ಬಿಬಿಎಂಪಿ ಚುನಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಧ್ಯಪ್ರದೇಶ ಸ್ಥಳೀಯ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಬಿಬಿಎಂಪಿ ಚುನಾವಣೆಯ ಅಖಾಡವನ್ನೂ ಪುಟಿದೇಳುವಂತೆ ಮಾಡಿದೆ. ಆದರೀಗ ಪ್ರಶ್ನೆ ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸುಪ್ರೀಂ ಆದೇಶ ರಾಜ್ಯ ಬಿಜೆಪಿಗೆ ಶಾಕ್ ಕೊಡ್ತಾ ಎನ್ನುವುದು. ಯಾಕೆಂದರೆ, ಡಿ ಲಿಮಿಟೇಷನ್ ನಡೆಸಿ ಸತತ ಎರಡನೇ ಬಾರಿಗೆ ಬಿಬಿಎಂಪಿ ಗದ್ದುಗೆ ಹಿಡಿಯಲು ಯತ್ನಿಸಿದ ಬಿಜೆಪಿಗೆ ಈ ಮೂಲಕ ಹಿನ್ನೆಡೆಯಾದಂತಾಗಿದೆ. ಮಧ್ಯಪ್ರದೇಶಕ್ಕೆ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಡಿ ಲಿಮಿಟೇಷನ್ ಪ್ರಕ್ರಿಯೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣವಾಗದಿದ್ದರೆ ಚುನಾವಣೆ ನಡೆಸ ಬಾರದೇ ಎಂದು ಪ್ರಶ್ನಿಸಿದೆ. ಇದೇ ವಿಚಾರ ಇಡೀ ದೇಶದಲ್ಲಿನ ರಾಜ್ಯಗಳಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆಗಳಿಗೂ ಅನ್ವಯ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಇದು ಈಗ ಬಿಜೆಪಿ ಲೆಕ್ಕಾಚಾರವನ್ನೆಲ್ಲಾ ತಲೆಗೆಳಗಾಗಿಸಿದೆ.
ಬುಡಮೇಲಾಯ್ತಾ ರಾಜ್ಯ ಬಿಜೆಪಿ ನಾಯಕರ ಒಟ್ಟು ಲೆಕ್ಕಾಚಾರ.?
198 ವಾರ್ಡ್ ವಿಂಗಡಿಸಿ 243 ವಾರ್ಡ್ ಮಾಡಿ ಚುನಾವಣೆ ಗೆಲ್ಲುವ ಲೆಕ್ಕ ಹಾಕಿಕೊಂಡಿದ್ದ ಆಡಳಿತ ಪಕ್ಷ, ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಡಿ ಲಿಮಿಟೇಷನ್ ಹೆಸರಲ್ಲಿ ಶಾಕ್ ಕೊಟ್ಟಿತ್ತು. 198 ಇದ್ದ ವ್ಯಾಪ್ತಿಯನ್ನು ಕೆಲ ಹಳ್ಳಿಗಳು, ಕೆಲ ವಾರ್ಡ್ ಗಳ ಮರು ವಿಂಗಡಣೆ ಮಾಡಿ 243 ಮಾಡುವ ಪ್ಲ್ಯಾನ್ ಮಾಡಿದ್ದ ಬಿಜೆಪಿ, ಕೈ ಪ್ರಭಾವ ಹೆಚ್ಚಿರುವ ವಾರ್ಡ್ ಗಳನ್ನು ವಿಂಗಡಿಸಲು ಹೊರಟಿತ್ತು. ಇದೀಗ ಸುಪ್ರೀಂ ಕೋರ್ಟ್ ನಿಂದ ಡಿ ಲಿಮಿಟೇಷನ್ ಆಗದೆಯೂ ಚುನಾವಣೆ ನಡೆಸಬಹುದು ಎಂಬ ಅಂಶ ಉಲ್ಲೇಖವಾಗಿರುವ ಹಿನ್ನೆಲೆ ಬಿಬಿಎಂಪಿ ಚುನಾವಣೆ 198 ವಾರ್ಡ್ ಗಳಿಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇದೆ. ಹೀಗೆ 198 ವಾರ್ಡ್ ಗಳಿಗೆ ಮಾತ್ರ ಬಿಬಿಎಂಪಿ ಚುನಾವಣೆ ಸೀಮಿತಗೊಂಡರೆ ಬಿಜೆಪಿ ಲೆಕ್ಕಾಚಾರವೆಲ್ಲಾ ಬುಡಮೇಲಾಗಿ ಹೋಗಿಲಿದೆ.
ಅಷ್ಟಕ್ಕೂ ಡಿ ಲಿಮಿಟೇಷನ್ ನಡೆಯದಿದ್ದರೆ ಬಿಜೆಪಿಗೆ ಆಗುವ ನಷ್ಟವೇನು.?
ಅಕಸ್ಮಾತ್ ಡಿ ಲಿಮಿಟೇಷನ್ ಆಗದೆ ಪಾಲಿಕೆ ಚುನಾವಣೆ ನಡೆದರೆ ಬಿಜೆಪಿಗೆ ಮುಂದಿನ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಬಿಎಂಪಿ ಚುನಾವಣೆ ನಡೆಸದೆ ವಿಧಾನಸಭೆ ಚುನಾವಣೆಗೆ ಹೋಗುವ ಯೋಚನೆಯಲ್ಲಿದ್ದ ಭಾಜಪ ವರಿಷ್ಠರು ಬಿಬಿಎಂಪಿ ಚುನಾವಣೆ ಮುಂದಿಟ್ಟುಕೊಂಡು ಪಕ್ಷದೊಳಗಿನ ಪಾಲಿಕೆ ಟಿಕೆಟ್ ಆಕಾಂಕ್ಷಿಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿತ್ತು. ಒಟ್ಟು 28 ವಿಧಾನಸಭಾ ಕ್ಷೇತ್ರಹೊಂದಿರುವ ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ ಪಾಲಿಕೆ ಗದ್ದುಗೆ ಹಿಡಿದರೂ ಕೂಡ ಪಕ್ಷದಿಂದ ನಿಂತು ಸೋತ ಅಥವಾ ಟಿಕೆಟ್ ಸಿಗದ ಅಕಾಂಕ್ಷಿಗಳ ಮುನಿಸಿಗೆ ವಿಧಾನಸಭಾ ಚುನಾವಣೆಯನ್ನು ಬಲಿ ಕೊಡಬೇಕಾದೀತು. ಇಂಥಾ ಹಲವು ಕಾರಣಗಳಿಂದ ಬಿಜೆಪಿ ವರಿಷ್ಠರು ಬಿಬಿಎಂಪಿ ಚುನಾವಣೆಯನ್ನು ಸಾಧ್ಯವಾದಷ್ಟು ಕಾಲ ಮುಂದೂಡತ್ತಲೇ ಬಂದಿದೆ. ಇದೀಗ ಮಧ್ಯಪ್ರದೇಶ ಸಂಬಂಧ ನೀಡಿರುವ ಆದೇಶ ಬಿಜೆಪಿ ನಾಯಕರ ಲೆಕ್ಕವನ್ನೆಲ್ಲಾ ನೆಲಕ್ಕಚ್ಚುವಂತೆ ಮಾಡಿದೆ.
ಡಿ ಲಿಮಿಟೇಷನ್ ವಿರೋಧಿಸಿ ಕಾಂಗ್ರೆಸ್ ಮಾಜಿ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಜೆಡಿಎಸ್ ಹಾಗೂ ಕಾಂಗ್ರೆಸ್ ಸ್ಥಾಯಿ ಮಟ್ಟದಲ್ಲಿ ಜಂಟಿಯಾಗಿ ಬಿಜೆಪಿಯ ಈ ನಡೆಯನ್ನು ವಿರೋಧಿಸಿದ್ದರು. ಸದ್ಯ ಚುನಾವಣೆ ನಡೆಸಿ ಎಂದು ಹೇಳಿದ್ದರೂ ಕೂಡ ಏಕಾಏಕಿಯಾಗಿ ಪಾಲಿಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಕೈ ನಾಯಕರು ಸಲ್ಲಿಸಿರುವ ಅರ್ಜಿ ಇತ್ಯರ್ಥವಾದರೆ ಮಾತ್ರ ಪಾಲಿಕೆ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಬಿಬಿಎಂಪಿ ಕೈ ನಾಯಕರು ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅರ್ಜಿ ಇತ್ಯರ್ಥಗೊಂಡ ಬೆನ್ನಲ್ಲೇ ಚುನಾವಣೆ ಆಯೋಗದಿಂದ ಪಾಲಿಕೆ ಚುನಾವಣೆ ಘೋಷಣೆ ಸಾಧ್ಯತೆ ಎನ್ನಲಾಗಿದೆ. ಹೀಗಾದರೆ ಡಿ ಲಿಮಿಟೇಷನ್ ಮಾಡಿ ಚುನಾವಣೆ ಗೆಲ್ಲುವ ಬಿಜೆಪಿ ಕನಸು ಭಗ್ನಗೊಳ್ಳಲಿದೆ.
ಡಿ ಲಿಮಿಟೇಷನ್ ಆಗುತ್ತೋ..? ಇಲ್ವೋ..? ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಲಿಮಿಟೇಷನ್ ಕಮಿಟಿ ಚೇರ್ಮನ್ ತುಷಾರ್ ಗಿರಿನಾಥ್, ಸುಪ್ರೀಂ ಕೋರ್ಟ್ ಡಿ ಲಿಮಿಟೇಷನ್ ಮಾಡಲೇ ಬಾರದು ಎಂದು ಹೇಳಲಿಲ್ಲ. ಹೀಗಾಗಿ ಈ ಸಂಬಂಧ ಸರ್ಕಾರದ ಸಲಹೆ ಹಾಗೂ ಚುನಾವಣೆ ಆಯೋಗದ ಜೊತೆ ಚರ್ಚೆ ಮಾಡಲಾಗುತ್ತೆ. ಬಳಿಕ ಡಿ ಲಿಮಿಟೇಷನ್ ವಿಚಾರವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.