ಸಿಎಎ ವಿರೋಧಿ ಪ್ರತಿಭಟನೆಯ ವೇಳೆ, ಫೆಬ್ರವರಿ 2020 ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಜೆಎನ್ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್, ತನ್ನ ಜೈಲು ಕೊಠಡಿಯೊಳಗೆ ಅಕ್ರಮವಾಗಿ ಶೋಧ ಕಾರ್ಯ ನಡೆಸಿ, ತನ್ನನ್ನು ಭಯೋತ್ಪಾದಕ, ರಾಷ್ಟ್ರದ್ರೋಹಿ ಎಂದು ಕರೆದು, ತಿಹಾರ್ ಜೈಲಿನ ಅಪರಾಧಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ, ಯುಎಪಿಎ ಪ್ರಕರಣದ ಪ್ರಮುಖ ಆರೋಪಿಗಳು ಅನೇಕ ನ್ಯಾಯಾಲಯದ ವಿಚಾರಣೆಗಳಲ್ಲಿ ಜೈಲು ಸಿಬ್ಬಂದಿಯಿಂದ ತಾರತಮ್ಯವನ್ನು ಎದುರಿಸಿರುವುದಾಗಿ ಆರೋಪಿಸಿದ್ದರು. ಆದರೆ, ಶರ್ಜೀಲ್ ಇಮಾಮ್ ಈ ಆರೋಫ ಮಾಡುತ್ತಿರುವುದು ಇದೇ ಮೊದಲು.
ಈ ಕುರಿತು ಇಮಾಮ್ ಪರ ವಕೀಲ ಇಬ್ರಾಹೀಂ ಅವರು ಕರ್ಕರ್ಡೂಮಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸಿದ್ದು, ಅರ್ಜಿದಾರರ ಮೇಲೆ ಹಲ್ಲೆ ಮತ್ತು ಅಕ್ರಮವಾಗಿ ಹುಡುಕಾಟ ನಡೆಸಿದ್ದಕ್ಕಾಗಿ ಜೈಲು ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ನೀಡಲು ಮತ್ತು ಯಾವುದೇ ಸಂಭಾವ್ಯ ಆಕ್ರಮಣ/ ಕಿರುಕುಳದಿಂದ ಅವರನ್ನು ರಕ್ಷಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೆ, ಜೂನ್ 30 ರಂದು ರಾತ್ರಿ ಘಟನೆ ನಡೆದಿದ್ದು, ಅಂದಿನ ದಿನದ 7.15 ರಿಂದ 8.30 ರವರೆಗೆ ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋವನ್ನು ಸಂರಕ್ಷಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ. ನ್ಯಾಯಾಧೀಶರು ನೋಟಿಸ್ ಜಾರಿ ಮಾಡಿದ್ದು, ಜುಲೈ 14 ರಂದು ಜೈಲು ಅಧಿಕಾರಿಗಳು ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಯುಎಪಿಎ ಸೆಕ್ಷನ್ಗಳ ಅಡಿಯಲ್ಲಿ ದಾಖಲಾದ ಪ್ರಮುಖ ಗಲಭೆ ಪ್ರಕರಣದಲ್ಲಿ ಸೋಮವಾರ ಇಮಾಮ್ ಅವರನ್ನು ಕರ್ಕರ್ಡೂಮಾ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ದಾಳಿಯನ್ನು ಬಹಿರಂಗಪಡಿಸಿದರು ಎಂದು ಅವರ ವಕೀಲರು ಹೇಳಿದ್ದಾರೆ.
“ಜೂನ್ 30 ರಂದು ಸಹಾಯಕ ಅಧೀಕ್ಷಕರು 8-9 ಅಪರಾಧಿಗಳೊಂದಿಗೆ ಹುಡುಕಾಟ ನಡೆಸುವ ಹೆಸರಿನಲ್ಲಿ ಶರ್ಜೀಲ್ ಇಮಾಮ್ ಕೊಠಡಿಗೆ ಬಂದಿದ್ದು, ಅಕ್ರಮ ಹುಡುಕಾಟದ ಸಮಯದಲ್ಲಿ, ಅರ್ಜಿದಾರರ ಪುಸ್ತಕಗಳು ಮತ್ತು ಬಟ್ಟೆಗಳನ್ನು ಬಿಸಾಡಲಾಯಿತು. ವಸ್ತುಗಳನ್ನು ಎಸೆಯದಂತೆ ತಡೆಯುವಾಗ ಅರ್ಜಿದಾರರನ್ನು ಭಯೋತ್ಪಾದಕ ಮತ್ತು ದೇಶವಿರೋಧಿ ಎಂದು ಕರೆದು ಹಲ್ಲೆ ನಡೆಸಲಾಯಿತು” ಎಂದು ಮನವಿಯಲ್ಲಿ ಆರೋಪಿಸಲಾಗಿದೆ.