ನೈಜದಲ್ಲಿ ಅಂಬೇಡ್ಕರ್ ಅಂತಹ ಮಹಾ ಮಾನವತಾವಾದಿಯೊಂದಿಗೆ ಸಾವರಕರ್ ಅಂತ ಜೀವವಿರೋಧಿ ಸಿದ್ಧಾಂತದ ವ್ಯಕ್ತಿಯನ್ನು ಹೋಲಿಸಬಾರದು. ಆದರೆˌ ವರ್ತಮಾನದಲ್ಲಿ ಆಗುತ್ತಿರುವ ವ್ಯಕ್ತಿ ವೈಭವೀಕರಣದ ಅವಗಢಗಳನ್ನು ವಿಮರ್ಶಿಸಲು ಇತಿಹಾಸದ ಘಟನೆಗಳ ಆಧಾರದಲ್ಲಿ ಸೈದ್ಧಾಂತಿಕ ಆಧಾರದಲ್ಲಿ ವ್ಯಕ್ತಿಗಳ ಪರಾಮರ್ಶೆ ಅಗತ್ಯವಾಗಿಬಿಡುತ್ತದೆ. ಇದೆ ಆಗಸ್ಟ್ ೯ˌ ೨೦೨೨ ರ ದಿ ಕ್ವಿಂಟ್ ವೆಬ್ ಜರ್ನಲ್ಲಿನಲ್ಲಿ ಪ್ರಕಟವಾಗಿರುವ ವಿನಾಯಕ ಚತುರ್ವೇದಿಯವರು ಬರೆದ ಅಂಕಣವನ್ನು ಆಧಾರವಾಗಿಟ್ಟುಕೊಂಡು ಸಾವರಕರ್ ಮತ್ತು ಅಂಬೇಡ್ಕರ್ ಅವರ ಕುರಿತು ಹಲವು ಆಶ್ಚರ್ಯಕರ ಸಂಗತಿಗಳನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ವಿನಾಯಕ್ ಚತುರ್ವೇದಿಯವರು ಇರ್ವಿನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಅಂಬೇಡ್ಕರ್ ಅವರ ಡೆನುನ್ಸಿಯೇಷನ್ ಆಫ್ ಹಿಂದೂಯಿಜಮ್ ಸಾವರಕರ್ ಅವರ ಪ್ಯಾನ್ ಹಿಂದೂ ಯುನಿಟಿ ಪ್ರೋಗ್ರಾಮ್ ಕುರಿತು ತುಲನಾತ್ಮಕವಾದ ವಿಶ್ಲೇಷಣೆ ಇಲ್ಲಿದೆ. ಅಂಬೇಡ್ಕರ್ ಅವರ ಹಿಂದೂ ಧರ್ಮದ ಖಂಡನೆಯು ಸಾವರ್ಕರ್ ಅವರ ಸರ್ವ-ಹಿಂದೂ ಐಕ್ಯತಾ ಕಾರ್ಯಕ್ರಮಕ್ಕೆ ಹೇಗೆ ವ್ಯತಿರಿಕ್ತವಾಗಿದೆ ಎಂಬುದು ಇಲ್ಲಿಯ ಚರ್ಚಾ ವಸ್ತು.
ಈ ಚರ್ಚೆಯ ಬಹುತೇಕ ಭಾಗವು ವಿನಾಯಕ್ ಚತುರ್ವೇದಿಯವರ ‘ಹಿಂದುತ್ವ ಮತ್ತು ಹಿಂಸೆ: ವಿ.ಡಿ. ಸಾವರ್ಕರ್ ಮತ್ತು ಇತಿಹಾಸದ ರಾಜಕೀಯ’ (ರಾಣಿಖೇತ್: ಪರ್ಮನೆಂಟ್ ಬ್ಲ್ಯಾಕ್, ೨೦೨೨ ಎಂಬ ಗ್ರಂಥದಿಂದ ಆರಿಸಲಾಗಿದೆ. ಈ ಪುಸ್ತಕವು ವಿನಾಯಕ ದಾಮೋದರ್ ಸಾವರಕರ್ ಅವರ ರಾಜಕೀಯ ಚಿಂತನೆಯಲ್ಲಿ ಇತಿಹಾಸದ ಸ್ಥಾನದ ಕಥೆಯನ್ನು ಹೇಳುತ್ತದೆ. “ಹಿಂದುತ್ವ ಒಂದು ಪದವಲ್ಲ ಆದರೆ ಇತಿಹಾಸ” ಎಂಬ ಸಾವರಕರ್ ಅವರ ಪ್ರತಿಪಾದನೆಯನ್ನು ಇದರಲ್ಲಿ ಕೂಲಂಕುಷವಾಗಿ ಪರಿಶೀಲಿಸಲಾಗಿದೆ. ಸಾವರಕರ್ ಅವರು ತಮ್ಮ ಬರಹಗಳನ್ನು ಐತಿಹಾಸಿಕ ಚರ್ಚೆಗಳಲ್ಲಿ ನೆಲೆಗೊಳಿಸಿˌ ಇತಿಹಾಸದ ಕುರಿತು ಅವರ ಬರವಣಿಗೆಯಲ್ಲಿನ ಬೆಳವಣಿಗೆಗಾಗಿ ಅವರು ತಮ್ಮ ಮೊದಲಿನ ಕೆಲಸಗಳ ಮೂಲಕ್ಕೆ ವಿಮರ್ಶೆಯ ವಸ್ತುವನ್ನು ಒದಗಿಸಿದ್ದಾರೆ. ಇದು ಶಿಸ್ತುಬದ್ಧ ಇತಿಹಾಸದ ಕ್ರಮಬದ್ಧ ಶಾಸ್ತ್ರೀಯ ಆವಿಷ್ಕಾರಗಳತ್ತ ಹಿಂತಿರುಗುವ ಮೂಲಕ ಹಿಂದೂ ಇತಿಹಾಸದ ಬರವಣಿಗೆಯನ್ನು ಪುನರ್ವಿಮರ್ಶಿಸುವ ಪ್ರಯತ್ನವಾಗಿತ್ತು. ಆದರೂ, ಸಾವರಕರ್ ಅವರು ವಾಸ್ತವವಾಗಿ ತಮ್ಮ ‘ಸಹಾ ಸೋನೆರಿ ಪಾನೆ’ ಯಲ್ಲಿನ ವಿಧಾನಗಳಲ್ಲಿ ಸ್ಥಿರತೆ ಹೊಂದಿರಲಿಲ್ಲ. ಅವರು “ಇಂದಿನ ಸಂಶೋಧನೆ” ಎಂದು ಗುರುತಿಸಲಾದ ಮೂಲಭೂತ ಶಿಷ್ಠಾಚಾರಗಳನ್ನು ಉಲ್ಲಂಘಿಸಿದ್ದಾರೆ ಎನ್ನುವುದು ಚತುರ್ವೇದಿಯವರ ಅಭಿಪ್ರಾಯ.
ಸಾವರಕರ್ ಅವರು ಪಕ್ಷಪಾತ, ಭೇದಭಾವ ಮತ್ತು ತಿರುಚಲ್ಪಟ್ಟ ಇತಿಹಾಸಗಳ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದ್ದರು; ಅವರು ೧೮೫೭ ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹಿಂದೂ ಪದ್ ಪಾದಶಾಹಿ ಸೇರಿದಂತೆ ಅನೇಕ ಬರಹಗಳಲ್ಲಿ ಇವುಗಳನ್ನು ಸೂಚಿಸಿದ್ದಾರೆ. ಸಹಾ ಸೋನೆರಿ ಪಾನೆಯಲ್ಲಿ, ಅವರು ಈ ವಿರೂಪಗಳನ್ನು ಇತಿಹಾಸಕಾರರು ಅಳವಡಿಸಿಕೊಂಡ “ಸದ್ಗುಣದ ವಿಕೃತ ಪ್ರಜ್ಞೆ” ಎಂದು ಹೇಳಿದ್ದಾರೆ. ಇದರ ಅರ್ಥವೇನು? ಅಂತಿಮವಾಗಿ, ಅವರ ಹಿಂದಿನ ವ್ಯಾಖ್ಯಾನವು ಸಾವರಕರ್ ವ್ಯಾಖ್ಯಾನಿಸಿದಂತೆ ಹಿಂದೂ ವಿಷಯಕ್ಕೆ ಆದ್ಯತೆ ನೀಡದಿದ್ದರೆ, ಅದನ್ನು ಕಟುವಾದ ಪದಗಳಿಂದ ಅಲ್ಲಗಳೆಯಲಾಗಿದೆ. ಸಾವರಕರ್ ಅವರು ವಸ್ತುನಿಷ್ಟ ಇತಿಹಾಸಕಾರರನ್ನು ಹೀಗೆ ಟೀಕಿಸುತ್ತಾರೆ: “ಮತ್ತು ಭಾರತದಂತಹ ದೇಶ . . . ಕೆಲವು ಅರೆ-ಹುಚ್ಚ ˌ ಅಸೂಯಾಪರ ಇತಿಹಾಸಕಾರರು, ವಿದೇಶಿ ಹಾಗೂ ಭಾರತೀಯ ಅಥವಾ ಡಾ. ಅಂಬೇಡ್ಕರ್ ಅವರಂತಹ ಕೆಲವು ಹಿಂದೂ-ದ್ವೇಷಿಗಳು ಅಥವಾ ಕೆಲವು ಅಜ್ಞಾನಿ ಲೇಖಕರಿಂದ ಅಪಹಾಸ್ಯಕ್ಕೊಳಗಾಗಿದೆ. ಈ ಉದ್ವೇಗವು ಸಾವರಕರ್ ಅವರ ಪುಸ್ತಕದ ಉದ್ದಕ್ಕೂ ಎದ್ದು ಕಾಣುತ್ತದೆˌ ಏಕೆಂದರೆ ಸಾವರ್ಕರ್ ಅವರು ಸಮಕಾಲೀನ ಸಂಶೋಧನೆಯನ್ನು ಪರಿಗಣಿಸುವ ನಿಯತಾಂಕಗಳೊಳಗೆ ಹಿಂದೂ ಇತಿಹಾಸದ ಬರವಣಿಗೆಯನ್ನು ಪ್ರತಿಪಾದಿಸುತ್ತಾರೆ ಎನ್ನುತ್ತಾರೆ ಚತುರ್ವೇದಿಯವರು.
ಸಾವರಕರ್ ಅವರ ಇತಿಹಾಸದ ವ್ಯಾಖ್ಯಾನ ಹಿಂದೂತ್ವದ ಸುತ್ತ ತಿರುಗುತ್ತದೆಯೇ ಹೊರತು ವಸ್ತುನಿಷ್ಟತೆಯ ಕಡೆಗೆ ಮುಖ ಮಾಡುವುದಿಲ್ಲ. ಸಾವರಕರ್ ಅವರು ತಮ್ಮ ಪುಸ್ತಕದಲ್ಲಿ ಅಂಬೇಡ್ಕರ್ ಅವರನ್ನು ಕೆಲವೇ ಬಾರಿ ಉಲ್ಲೇಖಿಸಿದ್ದಾರೆ ಮತ್ತು ಅಂಬೇಡ್ಕರ್ ಅವರ ಹೇಳಿಕೆಗಳಲ್ಲಿ ಒಂದನ್ನು ನಿರ್ದಿಷ್ಟವಾಗಿ ಆಕ್ಷೇಪಿಸುತ್ತಾರೆ: “ಭಾರತದ ಇತಿಹಾಸವು ಮೊದಲಿನಿಂದಲೂ ಗುಲಾಮ ಜನರ ಇತಿಹಾಸವಾಗಿದೆ, ವಿದೇಶಿ ದಾಸ್ಯದಲ್ಲಿ ಆಳವಾಗಿ ಮುಳುಗಿದೆ ಮತ್ತು ನಿರಂತರವಾಗಿ ವಿದೇಶಿ ನೆರಳನ್ನೇ ತುಳಿದಿದೆ.” ಅಂಬೇಡ್ಕರ್ ಅವರು ಹಿಂದೂಗಳ ಬಗ್ಗೆ “ಅಶ್ಲೀಲ” ಮತ್ತು “ದ್ವೇಷದ” ಕಾಮೆಂಟ್ಗಳನ್ನು ಮಾಡಿದ್ದಾರೆ ಎಂದು ಸಾವರಕರ್ ಆಕ್ಷೇಪಿಸಿದ್ದನ್ನು ಚತುರ್ವೇದಿಯವರು ಉಲ್ಲೇಖಿಸಿದ್ದಾರೆ.
ಆಧುನಿಕ ಇತಿಹಾಸದ ಸಂಶೋಧನೆಯಲ್ಲಿ ಬಳಸುವ ಅಗತ್ಯ ಪರಿಕರಗಳನ್ನು ಪ್ರತಿಪಾದಿಸುವ ಸಾವರಕರ್ ತನ್ನನ್ನು ತಾವೇ ಒಂದು ಕ್ರಮಶಾಸ್ತ್ರೀಯ ಮೂಲೆಗೆ ತಳ್ಳಿಕೊಂಡಿದ್ದು ಸ್ಪಷ್ಟವಾಗುತ್ತದೆ. ಇತಿಹಾಸ ಬರೆಯುವ ಮಾರ್ಗದಲ್ಲಿ ಬಹು ಪಠ್ಯಗಳನ್ನು ಪರಿಶೀಲಿಸುವಾಗ, ಸಾವರಕರ್ ಅವರು ಪಾಶ್ಚಿಮಾತ್ಯ ಓರಿಯಂಟಲಿಸ್ಟ್ಗಳು ಅಥವಾ ಇಂಗ್ಲಿಷ್ ಇತಿಹಾಸಕಾರರ ವ್ಯಾಖ್ಯಾನಗಳನ್ನು ಅದು ತಮ್ಮ ಉದ್ದೇಶಗಳಿಗೆ ಸರಿಹೊಂದಿದಾಗ ಸ್ವೀಕರಿಸುತ್ತಾರೆ, ಮತ್ತು ಅದು ತಮ್ಮ ಹಿಂದುತ್ವದ ಕಲ್ಪಿತ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದಾಗ ಮತ್ತು ಹಿಂದುತ್ವದ ನಿಲುವುಗಳ ಬಗ್ಗೆ ವಿಮರ್ಶಾತ್ಮಕವಾಗಿದ್ದಾಗ ಅವರು ಅದನ್ನು ತಳ್ಳಿಹಾಕುತ್ತಾರೆ. ಹಿಂದೂ ಧರ್ಮವನ್ನು ತಿರಸ್ಕರಿಸಿ ೧೯೫೬ ರಲ್ಲಿ ಡಾ. ಅಂಬೇಡ್ಕರ್ ಅವರು ಲಕ್ಷಾಂತ ಜನ “ಅಸ್ಪೃಶ್ಯ” ರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಂಶವು ಸಾವರಕರ್ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದಂತಿದೆ. ಮೊದಲೇ ಗಮನಿಸಿದಂತೆ, ೧೯೨೦ ರ ದಶಕದ ಉತ್ತರಾರ್ಧ ಮತ್ತು ೧೯೩೦ ರ ದಶಕದಲ್ಲಿ, ಸಾವರಕರ್ ಅವರು ರತ್ನಗಿರಿ ಜಿಲ್ಲೆಯಲ್ಲಿ ದೇವಸ್ಥಾನ ಪ್ರವೇಶ ಮತ್ತು “ಅಸ್ಪೃಶ್ಯರ” ಜೊತೆಗಿನ ಸಹಪಂಕ್ತಿ ಭೋಜನ ಎರಡನ್ನೂ ಒತ್ತಾಯಿಸುವ ಜಾತಿ ನಿರ್ಮೂಲನಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಎನ್ನುತ್ತಾರೆ ಚತುರ್ವೇದಿಯವರು.
ಅಂಬೇಡ್ಕರ್ ಅವರ ಹಿಂದೂ ಧರ್ಮದ ಅನಿಷ್ಟ ಪದ್ದತಿಗಳ ಖಂಡನೆಯ ಸಿದ್ಧಾಂತವು ಹಿಂದೂ ಧರ್ಮದ ಚೌಕಟ್ಟನ್ನು ವಿಸ್ತರಿಸಲು ಪ್ರಯತ್ನಿಸಿದ ಸಾವರಕರ್ ಅವರ ಹಿಂದೂ ಏಕತೆಯ ಕಾರ್ಯಕ್ರಮಕ್ಕೆ ವಿರುದ್ಧವಾಗಿತ್ತು. ೧೯೨೯ ರಲ್ಲಿ, ರತ್ನಗಿರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಬ್ಲ್ಯೂ ಗಿಲ್ಲಿಗನ್ ಅವರು ಗೌಪ್ಯ ವರದಿಯೊಂದರಲ್ಲಿ ಸಾವರಕರ್ ಅವರ ಹಿಂದೂ ಏಕತಾ ಕಾರ್ಯಸೂಚಿಯು ಸಮಾಜದಲ್ಲಿ ಸಂಘರ್ಷವನ್ನು ಉಂಟುಮಾಡಬಹುದು ಮತ್ತು ಆ ಪ್ರದೇಶದಲ್ಲಿ ಅಂಬೇಡ್ಕರ್ ಅವರ ಜಾತಿ ವಿನಾಶ ಹಾಗು ಅಸ್ಪೃಶ್ಯರ ಜಾಗೃತಾ ಅಭಿಯಾನದಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದರು.
ಸಾವರಕರ್ ಅವರು ರತ್ನಗಿರಿ ಜಿಲ್ಲೆಯಾದ್ಯಂತ ಸಂಚರಿಸಿ ಜಾತಿ ವ್ಯವಸ್ಥೆಯ ಸಮಸ್ಯೆಗಳ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದರು ಮತ್ತು “ಅಸ್ಪೃಶ್ಯರ” ವಿರುದ್ಧದ ಸಾಮಾಜಿಕ ನಿರ್ಬಂಧಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರೆಂದು ಚತುರ್ವೇದಿಯವರು ವಿವರಿಸಿದ್ದಾರೆ. ಸಾವರಕರ್ ಅವರ ಹಿಂದೂ ಏಕತಾ ಹೆಸರಿನ ಜಾತಿವಿನಾಶ ಕಾರ್ಯಕ್ರಮವನ್ನು ಸನಾತನಿಗಳು ತೀವ್ರವಾಗಿ ವಿರೋಧಿಸಿದರಂತೆ.
ಪತ್ರಿಕಾ ವರದಿ ಮತ್ತು ಸರ್ಕಾರಿ ಅಧಿಕಾರಿಗಳ ವರದಿಗಳು ಹೇಳುವಂತೆ, ಸಾವರಕರ್ ಅವರ ಈ ಸಭೆಗಳಿಗೆ ನೂರಾರು ಮತ್ತು ಕೆಲವೊಮ್ಮೆ ಸಾವಿರಾರು ಜನರು ಸೇರುತ್ತಿದ್ದರಂತೆ. ಸಾವರಕರ್ ಅವರ ಸಂದೇಶಗಳನ್ನು ವಾಸ್ತವವಾಗಿ ಹೇಗೆ ಅರ್ಥೈಸಲಾಗಿತ್ತು ಎಂಬುದರ ಕುರಿತು ಗೊಂದಲಗಳಿವೆ. ಆದರೆ ಗಿಲ್ಲಿಗನ್ ಅವರು “ಮಹಾರ್ ವರ್ಗಗಳಲ್ಲಿನ ಸಾವರಕರ್ ಅವರ ಆಸಕ್ತಿಗಳ ಕಾರಣದಿಂದಾಗಿ ಬ್ರಾಹ್ಮಣರು ಅವರನ್ನು ಇಷ್ಟಪಡುತ್ತಿಲ್ಲ” ಎಂದು ವರದಿ ಕೊಟ್ಟಿದ್ದರಂತೆ. “ಅಸ್ಪೃಶ್ಯ” ರ ಹಕ್ಕುಗಳಿಗಾಗಿ ಸಾವರಕರ್ ಅವರ ಬೇಡಿಕೆಗಳು ಸಾಂಪ್ರದಾಯಿಕ ಹಿಂದೂಗಳ ಭಾವನೆಗಳಿಗೆ ಹಾನಿಯುಂಟುಮಾಡುತ್ತಿದೆ ಎಂದು ಪ್ರತಿಪಾದಿಸಿದ ಬ್ರಾಹ್ಮಣರು ಪ್ರಬಲ ಆಕ್ಷೇಪಣೆಗಳನ್ನು ಎತ್ತಿದ್ದರಂತೆ. ಸಾವರಕರ್ ಅವರು ಏಕೀಕೃತ ಹಿಂದೂ ಐಡೆಂಟಿಟಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಾದವು ಪ್ರಬಲವಾದ ಮೇಲ್ಜಾತಿಯ ಜನರು ಸ್ವಾಭಾವಿಕವಾಗಿ ಒಪ್ಪಲಿಲ್ಲ ಎಂದು ಚತುರ್ವೇದಿಯವರು ಬರೆದಿದ್ದಾರೆ.
ಸನಾತನಿಗಳು ವಿಶೇಷವಾಗಿ ಸಾವರಕರ್ ವಿರುದ್ಧ ತಮ್ಮ ಧ್ವನಿ ಎತ್ತಿದ್ದರು. ಮೇಲ್ಜಾತಿ ಹಿಂದೂ ಪ್ರತಿಭಟನಾಕಾರರು ಅನೇಕ ಕಾರ್ಯಕ್ರಮಗಳಲ್ಲಿ ಸಾವರಕರ್ ಅವರನ್ನು ತಡೆದರು. ಸಾವರಕರ್ “ಅಸ್ಪೃಶ್ಯರ” ಪರವಾಗಿ ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ರತ್ನಗಿರಿಯಲ್ಲಿ ದೇವಾಲಯ ಪ್ರವೇಶ ಕುರಿತು ಸಾವರಕರ್ ಅವರ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಸರಕಾರಕ್ಕೆ ಪ್ರತಿಭಟನಾ ಪತ್ರಗಳನ್ನು ನೀಡಲಾಯಿತು. ಬಾಂಬೆಯ ಗವರ್ನರ್ಗೆ ಸಲ್ಲಿಸಿದ ಮನವಿಯಲ್ಲಿ, ಮಾಲ್ವಾನ್ ಪ್ರದೇಶದ ಇನಾಮದಾರ್ ಆಗಿದ್ದ ಅನಂತ ದತ್ತಾತ್ರಯ ಸಭಾಲೆಯವರು, ಸಾವರಕರ್ ಅವರು ಸನಾತನಿ ಹಿಂದೂಗಳ ಭಾವನೆಗಳನ್ನು ನೋಯಿಸುವ ಅನೈತಿಕ ಮತ್ತು ಅಧರ್ಮದ ಉಪದೇಶಗಳನ್ನು ನೀಡುತ್ತಿದ್ದಾರೆ ಎಂದು ವಾದಿಸಿದರು. ಸಾವರಕರ್ ಅವರಿಗೆ ಅಸ್ಪೃಶ್ಯತೆಯ ಬಗ್ಗೆ ಮಾತನಾಡಲು ಅವಕಾಶ ನೀಡುವಲ್ಲಿ ಸರ್ಕಾರದ ಪಾತ್ರವು “ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ತಟಸ್ಥತೆಯನ್ನು ಖಾತರಿಪಡಿಸುತ್ತದೆ” ಎಂದು ಪತ್ರಬರೆದಿದ್ದರೆಂದು ಚತುರ್ವೇದಿಯವರು ಬರೆದಿದ್ದಾರೆ.
ರಾಮಚಂದ್ರ ಮಹಾದೇವ್ ಸೋನಿ, ಹೆಸರಿನ ಮತ್ತೊಬ್ಬ ವ್ಯಕ್ತಿ, ಸಾವರಕರ್ ಅವರು ಸನಾತನ ಹಿಂದೂ ಧರ್ಮದ ತತ್ವಗಳಿಗೆ ವಿರುದ್ಧವಾದ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಸಾಂಪ್ರದಾಯಿಕ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದು ಅರ್ಜಿಯನ್ನು ಸಲ್ಲಿಸಿದ್ದರಂತೆ. ಸಾವರಕರ್ ಅವರನ್ನು ಸಂಪೂರ್ಣವಾಗಿ ರತ್ನಗಿರಿಯಿಂದ ಗಡಿಪಾರು ಮಾಡುವ ಮೂಲಕ ಸರಕಾರವು ಅವರ ಆಲೋಚನೆಗಳಿಂದ ಜನರನ್ನು ರಕ್ಷಿಸುವ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದರಂತೆ. ಇದರ ಪರಿಣಾಮವಾಗಿ ಸನಾತನಿಗಳು ಸಾವರಕರ್ ವಿರುದ್ಧ ಪ್ರತಿಭಟನಾ ಸಭೆಗಳನ್ನು ಸಂಘಟಿಸಿದರು. ಆಗ ಸನಾತನಿಗಳು ಸಾವರಕರ್ ಬೆಂಬಲಿಗರ ಮೇಲೆ ಕಲ್ಲು ಮತ್ತು ಚಪ್ಪಲಿ ಎಸೆಯುವ ಮೂಲಕ ಚಳುವಳಿ ಹಿಂಸಾಚಾರಕ್ಕೆ ತಿರುಗಿತು. ಸ್ಥಳೀಯ ಅಧಿಕಾರಿಗಳು ಸಾವರಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಲ್ಲದೆˌ ಸನಾತನಿಗಳ ದಾಳಿಗೆ ಸಾವರಕರ್ ಪ್ರಚೋದನೆ ನೀಡಿರಬಹುದು ಎಂದು ಅವರ ಮನೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ದೇಶದ್ರೋಹದ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ ಶೋಧ ನಡೆಸಲಾಯಿತು ಎಂದು ಚತುರ್ವೇದಿಯವರು ಇಡೀ ಘಟಾವಳಿಗಳನ್ನು ವಿವರಿಸಿದ್ದಾರೆ.
ಮೇ ತಿಂಗಳುˌ ೧೯೩೪ ರಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಸರ್ದಾರ್ ಮುಹಮ್ಮದ್ ಅವರು ಅವರ ಚಟುವಟಿಕೆಗಳ ಬಗ್ಗೆ ಸಾವರಕರ್ ಅವರನ್ನು ಸಂದರ್ಶಿಸಿದಾಗ, ಸಾವರ್ಕರ್ ಹೀಗೆ ಹೇಳಿದ್ದರು: “ನಾನು ಅಸ್ಪೃಶ್ಯತೆ ನಿರ್ಮೂಲನೆಯ ಪ್ರಯತ್ನವನ್ನು ಮುಕ್ತ ಮತ್ತು ಖಚಿತವಾದ ರೀತಿಯಲ್ಲಿ ನಡೆಸುತ್ತಿದ್ದೇನೆ ಮತ್ತು ಈ ಕುರಿತು ನೂರಾರು ಉಪನ್ಯಾಸಗಳನ್ನು ನೀಡಿದ್ದೇನೆ. ಆ ಕುರಿತು ಸರಕಾರಕ್ಕೆ ನಿಯಮಿತವಾಗಿ ವರದಿ ಕೂಡ ಮಾಡಿದ್ದೇನೆ.” ಆ ಸಮಯದಲ್ಲಿ ಸಾವರಕರ್ ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲವಾದ್ದರಿಂದ, ಸಾಮಾಜಿಕ ಸುಧಾರಣೆಯಲ್ಲಿ ಕೆಲಸ ಮಾಡಲು ಅವರಿಗೆ ಅನುಮತಿ ನೀಡಲಾಗಿತ್ತು; ಅವರು ಹಿಂದೂತ್ವದ ಎಸೆನ್ಷಿಯಲ್ಸ್ ಮತ್ತು ಹಿಂದೂ ಏಕತೆಗಾಗಿ ತಮ್ಮ ವಾದಗಳನ್ನು ಮಂಡಿಸಲು ಅವಕಾಶವನ್ನು ಪಡೆದರು. ೧೯೩೭ ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸಾವರ್ಕರ್ ಆಯ್ಕೆಯಾದ ನಂತರ, ಹಿಂದುತ್ವದ ಅಗತ್ಯಗಳನ್ನು ಪ್ರಸಾರ ಮಾಡುವ ಅವರ ಕಾರ್ಯಕ್ರಮಕ್ಕಾಗಿ ಅಂಬೇಡ್ಕರ್ ಅವರು ಗುರುತಿಸಿದ್ದ ದಮನಿತ ವರ್ಗಗಳ ಬೆಂಬಲವನ್ನು ಬಳಸಿಕೊಳ್ಳಲು ಸಾವರಕರ್ ತಮ್ಮ ಕಾರ್ಯಸೂಚಿಯನ್ನು ವಿಸ್ತರಿಸಿದರು ಎನ್ನುತ್ತಾರೆ ಚತುರ್ವೇದಿಯವರು.
ಎಸೆನ್ಷಿಯಲ್ಸ್ ಆಫ್ ಹಿಂದುತ್ವದಲ್ಲಿ ಸಾವರಕರ್ ಅವರು ಪ್ರತಿಯೊಬ್ಬರು ಹಿಂದೂ ರಕ್ತ ಹೊಂದಿರಬೇಕೆಂಬ ಚರ್ಚೆಯನ್ನು ಹುಟ್ಟುಹಾಕಿದ್ದರು. ಆದರೆ ಕೆಲವರು ಹುಟ್ಟಿನಿಂದಲೇ ಹೀನಕುಲದವರಾಗಿರುತ್ತಾರೆ ಎಂಬ ಮೇಲ್ವರ್ಗದ ಹಿಂದುಗಳ ಜಾತಿವಾದದಿಂದ ದೂರ ಹೋಗಲು ಅಂಬೇಡ್ಕರ್ ಯಶಸ್ವಿಯಾಗಿ “ಅಸ್ಪೃಶ್ಯರು” ಹಿಂದೂ ಧರ್ಮದ ಹಿಡಿತದಿಂದ ಹೊರಹೋಗಲು ಸಾಮೂಹಿಕ ಚಳುವಳಿಯನ್ನು ರೂಪಿಸಲು ಪ್ರಯತ್ನಿಸಿದರು. ಅಂಬೇಡ್ಕರ್ ಅವರ ಬ್ರಾಹ್ಮಣವಾದದ ವಿರುದ್ಧದ ಕಟುವಾದ ಟೀಕೆಗಳು ಅವರನ್ನು ಸಮಾನತೆ ಸಾರುವ ಬೌದ್ಧಧರ್ಮದ ಕಡೆಗೆ ಕರೆದೊಯ್ಯಲು ಪ್ರೇರಣೆಯಾದವು. ಬೌದ್ಧ ಧರ್ಮವು ಬ್ರಾಹ್ಮಣವಾದಕ್ಕೆ ಪ್ರಮುಖ ಪ್ರತಿರೋಧವನ್ನು ಒದಗಿಸಿದೆ ಎಂದು ಅಂಬೇಡ್ಕರ್ ಹಲವಾರು ವರ್ಷಗಳಿಂದ ವಾದಿಸಿದ್ದರು. ಭಾರತದ ಇತಿಹಾಸವನ್ನು ವ್ಯಾಖ್ಯಾನಿಸಿದ ಅತ್ಯಂತ ಮಹತ್ವದ ಧಾರ್ಮಿಕ ಯುದ್ಧವೆಂದರೆ ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮದ ನಡುವಿನ ಮಾರಣಾಂತಿಕ ಸಂಘರ್ಷ ಮತ್ತು ಇದರಲ್ಲಿ ದಬ್ಬಾಳಿಕೆ ಮತ್ತು ತಾರತಮ್ಯದ ವಿರುದ್ಧ “ಅಸ್ಪೃಶ್ಯರ” ಪ್ರತಿರೋಧದ ಬೇರುಗಳಿವೆ ಎಂಬ ಅಂಬೇಡ್ಕರ್ ಅವರ ವಾದವನ್ನು ಚತುರ್ವೇದಿಯವರು ಉಲ್ಲೇಖಿಸಿದ್ದಾರೆ.
ಡಾ. ಅಂಬೇಡ್ಕರ್ ಅವರು ಹಿಂದುತ್ವ ˌ ಹಿಂದೂ ಎಂದು ಕರೆಯಲ್ಪಡುವ ಬ್ರಾಹ್ಮಣ ಧರ್ಮದೊಳಗಿನ ಸಾಮಾಜಿಕ ಅನಿಷ್ಟಗಳನ್ನು ಕಟುವಾಗಿ ವಿಮರ್ಶಿಸಿದ್ದಾರೆ. ಸಾವರಕರ್ ಅವರು ತಮ್ಮ ಪುಸ್ತಕದಲ್ಲಿ ಚರ್ಚಿಸದ ವಿಷಯವೆಂದರೆ ಪ್ರಾಚೀನ ಕಾಲದಿಂದ ಪ್ರಾರಂಭವಾಗುವ ಭಾರತದ ಇತಿಹಾಸವನ್ನು ಪುನಃ ಬರೆಯುವ ಪರಿಷ್ಕರಣೆವಾದಿ ಯೋಜನೆಯಲ್ಲಿ ಅಂಬೇಡ್ಕರ್ ಅವರ ತೊಡಗಿಸಿಕೊಳ್ಳುವಿಕೆಯ ಕುರಿತು. ಅದನ್ನು ಸಾವರಕರ್ ಬೇಕೆಂತಲೆ ನಿರ್ಲಕ್ಷಿಸಿದ್ದಾರೆ ಎನ್ನಬಹುದಾಗಿದೆ. ಅಂಬೇಡ್ಕರ್ ಅವರು ಇತಿಹಾಸವನ್ನು ವಿಮರ್ಶಿಸುವ ವಿಧಾನವು ಸಾವರ್ಕರ್ ಅವರ ಹಿಂದೂ ಇತಿಹಾಸ ಪರಿಕಲ್ಪನೆಗೆ ಸಮಾನಾಂತರ ಅಥವಾ ತದ್ವಿರುದ್ದವಾದ ಯೋಜನೆಯಾಗಿತ್ತು. ಅಂಬೇಡ್ಕರ್ ಅವರು ಭಾರತದ ಇತಿಹಾಸ ರಚನೆಯಲ್ಲಿ ಹಿಂದೂಗಳೆಂದು ಕರೆಯಲ್ಪಡುವ ಆರ್ಯರ ಕೇಂದ್ರೀಕರಣವನ್ನು ತಿರಸ್ಕರಿಸಿದ್ದಾರೆ. ಆರ್ಯನ್ ಬುಡಕಟ್ಟುಗಳಿಂದ ಭಾರತದ ಮೂಲನಿವಾಸಿಗಳ ಮೇಲೆ ಯಶಸ್ವಿ ಆಕ್ರಮಣದ ನಿರೂಪಣೆಯನ್ನು ಪರಿಷ್ಕರಿಸುವ ಕೆಲಸ ಡಾ. ಅಂಬೇಡ್ಕರ್ ಮಾಡಿದ್ದಾರೆ. ಭಾರತದ ರಾಜಕೀಯ ಇತಿಹಾಸವು ನಾಗಾ ಎಂಬ ಆರ್ಯೇತರ ಜನರ ಉದಯದೊಂದಿಗೆ ಪ್ರಾರಂಭವಾಗುತ್ತದೆˌ ನಾಗಾ ಸಮುದಾಯ ಆರ್ಯನ್ನರಿಗಿಂತ ಅತ್ಯಂತ ಪ್ರಬಲರು ಎನ್ನುವುದು ಅಂಬೇಡ್ಕರ್ ಅವರ ವಾದವಾಗಿತ್ತು.
ಅಂಬೇಡ್ಕರ್ ಅವರಿಗೆ, ಆರ್ಯರು ಮತ್ತು ಅವರ ಧರ್ಮ, ಸಂಸ್ಕೃತಿ ಮತ್ತು ಬ್ರಾಹ್ಮಣತ್ವದ ಸಾಮಾಜಿಕ ವ್ಯವಸ್ಥೆಯನ್ನು ವಿರೋಧಿಸುವ ಮತ್ತು ನಾಗಾ ಸಮುದಾಯ ಕೇದ್ರಿತ ನೈಜ ಇತಿಹಾಸದ ನಿರೂಪಣೆ ಮಾಡುವುದು ಅತ್ಯಗತ್ಯವಾಗಿತ್ತು. ಆದರೆ ಸಾವರಕರ್ ಅವರ ಹಿಂದುತ್ವದ ಪರಿಕಲ್ಪೆಯ ಆಧಾರದ ಇತಿಹಾಸ ಈ ದೇಶದ ಮೂಲ ನಿವಾಸಿˌ ಅಸ್ಪೃಶ್ಯ ˌ ದಲಿತ ದಮನಿತರು ಸೇರಿದಂತೆ ಉಳಿದ ಜನರನ್ನು ದಮನಿಸಿದ ಇತಿಹಾಸವಾಗಿತ್ತು. ನಾಗಾ ಸಂಸ್ಕೃತಿಯು ಭಾರತದ ಶ್ರೇಷ್ಠ ಮತ್ತು ವೈಭವಯುತ ಸಂಸ್ಕೃತಿ ಎನ್ನುವುದು ಡಾ. ಅಂಬೇಡ್ಕರರ ವಾದವಾದರೆ ಭಾರತದ ಪ್ರಾಚೀನ ಇತಿಹಾಸದ ನಿರೂಪಣೆಯು ಆರ್ಯನ್ ಪ್ರಾಬಲ್ಯ ನಿರೂಪಿಸುತ್ತಿತ್ತು. ನಾಗಾ ಜನರು ಭಾರತದ ಶ್ರೇಷ್ಠ ಬೌದ್ಧ ಆಡಳಿತಗಾರ ಅಶೋಕನ ವಂಶಸ್ಥರು ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು. ಬೌದ್ಧಧರ್ಮವು ಸುಮಾರು ೧೪೦ ವರ್ಷಗಳ ಕಾಲ ಸರ್ವೋಚ್ಚ ಆಳ್ವಿಕೆ ನಡೆಸಿತ್ತು. ಬೌದ್ಧ ಧರ್ಮದ ಅವನತಿಗೆ ಬ್ರಾಹ್ಮಣರ ಕುತಂತ್ರವೆ ಕಾರಣವೆಂಬುದು ಅಂಬೇಡ್ಕರ್ ಗಮನಿಸಿದರು. ೬ˌ ಡಿಸೆಂಬರ್ ೧೯೫೬ ರಂದು ಅವರು ತೀರಿಹೋದ ಕಾರಣ ಇತಿಹಾಸ ಪರಿಷ್ಕರಣೆಯ ಯೋಜನೆಯು ಅಪೂರ್ಣವಾಗಿ ಉಳಿಯಿತು, ಆದರೆ ಡಾ. ಅಂಬೇಡ್ಕರ್ ಅವರ ಮಹತ್ವಾಕಾಂಕ್ಷೆ ಮತ್ತು ವ್ಯಾಪ್ತಿಗೆ ತದ್ವಿರುದ್ಧವಾದ ಸಾವರ್ಕರ್ ಅವರ ಪ್ರತಿ-ನಿರೂಪಣೆಯು ಕಾರ್ಯನಿರ್ವಹಿಸಿತು ಎನ್ನುತ್ತಾರೆ ಚತುರ್ವೇದಿಯವರು.
ಇಲ್ಲಿ ನಾವೆಲ್ಲ ಗಮನಿಸಬೇಕಾದ ಅಂಶವೆಂದರೆˌ ಸಾವರಕರ್ ಒಬ್ಬ ಹುಟ್ಟು ಕರ್ಮಟ ಮತ್ತು ಅಪಾಯಕಾರಿ ಬ್ರಾಹ್ಮಣವಾದಿಯಾಗಿದ್ದರು. ಅವರು ಬ್ರಿಟೀಷ್ ಸರಕಾರಕ್ಕೆ ಕ್ಷಮೆಯಾಚಿಸಿ ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಗೊಂಡು ಬಂದು ಬ್ರಿಟೀಷ್ ಸರಕಾರದಿಂದ ಪಿಂಚಣಿ ಪಡೆದು ಬದುಕಿದವರು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧವಿದ್ದ ಕಾರಣ ಅವರು ತಮ್ಮ ಹಿಂದುತ್ವದ ಮೂತಭೂತವಾದಿ ಚಟುವಟಿಕೆಯಲ್ಲಿ ಭಾಗವಹಿಸದೆˌ ದಮನಿತರಿಗೆ ದೇವಾಲಯ ನಿಷೇಧದ ತೆರವು ಮತ್ತು ಜಾತಿ ವಿನಾಶದಂತ ಸಾಮಾಜಿಕ ಚಟುವಟಿಕೆಯ ಬಾಹ್ಯ ಅಜೆಂಡಾ ಇಟ್ಟುಕೊಂಡು ಆಂತರ್ಯದಲ್ಲಿ ಬ್ರಾಹ್ಮಣವಾದವನ್ನು ಬಲಪಡಿಸುವ ಉದ್ದೇಶ ಹೊಂದಿದ್ದರೆಂದು ಬೇರೆ ಹೇಳುವ ಅಗತ್ಯವಿಲ್ಲ. ಬ್ರಾಹ್ಮಣ ಕೇಂದ್ರಿತ ಇತಿಹಾಸವನ್ನು ಮುನ್ನೆಲೆಗೆ ತರುವ ಸಾವರಕರ್ ಉದ್ದೇಶವನ್ನು ಡಾ. ಅಂಬೇಡ್ಕರ್ ಅವರು ನಿರಾಕರಿಸಿ ದ್ರಾವಿಡ ಕೇಂದ್ರಿತ ನೈಜ ಇತಿಹಾಸವನ್ನು ರೂಪಿಸುತ್ತಿದ್ದರು. ಡಾ. ಅಂಬೇಡ್ಕರ್ ಕಾರ್ಯವನ್ನು ದಿಕ್ಕು ತಪ್ಪಿಸುವುದೇ ಸಾವರಕರ್ ಅವರ ದುರುದ್ದೇಶವಾಗಿತ್ತು ಎನ್ನುವುದು ನಾವು ಇಲ್ಲಿ ಗ್ರಹಿಸಬೇಕಾದ ಅಂಶವಾಗಿದೆ.