ಪ್ರತಿಯೊಬ್ಬರಿಗೂ ತಾವು ಏನನ್ನೂ ಸೇವಿಸುತ್ತಿದ್ದೇವೆ ಎಂಬ ಮಾಹಿತಿ ತಿಳಿದುಕೊಳ್ಳುವ ಹಕ್ಕಿದೆ. ಯಾವುದೇ ಆಹಾರ ಪದಾರ್ಥ ತಯಾರಿಸುವ ಎಲ್ಲಾ ಕಂಪನಿಗಳು ಅದು ಯಾವ ಮೂಲದ್ದು ಎಂಬ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುವುದು ಕಡ್ಡಾಯವಾಗಿದ್ದು, ಸಸ್ಯಹಾರ ಮತ್ತು ಮಾಂಸಹಾರ ಆಹಾರ ಪದಾರ್ಥಗಳಿಗೆ ಬಳಸುವ ಪದರ್ಥಾಗಳನ್ನು ಬಹಿರಂಗಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ.
ಬಹಿರಂಗಪಡಿಸುವಾಗ ಅವುಗಳ ಕೋಡ್ ಹೆಸರುಗಳಲ್ಲದೇ ಅವುಗಳು ಸಸ್ಯಾಹಾರ ಮತ್ತು ಪ್ರಾಣಿ ಮೂಲದಿಂದ ಹುಟ್ಟಿಕೊಂಡಿವೆಯೇ ಅಥವಾ ಪ್ರಯೋಗಾಲಯದಲ್ಲಿ ತಯಾರಿಸಲ್ಪಟ್ಟಿದೆಯೇ ಎಂಬುದು ತಿಳಿಸಬೇಕು. ಸಸ್ಯಹಾರ ಮೂಲ ಯಾವುದು? ಪ್ರಾಣಿಗಳ ಮೂಲ ಯಾವುದು? ಎಂಬುದನ್ನು ಬಹಿರಂಗಪಡಿಸಬೇಕು ಮತ್ತು ಅವುಗಳ ಪ್ರಮಾಣವನ್ನು ತಿಳಿಸಬೇಕು ಎಂದು ನ್ಯಾ. ವಿಪಿನ್ ಸಂಘಿ ಮತ್ತು ನ್ಯಾ. ಜಸ್ಮೀತ್ ಅವರಿದ್ದ ದ್ವಿಸದಸ್ಯ ಪೀಠವು ಹೇಳಿದೆ.
ಅವಶ್ಯಕತೆಗಳನ್ನು ಅನುಸರಿಸಲು ಆಹಾರ ತಯಾರಕರು ವಿಫಲವಾದರೆ ಸಾರ್ವಜನಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆರೋಪದಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಅಂತಹವರನ್ನು ಗುರಿಪಡಿಸಲಾಗುತ್ತದೆ ಮತ್ತು ದಂಡನೀಯ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಆಹಾರ ಪದಾರ್ಥಗಳ ತಯಾರಕರು ಪ್ರತಿಪಾದಿಸಿರುವ ಎಲ್ಲಾ ಹಕ್ಕುಗಳನ್ನು ಪರಿಶೀಲಿಸಬೇಕು ಮತ್ತು ಎಫ್ಎಸ್ಎಸ್ಎಐ ಅಥವಾ ಅದರ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದರೆ ಅಂತಹ ಎಲ್ಲಾ ಅಧಿಕಾರಿಗಳನ್ನು ಕಾನೂನಿನ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ಕುರಿತು ಅರ್ಜಿ ಸಲ್ಲಿಸಿದ್ದ ಸರ್ಕಾರೇತರ ಟ್ರಸ್ಟ್ ರಾಮ್ ಗೌವಾ ರಕ್ಷಾದಳ ಈ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಆಹಾರ ಉತ್ಪನಗಳು ಮತ್ತು ಸೌಂದರ್ಯವರ್ಧಕಗಳ ಲೇಬಲ್ನಲ್ಲಿ ತೋರಿಸಿರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿತ್ತು. ಇತರೆ ವಸ್ತುಗಳಿಗೂ ಈ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಟ್ರಸ್ಟ್ ನ್ಯಾಯಾಲಯದಲ್ಲಿ ವಾದಿಸಿತ್ತು.
ಅರ್ಜಿ ಸಲ್ಲಿಸಿರುವ ಟ್ರಸ್ಟ್ನ ಸದಸ್ಯರು ಸಿಖ್ ಧರ್ಮದ ನಾಮಧಾರಿ ಪಂಥದ ಅನುಯಾಯಿಗಳು ಮತ್ತು ತಾವುಗಳು ಕಟ್ಟುನಿಟ್ಟಾದ ಸಸ್ಯಾಹಾರವನ್ನ ಪ್ರತಿಪಾದಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು. ಕಟ್ಟುನಿಟ್ಟಾದ ಸಸ್ಯಾಹಾರವನ್ನ ಪ್ರತಿಪಾದಿಸುವವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನಗಳಲ್ಲಿ ಯಾವುದು ಬಳಕೆಗೆ ಯೋಗ್ಯ ಮತ್ತು ತಿನ್ನಬಹುದಾದ ಆಹಾರ ಪದಾರ್ಥಗಳು ಸೇರಿದಂತೆ ಬಹಳಷ್ಟು ಉತ್ಪನಗಳು ಮಾಂಸಹಾರವನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಸಸ್ಯಾಹಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಇಂತಹ ಲೋಪದೋಷಗಳನ್ನು ಪರಿಶೀಲಿಸುವಾಗ ಅಧಿಕಾರಿಗಳ ವೈಫಲ್ಯ ಮತ್ತು ಆಹಾರ ಗುಣಮಟ್ಟ, ಸುರಕ್ಷತೆ ಮತ್ತು ನಿಯಾಮಾವಳಿಗಳನ್ನು ಅನುಸರಿಸುವುದು ಮಾತ್ರವಲ್ಲದೆ ಸಾರ್ವಜನಿಕರು ಆಹಾರ ತಯಾರಕರಿಂದ ವಂಚನೆಗೆ ಒಳಗಾಗುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುವ (ಪ್ರಾಣಿಗಳ ಪಡೆದಂತಹ) ಶೇಕಡವಾರು ಪ್ರಮಾಣ ಎಷ್ಟು ಎಂಬುದು ಮುಖ್ಯವಲ್ಲ. ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿದ್ದರೂ ಸಹ ಮಾಂಸಹಾರಿ ಪದರ್ಥಾಗಳ ಬಳಕೆಯಿಂದ ಅಂತಹ ಆಹಾರ ಪದಾರ್ಥಗಳನ್ನು ಮಾಂಸಹಾರವನ್ನಾಗಿ ಬದಲಿಸುತ್ತದೆ ಮತ್ತು ಕಟ್ಟುನಿಟ್ಟಾದ ಸಸ್ಯಾಹಾರ ಆಹಾರ ಕ್ರಮವನ್ನ ಪಾಲಿಸುವವರ ಧಾರ್ಮಿಕ ಸಾಂಸ್ಕೃತಿಕ ಸಂವೇದನೆ ಮತ್ತು ಭಾವನೆಗಳಿಗೆ ದಕ್ಕೆ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.