ವ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯಕ್ಕೆ ಸೇರಿದ ದಿನೇಶ್ ಎಂಬ ಯುವಕನನ್ನು ಹತ್ಯೆ ಮಾಡಿದ್ದಾನೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತ ದಿನೇಶ್ ತಾಯಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದಿನೇಶ್ ಮೇಲೆ ಕೃಷ್ಣ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಮನೆಗೆ ತೆರಳಿದ ದಿನೇಶ್ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದನ್ನು ಕಂಡ ಕುಟುಂಬ ಸದಸ್ಯರು ದಿನೇಶ್ ಅನ್ನು ಪ್ರಶ್ನಿಸಿದ್ದಾರೆ. ಆಗ ದಿನೇಶ್ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ಆಗ ಕುಟುಂಬ ಸದಸ್ಯರು ಕೃಷ್ಣ ಬಳಿ ಜಗಳವಾಡಿ ದಿನೇಶ್ನ ಸಂಪೂರ್ಣ ಆಸ್ಪತ್ರೆ ಖರ್ಚು ನೋಡಿಕೊಳ್ಳುವಂತೆ ತಾಕೀತು ಮಾಡಿದ್ದರು.
ಅದರಂತೆಯೇ ದಿನೇಶ್ನನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯರಾತ್ರಿ ಸುಮಾರು 2:15ರ ವೇಳೆಗೆ ಕೊನೆಯುಸಿರೆಳಿದ್ದಾನೆ.
ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಜಮೀನು ವ್ಯಾಜ್ಯವಿದ್ದ ಕಾರಣ ಕೃಷ್ಣ ಹಾಗೂ ದಿನೇಶ್ ನಡುವೆ ಮನಸ್ತಾಪ ಉಂಟಾಗಿತ್ತು. ಆದ್ದರಿಂದ ಹತ್ಯೆ ಮಾಡಿರಬಹುದು ಮತ್ತು ಇನ್ನು ಕಾರಣಗಳನ್ನು ವಿಚಾರಣೆಯ ನಂತರ ತಿಳಿಸಲಾಗುವುದು. ಸಂಜೆಯಷ್ಟರಲ್ಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.