ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಆಗಿರುವ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಜೊತೆಗೆ ಅಧಿಕಾರಕ್ಕಾಗಿ ಫೈಟಿಂಗ್ ಮಾಡಿ ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ಎರಡೂವರೆ ವರ್ಷದ ಅಧಿಕಾರದ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಡಿ.ಕೆ ಶಿವಕುಮಾರ್ ಬೆಂಬಲಿಗರು ಈಗಾಗಲೇ ಪುಕಾರು ಮಾಡುತ್ತಿದ್ದಾರೆ. ಆದರೆ ಇದೀಗ ಡಿ.ಕೆ ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ವಿರೋಧ ಪಕ್ಷಗಳು ಸೇರಿದಂತೆ ಗುತ್ತಿಗೆದಾರರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರಾ..? ಎಂಬ ಅನುಮಾನ ಸರ್ಕಾರದ ಮಟ್ಟದಲ್ಲೇ ಕೇಳಿಬರುತ್ತಿರುವ ಗುಸುಗುಸು. ವಿರೋಧ ಪಕ್ಷಗಳ ನಾಯಕರು ಮಾತನಾಡಿದರೆ ಏನಾಗುತ್ತೋ ಅನ್ನೋ ಆತಂಕದಲ್ಲಿದ್ದಾರೆ.
ಗುತ್ತಿಗೆದಾರ ಹೇಮಂತ್ ಬೆದರಿದ್ದು ಯಾಕೆ ಗೊತ್ತಾ..?
ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಬಿಲ್ ಬಿಡುಗಡೆ ಮಾಡದೆ ತನಿಖೆಗೆ ಆದೇಶ ಮಾಡಿದೆ. ಒಂದು ವೇಳೆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ ಬಿಲ್ ಪಾವತಿ ಮಾಡಲ್ಲ ಅನ್ನೋದು ಸರ್ಕಾರ ಅದರಲ್ಲೂ ಬೆಂಗಳೂರು ಅಬಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ವಾದ.

ಈ ನಡುವೆ ಹೇಮಂತ್ ಎನ್ನುವ ಗುತ್ತಿಗೆದಾರ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ ಹೇಳಲಿ ಕಮಿಷನ್ ಕೇಳಿಲ್ಲ ಎಂದು ಡಿ.ಕೆ ಶಿವಕುಮಾರ್ಗೆ ನೇರ ಸವಾಲು ಹಾಕಿದ್ದರು. ಒಂದು ವಾರಗಳ ಕಾಲ ಭಾರೀ ಚರ್ಚೆ ನಡೆದ ಬಳಿಕ ಗುತ್ತಿಗೆದಾರ ಹೇಮಂತ್ ತಮ್ಮ ಹೇಳಿಕೆ ವಾಪಸ್ ಪಡೆದುಕೊಂಡಿದ್ದಾರೆ. ನಾನು ಭಾವೋಗ್ವೇದದಲ್ಲಿ ಹೇಳಿದ್ದೆ. ನನ್ನ ಬಳಿ ಯಾರೂ ಕಮಿಷನ್ ಕೇಳಿಲ್ಲ, ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಕರೆದಿದ್ದು ತಪ್ಪು. ನನ್ನ ಹೇಳಿಕೆಯನ್ನು ವಾಪಸ್ ಪಡೆದುಕೊಳ್ತೇನೆ ಮುಂದೆ ಯಾರು ನನ್ನ ಹೇಳಿಕೆ ಉಲ್ಲೇಖಿಸಿ ಚರ್ಚೆ ಮಾಡಬೇಡಿ ಎಂದು ಬೇಡಿಕೊಂಡಿದ್ದರು.
ಸಿ.ಟಿ ರವಿಗೂ ಟ್ರೀಟ್ಮೆಂಟ್ ಬೇಕಿದೆ ಎಂದ ಡಿ.ಕೆ ಶಿವಕುಮಾರ್..!

ಅಜ್ಜಯ್ಯನ ಮೇಲೆ ಆಣೆ ಮಾಡಲು ಕರೆದಿದ್ದಾರೆ. ಕಮಿಷನ್ ಪಡೆದಿಲ್ಲ ಎನ್ನುವುದಾದರೆ ಅಜ್ಜನ ಮೇಲೆ ಪ್ರಮಾಣ ಮಾಡುವುದಕ್ಕೆ ಅಡ್ಡಿ ಏನು..? ಎಂದು ಸಿ.ಟಿ ರವಿ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಗರಂ ಆಗಿ ಉತ್ತರ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಸಿ.ಟಿ ರವಿಗೂ ಟ್ರೀಟ್ಮೆಂಟ್ ಬೇಕಾಗಿದೆ. ಸದ್ಯದಲ್ಲೇ ಟ್ರೀಟ್ಮೆಂಟ್ ಕೊಡೋಣ ಎಂದು ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದರು. ಇಂದು ಸಿ.ಟಿ ರವಿ ಮಾತನಾಡಿ, ಸಿ.ಟಿ.ರವಿಗೆ ಟ್ರೀಟ್ಮೆಂಟ್ ಅಗತ್ಯವಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಾನು ಸಂಘದ ಸ್ವಯಂ ಸೇವಕ, ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್ ಕೊಡ್ತಾರೆ. ಕೊತ್ವಾಲ್ ಮಾದರಿಯ ಟ್ರೀಟ್ಮೆಂಟ್ ಕೊಡ್ತಾರಾ ಅನ್ನೋದು ನನಗೆ ಭಯ ಉಂಟು ಮಾಡಿದೆ. ಹೀಗಾಗಿ ರಕ್ಷಣೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡ್ತೀನಿ ಎಂದಿದ್ದಾರೆ.
ಅಧಿಕಾರದಲ್ಲಿ ಇದ್ದವರ ಮೇಲೆ ಆರೋಪ ಸಹಜ ಅಲ್ಲವೇ..!?
ಅಧಿಕಾರದಲ್ಲಿ ಯಾರೇ ಇದ್ದರೂ ಆರೋಪಗಳು ಬರುತ್ತವೆ. ಆರೋಪಗಳನ್ನು ಸಹಿಸಿಕೊಳ್ಳುವ ಶಕ್ತಿ ಅಧಿಕಾರದಲ್ಲಿ ಇರುವ ಜನರಿಗೆ ಇರಬೇಕಾಗುತ್ತದೆ. ಒಂದು ವೇಳೆ ತಾನು ಆರೋಪದಿಂದ ಮುಕ್ತವಾಗಬೇಕು ಎನ್ನುವುದಾದರೆ ತನಿಖೆ ಮಾಡಿಸಬೇಕು, ಪೊಲೀಸರು ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿ ತಾನು ನಿರಪರಾಧಿ ಎಂದು ಸಾಬೀತು ಮಾಡಿಕೊಳ್ಳಬೇಕು.

ಅದನ್ನು ಬಿಟ್ಟು ಟ್ರೀಟ್ಮೆಂಟ್ನ ಅವಶ್ಯಕತೆ ಇದೆ ಎನ್ನುವುದು ಬೆದರಿಕೆ ಆಗುತ್ತದೆ. ಇನ್ನು ಗುತ್ತಿಗೆದಾರರು ಆರೋಪ ಮಾಡಿದ ಬಳಿಕ ಒಂದೆರಡು ದಿನದಲ್ಲಿ ಮೆತ್ತಗಾದರು. ಅವರಿಗೆ ಯಾವ ಟ್ರೀಟ್ಮೆಂಟ್ ನೀಡಿದ್ದಾರೆ ಎನ್ನುವುದು ಬಹಿರಂಗ ಆಗಿಲ್ಲ. ಆದರೆ ಟ್ರೀಟ್ಮೆಂಟ್ ಸಿಕ್ಕಿದೆ ಎನ್ನುವುದು ಎರಡನೇ ಹೇಳಿಕೆಯನ್ನು ನೋಡಿದಾಗ ಗೊತ್ತಾಗುತ್ತದೆ. ಈ ರೀತಿ ಬೆದರಿಕೆ ಹಾಕುವ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಹೇಗಿರಬಹುದು ಎಂದು ಚರ್ಚೆ ಶುರುವಾಗಿದೆ. ಡಿ.ಕೆ ಶಿವಕುಮಾರ್ ತಿದ್ದಿಕೊಳ್ಳುವ ಅವಶ್ಯಕತೆ ಹೆಚ್ಚಿದೆ.
ಕೃಷ್ಣಮಣಿ