ಭಾರತದ ಮಹಿಳಾ ಬಾಕ್ಸರ್ ನಿಖತ್ ಜರೀನ್ ಮತ್ತು ಟೇಬಲ್ ಟೆನಿಸ್ ಆಟಗಾರ ಅಜಂತಾ ಶರತ್ ಕಮಲ್ ಕಾಮನ್ ವೆಲ್ತ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಗೌರವ ಪಡೆದಿದ್ದಾರೆ.
ಬರ್ಮಿಂಗ್ ಹ್ಯಾಂನ ಅಲೆಗ್ಸಾಂಡರ್ ಕ್ರೀಡಾಂಗಣದಲ್ಲಿ ಆಗಸ್ಟ್ 8 ಅಂದರೆ ಸೋಮವಾರ ಸಮಾರೋಪ ಸಮಾರಂಭ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಟೇಬಲ್ ಟೆನಿಸ್ ತಂಡದ ನಾಯಕ ಅಜಂತಾ ಶರತ್ ಕಮಲ್ ಮತ್ತು ವಿಶ್ವ ಚಾಂಪಿಯನ್ ಹಾಗೂ ವನಿತೆಯರ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಧ್ವಜ ಹಿಡಿದು ಭಾರತ ತಂಡದ ಪಥಸಂಚಲನದಲ್ಲಿ ಮುಂದಾಳತ್ವ ವಹಿಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಶರತ್ ಕಮಲ್ ಟೇಬಲ್ ಟೆನಿಸ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೇ ಸೋಮವಾರ ಸಿಂಗಲ್ಸ್ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಜಾವೆಲಿನ್ ಪಟು ನೀರಜ್ ಚೋಪ್ರಾ ಗಾಯಗೊಂಡು ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದ ಕಾರಣ ಬ್ಯಾಡ್ಮಿಂಟನ್ ಪಟು ಪಿವಿ ಸಿಂಧು ಮತ್ತು ಹಾಕಿಪಟು ಮನ ಪ್ರೀತ್ ಸಿಂಗ್ ಉದ್ಘಾಟನಾ ಸಮಾರಂಭದಲ್ಲಿ ಧ್ವಜ ಹಿಡಿಯುವ ಗೌರವಕ್ಕೆ ಪಾತ್ರರಾಗಿದ್ದರು.