ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಅಕಾಲಿಕ ಸಾವಿನ ಬಗ್ಗೆ ಹಲವು ಅನುಮಾನಗಳು ಏಳುತ್ತಿವೆ. ಚಂದ್ರು ಕಾಣೆಯಾದಾಗಿನಿಂದ ರಾಜ್ಯಾದ್ಯಂತ ಹುಟ್ಟಿದ್ದ ಕುತೂಹಲಗಳು ಈಗ ಗುಮಾನಿಗಳಾಗತೊಡಗಿವೆ.
ತನ್ನ ಕಂದ ಕಾಣೆಯಾಗಿದ್ದಾನೆ, ಹುಡುಕಿ ಕೊಡಿ ಎಂದು ಕಣ್ಣೀರು ಹಾಕುತ್ತಾ ಮಾಧ್ಯಮಗಳ ಮುಂದೆ ಬಂದ ರೇಣುಕಾಚಾರ್ಯ ರ ನಡೆಯ ಬಗ್ಗೆಯೇ ಹಲವರು ಅನುಮಾನ ವ್ಯಕ್ತಪಡಿಸಿರುವುದು ಪ್ರಕರಣದ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಿ ಗಂಟೆಗೊಂದರಂತೆ ಚಂದ್ರು ಸಾವಿನ ಬಗ್ಗೆ ರೇಣುಕಾಚಾರ್ಯ ಅವರು ಪೋಸ್ಟ್ ಹಾಕುತ್ತಿರುವುದು ಇಂತಹ ಗುಮಾನಿಗೆ ಕಾರಣ ಎನ್ನಲಾಗಿದೆ. ಅದಾಗ್ಯೂ, ಈ ಪ್ರಕರಣದಲ್ಲಿ ರಾಜಕೀಯ ಧ್ವೇಷದ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದು, ಈ ಹಿಂದೆ ಹಿಜಾಬ್ ಗಲಾಟೆಯಲ್ಲಿ ರೇಣುಕಾಚಾರ್ಯರಿಗೆ ಬಂದಿದೆ ಎನ್ನಲಾದ ಬೆದರಿಕೆ ಕರೆಯ ಆಡಿಯೋ ಕೂಡಾ ವೈರಲ್ ಆಗಿ ಅಂತಹ ಸಾಧ್ಯತೆಗಳ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಪೂರಕವಾಗಿ ಚಂದ್ರು ಸಾಯುವಾಗ ಕೇಸರಿ ಶಾಲು ಧರಿಸಿದ್ದ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದು ಅಶಾಂತಿಯ ಭೀತಿಯನ್ನು ಸೃಷ್ಟಿಸುವ ಸಾಧ್ಯತೆ ಇತ್ತು.
ಈ ನಡುವೆ ಪ್ರಕರಣ ಅಪಘಾತ ಎಂದು ಹೇಳಿದ ಪೊಲೀಸರ ಮೇಲೆ ಹರಿಹಾಯ್ದ ರೇಣುಕಾಚಾರ್ಯ ಅವರು ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಸರಿಯಾಗಿ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮಾಧ್ಯಮದ ಮುಂದೆ ಅವಲತ್ತುಕೊಳ್ಳುತ್ತಿರುವುದು ಹಲವು ಪ್ರಶ್ನೆಯನ್ನು ಎತ್ತಿದೆ. ರೇಣುಕಾಚಾರ್ಯ ಅವರ ಪಕ್ಷದ್ದೇ ಸರ್ಕಾರ ಇದ್ದರೂ ಪೊಲೀಸರ ಹೇಳಿಕೆಗಳನ್ನು ಒಪ್ಪದ ಶಾಸಕರ ನಡೆ ಪೊಲೀಸ್ ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಪ್ರಶ್ನಿಸುವಂತಿದೆ. ತಮ್ಮ ಸರ್ಕಾರದಿಂದ ಶಾಸಕರಿಗೇ ನ್ಯಾಯ ಸಿಗದೇ ಎಂಬ ಅನುಮಾನಗಳು ಎದ್ದಿವೆ.
ಈ ನಡುವೆ, ಚಂದ್ರು ಮೃತದೇಹದಲ್ಲಿ ಒಳ ಉಡುಪು ಇರಲಿಲ್ಲ ಎನ್ನುವುದು ಇನ್ನಷ್ಟು ಸಂದೇಹಗಳನ್ನು ಹುಟ್ಟು ಹಾಕಿದೆ. ಬಲ್ಲ ಮಾಹಿತಿ ಪ್ರಕಾರ ಚಂದ್ರು ಕಿವಿಯಲ್ಲಿ ಕಚ್ಚಿದ ಗುರುತು ಇದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಹಿಂದೆ ಇರುವ ಸಲಿಂಗಕಾಮದ ಆಯಾಮದ ಬಗ್ಗೆಯೂ ಗುಮಾನಿಗಳು ಎದ್ದಿವೆ. ಮಾಧ್ಯಮವೊಂದರ ವರದಿ ಪ್ರಕಾರ, ಚಂದ್ರು ತಂದೆಗೆ ಮಗನ ಗೆಳೆಯರ ಮೇಲೆಯೇ ಶಂಕೆ ಇದೆ ಎನ್ನಲಾಗಿದೆ. ಒಟ್ಟಾರೆ, ಚಂದ್ರು ಪ್ರಕರಣವು ಹಲವು ಗೋಜಲುಗಳನ್ನು ಸೃಷ್ಟಿಸಿದ್ದು, ಸರಿಯಾದ ತನಿಖೆಗೆ ಪ್ರತಿಪಕ್ಷಗಳೂ ಆಗ್ರಹಿಸುತ್ತಿವೆ. ಯಾವುದೇ ರಾಜಕೀಯ ಲಾಭಕ್ಕೆ ಬಳಕೆಯಾಗದಂತೆ, ಯಾರದ್ದೇ ಒತ್ತಡಕ್ಕೆ ಒಳಗಾಗದಂತೆ ಈ ಪ್ರಕರಣದ ತನಿಖೆ ನಡೆಯಬೇಕು ಎಂದು ಸಾರ್ವಜನಿಕರೂ ಆಗ್ರಹಿಸಲು ಶುರು ಮಾಡಿದ್ದಾರೆ.