ತಿರುವನಂತಪುರಂ: ಕೇರಳ ಕಾಂಗ್ರೆಸ್ಸಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಆಡಳಿತಾರೂಢ ಎಡರಂಗ ನೇತೃತ್ವದ ಎಲ್.ಡಿ.ಎಫ್.ನಲ್ಲಿರುವ ತನ್ನ ಹಳೆಯ ಮಿತ್ರ ಪಕ್ಷಗಳಿಗೆ ಮತ್ತೆ ಬಾಗಿಲು ತೆರೆಯಲು ಇತ್ತೀಚೆಗೆ ನಡೆದ ಪಕ್ಷದ ಸಂಘಟನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಮೂಲಕ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯು.ಡಿ.ಎಫ್.)ವನ್ನು ಇನ್ನಷ್ಟು ಬಲಗೊಳಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (ಎಲ್.ಡಿ.ಎಫ್.) ಶಾಕ್ ನೀಡುವುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ. ಮಾತ್ರವಲ್ಲದೇ ಸತತ ಎರಡನೇ ಬಾರಿ ಅಧಿಕಾರದ ಗದ್ದುಗೆಯನ್ನೇರಿರುವ ಎಲ್.ಡಿ.ಎಫ್. ಮೈತ್ರಿಕೂಟದ ಆಡಳಿತಾತ್ಮಕ ವೈಫಲ್ಯಗಳು ಮತ್ತು ಹಗರಣಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಉದ್ದೇಶಕ್ಕಾಗಿ ತನ್ನ ಮೈತ್ರಿಕೂಟವನ್ನು ಬಲಗೊಳಿಸುವ ಉದ್ದೇಶವೂ ಇದರ ಹಿಂದಿದೆ.
ಕೋಝಿಕ್ಕೋಡಿನಲ್ಲಿ ಇತ್ತೀಚೆಗೆ ನಡೆದ ‘ನವಸಂಕಲ್ಪ ಚಿಂತನ ಶಿಬಿರ’ದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಳುವಳಿಯೊಂದನ್ನು ಅಂಗೀಕರಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
‘ಈಗಾಗಲೇ ಎಲ್.ಡಿ.ಎಫ್. ಮೈತ್ರಿಕೂಟದಲ್ಲಿರುವ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ, ಅವರೆಲ್ಲರೂ ಈಗಾಗಲೇ ತುಂಬಾ ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ರಾಜಕೀಯ ಬಿಕ್ಕಟ್ಟಿನ ಲಾಭವನ್ನು ನಾವು ಪಡೆದುಕೊಂಡು ಯು.ಡಿ.ಎಫ್.ನ್ನು ಇನ್ನಷ್ಟು ಬಲಗೊಳಿಸಲಿದ್ದೇವೆ’ ಎಂದು ಈ ಎಲ್ಲಾ ಬೆಳವಣಿಗೆಗಳ ಕುರಿತಾಗಿ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಪಕ್ಷಕ್ಕೂ ಯುಡಿಎಫ್ ನ ಬಾಗಿಲು ಮುಚ್ಚಿಲ್ಲ. ಈಗಿರುವ ಎಲ್.ಡಿ.ಎಫ್. ಮೈತ್ರಿ ಸರಕಾರ ವಿಪರೀತ ಬಲಪಂಥೀಯ ನೀತಿಗಳನ್ನು ಮತ್ತು ಸಿದ್ಧಾಂತಗಳತ್ತ ವಾಲುತ್ತಿರುವುದರಿಂದ ಈ ಕೂಟದಲ್ಲಿ ಹಲವು ಎಡಪಕ್ಷಗಳು ತಮ್ಮ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲದಿರುವ ಸ್ಥಿತಿ ನಿರ್ಮಾಣಗೊಂಡಿದೆ ಮತ್ತು ಎಲ್.ಡಿ.ಎಫ್. ಮೈತ್ರಿ ಸರಕಾರದ ಎರಡನೇ ಅವಧಿ ಕೇರಳದ ಜನತೆಗೆ ಶಾಪವಾಗಿ ಪರಿಣಮಿಸಿದೆ ಈ ಎಲ್ಲಾ ಹಿನ್ನಲೆಯಲ್ಲಿ ಕೇರಳದ ರಾಜಕೀಯ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಈ ಬಿಕ್ಕಟ್ಟಿನಿಂದ ಕೇರಳವನ್ನು ಪಾರು ಮಾಡಲು ಒಂದು ಜವಾಬ್ದಾರಿಯುತ ಪಕ್ಷವಾಗಿ ಕಾಂಗ್ರೆಸ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲಿದೆ ಎಂದು ಸುಧಾಕರನ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.