ಜನಸಾಮಾನ್ಯರಿಗೆ ಒಂದು ಕಾನೂನು ಮತ್ತು ಅಧಿಕಾರಸ್ಥರು ಮತ್ತು ಅವರ ಪಕ್ಷದವರಿಗೆ ಮತ್ತೊಂದು ಕಾನೂನು ಎಂಬುದು ಕೋವಿಡ್ ಸಂದರ್ಭದಲ್ಲಿ ಹಿಂದೆಂದಿಗಿಂತ ಢಾಳಾಗಿ ಜಾರಿಗೆ ಬಂದಿದೆ.
ಪ್ರತಿ ಬಾರಿ ಕೋವಿಡ್ ನಿಯಂತ್ರಣದ ಹೊಸ ಹೊಸ ಕಾನೂನು ನಿರ್ಬಂಧಗಳು ಜಾರಿಗೆ ಬಂದಾಗಲೂ, ಕೂಲಿ ಕಾರ್ಮಿಕರಿಂದ ಉದ್ಯಮಪತಿಗಳವರೆಗೆ ಎಲ್ಲರ ಬದುಕು ಒಂದಲ್ಲಾ ಒಂದು ರೀತಿಯಲ್ಲಿ ಪೆಟ್ಟು ತಿನ್ನುತ್ತಲೇ ಇದೆ. ಆದರೆ, ರಾಜಕಾರಣಿಗಳು, ರಾಜಕೀಯ ಪಕ್ಷಗಳು; ಅದರಲ್ಲೂ ಅಧಿಕಾರರೂಢ ಪಕ್ಷ ಮತ್ತು ಅದರ ನಾಯಕರಿಗೆ ಮಾತ್ರ ಅಂತಹ ಯಾವ ನಿರ್ಬಂಧ, ನಿಯಮಗಳೂ ಬಾಧಿಸುವುದೇ ಇಲ್ಲ! ಬದಲಾಗಿ ಅಧಿಕಾರಸ್ಥರ ಪಾಲಿಗೆ ಬಗೆಬಗೆಯ ವಿಷಯದಲ್ಲಿ ಕೋವಿಡ್ ಒಂದು ವರದಾನವಾಗಿ ಒದಗಿಬಂದಿದೆ.
ಎರಡನೇ ಅಲೆಯ ಲಾಕ್ ಡೌನ್ ಸಡಿಲಿಸುವ ಹೊತ್ತಿಗೆ ಜೂನ್ ನಲ್ಲಿಯೇ ‘ಪ್ರತಿಧ್ವನಿ’ ನಾಡಿನ ಜನತೆಗೆ ಎಚ್ಚರಿಸಿತ್ತು. ಲಾಕ್ ಡೌನ್ ಅವಸರವಸರವಾಗಿ ತೆರವುಗೊಳಿಸುತ್ತಿರುವ ಹಿಂದೆ ಜನರ ಬದುಕು, ಉದ್ಯಮ, ವ್ಯವಹಾರ ಉಳಿಸುವ ಉದ್ದೇಶಕ್ಕಿಂತ ಆಡಳಿತ ಪಕ್ಷ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ತಯಾರಿಯ ಜರೂರು ಇದೆ. ಹಾಗಾಗಿ ಲಾಕ್ ಡೌನ್ ತೆರವಾಗುತ್ತಲೇ ರಾಜ್ಯದ ಉದ್ದಗಲಕ್ಕೆ ಯಾತ್ರೆ, ಸಮಾವೇಶಗಳ ಜಾತ್ರೆಗಳು ಆರಂಭವಾಗುತ್ತವೆ. ಮೊದಲನೇ ಅಲೆಯ ವೇಳೆ ಕೂಡ ರಾಜಕೀಯ ಪಕ್ಷಗಳು ಚುನಾವಣೆಗಳ ಮೇಲೆ ಕಣ್ಣಿಟ್ಟು ನಡೆಸಿದ ಇಂತಹ ಜನದ್ರೋಹಿ ಸಮಾವೇಶ-ರ್ಯಾಲಿಗಳ ಕಾರಣದಿಂದಾಗಿಯೇ ಎರಡನೇ ಅಲೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಸಾವು ಮತ್ತು ಅಪಾರ ನಷ್ಟಕ್ಕೆ ದೇಶ ಸಾಕ್ಷಿಯಾಗಬೇಕಾಯಿತು. ಈ ಬಾರಿ ಕೂಡ ಮತ್ತದೇ ವರಸೆ ಪ್ರದರ್ಶಿಸಲಿದ್ದಾರೆ. ಹಾಗಾಗಿ ಜನತೆ ರಾಜಕೀಯ ಮೆರವಣಿಗೆ, ಯಾತ್ರೆ, ಜಾತ್ರೆಗಳ ಹೆಸರಲ್ಲಿ ಬರುವ ರಾಜಕಾರಣಿಗಳಿಗೆ ಮುಲಾಜಿಲ್ಲದೆ ಪೊರಕೆ ಸೇವೆ ಮಾಡಿ ಓಡಿಸಬೇಕು ಎಂದು ಹೇಳಿತ್ತು.
ಇದೀಗ ಆ ಎಚ್ಚರಿಕೆ ಅಕ್ಷರಶಃ ನಿಜವಾಗಿದೆ. ಬೆಂಗಳೂರಿನಿಂದ ಬೀದರ್ ವರೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಪೈಪೋಟಿಯ ಮೇಲೆ ರಾಜಕೀಯ ಸಮಾವೇಶ, ಯಾತ್ರೆ, ರ್ಯಾಲಿಗಳನ್ನು ನಡೆಸತೊಡಗಿವೆ. ಅದರಲ್ಲೂ ಜಾರಿಯಲ್ಲಿರುವ ಕನಿಷ್ಟ ಮಟ್ಟದ ನಿರ್ಬಂಧಗಳನ್ನು ಕೂಡ ಗಾಳಿಗೆ ತೂರಿ, ಯಾವುದೇ ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ, ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂಗಳನ್ನೂ ಗಾಳಿಗೆ ತೂರಿ ಜನಸಾಮಾನ್ಯರನ್ನು ಮತ್ತೊಂದು ಸುತ್ತಿನ ಸಾವಿನೊಂದಿಗಿನ ಸೆಣೆಸಾಟಕ್ಕೆ ನೂಕುತ್ತಿವೆ. ಜನ ಕೂಡ ಜೀವದ ಹಂಗು ತೊರೆದು ತಮ್ಮ ನಾಯಕರಿಗೆ ಜಯಕಾರ ಹಾಕುತ್ತಾ ಮೈಮರೆಯುತ್ತಿದ್ದಾರೆ!
ಈ ನಡುವೆ ಆಡಳಿತ ಪಕ್ಷ ಬಿಜೆಪಿಯ ಕೇಂದ್ರ ಸಚಿವರು, ಸಂಸದರು ಮತ್ತು ರಾಜ್ಯ ಸಚಿವರುಗಳು ನಡೆಸುತ್ತಿರುವ ಜನಾಶೀರ್ವಾದ ಯಾತ್ರೆ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಗೆ ಹೊಸ ವೇಗ ಕೊಡುವ ಕಾರ್ಯಕ್ರಮದಂತೆ ತೋರುತ್ತಿದ್ದು, ಒಂದು ಕಡೆ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿರುವಾಗಲೇ ಎಲ್ಲಾ ನಿಯಮ, ನಿರ್ಬಂಧಗಳನ್ನೂ ಮುರಿದು ಸ್ವತಃ ಸರ್ಕಾರದ ಭಾಗವಾದ ಸಚಿವರೇ ಜನಜಾತ್ರೆ ನಡೆಸುತ್ತಿರುವುದು ಜನರನ್ನು ಸಾವಿನ ದವಡೆಗೆ ದೂಡುವ ಹಕೀಕತ್ತಿನಂತೆ ಕಾಣತೊಡಗಿದೆ.
ಒಂದು ಕಡೆ ಕೋವಿಡ್ ನಿಯಮ ಗಾಳಿಗೆ ತೂರಿ ಸಾವಿರಾರು ಜನರನ್ನು ಸೇರಿಸಿ ಯಾತ್ರೆಯ ಜಾತ್ರೆ ನಡೆಸುತ್ತಿದ್ದರೆ, ಮತ್ತೊಂದು ಕಡೆ ನಾಡ ಬಂದೂಕು ನೀಡಿ, ಗಾಳಿಯಲ್ಲಿ ಗುಂಡು ಹಾರಿಸಿ ಬಿಜೆಪಿಯ ಕಾರ್ಯಕರ್ತರು ಸಚಿವರ ಈ ಜನಾಶೀರ್ವಾದ ಯಾತ್ರೆಯನ್ನು ಸ್ವಾಗತಿಸುತ್ತಿದ್ದಾರೆ. ದೂರದ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಹಾದಿಬೀದಿಯಲ್ಲಿ ಬಂದೂಕು ಹಿಡಿದು ಮೆರವಣಿಗೆ ಮಾಡುತ್ತಿರುವ ಹೊತ್ತಿಗೇ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಾಡ ಬಂದೂಕು ಹಿಡಿದು ಗುಂಡು ಹಾರಿಸಿ ಕುಣಿದು ಕಪ್ಪಳಿಸಿ ಸಚಿವ ಭಗವಂತ ಖೂಬಾ ಅವರಿಗೆ ಸ್ವಾಗತ ಕೋರಿದ್ದಾರೆ. ಹಾಗೇ ಸಚಿವರಿಗೆ ಉಡುಗೊರೆಯಾಗಿ ನಾಡ ಬಂದೂಕು ನೀಡಿದ ಘಟನೆಯೂ ವರದಿಯಾಗಿದೆ.
ಜೊತೆಗೆ ಕಲಬುರ್ಗಿ ಮತ್ತು ರಾಯಚೂರಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಸಚಿವ ಭಗವಂತ ಖೂಬಾ, ಗದಗದಲ್ಲಿ ಸಚಿವ ಎ ನಾರಾಯಣಸ್ವಾಮಿ, ಉಡುಪಿ ಮಂಗಳೂರಿನಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಶಿವಮೊಗ್ಗ- ಉತ್ತರಕನ್ನಡದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜನಾಶೀರ್ವಾದ ಯಾತ್ರೆಗಳನ್ನು ನಡೆಸಿದ್ದಾರೆ. ಕೆಲವು ಕಡೆ ಮಾಸ್ಕ್, ದೈಹಿಕ ಅಂತರದಂತಹ ಸಾಮಾನ್ಯ ನಿಯಮಗಳನ್ನು ಉಲ್ಲಂಘಿಸಿದ್ದರೆ, ಮತ್ತೆ ಕೆಲವು ಕಡೆ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಗಳನ್ನು ಕೂಡ ಗಾಳಿಗೆ ತೂರಲಾಗಿದೆ.
ಹೀಗೆ ಒಂದು ಕಡೆ ತಾವೇ ಜಾರಿಗೆ ತಂದ ನಿಯಮಗಳಿಗೆ ಮೂರು ಕಾಸಿನ ಬೆಲೆ ಕೊಡದೆ ಗಾಳಿಗೆ ತೂರಿರುವ ಆಡಳಿತ ಪಕ್ಷದ ಕೇಂದ್ರ ಸಚಿವರು, ಮತ್ತು ರಾಜ್ಯ ಸಚಿವರು, ಕೋವಿಡ್ ಕಾನೂನುಗಳ ಪಾಲನೆಯ ವಿಷಯದಲ್ಲಿ ರಾಜ್ಯದ ಜನತೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಮತ್ತೊಂದು ಕಡೆ ಅಂತಹ ನಾಚಿಕೆಗೇಡಿನ ಕೃತ್ಯಗಳನ್ನು ಅದೇ ಪಕ್ಷದ ನಾಯಕರು ಸಮರ್ಥಿಸಿಕೊಂಡು ಮೇಲಿಂದ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದಾರೆ!
ಯಾದಗಿರಿಯಲ್ಲಿ ಸಚಿವ ಖೂಬಾ ಸ್ವಾಗತಕ್ಕೆ ಸಾರ್ವಜನಿಕವಾಗಿ ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸ್ವತಃ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, “ಮಲೆನಾಡು ಭಾಗದಲ್ಲಿ ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಯಾರಾದರೂ ತೀರಿ ಹೋದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಿಸುತ್ತೇವೆ. ಕೊಡಗು, ಮಲೆನಾಡು ಭಾಗದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಸಂಪ್ರದಾಯ ಇದೆ. ಇನ್ನೂ ಕೆಲವೆಡೆ ಕೂಡಾ ಈ ರೀತಿಯ ಸಂಪ್ರದಾಯ ಇರಬಹುದು” ಎಂದು ಹೇಳಿದ್ದಾರೆ. ಆ ಮೂಲಕ ಶಸ್ತ್ರಾಸ್ತ್ರ ಕಾಯ್ದೆಯಂತಹ ಗಂಭೀರ ಕಾನೂನುಗಳನ್ನು ಉಲ್ಲಂಘಿಸಿ ಗುಂಡು ಹಾರಿಸಿದ ಬಿಜೆಪಿ ಕಾರ್ಯಕರ್ತರ ನಿಲುವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ಧಾರೆ. ಆ ಬಳಿಕ, ಗುಂಡು ಹಾರಿಸಿದ್ದು ತಪ್ಪು ಎಂದು ಅವರು ಹೇಳಿದ್ದರೂ, ಒಟ್ಟಾರೆ ಅವರ ಮಾತಿನ ಸಾರಾಂಶ, ತಮ್ಮ ಕಾರ್ಯಕರ್ತರ ಆ ಆತಂಕಕಾರಿ ಕೃತ್ಯ ಕಾನೂನುಬಾಹಿರವಲ್ಲ ಎಂಬುದೇ ಆಗಿದೆ.
ಕಾನೂನುಬಾಹಿರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಇನ್ನು ಮುಂದೆ ಅಕ್ರಮ ಚಟುವಟಿಕೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ಅಧಿಕಾರ ಸ್ವೀಕರಿಸಿದಾಗ ಹೇಳಿದ್ದ ಸಚಿವ ಆರಗ ಜ್ಞಾನೇಂದ್ರ ಅವರ ಮಾತುಗಳ ಬದ್ಧತೆ ಮತ್ತು ಅವರ ಕಾನೂನು ಜ್ಞಾನವನ್ನೇ ಅನುಮಾನಿಸುಂತೆ ಇದೀಗ ಅವರ ಈ ಹೇಳಿಕೆ ಹೊರಬಿದ್ದಿದೆ. ಜೊತೆಗೆ, ಯಾದಗಿರಿ ಪೊಲೀಸರು ಈಗಾಗಲೇ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಮತ್ತು ಆರೋಪಿಗಳನ್ನು ಬಂಧಿಸಿದ್ದಾರೆ ಕೂಡ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಸ್ವತಃ ಇಲಾಖೆಯ ಹೊಣೆಹೊತ್ತಿರುವ ಗೃಹ ಸಚಿವರೇ ಹೀಗೆ ಆರೋಪಿಗಳಿಗೆ ಕುಮ್ಮಕ್ಕು ನೀಡುವ ಹೇಳಿಕೆ ನೀಡಿದರೆ, ಅಂತಹ ನಡೆ ಪ್ರಕರಣ ತನಿಖೆಯ ಮೇಲೆ, ಸ್ವತಃ ತನಿಖೆ ನಡೆಸುತ್ತಿರುವ ಪೊಲೀಸರ ಆತ್ಮಸ್ಥೈರ್ಯದ ಮೇಲೆ ಬೀರುವ ಪರಿಣಾಮವೇನು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು.
ಹಾಗೇ, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಜನಾಶೀರ್ವಾದ ಯಾತ್ರೆ ನಡೆಸಿದ, ರ್ಯಾಲಿ, ಸಮಾವೇಶ ನಡೆಸಿದ ಪ್ರಕರಣಗಳಲ್ಲಿ ಕಲಬುರ್ಗಿ ಮತ್ತು ರಾಯಚೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಕಲ್ಯಾಣ ಮಂಟಪದ ಮಾಲೀಕರು, ವ್ಯವಸ್ಥಾಪಕರ ವಿರುದ್ಧ ರಾತ್ರಿ ಕರ್ಫ್ಯೂ ಸೇರಿದಂತೆ ಕೋವಿಡ್ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿರುವ ಪೊಲೀಸರು, ಕಾರ್ಯಕ್ರಮವನ್ನು ಆಯೋಜಿಸಿದ ಬಿಜೆಪಿ ಪಕ್ಷದ ಮೇಲಾಗಲೀ, ಅದರ ಸ್ಥಳೀಯ ಘಟಕದ ಮುಖ್ಯಸ್ಥರ ಮೇಲಾಗಲೀ ಅಥವಾ ಸ್ವತಃ ಎರಡೂ ಕಡೆ ಸಭೆ ಮತ್ತು ಯಾತ್ರೆ ನಡೆಸಿದ ಕೇಂದ್ರ ಸಚಿವ ಭಗವಂತ ಖೂಬಾ ಮೇಲಾಗಲೀ ಯಾವುದೇ ಪ್ರಕರಣ ದಾಖಲಿಸಿಲ್ಲ!
ಈ ನಡುವೆ, ಗೃಹ ಸಚಿವ ಆರಗ ಅವರು ಸಾರ್ವಜನಿಕವಾಗಿ ಬಂದೂಕಿನಿಂದ ಗುಂಡು ಹಾರಿಸಿದ ಕೃತ್ಯವನ್ನೇ ಅದೇನೂ ಅಪರಾಧವಲ್ಲ ಎಂಬರ್ಥದಲ್ಲಿ ಮಾತನಾಡಿ, ಘಟನೆಯನ್ನು ತೇಲಿಸಿಬಿಟ್ಟಿದ್ದಾರೆ. ಹಾಗಾಗಿ, ಅಂತಹ ಗಂಭೀರ ಪ್ರಕರಣದಲ್ಲೇ ಸ್ವತಃ ಗೃಹ ಸಚಿವರೇ ರಿಯಾಯ್ತಿ ನೀಡಿರುವುದರಿಂದ, ಕೋವಿಡ್ ನಿಯಮ ಉಲ್ಲಂಘನೆಯ ವಿಷಯದಲ್ಲಿ ಸರ್ಕಾರ, ತನ್ನದೇ ಪಕ್ಷದ ನಾಯಕರು ಮತ್ತು ಪಕ್ಷದ ಸ್ಥಳೀಯ ಮುಖಂಡರ ವಿರುದ್ದ ಕ್ರಮಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗದು.
ಆದರೆ, ಸರ್ಕಾರದ, ಅದರಲ್ಲೂ ಗೃಹ ಸಚಿವರ ಆರೋಪಿಗಳ ಪರ ಹೇಳಿಕೆ ಖಂಡಿತವಾಗಿಯೂ ರಾಜ್ಯದ ಉದ್ದಗಲಕ್ಕೆ ಇನ್ನಷ್ಟು ಗುಂಡು ಹಾರಿಸುವ ಸಂಪ್ರದಾಯಕ್ಕೆ ಕುಮ್ಮಕ್ಕು ನೀಡಲಿದೆ ಮತ್ತು ಆಡಳಿತ ಪಕ್ಷದ ಧೋರಣೆ, ಕೋವಿಡ್ ನಿಯಮ ಪಾಲನೆಯ ವಿಷಯದಲ್ಲಿ ಜನಸಾಮಾನ್ಯರ ಉಡಾಫೆ ವರ್ತನೆಗೂ ಮತ್ತು ಅಧಿಕಾರಿಗಳ ಅಸಹಾಯಕತೆಗೂ ಇಂಬು ನೀಡಲಿದೆ ಎಂಬುದಂತೂ ನಿಜ. ಅಂದರೆ, ಅಂತಿಮವಾಗಿ ಈ ಎಲ್ಲದರ ಪ್ರತಿಫಲವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್ ಪ್ರಕರಣಗಳ ಏರುಗತಿಗೂ, ಮೂರನೇ ಅಲೆಯ ವೇಗಕ್ಕೂ, ಮತ್ತದೇ ಸಾಲುಸಾಲು ಸಾವುನೋವುಗಳ ಅನಾಹುತಕ್ಕೂ ದಾರಿಮಾಡಲಿದೆ. ಆ ಅರ್ಥದಲ್ಲಿ ಆಮ್ ಆದ್ಮಿ ಪಾರ್ಟಿ ಈ ಜನಾಶೀರ್ವಾದ ಯಾತ್ರೆಯನ್ನು ಹೆಣಾಶೀರ್ವಾದ ಯಾತ್ರೆ ಎಂದು ಟೀಕಿಸಿರುವುದರಲ್ಲಿ ಅತಿಶಯೋಕ್ತಿಯೇನಿಲ್ಲ! ಅಲ್ಲವೆ?