ಬೆಲೆ ಏರಿಕೆ ಸಂಕಷ್ಟದ ಸುಳಿಗೆ ಸಿಲುಕಿರೋ ಜನರಿಗೆ ನಾಳೆಯಿಂದ ಗಾಯದ ಮೇಲೆ ಬರೆ ಬೀಳಲಿದೆ. ಕೇಂದ್ರ ಸರ್ಕಾರ ಜಿಎಸ್ಟಿ ನೀತಿ ಬದಲಾವಣೆ ತಂದಿದ್ದು ಆಹಾರ ವಸ್ತು ಸೇರಿ ಹಲವು ದಿನಬಳಕೆ ವಸ್ತುಗಳ ಬೆಲೆ ಮೇಲೆ ತೆರಿಗೆ ಬರೆ ಬೀಳಲಿದೆ. ಈಗಾಗಲೇ ಕಂಗೆಟ್ಟಿರೋ ಜನರ ಜೇಬಿಗೆ ನಾಳೆಯಿಂದ ಮತ್ತಷ್ಟು ಕತ್ತರಿ ಬೀಳಲಿದೆ.
ದಿನ ಬಳಕೆಯ ವಸ್ತುಗಳ ಮೇಲೆ 5% GST ಹೇರಿಕೆ.!!
ಪೆಟ್ರೋಲ್, ಅಡುಗೆಎಣ್ಣೆ, ಹಾಲು ಹಣ್ಣು ಹೂ ತರಕಾರಿ ಎಲ್ಲವುದೂ ತುಟ್ಟಿಯಾಗಿದೆ. ಜನರ ಜೀವನ ಮೂರಾ ಬಟ್ಟೆಯಾಗಿದೆ. ಇಂಥಾ ಪರಿಸ್ಥಿತಿಯಲ್ಲೇ ಕೇಂದ್ರ ಸರ್ಕಾರ ಜನರ ಮೇಲೆ ಕರಭಾರ ಹೊರಿಸಲು ಹೊರಟಿದೆ. ನಾಳೆಯಿಂದಲೇ ನೂತನ GST ದರ ಜಾರಿಗೆ ಬರ್ತಿದ್ದು ಅಗತ್ಯ ವಸ್ತುಗಳ ಬೆಲೆಯಲ್ಲಿ ಅಜಗಜಾಂತರ ವ್ಯತ್ಯಾಸವಾಗಲಿದೆ. ಹೊಸ GST ನೂರಕ್ಕೆ ನೂರರಷ್ಟು ಜನರ ಜೇಬು ಸುಡಲಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗ್ತಿರೋದು ಜನಜೀವನವನ್ನ ಬುಡಮೇಲು ಮಾಡೋ ಆತಂಕ ಶುರುವಾಗಿದೆ.
ಯಾವುದಕ್ಕೆಲ್ಲಾ GST ? ಯಾವುದೆಲ್ಲಾ ದುಬಾರಿ ?
• ಪ್ಯಾಕ್ ಮಾಡಿರುವ ಬ್ರ್ಯಾಂಡ್ ಆಹಾರ ಪದಾರ್ಥಗಳು – 5% GST
• ಮೊಸರು, ಲಸ್ಸಿ, ಬೆಣ್ಣೆ, ಹಪ್ಪಳ, ಜೇನುತುಪ್ಪ , ಉಪ್ಪಿನಕಾಯಿ – 5% GST
• ಪನ್ನೀರ್, ಒಣಕಾಳು, ತರಕಾರಿ, ಮಾಂಸ, ಮೀನು – 5% GST
• ಭೂಪಟ ಮತ್ತು ಅಟ್ಲಾಸ್ – 12% GST
• ಚೆಕ್ ಬುಕ್, ಆರ್ಬಿಐ, ಐಆರ್ಡಿಐ, ಸೆಬಿ ಸೇವೆಗಳು – 18% GST
• ಸೋಲಾರ್ ವಾಟರ್ ಹೀಟರ್, ಲೆದರ್ ಸಾಮಗ್ರಿ – 5% to 12% GST
• ಚಾಕು, ಬ್ಲೇಡ್, ಚಮಚ, ಫೋರ್ಕ್ – 12% to 18% GST
• ಪೆಟ್ರೋಲಿಯಂ, ಕಲ್ಲಿದ್ದಲು, ವೈಜ್ಞಾನಿಕ ಯಂತ್ರಗಳು – 12% to 18% GST
• ಇಂಕ್, ಮೆಂಡರ್, ಬ್ಲೇಡ್, ಸೌಟು, ಜಾಲರಿ ಸೌಟು, – 12% to 18% GST
• ವಿದ್ಯುತ್ ಚಾಲಿತ ವಾಟರ್ ಪಂಪ್, ಬೈಸಿಕಲ್ ಪಂಪ್ – 12% to 18% GST
• ಟರ್ಬೈನ್ ಪಂಪ್, ಸಬ್ಮರ್ಸಿಬಲ್ ಪಂಪ್ – 12% to 18% GST
• ಡೈರಿ ಉದ್ಯಮದ ಯಂತ್ರಗಳು, ರುಬ್ಬುವ ಯಂತ್ರ – 12% to 18% GST
• ಧಾನ್ಯ ವಿಂಗಡಿಸುವ ಗ್ರೇಡಿಂಗ್ ಯಂತ್ರ – 12% to 18% GST
• ₹1000 ಗಿಂತ ಕಡಿಮೆ ಇರೋ ಹೋಟೆಲ್ ರೂಂ – 0 to 12% GST
• ₹5000 ಹೆಚ್ಚು ಶುಲ್ಕ ಇರೋ ಆಸ್ಪತ್ರೆಯ ಸ್ಪೆಷಲ್ ವಾರ್ಡ್ – 0 to 5% GST
ಇನ್ನು ಕೆಎಂಎಫ್ ಹಾಲಿನ ದರದಲ್ಲಿ ಯಾವುದೇ ಬದಲಾವಣೆಯಾಗದಿದ್ರೂ ಮೊಸರು ಹಾಗೂ ಅದರ ಇತರ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾತಸವಾಗಲಿದೆ. ಪ್ಯಾಕೆಟ್ ಮೇಲೆ ಹಳೆ ದರವೇ ಇರಲಿದೆ ಆದ್ರೆ ಗ್ರಾಹಕರು ಹೊಸ ದರವನ್ನ ನೀಡುವಂತೆ KMF ಸೂಚನೆ ನೀಡಿದೆ.
ನಾಳೆಯಿಂದಲೇ ಹಾಲಿನ ಉತ್ಪನ್ನಗಳಿಗೆ ಹೊಸ ದರ.!!
• ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ 5%ರಷ್ಟು GST
• ಮೊಸರು 1 ಲೀಟರ್ಗೆ 43 ಇದ್ದದ್ದು ನಾಳೆಯಿಂದ ₹46
• ಅರ್ಧ ಲೀಟರ್ ಮೊಸರು ಇಂದು ₹22.. ನಾಳೆಯಿಂದ ₹24
• ಮಜ್ಜಿಗೆ 200ML ಬೆಲೆ ನಾಳೆಯಿಂದ ₹1 ಏರಿಕೆ
• ಲಸ್ಸಿ ಬೆಲೆಯಲ್ಲೂ ನಾಳೆಯಿಂದ ₹1 ಏರಿಕೆ
ಒಟ್ಟಿನಲ್ಲಿ ಬರಗಾಲದಲ್ಲೇ ಅಧಿಕಮಾಸ ಅನ್ನೋ ಗಾಧೆ ಈಗ ಅಕ್ಷರಶಃ ಸತ್ಯವಾಗ್ತಿದೆ. ಈಗಾಗಲೇ ಹಣದುಬ್ಬರದಿಂದಾಗಿ ಬೆಲೆ ಏರಿಕೆ ಆಕಾಶಕ್ಕೆ ಮುಟ್ಟಿದೆ. ಇಂಥಾ ಸಂದರ್ಭದಲ್ಲಿ ಮತ್ತೆ ಗಾಯದ ಮೇಲೆ ಕೇಂದ್ರ ಬರೆ ಎಳೆಯುತ್ತಿರೋದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದ್ದಂತೂ ಸತ್ಯ.