ಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲಿ ಒತ್ತುವರಿ ತೆರವು ಸದ್ದು ಮಾಡಿತ್ತು. ಬಿಬಿಎಂಪಿಯ ಪೌರುಷಕ್ಕೆ ನಾಲ್ಕಾರು ಬಡಬಗ್ಗರ ಮನೆಯೂ ನೆಲಸಮ ಆಗೋಯ್ತು. ಆದ್ರೆ ಇದೀಗ ಪಾಲಿಕೆ ಹಾಗೂ ಕಂದಾಯ ಇಲಾಖೆಯ ಎಡವಟ್ಟೊಂದು ಬೆಳಕಿಗೆ ಬಂದಿದೆ. ಪಾಲಿಕೆ ಮಾಡಿದ ಯಡವಟ್ಟೇ ಈಗ ಕಾಸು ಕೊಟ್ಟು ಸೈಟ್ ಕೊಂಡವ್ರು ಮನೆಕಳೆದುಕೊಳ್ಳುವಂತಾಗಿದೆ.
ರಾಜಕಾಲುವೆ ಒತ್ತುವರಿ ತೆರವು 100% ತುಘಲಕ್ ದರ್ಬಾರ್ ?
ರಾಜಕಾಲುವೆ ಒತ್ತುವರಿ ತೆರವು ಸದ್ಯ ರಾಜಧಾನಿಯಲ್ಲಿ ಸಖತ್ ಸದ್ದು ಮಾಡ್ತಿರೋ ವಿಚಾರ. ಕಾರಣ ಏನಂದ್ರೆ ಈಗೇನು ಒತ್ತುವರಿ ತೆರವು ಅಂತ ಪಾಲಿಕೆ ನಡೆಸ್ತಿದೆ. ಬಹುತೇಕ ಮನೆಮಾಲೀಕರ ಬಳಿಯಲ್ಲಿ ಮನೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳಿವೆ. ಎಲ್ಲಾ ದಾಖಲೆಗಳೂ ಬಿಡಿಎ ಅಪ್ರೂವ್ಡ್ ಇಲ್ಲಾ ಬಿಬಿಎಂಪಿ ಅಪ್ರೂವ್ಡ್. ಹೀಗಿದ್ರೂ ಈಗ ನಿಮ್ಮ ಮನೆ ನೀರುಗಾಲುವೆ ಮೇಲಿದೆ ಅಂತ ಕಂದಾಯ ಇಲಾಖೆ ಹೇಳ್ತಿದೆ. ಹೀಗೆ ಆಗೋದಕ್ಕೆ ಏನ್ ಕಾರಣ ಅಂತ ಹುಡೋಕೋದಕ್ಕೆ ಹೊರಟ್ರೆ ಬಿಬಿಎಂಪಿ ಮಾಡಿರೋ ಭಾರಿ ಎಡವಟ್ಟುಗಳ ಅನಾವರಣವೇ ಆಗ್ತಿದೆ.
ಬ್ರಿಟೀಷ್ ಮಾಪ್ ಹಿಡಿದು ಸರ್ವೆ ಮಾಡ್ತಿದೆ ಕಂದಾಯ ಇಲಾಖೆ
ನಿಜ. ಸದ್ಯ ರಾಜಕಾಲುವೆಗಳ ಮಾರ್ಕಿಂಗ್ ಜವಾಬ್ದಾರಿ ಹೊತ್ತಿರೋದು ಕಂದಾಯ ಇಲಾಖೆ. ಕಂದಾಯ ಇಲಾಖೆ ಸರ್ವೆ ಮಾಡಿಕೊಟ್ಟಿದ್ದನ್ನ ಪಾಲಿಕೆ ಡೆಮಾಲಿಷ್ ಮಾಡ್ತಿದೆ. ಇಲ್ಲಿ ಕಂದಾಯ ಇಲಾಖೆ 1904ರ ವಿಲೇಜ್ ಮ್ಯಾಪ್ ಅನುಸರಿಸಿ ನೀರುಗಾಲುವೆಗಳನ್ನ ಗುರುತು ಹಚ್ಚುತ್ತಿದೆ. ಇದು ಬ್ರಿಟೀಷರ ಕಾಲದ ಮ್ಯಾಪಾಗಿದ್ದು ಇದ್ರಲ್ಲಿ ಪಿಳ್ಳಗಾಲುವೆ, ನೀರುಗಾಲುವೆ ಪ್ರತಿಯೊಂದು ಸಹ ಇದೆ. ಇದೆಲ್ಲಾ ಒತ್ತುವರಿ ಎಂದು ಕಂದಾಯ ಇಲಾಖೆ ಹೇಳ್ತಿದೆ. ಆದ್ರೆ ಪಾಲಿಕೆ ಈ ಬ್ರಿಟೀಷ್ ಮ್ಯಾಪ್ಗೆ ಎಳ್ಳುನೀರು ಬಿಟ್ಟು 1990 ಬಳಿಕ ಹೊಸ ಮ್ಯಾಪ್ ಸಿದ್ದಪಡಿಸಿಕೊಂಡಿದೆ. ಈ ಮ್ಯಾಪ್ನಲ್ಲಿ ಅನೇಕ ಕಾಲುವೆಗಳನ್ನ ಡ್ರೈ ಕಾಲುವೆಗಳು ಅಂತ ಮುಚ್ಚಿ ಲೇಔಟ್ ಅಪ್ರೂವಲ್ ಕೊಟ್ಟಿದೆ. ಇದುಗೊತ್ತಿಲ್ಲದ ಮಂದಿ ಸೈಟ್ ಪಡೆದು ಮನೆಕಟ್ಟಿ ಕುಳಿತಿದ್ದಾರೆ. ಆದ್ರೀಗ ಪಾಲಿಕೆ ಅಪ್ರೂವ್ ಮಾಡಿದ ಸೈಟ್ಗಳನ್ನೇ ಒತ್ತುವರಿ ಎಂದು ಮಾರ್ಕಿಂಗ್ ಮಾಡ್ತಿದೆ. ತಾನೇ ಅಪ್ರೂವ್ ಮಾಡಿದ ಸೈಟ್ಗಳನ್ನ ಡೆಮಾಲಿಷನ್ ಮಾಡೋ ಪರಿಸ್ಥಿತಿ ಬಿಬಿಎಂಪಿಗೆ ಬಂದಿದೆ.
ಕೆರೆ ಕಾಲುವೆ ಮುಚ್ಚಿ ಹೊಸ ಮ್ಯಾಪ್ ರೆಡಿಮಾಡಿದೆ ಪಾಲಿಕೆ
ಇನ್ನು ಈ ಗೊಂದಲ ಈಗ ಮನೆಮಾಲೀಕರನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಪಾಲಿಕೆ ಹಾಗೂ ಕಂದಾಯ ಇಲಾಖೆ ಮೇಲಾಟಕ್ಕೆ ನಾವೇಕೆ ಬಲಿಯಾಗ್ಬೇಕು ಅಂತ ಜನ ಪ್ರಶ್ನಿಸ್ತಿದ್ದಾರೆ. ಆದ್ರೆ ಅದಾಗ್ಲೇ ಹಲವಾರು ಮಂದಿ ಮನೆಕಳೆದುಕೊಂಡು ನಿರಾಶ್ರಿತರಾಗಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋಹಾಗೆ, ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಹಗ್ಗಜಗ್ಗಾಟದಲ್ಲಿ ಮನೆ ಕೊಂಡವ್ರು ಬಲಿಯಾಗ್ತಿದ್ದಾರೆ. ತಾವು ಕಾನೂನು ಪ್ರಕಾರಕೊಂಡ ಮನೆಗಳನ್ನೇ ಈಗ ಅಧಿಕೃತ ಅಂತ ಪ್ರೂವ್ ಮಾಡಲಾರದ ಸ್ಥಿತಿಗೆ ಮನೆ ಮಾಲೀಕರು ಬಂದಿರೋದು ನಿಜಕ್ಕೂ ವಿಪರ್ಯಾಸ.