ಕೋವಿಡ್ ಎರಡನೇ ಅಲೆಗೆ ಭಾರತ ತತ್ತರಿಸಿದೆ. ಇಲ್ಲಿನ ಜನಾಸಮಾನ್ಯರು ಆಸ್ಪತ್ರೆಗಳು ಖಾಲಿ ಇಲ್ಲದೆ, ಬೆಡ್ ಸಿಗದೆ, ಆಕ್ಸಿಜನ್ ಇಲ್ಲದೆ, ವೆಂಟಿಲೇಟರ್ ಸಿಗದೆ, ಕೊನೆಗೆ ಸ್ಮಶಾನವೂ ಸಿಗದೆ ಪರದಾಡುತ್ತಿದ್ದಾರೆ. ದಿನವೊಂದಕ್ಕೆ ಸುಮಾರು ಮೂರು ಲಕ್ಷಗಳಷ್ಟು ಹೊಸ ಕೇಸ್ ದಾಖಲಾಗುತ್ತಿದ್ದರೆ, ಸರಿ ಸುಮಾರು ಮೂರು ಸಾವಿರದಷ್ಟು ಜನ ಪ್ರಾಣಕಳೆದುಕೊಳ್ಳುತ್ತಿದ್ದಾರೆ.
ಈ ಎಲ್ಲಾ ಸಂಕಟದ ಸಮಯದಲ್ಲಿ ಭಾರತದ ಜೊತೆ, ಇಲ್ಲಿಯ ಜನತೆಯ ಜೊತೆ ನಿಲ್ಲಬೇಕಿದ್ದ ಇಲ್ಲಿನ ಅತಿ ಶ್ರೀಮಂತರು ಬ್ರಿಟನ್ ಗೆ ಹೋಗಲು ಹತ್ತಾರು ಪೌಂಡ್ಗಳನ್ನು ವ್ಯಯಿಸುತ್ತಿದ್ದಾರೆ. ಭಾರತವನ್ನು ಯುಕೆ ರೆಡ್ ಲಿಸ್ಟ್ಗೆ ಸೇರಿಸುವುದಕ್ಕಿಂತ ಮುನ್ನ ಇಲ್ಲಿನ ಹಲವು ಚಾರ್ಟರ್ ಫ್ಲೈಟ್ಗಳು ಇಂಗ್ಲಡಿನ ಏರ್ಪೋರ್ಟ್ಗಳಲ್ಲಿ ಇಳಿದಿವೆ.
ತಲಾ £ 70,000 (ಸುಮಾರು 72 ಲಕ್ಷ ರೂ) ವೆಚ್ಚವಾಗಲಿರುವ ಎಂಟು ಖಾಸಗಿ ಜೆಟ್ಗಳು ಶುಕ್ರವಾರ ಬೆಳಿಗ್ಗೆ 8.30 ಕ್ಕೆ ಐಎಸ್ಟಿಯಲ್ಲಿ ಪ್ರಯಾಣ ನಿರ್ಬಂಧಗಳನ್ನು ಪ್ರಾರಂಭಿಸುವ 24 ಗಂಟೆಗಳ ಮೊದಲು ಲಂಡನ್ನ ಲುಟನ್ ವಿಮಾನ ನಿಲ್ದಾಣಕ್ಕೆ ಭಾರತದಿಂದ ಆಗಮಿಸಿವೆ ಎಂದು ‘ಫ್ಲೈಟ್ಅವೇರ್’ ವೆಬ್ಸೈಟ್ ತೋರಿಸುತ್ತದೆ. ಇವರಲ್ಲಿ ನಾಲ್ಕು ಜೆಟ್ಗಳು ಮುಂಬೈನಿಂದ, ಮೂರು ದೆಹಲಿಯಿಂದ ಮತ್ತು ಒಂದು ಅಹಮದಾಬಾದ್ನಿಂದ ಆಗಮಿಸಿವೆ ಎಂದು ವೆಬ್ಸೈಟ್ ತೋರಿಸುತ್ತಿದೆ.
ಖಾಸಗಿ ಜೆಟ್ ವಿಟಿ-ಎಹೆಚ್ಐ (VT-AHI) ಗುರುವಾರ ರಾತ್ರಿ 9.42 ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಟು ಲ್ಯಾಂಡಿಂಗ್ ವಿಂಡೋ ಮುಚ್ಚುವ ಕೆಲವೇ ಗಂಟೆ ಮೊದಲು ಬೆಳಿಗ್ಗೆ 6.53 ಕ್ಕೆ ಲುಟಾನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನ ಶನಿವಾರ ಮುಂಬೈಗೆ ಮರಳಿತು.ಜಾಗತಿಕ ಖಾಸಗಿ ವಾಯುಯಾನ ಕಂಪನಿ ವಿಸ್ಟಾ ಜೆಟ್ ನಡೆಸುತ್ತಿರುವ ಮತ್ತೊಂದು ಖಾಸಗಿ ಜೆಟ್ ಗುರುವಾರ ರಾತ್ರಿ ಮುಂಬೈಯಿಂದ ಹೊರಟು ಗಡುವಿಗೆ ಕೇವಲ 40 ನಿಮಿಷಗಳ ಮೊದಲು ಏರ್ಪೋರ್ಟ್ನಲ್ಲಿ ಇಳಿದಿತ್ತು.
ಕತಾರ್ ಕಾರ್ಯನಿರ್ವಾಹಕ ಖಾಸಗಿ ಚಾರ್ಟರ್ಡ್ ಜೆಟ್ ಗುರುವಾರ ಸಂಜೆ 4.59 ಕ್ಕೆ ಮುಂಬೈಯಿಂದ ಹೊರಟು ಮುಂಜಾನೆ 2.34 ಕ್ಕೆ ಬಂದಿಳಿದಿದೆ. ಖಾಸಗಿ ಜೆಟ್ ಟಿ 7-ಎನ್ಎಪಿ ಗುರುವಾರ ಮುಂಜಾನೆ 12.54 ಕ್ಕೆ ಮುಂಬೈನಿಂದ ಹೊರಟಿದೆ. ಅಹಮದಾಬಾದ್ನಿಂದ ಮತ್ತೊಂದು ಕತಾರ್ ಕಾರ್ಯನಿರ್ವಾಹಕ ವಿಮಾನವು ಗುರುವಾರ ರಾತ್ರಿ ಲಂಡನ್ ಲುಟನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಶ್ರೀಮಂತರಲ್ಲದ ಭಾರತೀಯ ಪ್ರಯಾಣಿಕರು ಕಳೆದ ವಾರ ನೇರ ವಿಮಾನಗಳಲ್ಲಿ ಯಾವುದೇ ಆಸನಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ನವೀಕರಿಸಿದ ಕೆಂಪು ಪಟ್ಟಿ ಜಾರಿಗೆ ಬರುವುದಕ್ಕಿಂತ ಮುನ್ನ ಮುಂಚಿತವಾಗಿ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಪ್ರಯಾಣಿಕರು ಬ್ರಿಟನ್ಗೆ ಹೋಗಲು ಪ್ರಯತ್ನಿಸಿದ್ದರಿಂದ ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಚಲಾಯಿಸಲು ವಿನಂತಿಸಿಲಾಗಿತ್ತು.
ಏಪ್ರಿಲ್ 22 ರ ಗುರುವಾರ ದೆಹಲಿಯಿಂದ ನಿರ್ಗಮಿಸಲು ಲಂಡನ್ ಮೂಲದ ಟ್ರಾವೆಲ್ ಏಜೆನ್ಸಿ ‘ಟಿಕೆಟ್ ಟು ಇಂಡಿಯಾ’ ಎಂಬ ಕತಾರ್ ಏರ್ವೇಸ್ ವಿಮಾನವನ್ನು ಚಾರ್ಟರ್ ಮಾಡಿತ್ತು ಮತ್ತು ಎಲ್ಲಾ 300 ಸೀಟುಗಳನ್ನು ಪ್ರತಿ ಇಕಾನಮಿ ಸೀಟಿಗೆ 1100£ ಮತ್ತು ಬ್ಯುಸಿನೆಸ್ ಕ್ಲಾಸ್ ಸೀಟ್ಗೆ 1600£ ರಂತೆ ಮಾರಾಟ ಮಾಡಿತ್ತು. ಬುಧವಾರ ಅದು ತನ್ನ ಫೇಸ್ಬುಕ್ ಪೇಜ್ನಲ್ಲಿ “ಯು.ಕೆ.ನಲ್ಲಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ಲ್ಯಾಂಡಿಂಗ್ ಪರವಾನಗಿ ನೀಡುವುದನ್ನು ನಿರಾಕರಿಸಿದ್ದರಿಂದ ವಿಮಾನ ರದ್ದುಗೊಳಿಸಲಾಗಿದೆ” ಎಂದು ಹೇಳಿದೆ. ಎಲ್ಲಾ ಪ್ರಯಾಣಿಕರಿಗೆ ಪಾವತಿಸಿದ್ದ ಹಣ ಮರುಪಾವತಿಸಲಾಗಿದೆ.
ಯುಕೆ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರರು, “ಕಳೆದ ವಾರ ಭಾರತ ಮತ್ತು ಯುಕೆ ನಡುವೆ ಚಾರ್ಟರ್ ಫ್ಲೈಟ್ಗಳನ್ನು ನಿರ್ವಹಿಸಲು ಯುಕೆ ಅಲ್ಲದ ವಿಮಾನಯಾನ ಸಂಸ್ಥೆಗಳಿಂದ ನಾವು ಹಲವಾರು ವಿನಂತಿಗಳನ್ನು ಸ್ವೀಕರಿಸಿದ್ದೇವೆ. ದುರದೃಷ್ಟವಶಾತ್ ಈ ಅರ್ಜಿಗಳನ್ನು ನಿರಾಕರಿಸಲಾಯಿತು, ಅಥವಾ ಅಪ್ಲಿಕೇಶನ್ ಪ್ರಕ್ರಿಯೆಯಿಂದ ಹಿಂತೆಗೆದುಕೊಳ್ಳಲಾಯಿತು. ಲಭ್ಯವಿರುವ ಸಮಯದಲ್ಲಿ ಭಾರತ ಸರ್ಕಾರದ ಅರ್ಹತಾ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದೆ. ಪ್ರಸ್ತುತ ದ್ವಿಪಕ್ಷೀಯ ವ್ಯವಸ್ಥೆಗಳ ಪ್ರಕಾರ, ಭಾರತ ಮತ್ತು ಯುಕೆ ನಡುವೆ ವಾರಕ್ಕೆ 15 ವಿಮಾನಗಳನ್ನು ಮಾತ್ರ ಚಲಾಯಿಸಲು ಅನುಮತಿ ಇದೆ. ಯುಕೆ ಮತ್ತು ಹೊರಗಿನ ವಾಣಿಜ್ಯ ಸೇವೆಗಳನ್ನು ಕೈಗೊಳ್ಳಲು ಬಯಸುವ ಎಲ್ಲಾ ಯುಕೆ ಅಲ್ಲದ ವಿಮಾನಯಾನ ಸಂಸ್ಥೆಗಳು ವಿದೇಶಿ ವಾಹಕ ಪರವಾನಗಿಯನ್ನು ಹೊಂದಿರಬೇಕು.
ಭಾರತ ಸರ್ಕಾರದಿಂದ ತಮ್ಮ ಉದ್ಯಮಗಳಿಗಾಗಿ ತೆರಿಗೆ ವಿನಾಯಿತಿ, ಸಬ್ಸಿಡಿಗಳನ್ನು ಪಡೆದು ಇಲ್ಲಿನ ನೈಸರ್ಗಿಕ ಸಂಪತ್ತುಗಳನ್ನು ಬಳಸಿಕೊಂಡು ಶ್ರೀಮಂತರಾದವರು ಸಂಕಷ್ಟದ ಸಮಯದಲ್ಲಿ ದೇಶದ ಜೊತೆ ನಿಲ್ಲದೆ ಹೀಗೆ ತಮಗೆ ಅನುಕೂಲವೆನಿಸುವೆಡೆಗೆ ಪಲಾಯನ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳು ಎದ್ದಿವೆ. ಈ ಮಧ್ಯೆ ಭಾರತೀಯರ ಸಮಯ, ಶ್ರಮ ಮತ್ತು ಹಣದಿಂದಲೇ ಶ್ರೀಮಂತರಾದ, ಸೆಲೆಬ್ರಿಟಿಗಳು ಅನ್ನಿಸಿಕೊಂಡ ಬಾಲಿವುಡ್ ನಟ/ನಟಿಯರು ಎಲ್ಲಾ ಬಿಟ್ಟು ಮಾಲ್ಡೀವ್ಸ್ ಗೆ ಹಾರಿ ಮೋಜು ಮಸ್ತಿಯ ಫೊಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಪ್ರಪಂಚ ಭಾರತದ ವಿಷಮ ಸನ್ನಿವೇಶದಲ್ಲಿ ಆಕ್ಸಜನ್ ಒದಗಿಸಿ, ವೆಂಟಿಲೇಟರ್ ಒದಗಿಸಿ ಈ ದೇಶದ ಜೊತೆ ನಿಲ್ಲುತ್ತಿದೆ, ಪ್ರಪಂಚದಾದ್ಯಂತದಿಂದ ಭಾರತದೆಡೆ ನೆರವು ಒದಗಿ ಬರುತ್ತಿದೆ, ಇಂತಹ ಸಮಯದಲ್ಲಿ ತನ್ನದೇ ದೇಶವಾಸಿಗಳ ಜೊತೆ ನಿಲ್ಲಬೇಕಿದ್ದ, ಧೈರ್ಯ ಕಳೆದುಕೊಂಡವರಿಗೆ ಧೈರ್ಯ ನೀಡಬೇಕಿದ್ದವರು ತಮ್ಮ ಸ್ವಾರ್ಥಕ್ಕಾಗಿ ದೇಶ ಬಿಟ್ಟು ಹೋಗುತ್ತಿರುವುದು ದುರಂತ.