ಕೋವಿಡ್ ವ್ಯಾಕ್ಸಿನೇಷನ್ ಭೀತಿಗೊಳಗಾಗಿ 23 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಬಿದ್ದ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ.
ಜ್ಯೋತಿಗೌಡನಪುರ ಗ್ರಾಮದಲ್ಲಿನ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ 9 ಹಾಗೂ 10 ನೇ ತರಗತಿಯ ಒಟ್ಟು 23 ಮಂದಿ ವಿದ್ಯಾರ್ಥಿಗಳು ತಲೆ ತಿರುಗಿ ಹಾಗೂ ಸುಸ್ತಿಗೆ ಒಳಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ವಸತಿ ಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ಎರಡನೇ ಡೋಸ್ ವ್ಯಾಕ್ಸಿನ್ ಕೊಟ್ಟಿದ್ದು ಓರ್ವ ವಿದ್ಯಾರ್ಥಿನಿಗೆ ಜ್ವರ ಬಂದಿದ್ದು ಇಬ್ಬರು ವಿದ್ಯಾರ್ಥಿನಿಯರಿಗೆ ತಲೆಬೇನೆ ಉಂಟಾಗಿದೆ. ಇದಾದ ನಂತರ, ಒಬ್ಬರ ನಂತರ ಒಬ್ಬರು ಸುಸ್ತು, ತಲೆ ತಿರುಗು ಎಂದು 23 ಮಂದಿ ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದು ಯಾವುದೆಸ ಭಯ ಪಡುವ ಅಗತ್ಯವಿಲ್ಲ ಎಂದು ಶಾಲೆ ಪ್ರಾಂಶುಪಾಲ ಭವಾನಿಶಂಕರ್ ತಿಳಿಸಿದ್ದಾರೆ.
ಇನ್ನು, ವಿದ್ಯಾರ್ಥಿನಿಯರು ಅಸ್ವಸ್ಥ ಸಂಬಂಧ ಡಾ. ವಿದ್ಯಾಸಾಗರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನ್ ನ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಸಮೂಹ ಸನ್ನಿ ರೀತಿ ಮಕ್ಕಳು ತಲೆ ತಿರುಗಿ ಬಿದ್ದಿದ್ದು ಎಲ್ಲರಿಗೂ ಮನೋವೈದ್ಯರು ಕೌನ್ಸಿಲಿಂಗ್ ನಡೆಸಿದ್ದು ಯಾವುದೇ ಅತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.