ಕೋವಿಡ್ ಬಿಕ್ಕಟ್ಟಿನಿಂದ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಕೋವಿಡ್ ನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಆರ್ಥಿಕ ಪರಿಹಾರ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ, ಪಿಂಚಣಿ ಮತ್ತು ಬಡ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಭರವಸೆ ಕೊಟ್ಟಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟ ಪ್ರತಿ ಕುಟುಂಬಕ್ಕೆ ದೆಹಲಿ ಸರ್ಕಾರದಿಂದ 50 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ದೆಹಲಿ ಮುಖ್ಯಮಂತ್ರಿ ಉಚಿತ ಪಡಿತರವನ್ನು ಘೋಷಿಸಿದ್ದು, ಈ ತಿಂಗಳು 10 ಕೆ.ಜಿ ಉಚಿತ ಪಡಿತರ ನೀಡಲಾಗುವುದು ಎಂದಿದ್ದಾರೆ.
ಸಂಪಾದನೆ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರೆ ಅಂತಹ ಕುಟುಂಬಗಳಿಗೆ ಪರಿಹಾರದ ಹಾಗು ಪ್ರತಿ ತಿಂಗಳು 2500 ಪಿಂಚಣಿಯನ್ನು ಘೋಷಿಸಲಾಗಿದೆ.
ಗಂಡ ಸತ್ತಿದ್ದರೆ ಪಿಂಚಣಿ ಹೆಂಡತಿಗೆ ನೀಡಲಾಗುವುದು, ಹೆಂಡತಿ ಸತ್ತಿದ್ದರೆ ಅದನ್ನು ಗಂಡನಿಗೆ ನೀಡಲಾಗುವುದು. ಅವಿವಾಹಿತ ವ್ಯಕ್ತಿ ಸತ್ತರೆ ಪಿಂಚಣಿ ಅವನ / ಅವಳ ಪೋಷಕರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 25 ವರ್ಷ ತುಂಬುವವರೆಗೆ ಪ್ರತಿ ತಿಂಗಳು 2,500 ಪಿಂಚಣಿ ಹಾಗು ದೆಹಲಿ ಸರ್ಕಾರದಿಂದ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದ್ದಾರೆ.
.