ಕರೋನಾ ಎರಡನೇ ಅಲೆಗೆ ದೇಶದ ಬಹುತೇಕ ರಾಜ್ಯಗಳು ತತ್ತರಿಸತೊಡಗಿವೆ. ಇದುವರೆಗೂ ಹಾಸಿಗೆ, ಆಮ್ಲಜನಕ, ಔಷಧಿಗಳ ಕೊರತೆ ಮಾತ್ರ ಎದುರಿಸುತ್ತಿದ್ದ ದೇಶ ನಿವಾಸಿಗಳು ಇದೀಗ ಚಿತಾಗಾರದ ಕೊರತೆಯನ್ನೂ ಎದುರಿಸುತ್ತಿದ್ದಾರೆ. ಕರೋನಾ ಸಂಕಷ್ಟ ಬಹುತೇಕ ಎಲ್ಲಾ ಉದ್ಯಮಗಳಲ್ಲೂ ಪ್ರಭಾವ ಬೀರಿದರೂ, ಇದರೆಲ್ಲದರ ಗಂಭೀರ ಹೊರೆಯನ್ನು ಭಾರತೀಯ ಬಡವರ್ಗ ಹೊತ್ತಿದೆ.
ಸಂಪೂರ್ಣ ಕುಸಿದಿರುವ ಆರ್ಥಿಕತೆಯಿಂದಾಗಿ, ವಿವಿಧ ವಲಯದ ದಿನಗೂಲಿ ನೌಕರರು ದಿನನಿತ್ಯದ ಬದುಕಿಗೆ ಬೇಕಾದ ಅಗತ್ಯ ವಸ್ತುಗಳನ್ನೂ ಹೊಂದಿಸಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಈ ನಡುವೆ ಕರೋನಾ ನಿಯಂತ್ರಿಸಲು ರಾಜ್ಯ ಸಂಸ್ಥೆಗಳು ಮಾಡುವ ಕ್ರಮಗಳಿಗೆ ಹಾಗೂ ಆ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಮಾಡುವ ಬಲಪ್ರಯೋಗಕ್ಕೆ ಇದೇ ವರ್ಗ ನೇರ ಗುರಿಯಾಗುತ್ತಿದೆ.
ಲಾಕ್ಡೌನ್, ನೈಟ್ಕರ್ಫ್ಯೂ ನಿಯಮಗಳ ಉಲ್ಲಂಘಣೆ ಹೆಸರಿನಲ್ಲಿ ಪೊಲೀಸರ ಲಾಠಿಯೇಟುಗಳನ್ನು ಪಡೆಯುವಲ್ಲಿ ಸ್ಲಮ್ ನಿವಾಸಿಗಳು, ದಿನಗೂಲಿ ಕಾರ್ಮಿಕರು, ಡೆಲಿವರಿ ಬಾಯ್ಗಳಂತಹ ಕಾರ್ಮಿಕರು, ಪಾದಚಾರಿಗಳೇ ಬಹುತೇಕ ಅನ್ನುವುದು ವಾಸ್ತವ. ಈ ಎಲ್ಲರೂ ಕೂಡಾ ಮೇಲೆ ಹೇಳಿರುವ ಬಡ ವರ್ಗದ ಜನರು.
ನಮ್ಮ ಅನುಭವದ ಪ್ರಕಾರ, ಸಮಾಜದ ಅಂಚಿನಲ್ಲಿರುವ, ಮಾತನಾಡಲು ಆಗದ ಬಡವರನ್ನೇ ಪೊಲೀಸರು ಗುರಿಯಾಗಿಸುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿಗಳೊಂದಿಗೆ ಕೆಲಸ ಮಾಡುವ ಚಾರಿಟಿಯಾದ ಜನ್ಪಹಾಲ್ನ ಕಾರ್ಯದರ್ಶಿ ಧರ್ಮೇಂದ್ರ ಕುಮಾರ್ ಹೇಳುತ್ತಾರೆ.
ಮೈಕ್ರೋ ಕಂಟೈನ್ಮೆಂಟ್ ಝೋನ್ ಘೋಷಣೆಯಾಗುವಾಗ, ಮಾರುಕಟ್ಟೆಗಳು ಮುಚ್ಚಲ್ಪಡುವಾಗ ಪೊಲೀಸರು ರಸ್ತೆಗಳಲ್ಲಿ ಗಸ್ತು ತಿರುಗುತ್ತಾರೆ. ಈ ವೇಳೆ ಸಾಂಕ್ರಾಮಿಕ ಸೋಂಕು ನಿಯಂತ್ರಣ ಹೆಸರಿನಲ್ಲಿ ಪಾದಚಾರಿಗಳನ್ನು, ಬೀದಿಬದಿ ವ್ಯಾಪಾರಿಗಳನ್ನು, ದಿನಗೂಲಿ ನೌಕರರನ್ನೇ ಬಲಿಪಶು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಕರೋನಾ ಇತಿಹಾಸವನ್ನು ಸ್ಥೂಲವಾಗಿ ಗಮನಿಸುವಾಗಲೂ, ಕೇವಲ ಐದು ನಿಮಿಷ ಹೆಚ್ಚಿಗೆ ಅಂಗಡಿ ತೆರೆದಿಟ್ಟ ಕಾರಣಕ್ಕೆ ಪೊಲೀಸರ ಭೀಕರ ಕ್ರೌರ್ಯಕ್ಕೆ ಬಲಿಯಾದ ತೂತುಕುಡಿಯ ತಂದೆ-ಮಗನಿಂದ ಹಿಡಿದು, ರಸ್ತೆಗಳಲ್ಲಿ ಹಸಿವಿನಿಂದ ಮೃತಪಟ್ಟ, ಬದುಕಿನ ಮಾರ್ಗಗಳು ಕಸಿಯಲ್ಪಟ್ಟ, ಸಾವಿರಾರು ಕಿಮೀ ಪಾದಯಾತ್ರೆ ಹೊರಟ ವಲಸೆ ಕಾರ್ಮಿಕರ ಚಿತ್ರಣ ಮುಖ್ಯವಾಗಿ ಕಣ್ಣಮುಂದೆ ಬರುತ್ತದೆ.
ಇದು ಕಳೆದ ವರ್ಷಕ್ಕೆ ಮುಕ್ತಾಯಗೊಂಡಿಲ್ಲ. ಈ ವರ್ಷವೂ ಪೊಲೀಸರ, ಅಧಿಕಾರಿಗಳ ದರ್ಪ ನೇರವಾಗಿ ಅದೇ ಬಡವರ್ಗದವರ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೊಯಂಬತ್ತೂರಿನ ರೆಸ್ಟಾರೆಂಟ್ ಒಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗ್ರಾಹಕರು, ಹೊಟೆಲ್ ಸಿಬ್ಬಂದಿಗಳಿಗೆ ಲಾಠಿಯಿಂದ ಬಾರಿಸುವ ವಿಡಿಯೋ ಒಂದು ವೈರಲ್ ಆಗಿತ್ತು.
ವಿಪರ್ಯಾಸವೆಂದರೆ, ತಮಿಳುನಾಡು ರಾಜ್ಯ ಸರ್ಕಾರ 50% ಗ್ರಾಹಕರಿಗೆ ಅವಕಾಶ ಕೊಟ್ಟು 11 ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ಕೊಟ್ಟಿದ್ದರೂ, 10:20 ಕ್ಕೇ ಧಾವಿಸಿದ ಪೊಲೀಸ್ ಅಧಿಕಾರಿ ನಿಯಮ ಪಾಲಿಸದ ನೆಪದಲ್ಲಿ ದೌರ್ಜನ್ಯ ಎಸಗಿದ್ದಾರೆ.
ಈಗಾಗಲೇ ಆರೋಗ್ಯ ಬಿಕ್ಕಟ್ಟು, ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರುವ ಜನರು ಪೊಲೀಸರ ಹಾಗೂ ಅಧಿಕಾರಿಗಳ ವಿಪರೀತದ ವರ್ತನೆಗೆ ಪದೇ ಪದೇ ಬಲಿಯಾಗುತ್ತಿದ್ದಾರೆ.
ದಿನಗಳ ಹಿಂದೆಯಷ್ಟೇ, ಪ್ರಯಾಣಿಕರನ್ನು ಹೊತ್ತು ತಿರುಗುತ್ತಿದ್ದ ಬಸ್ ತಡೆದು ನಿಲ್ಲಸಿದ ಉಡುಪಿ ಜಿಲ್ಲಾಧಿಕಾರಿ ಕರೋನಾ ನಿಯಮ ಪಾಲಿಸದ ನೆವದಲ್ಲಿ ವಿದ್ಯಾರ್ಥಿನಿಯರನ್ನು, ಹಿರಿಯ ಪ್ರಯಾಣಿಕರನ್ನೂ ನಡುದಾರಿಯಲ್ಲಿ ಇಳಿಸಿದ್ದು ಸುದ್ದಿಯಗಿತ್ತು. ಬದಲಿ ವ್ಯವಸ್ಥೆಯನ್ನೂ ಮಾಡದೆ, ನಡುದಾರಿಯಲ್ಲಿ ಬಿಟ್ಟು ಹೋದ ಕುರಿತು ವಿದ್ಯಾರ್ಥಿನಿಯೊಬ್ಬಳು ತೋಡಿಕೊಂಡ ಅಳಲು ವ್ಯಾಪಕ ಆಕ್ರೋಶವನ್ನೂ ಹುಟ್ಟುಹಾಕಿತ್ತು.
ಅಂಗಡಿಗಳನ್ನು ಮುಚ್ಚಲು ಸರ್ಕಾರ ನಿರ್ದೇಶಿಸಿದ ಸಮಯಕ್ಕೂ ಮೊದಲೇ ಧಾವಿಸುವ ಪೊಲೀಸರು, ಬಲವಂತವಾಗಿ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸುತ್ತಿರುವುದು ಬೆಂಗಳೂರು ನಗರದಲ್ಲೇ ಕಾಣಸಿಗುತ್ತದೆ. ಬಡವರೊಂದಿಗೆ ಕರ್ನಾಟಕ ಪೊಲೀಸರ ಮಾತುಗಳ ವೈಖರಿಯ ಬಗ್ಗೆ, ಭಾಷಾ ಪ್ರಯೋಗದ ಬಗ್ಗೆ ಹೆಚ್ಚಿಗೆ ಹೇಳಬೇಕಾದ ಅಗತ್ಯವಿಲ್ಲ.
ಕಳೆದ ಮಾರ್ಚ್ನಲ್ಲಿಯೇ ಪೊಲೀಸರ ಸಾಮಾನ್ಯ ಜನರ ಮೇಲೆ ಬಲಪ್ರಯೋಗದ ಕುರಿತಂತೆ ಅಂತರಾಷ್ಟ್ರೀಯ ಮಾಧ್ಯಮಗಳೂ ಹಲವು ವರದಿಗಳನ್ನು ಪ್ರಸಾರ ಮಾಡಿದೆ. ಅದಾಗ್ಯೂ, ಪೊಲೀಸರದ್ದಾಗಲೀ, ಅಧಿಕಾರಿಗಳದ್ದಾಗಲಿ ಈ ಅಮಾನವೀಯ ಕರ್ತವ್ಯನಿಷ್ಟೆ(?)ಗೆ ಇನ್ನೂ ಬ್ರೇಕ್ ಬಿದ್ದಿಲ್ಲ.
ಅದೇ ವೇಳೆ, ವಲಸೆ ಕಾರ್ಮಿಕರಿಂದ ಹಿಡಿದು ಭಿಕ್ಷುಕರವರೆಗೆ ಕಷ್ಟದಲ್ಲಿರುವವರಿಗೆ ಆಹಾರ ಸಾಮಾಗ್ರಿಗಳನ್ನೂ, ಅವಶ್ಯಕ ವಸ್ತುಗಳನ್ನೂ ಹಂಚಿ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕರ್ತವ್ಯ ನಿರತ ಅಧಿಕಾರಿಗಳನ್ನೂ ಉಲ್ಲೇಖಿಸಬೇಕಾಗುತ್ತದೆ.
ಆದರೆ, Criminal Justice and Police Accountability Project ನಡೆಸಿದ ಅಧ್ಯಯನದ ಪ್ರಕಾರ, ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸುವಲ್ಲಿನ ಅಸಮತೆಯಿಂದಾಗಿ ಬುಡಕಟ್ಟು ಜನಾಂಗ, ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಹಲವಾರು ಸಂಕಷ್ಟಗಳನ್ನು ಎದುರಿಬೇಕಾಗಿವೆ ಎಂದು ಅಲ್ ಜಝೀರ ವರದಿ ಹೇಳಿದೆ.
ಮಧ್ಯಪ್ರದೇಶದಲ್ಲಿ ದಾಖಲಾದ 500 ಪೊಲೀಸ್ ದೂರುಗಳನ್ನು ಹಾಗೂ 34,000 ಬಂಧನಗಳನ್ನೂ ವಿಶ್ಲೇಷಿಸಿರುವ ಅಧ್ಯಯನವು, ಪೊಲೀಸರು ಮಾರ್ಗಸೂಚಿಯ ಪಾಲನೆಯಲ್ಲಿ ತಮ್ಮದೇ ವಿವೇಚನೆಯನ್ನು ಬಳಸಿಕೊಂಡಿದ್ದಾರೆ ಎಂದು ಕಂಡುಕೊಂಡಿದೆ. ಅಂದರೆ, ತಮಗೆ ತೋಚಿದಂತೆ ವರ್ತಿಸಿದ್ದಾರೆ ಎನ್ನುವುದು.
ಯಾರು ಹೊರ ಬರಬಹುದು, ಯಾರು ಹೊರ ಬರಬಾರದೆಂದು ಪೊಲೀಸರೇ ನಿರ್ಧರಿಸುವುದು ಕಂಡು ಬಂದಿದೆ. ಪೊಲೀಸರು ದಾಖಲಿಸಿದ ಎಲ್ಲಾ ದೂರುಗಳಲ್ಲಿಯೂ, ʼಕಾರಣಗಳು ತೃಪ್ತಿಕರವಾಗಿಲ್ಲʼ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಇಲ್ಲಿ, ಕೊನೆಗೂ ಕಾರಣಗಳು ತೃಪ್ತಿಯಾಗಬೇಕಿರುವುದು ಪೊಲೀಸರಿಗೇ ಎಂಬುವುದು ಮನದಟ್ಟವಾಗುತ್ತದೆ. ಇಂಧನ ತುಂಬಿಸಲು ಬಂದವರ ಮೇಲೆಯೂ ಪ್ರಕರಣ ದಾಖಲಿಸಿರುವ ಉದಾಹರಣೆಗಳಿವೆ ಎಂದು CPAProject ಕೋ ಫೌಂಡರ್ ನಿಕಿತಾ ಸೋನವನೆ ಹೇಳುತ್ತಾರೆ.
ಮೊದಲ ಲಾಕ್ಡೌನ್ನಿಂದ ಮೂರನೇ ಲಾಕ್ಡೌನ್ ವೇಳೆಗಾಗುವಾಗ ಪಾದಚಾರಿಗಳ ಮೇಲೆ ದಾಖಲಿಸಿದ ಪ್ರಕರಣಗಳು 50% ದಿಂದ 89 ಶೇಕಡಾದವರೆಗೆ ಹೆಚ್ಚಿದೆ. ಇವರಲ್ಲಿ ಬಹುಪಾಲು, ಬೀದಿ ಬದಿ ವ್ಯಾಪಾರಸ್ಥರು, ಸಣ್ಣಪುಟ್ಟ ವ್ಯಾಪಾರಿಗಳೇ ಅಪರಾಧಿಗಳು!.
ಸರ್ಕಾರದ ಮಾರ್ಗಸೂಚಿಯನ್ನಷ್ಟೇ ಪಾಲಿಸುವಂತೆ ನಾನು ಪೊಲೀಸರಿಗೆ ಮನವಿ ಮಾಡಿದ್ದೇನೆ. ಮಾರ್ಗಸೂಚಿ ಉಲ್ಲಂಘಿಸಿದವರಿಗೆ ದಂಡ ವಿಧಿಸಲು, ಆದರೆ ಸಂಪೂರ್ಣ ಬೀದಿ ಬದಿ ವ್ಯಾಪರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವುದು ಸರಿಯಲ್ಲ ಮುಂಬೈಯ ಆಝಾದ್ ಹಾಕರ್ಸ್ ಸಂಘದ ಅಧ್ಯಕ್ಷ ದಯಾಶಂಕರ್ ಸಿಂಗ್ ಹೇಳಿದ್ದಾರೆ. ಮುಂಬೈಯ 31,000 ಬೀದಿ ಬದಿ ವ್ಯಾಪಾರಿಗಳು ಇವರ ಸಂಘಟನೆಯಲ್ಲಿದ್ದಾರೆ.
ಸಿಂಗ್ ಪ್ರಕಾರ ಪೊಲೀಸರು ಅವಧಿಗೂ ಮುನ್ನವೇ ವ್ಯಾಪಾರ ಮುಚ್ಚುವಂತೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಮುಚ್ಚದಿದ್ದರೆ ತರಕಾರಿಗಳನ್ನು, ಹಣ್ಣುಗಳನ್ನು ರೆಸ್ತೆಗೆ ಎಸೆಯುವ ಬೆದರಿಕೆಯನ್ನೂ ಪೊಲೀಸರು ಒಡ್ಡುತ್ತಿದ್ದಾರೆ.
ಹಣ್ಣುಗಳು ಮತ್ತು ತರಕಾರಿಗಳು ಕೊಳೆತು ಹೋಗುವ ಸಾಧನವಾದ್ದರಿಂದ, ವ್ಯಾಪಾರ ನಡೆಸಲು ಅವಕಾಶ ಕೊಡದಿದ್ದರೆ, ಎಲ್ಲವೂ ಕೊಳೆತು ಅಸಲು ನಷ್ಟವಾಗುತ್ತದೆ. ಹೀಗೆ ಅಸಲು ನಷ್ಟ ಮಾಡಿಕೊಂಡು ಸಾಲದಲ್ಲಿ ಸಿಲುಕಿದ ಹಲವಾರು ಬೀದಿ ಬದಿ ಹಣ್ಣು-ತರಕಾರಿ ವ್ಯಾಪರಸ್ಥರು ಕಾಣಸಿಗುತ್ತಾರೆ.
ಪೊಲೀಸರ ಈ ಕ್ರಮಗಳಿಂದಾಗಿ ಮುಂಬೈಯಲ್ಲಿ ಬೀದಿ ಬದಿ ವ್ಯಾಪರಸ್ಥರಾಗಿರುವ ಉತ್ತರ ಪ್ರದೇಶ ಮೂಲದ ಜೊಗಿಂದರ್ ವರ್ಮ ಎಂಬವರು ಸಾಲದಲ್ಲಿ ಸಿಲುಕಿಕೊಂಡಿದ್ದಾರೆ.
ಮಾರಾಟಕ್ಕೆ ತಂದಿದ್ದ ಹಣ್ಣುಗಳೆಲ್ಲಾ ಕೊಳೆತು ಹೋದ್ದರಿಂದ ಕಸದ ತೊಟ್ಟಿಗೆ ಎಸೆಯುವದರ ಹೊರತಾಗಿ ಬೇರೆ ಆಯ್ಕೆಗಳೇ ಇರಲಿಲ್ಲ ನನಗೆ. ನಾನೀಗ 20,000 ಸಾಲದಲ್ಲಿದ್ದೇನೆ. ಈ ಹಿಂದೆ ಎಂದೂ ನನಗೆ ಸಾಲಗಳಿರಲಿಲ್ಲ ಎಂದು ಅವರು ಹೇಳುತ್ತಾರೆ.
ಕರೋನಾ ಸೋಂಕಿನ ತೀವೃತೆಯಿಂದಾಗಿ ಆಮ್ಲಜನಕ-ಔಷಧ ದೊರಕದೆ, ಹಾಸಿಗೆಗಳು ದೊರಕದೆ ಅಷ್ಟೇ ಏಕೆ ಹೆಣಗಳನ್ನು ಸುಡಲು ಚಿತಾಗಾರವೂ ಸಿಗದೆ ಬಳಲುತ್ತಿರುವವರಲ್ಲಿ ಬಡವರೇ ಮುಂದು. ಕರೋನಾದ ನಿಯಂತ್ರಣದ ಹೆಸರಿನಲ್ಲಿ ಬಳಲುತ್ತಿರುವವರಲ್ಲಿಯೂ ಅದೇ ಬಡವರು ಹೆಚ್ಚು.